ಇಲ್ಲಿ ಕಾವೇರಿ ನೀರು ಕೇಳುವವರೇ ಇಲ್ಲ
ಬೆಂಗಳೂರು: ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದಿಂದ ನಿತ್ಯ 500 ದಶಲಕ್ಷ ಲೀಟರ್ (ಎಂಎಲ್ಡಿ) ನೀರು ಲಭ್ಯವಾಗುತ್ತಿದೆ. ಆದರೆ, ನಾಗರಿಕರ ನಿರಾಸಕ್ತಿಯಿಂದಾಗಿ ಈ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನೂ ನೋಡಿಕೊಡುತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮೂರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ. ಆದರೂ, ಪೂರ್ಣ ಪ್ರಮಾಣದ ನೀರನ್ನು ಪಂಪ್ ಮಾಡಲು ಆಗುತ್ತಿಲ್ಲ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
500 ಎಂಎಲ್ಡಿ ಪೈಕಿ 270 ಎಂಎಲ್ಡಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. 1.40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಈಗಾಗಲೇ ಪೈಪ್ಲೈನ್ ಅಳವಡಿಸಲಾಗಿದೆ. ಆದರೆ, 40ರಿಂದ 50 ಸಾವಿರ ಅರ್ಜಿಗಳು ಮಾತ್ರ ಬಂದಿವೆ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಟಿ.ವೆಂಕಟರಾಜು ತಿಳಿಸಿದರು.
ಕಾವೇರಿ ನೀರು ಪೂರೈಕೆ ವಿಳಂಬವಾಗಬಹುದು ಎಂಬ ಕಾರಣಕ್ಕೆ ನಗರದ ಹೊರವಲಯ ಪ್ರದೇಶಗಳಲ್ಲಿ 12 ಸಾವಿರ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಈ ಪೈಕಿ 4-5 ಸಾವಿರ ಕೊಳವೆಬಾವಿಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಅವುಗಳಿಂದ ಉಚಿತವಾಗಿ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಹಣ ನೀಡಿ ಹೊಸ ಸಂಪರ್ಕ ಪಡೆಯಲು ಜನ ಮುಂದೆ ಬರುತ್ತಿಲ್ಲ ಎಂದರು.
20/30 ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಒಂದು ಸಾವಿರ ರೂಪಾಯಿ, 30/40 ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ 12 ಸಾವಿರ ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಹಣ ಪಾವತಿಸಿದ ವಾರದಲ್ಲಿ ನೀರಿನ ಸಂಪರ್ಕ ನೀಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ 40ರಷ್ಟು ನೀರಿನ ಸೋರಿಕೆ ಆಗುತ್ತಿದೆ ಎಂದು ಎಲ್ ಅಂಡ್ ಟಿ ಸಂಸ್ಥೆ ಬಹಳ ಹಿಂದೆಯೇ ಪತ್ತೆಹಚ್ಚಿತ್ತು. ಆರು ಸಾವಿರ ಕಿ.ಮೀ. ಪೈಪ್ಲೈನ್ ಇದ್ದು, ಜೋಡಣೆ ಇರುವ ಕಡೆ ಹೆಚ್ಚಾಗಿ ಸೋರಿಕೆ ಆಗುತ್ತಿದೆ. ಇದನ್ನು ಕಡಿಮೆ ಮಾಡಲು ಪ್ರಯತ್ನ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದರ ಏರಿಕೆ: ಅಪಾರ್ಟ್ಮೆಂಟ್ಗಳಿಗೆ ಪೂರೈಸುವ ನೀರಿನ ದರ ಜಾಸ್ತಿ ಮಾಡಿರುವುದರಿಂದ 2.5 ಕೋಟಿ ಆದಾಯ ಜಾಸ್ತಿಯಾಗಲಿದೆ. ಇದುವರೆಗೆ ವಾರ್ಷಿಕ ಮೂರು ಕೋಟಿ ರೂಪಾಯಿ ಆದಾಯ ಬರುತ್ತಿತ್ತು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.