‘ಕ್ಷಣ ಹೊತ್ತು ಆಣಿ ಮುತ್ತು’ ಪುಸ್ತಕಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಕಲನ. ಒಂದೆರಡು ನಿಮಿಷಗಳಲ್ಲಿ ಓದಿ ಮುಗಿಸಬಹುದಾದ, ಸ್ಫೂರ್ತಿದಾಯಕ ಹಾಗೂ ಪ್ರೇರಣಾದಾಯಿ ಬರಹಗಳು ಇವು. ಈ ಅಂಕಣ ಬರಹಗಳ ಸಂಕಲನಗಳು ಸರಣಿಯಾಗಿ ಬರುತ್ತಿವೆ; ಈಗ ಏಳನೆಯ ಭಾಗ ಬಿಡುಗಡೆಯಾಗಿದೆ. ‘ನೀತಿಯನ್ನು ಶುಷ್ಕವಾದ ಬೋಧನೆಯ ರೂಪದಲ್ಲಿ ಹೇಳುವುದಕ್ಕಿಂತ ಸ್ವಾರಸ್ಯಕರವಾದ ಕಥಾರೂಪದಲ್ಲಿ ನಿರೂಪಿಸಿರುವುದರಿಂದ ಹೆಚ್ಚು ಆಕರ್ಷಕವೂ ಅರ್ಥಗರ್ಭಿತವೂ ಆಗಿದೆ’ ಎಂದು ಇದರಲ್ಲಿನ ಬರಹಗಳ ಬಗ್ಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹೇಳಿರುವ ಮಾತು ಈ ಪುಸ್ತಕದ ಬರಹಗಳ ಸ್ವರೂಪವನ್ನು ವಿವರಿಸುವಂತಿದೆ.