ವರಕವಿ ದ. ರಾ. ಬೇಂದ್ರೆಯವರ ’ಚೈತ್ಯಾಲಯ‘ ಕವನಸಂಗ್ರಹ ಪೂರ್ಣವಾಗಿ ಅರವಿಂದರ ಕವನಗಳ ಭಾವಾನುವಾದಗಳು. ಅರವಿಂದರ ಸುನೀತಗಳನ್ನು ಅನುವಾದಿಸುವಾಗ ಬಂದ ಸಹಜತೆ ಬದಲಾಗಿ ‘ಸಾವಿತ್ರಿ‘ ಅನುವಾದದಲ್ಲಿ ವಿಫಲತೆ ಅನುಭವಕ್ಕೆ ಬಂದಿತು ಎಂದು ವರಕವಿ ಬೇಂದ್ರೆಯವರೇ ಹೇಳಿಕೊಂಡದ್ದರಿಂದ ’ಸಾವಿತ್ರಿ‘ ಅನುವಾದ ಎಷ್ಟು ಕಠಿಣವಾದ ಕೆಲಸ ಎಂಬುದನ್ನು ಊಹಿಸಿಕೊಳ್ಳಬಹುದು. ಅರವಿಂದರ ಕಾವ್ಯಕೃತಿಯ ಶಕ್ತಿ ’ಅನನುಭೂತವಾದ ಭಾವಗಳನ್ನು ಅನುಭವಕ್ಕೆ ಎಟಕುವಂತೆ ಶಬ್ದಶಕ್ತಿ ಸಾಮರ್ಥ್ಯದಿಂದ ಜೀವದ ಬೇರೆ ಭೂಮಿಕೆಗೆ ಎತ್ತುವುದು‘ ಎಂದು ಬೇಂದ್ರೆಯವರು ಹೇಳಿದ್ದಾರೆ.