ಒಟ್ಟಿನಲ್ಲಿ ಇದು ರುದ್ರಪ್ಪ ಅವರ ನೆನಪಿನ ಗಣಿ. ಈ ಗಣಿಗಾರಿಕೆಯಲ್ಲಿ ಸಿಗುವುದು ಹಲವು ಆಯಾಮಗಳು. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿರುವ ದಲಿತ ಕೇರಿಯಲ್ಲಿ ಅವರ ಜನ್ಮದಿಂದ ಹಿಡಿದು, ಊರಿನ ಪರಿಸರ, ಬದುಕು, ಶಿಕ್ಷಣ ಪಡೆಯಲು ಪಟ್ಟ ಕಷ್ಟ, ಹಣಕಾಸು ಬವಣೆಗಳು, ಹೆತ್ತಮ್ಮನ ಪ್ರೀತಿಯಿಂದ ದೂರವಾದದ್ದು, ಅಧಿಕಾರಿಯಾಗಿ ಅನುಭವಿಸಿದ ಘಟನೆಗಳನ್ನು ರುದ್ರಪ್ಪ ಅವರು ದಾಖಲಿಸಿದ್ದಾರೆ. ಕುಟುಂಬದ ವಿಚಾರ ಬಂದಾಗ, ಯಾವುದೇ ಅಳುಕಿಲ್ಲದೆ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ತಮ್ಮ ಅಂತರ್ಜಾತಿ ವಿವಾಹ, ತದನಂತರದ ಘಟನಾವಳಿಗಳನ್ನು ರುದ್ರಪ್ಪ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಇದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿ.