ಧಾರವಾಡ: ‘ಮಹದಾಯಿ ಹಾಗೂ ಕಾವೇರಿ ನದಿ ವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 27ರಂದು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಭಾನುವಾರ ಇಲ್ಲಿ ತಿಳಿಸಿದರು.
‘ಈಗಾಗಲೇ ಎರಡು ದಿನ ದೆಹಲಿಯಲ್ಲಿ ಉಳಿದು, ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಕುರಿತು ಚರ್ಚೆ ಮಾಡಿದ್ದೇನೆ. ನ್ಯಾಯ ಮಂಡಳಿಯಲ್ಲಿ ಗೆಲ್ಲುವ ವಿಶ್ವಾಸವಿದೆ. ಸರ್ವಪಕ್ಷ ಸಭೆಯಲ್ಲಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಮಹದಾಯಿ ವಿಷಯದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್ ನಾಟಕ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನುಕೂಲ ಆಗುತ್ತದೆ ಎನ್ನುವ ಆಶಾಭಾವ ನಮಗಿಲ್ಲ’ ಎಂದು ಪಾಟೀಲ ಹೇಳಿದರು.