ದಾದಾಪೀರ್ ಜೈಮನ್ ಬರೆದ ಕವಿತೆ: ಅಕ್ಷರ ಅಕ್ಷಯ

ಮೊದಲ ಸಲ
ಕಾಗದದ ಎದೆಯೊಳಗೆ
ಅಕ್ಷರ ಕಣ್ಣು ತೆರೆದಾಗ
ಕನಸಿನಲಿ ಕಳೆದುಹೋದ ಕಂದ
ಸಿಕ್ಕಿಬಿಟ್ಟಂಥ ರೋಮಾಂಚನವಾಗುತ್ತದೆ ಲೋಕಕ್ಕೆ
ಅಕ್ಷರ ತೊಟ್ಟಿಲೊಳಗೆ
ತೊದಲು ನುಡಿವಾಗ
ಲೋಕದಾತ್ಮದ ಒಳದನಿ
ಕ್ಷೀಣವಾಗಿ ಕೇಳಿಸುತ್ತದೆ
ಅಕ್ಷರ ಅಂಬೆಗಾಲಿಟ್ಟು
ಹೊಸ ಹಾದಿ ಮೂಡಿದಾಗ
ಲೋಕದ ಹೊಟ್ಟೆಯೊಳಗೆ
ಚಿಟುಗು ಮುಳ್ಳು ಮಿಸುಕಾಡುತ್ತದೆ
ಲೋಕವೇ ಕೊರೆದಿಟ್ಟ
ಸಾಲುಗಳ ನಡುವಲ್ಲಿ
ಗತ್ತಿನಲಿ ನಡೆಯುತ್ತಾ
ಕವಿತೆಯಾದಾಗ
ಲೋಕದ ಕಣ್ಣು ಕೆಂಪಾಗುತ್ತದೆ
ಕಬ್ಬಿಣ ಕತ್ತಲ ಸರಳಿನ ಸೆರೆಮನೆಯೊಳಗೆ
ಬಂಧಿಸಿದಾಗೆಲ್ಲ
ಅಕ್ಷರ ಕಾಗದದಿಂದ ಮೇಲೆದ್ದು
ಹಾಡಾಗುತ್ತದೆ
ಹಾಡಿನ ಹೆಜ್ಜೆಯ ಹಿಡಿಯದೆ
ಸೋಲಲು
ಬೂಟುಗಾಲಿನ ಬಂದೂಕುಗಳು ಗುಂಡಿಕ್ಕುವಾಗ
ಹಾಡು ಗಾಳಿಯಲ್ಲಿ ಬೆರೆತುಹೋಗುತ್ತದೆ
ಬದುಕಲೆಂದು ಲೋಕ ಉಸಿರಾಡುವಾಗ
ತೂರಿಬಿಡುತ್ತದೆ
ದೇಹದ ಆತ್ಮದೊಳಗೆ
ಆತ್ಮದ ದೇಹದೊಳಗೆ
ಅಲ್ಲಿಂದ ಲೋಕ ನಂಬುವ
ಜನ್ಮ ಜನ್ಮಾoತರದವರೆಗೂ
ಅಕ್ಷರ ಅಕ್ಷಯವಾಗುತ್ತಲೇ ಇರುತ್ತದೆ
ಕವಿತೆ ಹಾಡು ಉಸಿರಾಗುತ್ತಾ
ಕನ್ನಡಿ ಹಿಡಿಯುತ್ತಲೇ ಇರುತ್ತದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.