ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಋಣದ ಗಣಿ’ಯೊಳಗೆ ತೆರೆದ ಆತ್ಮಕಥೆ

Last Updated 3 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ ಕರ್ನಾಟಕ ಆಡಳಿತ ಸೇವೆಯಲ್ಲಿದ್ದುಕೊಂಡು ಹಲವು ಹುದ್ದೆಗಳನ್ನು ನಿಭಾಯಿಸಿದ ರುದ್ರಪ್ಪ ಹನಗವಾಡಿ ಅವರ ಆತ್ಮಕಥೆ ಈ ಕೃತಿ.

ಒಟ್ಟಿನಲ್ಲಿ ಇದು ರುದ್ರಪ್ಪ ಅವರ ನೆನಪಿನ ಗಣಿ. ಈ ಗಣಿಗಾರಿಕೆಯಲ್ಲಿ ಸಿಗುವುದು ಹಲವು ಆಯಾಮಗಳು. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿರುವ ದಲಿತ ಕೇರಿಯಲ್ಲಿ ಅವರ ಜನ್ಮದಿಂದ ಹಿಡಿದು, ಊರಿನ ಪರಿಸರ, ಬದುಕು, ಶಿಕ್ಷಣ ಪಡೆಯಲು ಪಟ್ಟ ಕಷ್ಟ, ಹಣಕಾಸು ಬವಣೆಗಳು, ಹೆತ್ತಮ್ಮನ ಪ್ರೀತಿಯಿಂದ ದೂರವಾದದ್ದು, ಅಧಿಕಾರಿಯಾಗಿ ಅನುಭವಿಸಿದ ಘಟನೆಗಳನ್ನು ರುದ್ರಪ್ಪ ಅವರು ದಾಖಲಿಸಿದ್ದಾರೆ. ಕುಟುಂಬದ ವಿಚಾರ ಬಂದಾಗ, ಯಾವುದೇ ಅಳುಕಿಲ್ಲದೆ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ತಮ್ಮ ಅಂತರ್ಜಾತಿ ವಿವಾಹ, ತದನಂತರದ ಘಟನಾವಳಿಗಳನ್ನು ರುದ್ರಪ್ಪ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಇದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿ.

ಸರ್ಕಾರಿ ಅಧಿಕಾರಿಯಾಗಿಯೂ ರುದ್ರಪ್ಪ ಅವರ ಬದುಕಿನ ಹಲವು ಆಯಾಮಗಳನ್ನು ಈ ಕೃತಿಯಲ್ಲಿ ಕಾಣಬಹುದು. ಪ್ರೊ.ಬಿ.ಕೃಷ್ಣಪ್ಪನವರ ಸಖ್ಯ, ದಲಿತ ಸಂಘರ್ಷ ಸಮಿತಿಯ ಜೊತೆಗಿನ ಒಡನಾಟ, ಸಾಮಾಜಿಕ ಹೋರಾಟದ ಕಥನವೂ ಇಲ್ಲಿದೆ. ಇಲ್ಲಿಯವರೆಗೂ ಇಟ್ಟ ಹೆಜ್ಜೆಗಳನ್ನು ‘ಹಿಂದಿರುಗಿ ನೋಡುತ್ತಾ..’ ಒಟ್ಟು 58 ಅಧ್ಯಾಯಗಳಲ್ಲಿ ಲೇಖಕರು ತಮ್ಮ ಬದುಕನ್ನು ದಾಖಲಿಸಿದ್ದಾರೆ. ‘ಕೃತಿಯ ಕೊನೆಕೊನೆಯ ಪುಟಗಳಂತೂ ಕೇವಲ ಒಣದಾಖಲೆಗಳಾಗಿ ಉಳಿದಿವೆ. ಇನ್ನಷ್ಟು ಸಾವಧಾನದಿಂದ ಕೃತಿಯನ್ನು ಕಟ್ಟಿದ್ದರೆ...’ ಎಂದು ಲೇಖಕರ ಒಡನಾಡಿ ಜಿ.ಪಿ.ಬಸವರಾಜು ಅವರು ಮುನ್ನಡಿಯಲ್ಲಿ ಉಲ್ಲೇಖಿಸಿದ್ದಾರೆ. ಈ ದಾಖಲೆಗಳನ್ನು ದಟ್ಟ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಓದುಗರಿಗೂ ಅನಿಸುವುದು ಸುಳ್ಳಲ್ಲ.

ಕೃತಿ: ಋಣದ ಗಣಿ– ಆತ್ಮಕಥೆ

ಲೇ: ರುದ್ರಪ್ಪ ಹನಗವಾಡಿ

ಪ್ರ: ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌

ಸಂ: 9739032600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT