ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕನ್ನಡಕ್ಕೆ ದಕ್ಕಿದ ಕಥಾ ಮೀಮಾಂಸೆ

ಒಳನೋಟ
Last Updated 9 ಜನವರಿ 2021, 19:30 IST
ಅಕ್ಷರ ಗಾತ್ರ

ನೀರಿಗೆ ಮೂಡಿದ ಆಕಾರ
ಲೇ: ಎಚ್‌.ಎಸ್‌. ರಾಘವೇಂದ್ರರಾವ್‌
ಪ್ರ: ಪ್ರಸಾರಾಂಗ, ಕನ್ನಡ ವಿ.ವಿ ಹಂಪಿ
ದೂ: 08394–210410
ಪುಟಗಳು: 276, ಬೆಲೆ: 220

ಒಂದು ಸಾಹಿತ್ಯ ಕೃತಿಯನ್ನು ವಿಮರ್ಶಿಸುವಾಗ ಬಹುತೇಕ ಆಶಯವನ್ನು ಅಂದರೆ ಅದು ನಿರ್ವಹಿಸಿರುವ ವಸ್ತುವಿನ ಕುರಿತು ಚರ್ಚಿಸುವುದನ್ನು ಕಾಣಬಹುದು. ಆ ರೀತಿ ಚರ್ಚಿಸುವಾಗ ನಾವು ನಂಬಿರುವ ಸಿದ್ಧಾಂತಗಳನ್ನು, ವಿಚಾರಗಳನ್ನು ಕೃತಿಯಲ್ಲಿ ಹುಡುಕುತ್ತೇವೆ. ಅಂತಹ ಸಂದರ್ಭದಲ್ಲಿ ಒಂದು ಸಾಹಿತ್ಯ ಕೃತಿಯ ಆಶಯ ಮತ್ತು ಆಕೃತಿಗಳ ಸಂಬಂಧದ ಅನನ್ಯತೆಯನ್ನು ಮರೆತು ಬಿಡುತ್ತೇವೆ. ಈ ರೀತಿ ಮರೆತಾಗ ‘ಸಾಹಿತ್ಯ’ ಎಂಬ ಕಲಾಕೃತಿಯ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆ.

ಕವಿತೆಯಾಗಲಿ, ಕಥೆಯಾಗಲಿ, ಕಾದಂಬರಿಯಾಗಲಿ ಭಾಷೆಯಲ್ಲಿ ಸೃಷ್ಟಿಯಾಗುವಂತಹದ್ದು. ಬದುಕಿನ ಅನುಭವ, ವಿಚಾರ, ಭಾವನೆ, ಲೋಕದ ಘಟನೆ, ಸಂವೇದನೆ, ಸಮಾಜ, ಸಮುದಾಯ, ಕಲ್ಪಕತೆ, ನಿರೂಪಣೆ, ಕಟ್ಟುವಿಕೆ ಇತ್ಯಾದಿಗಳು ಭಾಷೆಯಲ್ಲಿ ಒಂದು ಆಕೃತಿಯನ್ನು ಪಡೆದು ಕಲಾಕೃತಿಯಾಗುತ್ತವೆ. ಬರೀ ಆಶಯವನ್ನು ಗಮನದಲ್ಲಿಟ್ಟುಕೊಂಡು ಆಕೃತಿಯನ್ನು ವಿಮರ್ಶಕನು ಬಿಟ್ಟರೆ ಆ ಕೃತಿಗೆ ಸರಿಯಾದ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ಅವುಗಳ ಸಾವಯವ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ವಿಮರ್ಶೆ ಮಾಡಬೇಕು. ಆಗ ಆ ವಿಮರ್ಶೆಗೆ ಒಳನೋಟಗಳು ಬರಲು ಸಾಧ್ಯವಾಗುತ್ತದೆ.

ಮೇಲಿನ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಚ್.ಎಸ್. ರಾಘವೇಂದ್ರರಾವ್ ಅವರು ತಮ್ಮ ‘ನೀರಿಗೆ ಮೂಡಿದ ಆಕಾರ’ ಕೃತಿಯಲ್ಲಿ ಕಥಾ ಸಾಹಿತ್ಯದ ಮೀಮಾಂಸೆಯನ್ನು ಚರ್ಚಿಸುತ್ತಾ ಆಶಯ ಮತ್ತು ಆಕೃತಿಯ ಅನನ್ಯತೆಯ ಸ್ವರೂಪವನ್ನು, ಅವುಗಳ ಸಂಬಂಧಗಳನ್ನು ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ಪ್ರಸ್ತಾವನೆ, ಕನ್ನಡ ಕಥಾಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆ, ಕನ್ನಡದ ಐವರು ಕತೆಗಾರರ ಮೀಮಾಂಸೆಯ ಅಧ್ಯಯನ, ಸಮಾರೋಪ ಎಂಬ ಅಧ್ಯಾಯಗಳಿದ್ದು ಮಾಸ್ತಿ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ವೈದೇಹಿ, ಕಾರಂತ, ಕುವೆಂಪು, ಚಿತ್ತಾಲ, ಭೈರಪ್ಪ, ದೇವನೂರ ಮಹಾದೇವ ಇವರ ಕೃತಿಗಳನ್ನು ಆನ್ವಯಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಕಥನ ಮೀಮಾಂಸೆಯು ಮುಖ್ಯವಾಗಿ ಕಥೆಗಾರನ/ ಕಾದಂಬರಿಕಾರನ ಮನಸ್ಸಿನಲ್ಲಿ ಕೃತಿಯೊಂದು ರೂಪುಗೊಳ್ಳುವ ಕ್ರಿಯೆಯನ್ನು ಅವುಗಳ ಲಕ್ಷಣ, ಉದ್ದೇಶ, ಪರಿಣಾಮ, ಪಾತ್ರಗಳ ಸ್ವಭಾವ, ಆವರಣ ಕಥಾವಸ್ತು, ಸಂಭಾಷಣೆ, ಕಾಲ ಮತ್ತು ಸ್ಥಳ, ಆಕೃತಿ, ಜೀವನ ಸಿದ್ಧಾಂತ ನಿರೂಪಣೆ ಮುಂತಾದವು ಹದವಾಗಿ ಬೆರೆತು ಭಾಷೆಯಲ್ಲಿ ಒಡಮೂಡುತ್ತವೆ ಎಂಬುದನ್ನು ಚರ್ಚಿಸುತ್ತದೆ. ಇದರೊಂದಿಗೆ ವಿಮರ್ಶೆಯೂ ಬೆರೆತರೆ ಆಗ ಕಥೆ, ಕಾದಂಬರಿಗಳ ಅಧ್ಯಯನದ ಸ್ವರೂಪ ಅರ್ಥಪೂರ್ಣವಾಗಿ ಮಹತ್ವದ ಒಳನೋಟಗಳನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ.

ಕಥನ ಮೀಮಾಂಸೆ ಮತ್ತು ವಿಮರ್ಶೆಯನ್ನು ಒಳಗೊಂಡ ಅಧ್ಯಯನವನ್ನು ಕುರ್ತಕೋಟಿ, ಆಮೂರ, ಗಿರಡ್ಡಿ ಗೋವಿಂದರಾಜ, ಕೆ.ವಿ. ನಾರಾಯಣ, ರಾಜೇಂದ್ರ ಚೆನ್ನಿ, ಸಿ.ಎನ್. ರಾಮಚಂದ್ರನ್ ಮಾಡಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇವರೆಲ್ಲರ ಮುಂದುವರಿಕೆಯಾಗಿ ಎಚ್.ಎಸ್.ಆರ್‌ ಅವರು ಆಶಯ ಆಕೃತಿಗಳ ಸಾವಯವ ಸಂಬಂಧದೊಟ್ಟಿಗೆ ಕಥೆ ಕಾದಂಬರಿಗಳನ್ನು ಚರ್ಚಿಸಿ, ವಿಶ್ಲೇಷಣೆಗೆ ಒಳಪಡಿಸಿ ಕನ್ನಡ ಕಥಾ ಮೀಮಾಂಸೆಯನ್ನು ಕಟ್ಟಿಕೊಟ್ಟಿದ್ದಾರೆ. ಮೀಮಾಂಸೆ ಮತ್ತು ವಿಮರ್ಶೆ ಸೇರಿರುವುದರಿಂದ ಇಲ್ಲಿನ ಅಧ್ಯಯನಕ್ಕೆ ಸೂಕ್ಷ್ಮವಾದ ಒಳನೋಟಗಳು ಬಂದಿವೆ.

ಎಚ್.ಎಸ್.ಆರ್. ಅವರು ಪ್ರಸ್ತಾವನೆ ಮತ್ತು ಎರಡನೇ ಅಧ್ಯಾಯದಲ್ಲಿ ಕನ್ನಡ ಕಥಾ ಸಾಹಿತ್ಯದ ಹುಟ್ಟು, ಬೆಳವಣಿಗೆ, ಪ್ರಧಾನ ಲಕ್ಷಣಗಳು, ಸೈದ್ಧಾಂತಿಕ ನೆಲೆಗಳು ಮುಂತಾದ ಕಥಾ ಮೀಮಾಂಸೆಯ ಸ್ವರೂಪವನ್ನು ವಿವರಿಸಿಕೊಳ್ಳುತ್ತಾರೆ. ಹೀಗೆ ಮಾಡುವಾಗ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಎಲ್ಲಾ ಸಾಹಿತ್ಯ ಚಳವಳಿಗಳ, ಘಟ್ಟಗಳ ಕಥನ, ಸಾಹಿತ್ಯದ ಸ್ವರೂಪವನ್ನು ವಿವರಿಸುತ್ತಾ, ವಿಶ್ಲೇಷಿಸುತ್ತಾ ಕಥಾ ಮೀಮಾಂಸೆಯ ಸ್ವರೂಪವನ್ನು ಕಟ್ಟಿಕೊಡುತ್ತಾರೆ ಇಲ್ಲವೇ ರೂಪಿಸುತ್ತಾರೆ. ಇದರಲ್ಲಿ ಪಾಶ್ಚಾತ್ಯ, ಭಾರತೀಯ ಮತ್ತು ಕನ್ನಡದ ಚಿಂತಕರ, ಕಥನಕಾರರ ಆಲೋಚನೆಗಳನ್ನು ತಮ್ಮ ವಿಚಾರಗಳ ಸಮರ್ಥನೆಗಾಗಿ ಬಳಸಿಕೊಂಡಿದ್ದಾರೆ.

ಯಾವುದೇ ಸೃಜನಶೀಲ ಕೃತಿಯು ಸಾಮಾಜಿಕತೆ, ತಾತ್ವಿಕತೆ ಮತ್ತು ಕಲಾತ್ಮಕವಾದ ಹೆಣಿಗೆಯನ್ನು ಹೊಂದಿರುತ್ತದೆ. ಈ ಮೂರರಲ್ಲಿ ಒಂದು ವ್ಯತ್ಯಾಸವಾದರೂ ಆ ಕೃತಿ ವಿಫಲವಾಗುತ್ತದೆ. ಒಂದೇ ವಿಚಾರ ಒಂದೇ ಅನುಭವವನ್ನು ವಿಭಿನ್ನ ಮನೋಧರ್ಮದ ಲೇಖಕರು ಕಥೆ/ ಕಾದಂಬರಿಯಾಗಿಸಿದಾಗ ಅವು ಬೇರೆ ಬೇರೆ ಅನುಭವ ಮತ್ತು ವಿಚಾರಗಳಾಗಿ ರೂಪುಗೊಂಡಿರುವುದನ್ನು ಕಾಣಬಹುದು ಎಂಬ ತಿಳಿವಳಿಕೆಯಿಂದ ಹತ್ತನೇ ಶತಮಾನದಿಂದ ಇಲ್ಲಿಯವರೆಗೆ ಬಂದಿರುವ ಪ್ರಮುಖ ಸಾಹಿತ್ಯ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಥಾ ಸಾಹಿತ್ಯದ ವಿವಿಧ ಘಟ್ಟಗಳ ಸ್ವರೂಪವನ್ನು ಗುರುತಿಸುತ್ತಾ ಚರ್ಚಿಸುತ್ತಾ ಕಥಾ ಮೀಮಾಂಸೆಯನ್ನು ವಿವರಿಸಿಕೊಂಡಿದ್ದಾರೆ.

ಕಾಲದಿಂದ ಕಾಲಕ್ಕೆ ಕನ್ನಡ ಕಥಾ ಮೀಮಾಂಸೆ ಯಾವ ಯಾವ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಬಂದಿತು ಎಂಬ ಚರ್ಚೆ ಬಹಳ ಉಪಯುಕ್ತವಾಗಿದ್ದು, ಆಯಾ ಕಾಲಘಟ್ಟದ ಕೃತಿಗಳ ಅಧ್ಯಯನಕ್ಕೆ ಪೂರಕವಾದ ಪರಿಕರಗಳನ್ನು ಒದಗಿಸಿಕೊಡುತ್ತದೆ. ಈ ದೃಷ್ಟಿಯಿಂದ ಪ್ರಸ್ತಾವನೆ ಮತ್ತು ಎರಡನೇ ಅಧ್ಯಾಯದ ವಿವರಗಳು ಈ ಕೃತಿಗೆ ತುಂಬಾ ಮೌಲಿಕತೆಯನ್ನು ತಂದುಕೊಟ್ಟಿವೆ.

ಆಶಯ ಮತ್ತು ಆಕೃತಿಗಳ ಸಾವಯವ ಸಂಬಂಧದಲ್ಲಿ ಹತ್ತು ಲೇಖಕರ ಕಥೆ / ಕಾದಂಬರಿಗಳನ್ನು ಅಧ್ಯಯನ ಮಾಡುವಾಗ ಎಚ್.ಎಸ್.ಆರ್. ಅವರು ತಾವು ನಂಬಿದ ವಿಚಾರಗಳನ್ನು ತಮಗೆ ಬೇಕಾದ ಸಿದ್ಧಾಂತಗಳನ್ನು ನಂಬಿಕೆಗಳನ್ನು ಕೃತಿಯ ಮೇಲೆ ಹೇರದೆ, ಕೃತಿಯ ಒಳಗಡೆಯೇ ಇರುವ ವಿಚಾರಗಳನ್ನು ಸಾಂಸ್ಕೃತಿಕ ವಿವರಗಳನ್ನು ಗ್ರಹಿಸಿ ವಿಶ್ಲೇಷಿಸುತ್ತಾರೆ.

ಹಾಗೆಯೇ ಕಥೆಗಾರ /ಕಾದಂಬರಿಕಾರನೂ ತಾನು ರಚಿಸುವ ಕೃತಿಯ ಒಡಲಿನಲ್ಲಿಯೇ ವಿಚಾರಗಳು ಅಂತರ್ಗತವಾಗಿರುವಂತೆ ಮಾಡಬೇಕು. ಪಾತ್ರಗಳ ಕ್ರಿಯೆಗೂ ವೈಚಾರಿಕತೆಗೂ ಇರುವ ಸಂಬಂಧವನ್ನು ಕಂಡುಕೊಳ್ಳಬೇಕು. ಜೊತೆಗೆ ಒಂದೇ ಥೀಮಿನ ಬಗ್ಗೆ ಗಮನವನ್ನೆಲ್ಲಾ ಕೇಂದ್ರೀಕರಿಸಬಾರದು, ಇದರಿಂದ ಕಥೆ/ಕಾದಂಬರಿಯಲ್ಲಿ ಬಹುಮುಖತೆ ಮತ್ತು ಸಂಕೀರ್ಣತೆಗಳು ಹೆಚ್ಚಾಗುತ್ತವೆ. ಇದನ್ನು ಮರೆತರೆ ಕೃತಿಗಳಲ್ಲಿ ‘ಲೀನಿಯಾರಿಟಿ’ ಬರುತ್ತದೆ. ಆಗ ಅದು ವಿಫಲ ಕೃತಿಯಾಗುತ್ತದೆ. ಇದನ್ನು ಹತ್ತು ಲೇಖಕರ ಕೃತಿಗಳನ್ನು ಅಧ್ಯಯನ ಮಾಡುವಾಗ ಉದಾಹರಣೆಗಳ ಸಮೇತ ವಿವರಿಸಲಾಗಿದೆ.

ಕನ್ನಡ ಕಥನ ಮೀಮಾಂಸೆಯನ್ನು ರೂಪಿಸಿಕೊಂಡು ಆಶಯ ಆಕೃತಿಗಳ ಅನನ್ಯತೆಗಳ ಹಿನ್ನೆಲೆಯಲ್ಲಿ ಕಥೆ/ಕಾದಂಬರಿಗಳನ್ನು ಅಧ್ಯಯನ ಮಾಡುವಾಗ ಒಬ್ಬನೇ ಲೇಖಕನ ಇತರೆ ಕೃತಿಗಳೊಂದಿಗೆ ಒಂದೇ ಭಾಷೆಯ ಬೇರೆ ಬೇರೆ ಲೇಖಕರ ಕೃತಿಗಳೊಡನೆ, ಒಮ್ಮೊಮ್ಮೆ ಭಾರತೀಯ ಭಾಷೆಗಳ ಮತ್ತು ಜಗತ್ತಿನ ಇತರೆ ಭಾಷೆಗಳ ಕೃತಿಗಳೊಡನೆ ಹೋಲಿಸಿ ವಿಶ್ಲೇಷಿಸಲಾಗಿದೆ. ಚೋಮನದುಡಿ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ ಮತ್ತು ಅಳಿದ ಮೇಲೆ ಕಥನ ವಿಧಾನಗಳು ಮತ್ತು ದೇವನೂರ ಮಹಾದೇವ ಅವರ ಒಡಲಾಳ ಮತ್ತು ಕುಸುಮಬಾಲೆ ಕಥನಗಳು ಭಿನ್ನವಾಗಿರುವುದನ್ನು ಗುರುತಿಸಲಾಗಿದೆ. ಭಾಷೆ, ಪಾತ್ರಗಳ ಸ್ವಗತಗಳು ಮತ್ತು ನಿರೂಪಕರಲ್ಲಿಯೂ ಭಿನ್ನತೆ ಇರುವುದನ್ನು ಚರ್ಚಿಸಲಾಗಿದೆ.

ಕುಸುಮಬಾಲೆ ಕಥನ ಕ್ರಮ ಬರೆಯುವಾಗ ಮಹಾದೇವ ಅವರು ಕಾದಂಬರಿಯ ಆಶಯ, ಆಕೃತಿಗಳನ್ನು ಬದಲಾಯಿಸಿದ ಸಾಧ್ಯತೆಗಳ ಚರ್ಚೆಯಿದೆ. ಇಂತಹ ಪ್ರಯೋಗಗಳು ಆಫ್ರಿಕಾ, ಸ್ಪೇನ್, ಲ್ಯಾಟಿನ್ ಅಮೆರಿಕದ ಕೆಲವು ಲೇಖಕರ ಕೃತಿಗಳಲ್ಲಿ ನಡೆದಿರುವುದನ್ನು ಉಲ್ಲೇಖಿಸಿ ಮಹಾದೇವ ಅವರ ಹಾದಿ ಅವರೆಲ್ಲರಿಗಿಂತ ಭಿನ್ನವಾಗಿದೆ ಎಂದು ಹೇಳುತ್ತಾ, ‘ತನ್ನ ಕಾಲದ ಜೀವನವನ್ನೇ ಹಿಂದಿನ ಅಭಿವ್ಯಕ್ತಿ ಕ್ರಮಗಳಲ್ಲಿ ಅಳವಡಿಸಿದ್ದು ಮಹಾದೇವರ ಸಾಧನೆ. ಹಳೆಯ ಹಾದಿಗಳನ್ನು ಹಾಗೆ ಹಾಗೆಯೇ ಬಳಸದೆ ಅವುಗಳಲ್ಲಿ ಅನೇಕ ಆವಿಷ್ಕಾರಗಳನ್ನು ತಂದುಕೊಂಡಿದ್ದರಿಂದ ಅವರ ಕಾದಂಬರಿ ಅನನ್ಯವಾಯಿತು’ ಎನ್ನುತ್ತಾರೆ ಎಚ್.ಎಸ್.ಆರ್.

ಆಯ್ಕೆ ಮಾಡಿಕೊಂಡಿರುವ ಹತ್ತು ಮಹತ್ವದ ಲೇಖಕರ ಕಥೆ / ಕಾದಂಬರಿಗಳನ್ನು ಅಧ್ಯಯನ ಮಾಡುವಾಗ ಬೇರೆ ಬೇರೆ ಲೇಖಕರ ಕೃತಿಗಳೊಂದಿಗೆ ಅಥವಾ ಬೇರೆ ದೇಶದ ಲೇಖಕರ ಕೃತಿಗಳೊಂದಿಗೆ ಹೋಲಿಕೆ ಮಾಡಿ ಅಧ್ಯಯನ ಮಾಡುವುದು ಬರೀ ಹೋಲಿಕೆಗಾಗಿ ಅಲ್ಲ. ಹೋಲಿಕೆ ಮಾಡಿ ವಿಶ್ಲೇಷಣೆ ಮಾಡುವುದರಿಂದ ಒಂದು ಬೆಳಕು ಕಾಣಿಸುತ್ತದೆ. ಇದರಿಂದ ಹೊಸ ನೋಟಗಳು ಪ್ರಾಪ್ತವಾಗುತ್ತವೆ. ಕಥೆ/ಕಾದಂಬರಿಗಳಲ್ಲಿ ಅಂತರ್ಗತವಾದ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲು ಸಾಧ್ಯವಾಗುತ್ತದೆ.

ಎಚ್.ಎಸ್.ಆರ್. ಅವರು ಹತ್ತು ಲೇಖಕರನ್ನು ಅಧ್ಯಯನ ಮಾಡುವಾಗ ಕನ್ನಡ ಕಥನ ಮೀಮಾಂಸೆಯನ್ನು ಅನ್ವಯಿಸಿ ಆಶಯ ಆಕೃತಿಗಳ ಅನನ್ಯತೆಯನ್ನು ವಿಶ್ಲೇಷಿಸುತ್ತಲೇ ಸಂಸ್ಕೃತಿಯ ಅಧ್ಯಯನವನ್ನು ಮಾಡಿದ್ದಾರೆ. ಅವರ ವಿದ್ವತ್ತು, ಓದಿನ ಹರವು, ಸೂಕ್ಷ್ಮವಾದ ವಿಶ್ಲೇಷಣಾ ಸಾಮರ್ಥ್ಯದಿಂದಾಗಿ ಕೃತಿಯು ವಿಸ್ತಾರವಾಗಿಯೂ ಆಳವಾಗಿಯೂ ಇದೆ. ಈ ಟಿಪ್ಪಣಿಯ ಮಿತಿಯಲ್ಲಿ ಹೆಚ್ಚು ಚರ್ಚೆ ಸಾಧ್ಯವಾಗುತ್ತಿಲ್ಲ. ವಿಮರ್ಶೆಯೇ ಒಂದು ಕಲಾಕೃತಿಯಾಗಬಹುದು ಎಂಬ ಮಾತಿದೆ. ಎಚ್.ಎಸ್.ಆರ್. ಕನ್ನಡ ಕಥಾ ಸಾಹಿತ್ಯದ ಆಶಯ ಆಕೃತಿಗಳ ಅನನ್ಯತೆಯನ್ನು ಅಧ್ಯಯನ ಮಾಡಿ ಕನ್ನಡ ಕಥಾ ಮೀಮಾಂಸೆಯನ್ನು ರೂಪಿಸಿ, ಒಂದು ತಾತ್ವಿಕ ರೂಪ ಕೊಟ್ಟಿರುವ ಈ ಕೃತಿಯಲ್ಲಿ ಸರಳವಾದ ಭಾಷೆಯನ್ನು ಬಳಸಿದ್ದಾರೆ. ಕನ್ನಡಕ್ಕೆ ಇಂತಹ ಕೃತಿಯ ಅಗತ್ಯವಿದ್ದು, ಇದನ್ನು ಎಚ್.ಎಸ್.ಆರ್. ಒದಗಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT