<p>ಅನೇಕ ಯುವಕರಲ್ಲಿ ಆತ್ಮವಿಶ್ವಾಸ, ಹೊಸ ಉತ್ಸಾಹವನ್ನು ಮೂಡಿಸಿದ ಆತ್ಮಕಥನ `ಊರುಕೇರಿ~. ಅದು ಕೇವಲ ಕವಿ ಡಾ.ಸಿದ್ಧಲಿಂಗಯ್ಯ ಅವರ ಆತ್ಮಕತೆ ಅಲ್ಲ. `ಅಕ್ಷರ ಸಾಂಗತ್ಯದ ಹೊಸ ಪ್ರಜ್ಞೆಯ ಬೆಳಕಿನಲ್ಲಿ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಮುನ್ನಡೆದ ದಲಿತ ಹುಡುಗನೊಬ್ಬನ ಈ ಯಾತ್ರೆ ಸಮಸ್ತ ದಲಿತರ ಊರುಕೇರಿಯ ಆತ್ಮಕಥಾನಕವೇ ಆಗಿದೆ~. ಸಂಸ್ಕೃತಿ ಚಿಂತಕ ಡಿ.ಆರ್.ನಾಗರಾಜ ಹೇಳಿದಂತೆ ಅದು `ಬಡವರ ನಗುವಿನ ಶಕ್ತಿ~. <br /> <br /> `ಊರುಕೇರಿ~ ನಾಟಕವಾಯಿತು. ಮಂಗಳೂರಿನಿಂದ ರಾಯಚೂರಿನವರೆಗೂ, ಚಾಮರಾಜನಗರದಿಂದ ಬೀದರ್ವರೆಗೂ ಸಂಚರಿಸಿತು. ಊರು- ಕೇರಿಗಳು ಸೇರಿ ನಾಟಕವನ್ನು ಆಸ್ವಾದಿಸಿದವು. ರಂಗ ವಿಮರ್ಶಕರಿಂದಲೂ ಉತ್ತಮ ಸ್ಪಂದನ ದೊರೆಯಿತು. 86 ಪ್ರದರ್ಶನಗಳನ್ನು ಕಂಡಿರುವ ನಾಟಕ ಈಗ ನೂರರತ್ತ ದಾಪುಗಾಲು ಇಡುತ್ತಿದೆ. <br /> <br /> ಬರುವ ಜೂನ್ 20ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂರನೇ ಪ್ರದರ್ಶನ ನಡೆಯಲಿದೆ. 101ನೇ ಪ್ರದರ್ಶನಕ್ಕೆ ಗೌರಿಬಿದನೂರಿನಿಂದ ಆಹ್ವಾನ ಬಂದಿದೆ. ಗಣೇಶ್ ಪಾಲಿಗೆ ಅದೆಲ್ಲಾ ಮಾಯೆಯಲ್ಲಿ ನಡೆದಂತೆ ಆಗಿದೆ. ನಾಟಕ ಹೀಗೆಲ್ಲಾ ಬೆಳೆಯುತ್ತದೆ ಎಂದು ಅವರು ಕನಸಲ್ಲೂ ಕಂಡಿರಲಿಲ್ಲವಂತೆ.<br /> <br /> ಊರುಕೇರಿಯನ್ನು ಮೊದಲು ಆಡಿಸಿದ್ದು ಮಂಡ್ಯದ `ನಾವು ತಂಡ~ಕ್ಕಾಗಿ. ಬಹಳ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಆದರೆ ತಂಡದಲ್ಲಿದ್ದವರೆಲ್ಲಾ ಹವ್ಯಾಸಿಗಳು. ಹಾಗಾಗಿ ಅವರಿಗೆ ನಾಟಕವನ್ನು ಬೇರೆ ಬೇರೆ ಊರುಗಳಿಗೆ ಕೊಂಡೊಯ್ಯುವ ಶಕ್ತಿ ಇರಲಿಲ್ಲ. ನಿರ್ದೇಶಕ ಎಂ.ಗಣೇಶ್ ನಾಟಕವನ್ನು ಮುನ್ನಡೆಸಿದರು. ಮಂಡ್ಯದ ಸ್ವಾಮಿ ಗಾಮನಹಳ್ಳಿ ಅವರ ಸಂಗೀತ ಸಂಯೋಜಿಸಿದರು. <br /> <br /> ಕಿನ್ನಗೋಳಿಯಲ್ಲಿ ಪ್ರದರ್ಶನ ರದ್ದಾಗಿತ್ತು. ಆದರೆ ಬರಿಗೈಯಲ್ಲಿ ಮರಳುವಂತಿರಲಿಲ್ಲ. ಊರಿನ ಮುಖಂಡರನ್ನು ತಂಡ ಸಂಪರ್ಕಿಸಿತು. ಅಲ್ಲಿ ಇದ್ದುದು ಒಂದೇ ಸಭಾಂಗಣ. <br /> ಬೇರೆಯವರು ಬುಕ್ ಮಾಡಿದ್ದಾರೆ ಎಂಬ ಮಾತು ಮುಖಂಡರಿಂದ. ಹೇಗೋ ಮನವೊಲಿಸಲಾಯಿತು.<br /> <br /> ನಾಟಕ ಎರಡು ಗಂಟೆ ಅವಧಿಯದ್ದು. ಆದರೆ ಅವರು ನೀಡಿದ್ದು ಕೇವಲ ಒಂದು ಗಂಟೆ ಕಾಲಾವಕಾಶ. ನಾಟಕ ಶುರುವಾಯಿತು. ಒಂದು ಗಂಟೆ ಮುಗಿಯುತ್ತ ಬಂತು. ಮುಖಂಡರು ಗಣೇಶರ ಬಳಿ ಬಂದರು. `ಇನ್ನೇನು ಮುಗಿಯಲಿದೆ~ ಎಂದು ಗಣೇಶ್ ಹೇಳಬೇಕು ಆಗ ಮುಖಂಡರು `ನಿಲ್ಲಿಸೋದು ಬೇಡ~ ಎಂದರು. ಜನ ತುದಿಗಾಲಲ್ಲಿ ನಿಂತು ನಾಟಕ ನೋಡುತ್ತಿರುವುದು ಮುಖಂಡರ ಗಮನಕ್ಕೆ ಬಂದಿತ್ತು. <br /> <br /> ನಾಟಕದಲ್ಲಿ ಸಿದ್ಧಲಿಂಗಯ್ಯ ಅವರ ಕವಿತೆಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ತುಮಕೂರಿನಲ್ಲಿ ಪ್ರದರ್ಶನ ನಡೆಯುತ್ತಿತ್ತು. ಹಾಡು ಮುಗಿದರೂ ಪ್ರೇಕ್ಷಕರು ಸುಮ್ಮನಾಗುತ್ತಿಲ್ಲ! <br /> <br /> ಕವಿತೆಗಳನ್ನು ಪದಕಟ್ಟಿ ತಾವೇ ಹಾಡುತ್ತಿದ್ದಾರೆ. ದಮ್ಮಡಿ, ತಮಟೆಗಳು ಸದ್ದು ಮಾಡುತ್ತಿವೆ. ಪಾತ್ರಧಾರಿಗಳಿಗೂ ಹಿಗ್ಗು. ಮತ್ತೊಂದು ಹಾಡು ಬಂದಾಗಲೂ ಅದೇ ಕತೆ ಪುನರಾವರ್ತನೆ. ಸರಿ ಪ್ರೇಕ್ಷಕರ ಹಾಡು ನಿಂತ ಮೇಲೆ ನಾಟಕ ಮುಂದುವರಿಸಲು ತೀರ್ಮಾನಿಸಲಾಯಿತು! <br /> <br /> ಔರಾದ್ನಲ್ಲಿ ಪ್ರದರ್ಶನ. ತಂಡವೇನೋ ಸರಕು ಸರಂಜಾಮುಗಳೊಂದಿಗೆ ಊರಿಗೆ ಬಂದು ಬಿಟ್ಟಿದೆ. ಬಹಳಷ್ಟು ಟಿಕೆಟ್ಗಳು ಮಾರಾಟವಾಗಿವೆ. ಆದರೆ ಅಷ್ಟೂ ಜನರಿಗೆ ಜಾಗ ಹೊಂದಿಸಲು ಆಗುತ್ತಿಲ್ಲ. ಕಡೆಗೆ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ರದ್ದುಗೊಳಿಸಿ ನಾಟಕ ನಡೆಸಲಾಯಿತು. <br /> <br /> ಆತ್ಮಕತೆಯ ಮೊದಲ ಭಾಗವನ್ನು ಆಧರಿಸಿದೆ ನಾಟಕ. ಬಾಲ್ಯದ ಬದುಕಿನಿಂದ, ಮಾಸ್ತಿರಿಕೆ ಮಾಡುವವರೆಗಿನ ಸಿದ್ಧಲಿಂಗಯ್ಯನವರ ಬದುಕಿನ ಚಿತ್ರಣ ಇಲ್ಲಿದೆ. 70ರ ದಶಕದಲ್ಲಿ ರಾಜ್ಯ ಕಂಡ ಚಳವಳಿಗಳ ಪಾದರಸದ ಗುಣವನ್ನು ನಾಟಕದಲ್ಲಿ ಹಿಡಿದಿಡಲಾಗಿದೆ. ಲಘುದಾಟಿ, ತೆಳು ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ಪ್ರೇಕ್ಷಕರಿಗೆ ದಾಟಿಸಲಾಗಿದೆ. <br /> <br /> ಮೂವತ್ತೇಳರ ಪ್ರಾಯದ ಗಣೇಶ್ ಅವರ ಬದುಕೂ ಒಂದರ್ಥದಲ್ಲಿ `ಊರುಕೇರಿ~ಯೇ. ಸಿದ್ಧಲಿಂಗಯ್ಯನವರಂತೆ ಅವರೂ ನಗರದ ನೆರಳಿರುವ ಹಳ್ಳಿಯೊಂದರಿಂದ ಹುಟ್ಟಿಬಂದವರು. ಊರು ಹೊಸಕೋಟೆ ತಾಲ್ಲೂಕಿನ ತಿಮ್ಮಪ್ಪನಹಳ್ಳಿ. ತಾಯಿ ಜಾನಪದ ಹಾಡುಗಾರ್ತಿ. ಊರಿನಲ್ಲಿ ಆಡುತ್ತಿದ್ದ ಕಂಪೆನಿ ನಾಟಕಗಳು, ಹರಿಕತೆ ದಾಸರ ಕತೆಗಳು ಅವರೊಳಗೆ `ಆಟ~ ಹುಟ್ಟು ಹಾಕಿದವು.<br /> <br /> ಜತೆಗೆ ಶಾಲೆಯಲ್ಲಿ ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ನಾಟಕದಲ್ಲಿ ಪಾಲ್ಗೊಳ್ಳುವ ಹುಚ್ಚು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ ಬೇರೊಂದು ಲೋಕವೇ ತೆರೆದುಕೊಂಡಿತು. ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ ಕೆ.ಮರುಳಸಿದ್ದಪ್ಪ, ನಟರಾಜ್ ಹುಳಿಯಾರ್, ಬಸವರಾಜ ಕಲ್ಗುಡಿ ಮುಂತಾದ ಗುರುಗಳೊಂದಿಗೆ ಒಡನಾಟ. ಜತೆಗೆ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕ. <br /> <br /> ರೈತ ಸಂಘದ ಹೋರಾಟಗಳ ದಟ್ಟ ಪ್ರಭಾವ. ಗದ್ದರ್, ಎಂ.ಡಿ. ನಂಜುಂಡಸ್ವಾಮಿ, ಅನಂತಮೂರ್ತಿ, ಸಿದ್ಧಲಿಂಗಯ್ಯ ಅವರೊಂದಿಗೆ ಚರ್ಚಿಸುವ ಅವಕಾಶ. `ಏಕಲವ್ಯ~ ನಾಟಕ ಆಡಿದ್ದು ಕಾಲೇಜು ದಿನಗಳ ಮರೆಯಲಾರದ ಅನುಭವ.<br /> <br /> ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಗಣೇಶ್. ಅದಾದ ಕೆಲವು ದಿವಸಗಳಲ್ಲೇ ಕಿ.ರಂ.ನಾಗರಾಜ ಅವರಿಂದ ಕರೆ ಬಂತು. ಸೀದಾ ನೀನಾಸಂ ದಾರಿ ಹಿಡಿಯುವಂತೆ ಆಜ್ಞಾಪಿಸಿದರು.<br /> <br /> ಅದಷ್ಟೇ ಅಲ್ಲ ಸ್ವತಃ ಅರ್ಜಿ ತಂದು, ಅದನ್ನು ಅವರೇ ತುಂಬಿ, ಕೈಗೆ ಐನೂರು ರೂಪಾಯಿ ದುಡ್ಡು ಕೊಟ್ಟು `ಗಣೇಶ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗು ಅಲ್ಲಿಂದ ಸಾಗರಕ್ಕೆ ಬಸ್ ಹಿಡಿ. ಹೆಗ್ಗೋಡು ಎಂದು ಯಾರನ್ನಾದರೂ ಕೇಳು. ದಾರಿ ತೋರುತ್ತಾರೆ. ಅಲ್ಲೇ ಇರೋದು ನೀನಾಸಂ~ ಎಂದು ಬೆನ್ನು ತಟ್ಟಿದರು. <br /> <br /> ನೀನಾಸಂನಲ್ಲಿ ಸಂದರ್ಶನ ಮುಗಿಯಿತು. ಆಯ್ಕೆಯಾಗಿರುವ ವಿಷಯವೂ ತಿಳಿಯಿತು. ರಂಗಭೂಮಿಯ ಇಂಚಿಂಚನ್ನೂ ಅನುಭವಿಸುತ್ತ ಹೋದರು ಗಣೇಶ್. ನಾಟಕವೇ ತಮ್ಮ ಕ್ಷೇತ್ರ ಎಂದು ಗಣೇಶರಿಗೆ ಅನಿಸತೊಡಗಿದ್ದು ಆಗ.<br /> <br /> ಒಂದು ವರ್ಷ ಅಧ್ಯಯನ, ಎರಡು ವರ್ಷ ತಿರುಗಾಟದಲ್ಲಿ ಕಳೆದರು. ಸ್ಮಶಾನ ಕುರುಕ್ಷೇತ್ರ, ಭಗವದ್ದಜ್ಜುಕೀಯಂ, ಮೂವರು ಅಕ್ಕತಂಗಿಯರು, ವಿದುಷಿಯ ವಿದೂಷಕ, ಕತ್ತಲೆಗೆ ಹತ್ತು ತಲೆ ನಾಟಕಗಳಲ್ಲಿ ಪಾಲ್ಗೊಂಡರು. ನೀನಾಸಂನಲ್ಲೇ ಮೇಷ್ಟ್ರಾಗುವ ಅವಕಾಶ ಒದಗಿಬಂತು.<br /> <br /> ನಾಟಕ ಕುಟುಂಬದ ಕಾಯಂ ಸದಸ್ಯರಾದರು ಅವರು. ಮರು ತಿರುಗಾಟ ಆರಂಭ. ಕಾಲದಿವ್ಯ, ಆ ಮನಿ, ಕೇಶಪಾಶ ಪ್ರಪಂಚ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದರು. <br /> <br /> ರುಸ್ತುಂ ಬರೂಚ, ಕನ್ನೈಲಾಲ್, ಬಿ.ವಿ.ಕಾರಂತ, ಪ್ರಸನ್ನ, ಕೆ.ವಿ.ಅಕ್ಷರ, ವೆಂಕಟರಮಣ ಐತಾಳ, ಮಹಾಬಲೇಶ್ವರ ಮುಂತಾದವರ ಸ್ನೇಹ, ಮಾರ್ಗದರ್ಶನ ದೊರೆಯಿತು. <br /> <br /> ರಜೆಯ ದಿನಗಳನ್ನು ಕ್ರಿಯಾಶೀಲವಾಗಿ ಕಳೆಯುವ ಹಂಬಲ ಗಣೇಶರಿಗೆ. ಮಳೆಗಾಲದಲ್ಲಿ ಮೋಡ ಕಟ್ಟುವಂತೆ ನೀನಾಸಂಗೆ ಬಿಡುವಿದ್ದ ಸಮಯದಲ್ಲಿ ನಾಟಕ ಆಡಿಸಲು ಮುಂದಾದರು.<br /> <br /> 2005ರಲ್ಲಿ ನೀನಾಸಂ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು `ಜನಮನದಾಟ~ ರಂಗತಂಡ ಕಟ್ಟಿದರು. `ಊರುಕೇರಿ~ ಮಾತ್ರವಲ್ಲದೆ ಅನೇಕ ಪ್ರಯೋಗಗಳನ್ನು ನಡೆಸಿತು.<br /> <br /> ತಂಡಕ್ಕೆ ಬಲು ಜನಪ್ರಿಯತೆಯನ್ನು ತಂದುಕೊಟ್ಟದ್ದು ಶ್ರೀನಿವಾಸ ವೈದ್ಯರ ಎರಡು ಕತೆಗಳನ್ನು ಆಧರಿಸಿದ `ಶ್ರದ್ಧಾ ಮತ್ತು ಹಣತೆ~ ನಾಟಕ. ನಂತರ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡರ `ಉಚಲ್ಯಾ~, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ `ರಹಸ್ಯ ವಿಶ್ವ ಮತ್ತು ತಬರನ ಕಥೆ~, ಮುಕುಂದರಾವ್ ಅವರ `ಬಾಬಾ ಸಾಹೇಬ್ ಅಂಬೇಡ್ಕರ್~, `ಸೂರ್ಯನ ಕುದುರೆ~ ಕೃತಿಗಳನ್ನು ರಂಗರೂಪಕ್ಕಿಳಿಸಲಾಯಿತು.<br /> <br /> `ಜನಮನದಾಟ~ ಕೇವಲ ಒಬ್ಬರ ಕೂಸಲ್ಲ. ಅದು ಹುಟ್ಟಿದಾಗ ಒಬ್ಬರೇ ನಿರ್ದೇಶಕರು ಇರಲಿಲ್ಲ. ತಾಲೀಮು ನಡೆಸುವಾಗಲೂ ಅಷ್ಟೇ. ಒಂದೇ ಕತೆಯನ್ನು ಹಲವರು ನಿರ್ದೇಶಿಸುವುದು, ಅವುಗಳಲ್ಲಿ ಯಾವುದು ಉತ್ತಮ ಫಸಲೋ ಅದನ್ನು ಬಳಸಿಕೊಳ್ಳುವುದು ಎಂದಾಗಿತ್ತು. ಅದೇ ಯಶಸ್ಸಿಗೂ ನಾಂದಿ ಹಾಡಿತು.<br /> <br /> ಸರಳ ರಂಗಪರಿಕರಗಳನ್ನೇ ಉಪಯೋಗಿಸಿಕೊಂಡು ನಾಟಕ ಮಾಡುವುದು. ಲಕ್ಷ್ಮಣ ಪೀರಗಾರ, ಸಿತಾರ, ಕಲ್ಲಪ್ಪ ಪೂಜಾರ್, ಮಹದೇವ್ ಲಾಲಿಪಾಳ್ಯ, ಚಂದ್ರಮ್ಮ, ಎಂ.ಸೂರ್ಯ, ಕೆ.ಎನ್.ಜಯರಾಂ, ಚೈತ್ರ, ಅರುಣ್ ಮಾನ್ವಿ ಹಾಗೂ ಎಸ್.ಪಿ. ಮಂಜುನಾಥ ಮುಂತಾದವರು `ಜನಮನದಾಟ~ದ ಬೆನ್ನೆಲಬುಗಳು. <br /> <br /> ಸಿದ್ಧ ನಾಟಕಗಳಿಗಿಂತಲೂ ಕಥೆಗಳನ್ನೇ ಆಯ್ದುಕೊಂಡು ನಾಟಕ ಆಡಿಸುವುದು ಗಣೇಶರ ವೈಶಿಷ್ಟ್ಯ. ಹೀಗೇಕೆ ಎಂಬ ಪ್ರಶ್ನೆ ಎತ್ತಿದಾಗ ಅವರು, `ಹಲವು ವರ್ಷಗಳಿಂದ ಮಹತ್ವದ ನಾಟಕ ಕೃತಿಗಳು ಕನ್ನಡದಲ್ಲಿ ಬಂದಿಲ್ಲ. ಆದರೂ ಕನ್ನಡ ರಂಗಭೂಮಿ ಬೆಳಗುತ್ತಿದೆ. ಇದಕ್ಕೆ ಕಾರಣ ಅದು ಕಾವ್ಯ, ಕತೆ, ಹರಟೆ ಕಡೆ ಕಡೆಗೆ ಪತ್ರಿಕಾ ವರದಿಗಳನ್ನೂ ಆಧಾರವಾಗಿಟ್ಟುಕೊಂಡು ನಾಟಕ ಆಡಿಸುತ್ತಿರುವುದು~ ಎಂದರು. <br /> <br /> ಚಿಕ್ಕಂದಿನಲ್ಲಿ ಅವರು ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ನೋಡುತ್ತಿದ್ದರು. ಆಗೆಲ್ಲಾ ನಮ್ಮಂಥವರಿಗೂ ವಿಮಾನದಲ್ಲಿ ಹಾರಲು ಸಾಧ್ಯವಾ ಎಂದು ಕೇಳಿಕೊಳ್ಳುತ್ತಿದ್ದರು. <br /> <br /> 2007ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ನೀಡಿತು. ಆಗ ವಿಮಾನವೇರುವ ಅವಕಾಶ. ದಲಿತ ಹುಡುಗನೊಬ್ಬ ವಿಮಾನವೇರಿದ್ದು ಅವರೊಳಗೆ ಮಾತ್ರವಲ್ಲ, ಅನೇಕ ಗೆಳೆಯರಲ್ಲಿ, ಹುಟ್ಟಿದೂರಿನಲ್ಲಿ ಪುಳಕ ಮೂಡಿಸಿತ್ತು!<br /> <br /> ಗಣೇಶ್ ಹೆಗ್ಗೋಡಿನ `ಚರಕ~, ಅಂಕೋಲಾದ `ಸಂಗಾತಿ ರಂಗಭೂಮಿ~, ಸಾಗರದ `ಸ್ಪಂದನ~, `ಕಾಗೋಡು ರಂಗಮಂಚ~ ಮತ್ತಿತರ ಸಂಘಟನೆಗಳೊಂದಿಗೆ ದುಡಿದಿದ್ದಾರೆ. <br /> <br /> ಈಗ ಕುವೆಂಪು ವಿಶ್ವವಿದ್ಯಲಯದಲ್ಲಿ `ಆಧುನಿಕ ಕನ್ನಡ ರಂಗಭೂಮಿಯ ಹೊಸ ಸಾಧ್ಯತೆಗಳು~ ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ. `ಊರುಕೇರಿ~ ನಾಟಕ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9900257750. <br /> <br /> <strong>ವಿಳಾಸ: ಎಂ. ಗಣೇಶ್, ಅಧ್ಯಾಪಕರು, ನೀನಾಸಂ ರಂಗ ಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನೇಕ ಯುವಕರಲ್ಲಿ ಆತ್ಮವಿಶ್ವಾಸ, ಹೊಸ ಉತ್ಸಾಹವನ್ನು ಮೂಡಿಸಿದ ಆತ್ಮಕಥನ `ಊರುಕೇರಿ~. ಅದು ಕೇವಲ ಕವಿ ಡಾ.ಸಿದ್ಧಲಿಂಗಯ್ಯ ಅವರ ಆತ್ಮಕತೆ ಅಲ್ಲ. `ಅಕ್ಷರ ಸಾಂಗತ್ಯದ ಹೊಸ ಪ್ರಜ್ಞೆಯ ಬೆಳಕಿನಲ್ಲಿ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಮುನ್ನಡೆದ ದಲಿತ ಹುಡುಗನೊಬ್ಬನ ಈ ಯಾತ್ರೆ ಸಮಸ್ತ ದಲಿತರ ಊರುಕೇರಿಯ ಆತ್ಮಕಥಾನಕವೇ ಆಗಿದೆ~. ಸಂಸ್ಕೃತಿ ಚಿಂತಕ ಡಿ.ಆರ್.ನಾಗರಾಜ ಹೇಳಿದಂತೆ ಅದು `ಬಡವರ ನಗುವಿನ ಶಕ್ತಿ~. <br /> <br /> `ಊರುಕೇರಿ~ ನಾಟಕವಾಯಿತು. ಮಂಗಳೂರಿನಿಂದ ರಾಯಚೂರಿನವರೆಗೂ, ಚಾಮರಾಜನಗರದಿಂದ ಬೀದರ್ವರೆಗೂ ಸಂಚರಿಸಿತು. ಊರು- ಕೇರಿಗಳು ಸೇರಿ ನಾಟಕವನ್ನು ಆಸ್ವಾದಿಸಿದವು. ರಂಗ ವಿಮರ್ಶಕರಿಂದಲೂ ಉತ್ತಮ ಸ್ಪಂದನ ದೊರೆಯಿತು. 86 ಪ್ರದರ್ಶನಗಳನ್ನು ಕಂಡಿರುವ ನಾಟಕ ಈಗ ನೂರರತ್ತ ದಾಪುಗಾಲು ಇಡುತ್ತಿದೆ. <br /> <br /> ಬರುವ ಜೂನ್ 20ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂರನೇ ಪ್ರದರ್ಶನ ನಡೆಯಲಿದೆ. 101ನೇ ಪ್ರದರ್ಶನಕ್ಕೆ ಗೌರಿಬಿದನೂರಿನಿಂದ ಆಹ್ವಾನ ಬಂದಿದೆ. ಗಣೇಶ್ ಪಾಲಿಗೆ ಅದೆಲ್ಲಾ ಮಾಯೆಯಲ್ಲಿ ನಡೆದಂತೆ ಆಗಿದೆ. ನಾಟಕ ಹೀಗೆಲ್ಲಾ ಬೆಳೆಯುತ್ತದೆ ಎಂದು ಅವರು ಕನಸಲ್ಲೂ ಕಂಡಿರಲಿಲ್ಲವಂತೆ.<br /> <br /> ಊರುಕೇರಿಯನ್ನು ಮೊದಲು ಆಡಿಸಿದ್ದು ಮಂಡ್ಯದ `ನಾವು ತಂಡ~ಕ್ಕಾಗಿ. ಬಹಳ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಆದರೆ ತಂಡದಲ್ಲಿದ್ದವರೆಲ್ಲಾ ಹವ್ಯಾಸಿಗಳು. ಹಾಗಾಗಿ ಅವರಿಗೆ ನಾಟಕವನ್ನು ಬೇರೆ ಬೇರೆ ಊರುಗಳಿಗೆ ಕೊಂಡೊಯ್ಯುವ ಶಕ್ತಿ ಇರಲಿಲ್ಲ. ನಿರ್ದೇಶಕ ಎಂ.ಗಣೇಶ್ ನಾಟಕವನ್ನು ಮುನ್ನಡೆಸಿದರು. ಮಂಡ್ಯದ ಸ್ವಾಮಿ ಗಾಮನಹಳ್ಳಿ ಅವರ ಸಂಗೀತ ಸಂಯೋಜಿಸಿದರು. <br /> <br /> ಕಿನ್ನಗೋಳಿಯಲ್ಲಿ ಪ್ರದರ್ಶನ ರದ್ದಾಗಿತ್ತು. ಆದರೆ ಬರಿಗೈಯಲ್ಲಿ ಮರಳುವಂತಿರಲಿಲ್ಲ. ಊರಿನ ಮುಖಂಡರನ್ನು ತಂಡ ಸಂಪರ್ಕಿಸಿತು. ಅಲ್ಲಿ ಇದ್ದುದು ಒಂದೇ ಸಭಾಂಗಣ. <br /> ಬೇರೆಯವರು ಬುಕ್ ಮಾಡಿದ್ದಾರೆ ಎಂಬ ಮಾತು ಮುಖಂಡರಿಂದ. ಹೇಗೋ ಮನವೊಲಿಸಲಾಯಿತು.<br /> <br /> ನಾಟಕ ಎರಡು ಗಂಟೆ ಅವಧಿಯದ್ದು. ಆದರೆ ಅವರು ನೀಡಿದ್ದು ಕೇವಲ ಒಂದು ಗಂಟೆ ಕಾಲಾವಕಾಶ. ನಾಟಕ ಶುರುವಾಯಿತು. ಒಂದು ಗಂಟೆ ಮುಗಿಯುತ್ತ ಬಂತು. ಮುಖಂಡರು ಗಣೇಶರ ಬಳಿ ಬಂದರು. `ಇನ್ನೇನು ಮುಗಿಯಲಿದೆ~ ಎಂದು ಗಣೇಶ್ ಹೇಳಬೇಕು ಆಗ ಮುಖಂಡರು `ನಿಲ್ಲಿಸೋದು ಬೇಡ~ ಎಂದರು. ಜನ ತುದಿಗಾಲಲ್ಲಿ ನಿಂತು ನಾಟಕ ನೋಡುತ್ತಿರುವುದು ಮುಖಂಡರ ಗಮನಕ್ಕೆ ಬಂದಿತ್ತು. <br /> <br /> ನಾಟಕದಲ್ಲಿ ಸಿದ್ಧಲಿಂಗಯ್ಯ ಅವರ ಕವಿತೆಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ತುಮಕೂರಿನಲ್ಲಿ ಪ್ರದರ್ಶನ ನಡೆಯುತ್ತಿತ್ತು. ಹಾಡು ಮುಗಿದರೂ ಪ್ರೇಕ್ಷಕರು ಸುಮ್ಮನಾಗುತ್ತಿಲ್ಲ! <br /> <br /> ಕವಿತೆಗಳನ್ನು ಪದಕಟ್ಟಿ ತಾವೇ ಹಾಡುತ್ತಿದ್ದಾರೆ. ದಮ್ಮಡಿ, ತಮಟೆಗಳು ಸದ್ದು ಮಾಡುತ್ತಿವೆ. ಪಾತ್ರಧಾರಿಗಳಿಗೂ ಹಿಗ್ಗು. ಮತ್ತೊಂದು ಹಾಡು ಬಂದಾಗಲೂ ಅದೇ ಕತೆ ಪುನರಾವರ್ತನೆ. ಸರಿ ಪ್ರೇಕ್ಷಕರ ಹಾಡು ನಿಂತ ಮೇಲೆ ನಾಟಕ ಮುಂದುವರಿಸಲು ತೀರ್ಮಾನಿಸಲಾಯಿತು! <br /> <br /> ಔರಾದ್ನಲ್ಲಿ ಪ್ರದರ್ಶನ. ತಂಡವೇನೋ ಸರಕು ಸರಂಜಾಮುಗಳೊಂದಿಗೆ ಊರಿಗೆ ಬಂದು ಬಿಟ್ಟಿದೆ. ಬಹಳಷ್ಟು ಟಿಕೆಟ್ಗಳು ಮಾರಾಟವಾಗಿವೆ. ಆದರೆ ಅಷ್ಟೂ ಜನರಿಗೆ ಜಾಗ ಹೊಂದಿಸಲು ಆಗುತ್ತಿಲ್ಲ. ಕಡೆಗೆ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ರದ್ದುಗೊಳಿಸಿ ನಾಟಕ ನಡೆಸಲಾಯಿತು. <br /> <br /> ಆತ್ಮಕತೆಯ ಮೊದಲ ಭಾಗವನ್ನು ಆಧರಿಸಿದೆ ನಾಟಕ. ಬಾಲ್ಯದ ಬದುಕಿನಿಂದ, ಮಾಸ್ತಿರಿಕೆ ಮಾಡುವವರೆಗಿನ ಸಿದ್ಧಲಿಂಗಯ್ಯನವರ ಬದುಕಿನ ಚಿತ್ರಣ ಇಲ್ಲಿದೆ. 70ರ ದಶಕದಲ್ಲಿ ರಾಜ್ಯ ಕಂಡ ಚಳವಳಿಗಳ ಪಾದರಸದ ಗುಣವನ್ನು ನಾಟಕದಲ್ಲಿ ಹಿಡಿದಿಡಲಾಗಿದೆ. ಲಘುದಾಟಿ, ತೆಳು ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ಪ್ರೇಕ್ಷಕರಿಗೆ ದಾಟಿಸಲಾಗಿದೆ. <br /> <br /> ಮೂವತ್ತೇಳರ ಪ್ರಾಯದ ಗಣೇಶ್ ಅವರ ಬದುಕೂ ಒಂದರ್ಥದಲ್ಲಿ `ಊರುಕೇರಿ~ಯೇ. ಸಿದ್ಧಲಿಂಗಯ್ಯನವರಂತೆ ಅವರೂ ನಗರದ ನೆರಳಿರುವ ಹಳ್ಳಿಯೊಂದರಿಂದ ಹುಟ್ಟಿಬಂದವರು. ಊರು ಹೊಸಕೋಟೆ ತಾಲ್ಲೂಕಿನ ತಿಮ್ಮಪ್ಪನಹಳ್ಳಿ. ತಾಯಿ ಜಾನಪದ ಹಾಡುಗಾರ್ತಿ. ಊರಿನಲ್ಲಿ ಆಡುತ್ತಿದ್ದ ಕಂಪೆನಿ ನಾಟಕಗಳು, ಹರಿಕತೆ ದಾಸರ ಕತೆಗಳು ಅವರೊಳಗೆ `ಆಟ~ ಹುಟ್ಟು ಹಾಕಿದವು.<br /> <br /> ಜತೆಗೆ ಶಾಲೆಯಲ್ಲಿ ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ನಾಟಕದಲ್ಲಿ ಪಾಲ್ಗೊಳ್ಳುವ ಹುಚ್ಚು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ ಬೇರೊಂದು ಲೋಕವೇ ತೆರೆದುಕೊಂಡಿತು. ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ ಕೆ.ಮರುಳಸಿದ್ದಪ್ಪ, ನಟರಾಜ್ ಹುಳಿಯಾರ್, ಬಸವರಾಜ ಕಲ್ಗುಡಿ ಮುಂತಾದ ಗುರುಗಳೊಂದಿಗೆ ಒಡನಾಟ. ಜತೆಗೆ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕ. <br /> <br /> ರೈತ ಸಂಘದ ಹೋರಾಟಗಳ ದಟ್ಟ ಪ್ರಭಾವ. ಗದ್ದರ್, ಎಂ.ಡಿ. ನಂಜುಂಡಸ್ವಾಮಿ, ಅನಂತಮೂರ್ತಿ, ಸಿದ್ಧಲಿಂಗಯ್ಯ ಅವರೊಂದಿಗೆ ಚರ್ಚಿಸುವ ಅವಕಾಶ. `ಏಕಲವ್ಯ~ ನಾಟಕ ಆಡಿದ್ದು ಕಾಲೇಜು ದಿನಗಳ ಮರೆಯಲಾರದ ಅನುಭವ.<br /> <br /> ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಗಣೇಶ್. ಅದಾದ ಕೆಲವು ದಿವಸಗಳಲ್ಲೇ ಕಿ.ರಂ.ನಾಗರಾಜ ಅವರಿಂದ ಕರೆ ಬಂತು. ಸೀದಾ ನೀನಾಸಂ ದಾರಿ ಹಿಡಿಯುವಂತೆ ಆಜ್ಞಾಪಿಸಿದರು.<br /> <br /> ಅದಷ್ಟೇ ಅಲ್ಲ ಸ್ವತಃ ಅರ್ಜಿ ತಂದು, ಅದನ್ನು ಅವರೇ ತುಂಬಿ, ಕೈಗೆ ಐನೂರು ರೂಪಾಯಿ ದುಡ್ಡು ಕೊಟ್ಟು `ಗಣೇಶ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗು ಅಲ್ಲಿಂದ ಸಾಗರಕ್ಕೆ ಬಸ್ ಹಿಡಿ. ಹೆಗ್ಗೋಡು ಎಂದು ಯಾರನ್ನಾದರೂ ಕೇಳು. ದಾರಿ ತೋರುತ್ತಾರೆ. ಅಲ್ಲೇ ಇರೋದು ನೀನಾಸಂ~ ಎಂದು ಬೆನ್ನು ತಟ್ಟಿದರು. <br /> <br /> ನೀನಾಸಂನಲ್ಲಿ ಸಂದರ್ಶನ ಮುಗಿಯಿತು. ಆಯ್ಕೆಯಾಗಿರುವ ವಿಷಯವೂ ತಿಳಿಯಿತು. ರಂಗಭೂಮಿಯ ಇಂಚಿಂಚನ್ನೂ ಅನುಭವಿಸುತ್ತ ಹೋದರು ಗಣೇಶ್. ನಾಟಕವೇ ತಮ್ಮ ಕ್ಷೇತ್ರ ಎಂದು ಗಣೇಶರಿಗೆ ಅನಿಸತೊಡಗಿದ್ದು ಆಗ.<br /> <br /> ಒಂದು ವರ್ಷ ಅಧ್ಯಯನ, ಎರಡು ವರ್ಷ ತಿರುಗಾಟದಲ್ಲಿ ಕಳೆದರು. ಸ್ಮಶಾನ ಕುರುಕ್ಷೇತ್ರ, ಭಗವದ್ದಜ್ಜುಕೀಯಂ, ಮೂವರು ಅಕ್ಕತಂಗಿಯರು, ವಿದುಷಿಯ ವಿದೂಷಕ, ಕತ್ತಲೆಗೆ ಹತ್ತು ತಲೆ ನಾಟಕಗಳಲ್ಲಿ ಪಾಲ್ಗೊಂಡರು. ನೀನಾಸಂನಲ್ಲೇ ಮೇಷ್ಟ್ರಾಗುವ ಅವಕಾಶ ಒದಗಿಬಂತು.<br /> <br /> ನಾಟಕ ಕುಟುಂಬದ ಕಾಯಂ ಸದಸ್ಯರಾದರು ಅವರು. ಮರು ತಿರುಗಾಟ ಆರಂಭ. ಕಾಲದಿವ್ಯ, ಆ ಮನಿ, ಕೇಶಪಾಶ ಪ್ರಪಂಚ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದರು. <br /> <br /> ರುಸ್ತುಂ ಬರೂಚ, ಕನ್ನೈಲಾಲ್, ಬಿ.ವಿ.ಕಾರಂತ, ಪ್ರಸನ್ನ, ಕೆ.ವಿ.ಅಕ್ಷರ, ವೆಂಕಟರಮಣ ಐತಾಳ, ಮಹಾಬಲೇಶ್ವರ ಮುಂತಾದವರ ಸ್ನೇಹ, ಮಾರ್ಗದರ್ಶನ ದೊರೆಯಿತು. <br /> <br /> ರಜೆಯ ದಿನಗಳನ್ನು ಕ್ರಿಯಾಶೀಲವಾಗಿ ಕಳೆಯುವ ಹಂಬಲ ಗಣೇಶರಿಗೆ. ಮಳೆಗಾಲದಲ್ಲಿ ಮೋಡ ಕಟ್ಟುವಂತೆ ನೀನಾಸಂಗೆ ಬಿಡುವಿದ್ದ ಸಮಯದಲ್ಲಿ ನಾಟಕ ಆಡಿಸಲು ಮುಂದಾದರು.<br /> <br /> 2005ರಲ್ಲಿ ನೀನಾಸಂ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು `ಜನಮನದಾಟ~ ರಂಗತಂಡ ಕಟ್ಟಿದರು. `ಊರುಕೇರಿ~ ಮಾತ್ರವಲ್ಲದೆ ಅನೇಕ ಪ್ರಯೋಗಗಳನ್ನು ನಡೆಸಿತು.<br /> <br /> ತಂಡಕ್ಕೆ ಬಲು ಜನಪ್ರಿಯತೆಯನ್ನು ತಂದುಕೊಟ್ಟದ್ದು ಶ್ರೀನಿವಾಸ ವೈದ್ಯರ ಎರಡು ಕತೆಗಳನ್ನು ಆಧರಿಸಿದ `ಶ್ರದ್ಧಾ ಮತ್ತು ಹಣತೆ~ ನಾಟಕ. ನಂತರ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡರ `ಉಚಲ್ಯಾ~, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ `ರಹಸ್ಯ ವಿಶ್ವ ಮತ್ತು ತಬರನ ಕಥೆ~, ಮುಕುಂದರಾವ್ ಅವರ `ಬಾಬಾ ಸಾಹೇಬ್ ಅಂಬೇಡ್ಕರ್~, `ಸೂರ್ಯನ ಕುದುರೆ~ ಕೃತಿಗಳನ್ನು ರಂಗರೂಪಕ್ಕಿಳಿಸಲಾಯಿತು.<br /> <br /> `ಜನಮನದಾಟ~ ಕೇವಲ ಒಬ್ಬರ ಕೂಸಲ್ಲ. ಅದು ಹುಟ್ಟಿದಾಗ ಒಬ್ಬರೇ ನಿರ್ದೇಶಕರು ಇರಲಿಲ್ಲ. ತಾಲೀಮು ನಡೆಸುವಾಗಲೂ ಅಷ್ಟೇ. ಒಂದೇ ಕತೆಯನ್ನು ಹಲವರು ನಿರ್ದೇಶಿಸುವುದು, ಅವುಗಳಲ್ಲಿ ಯಾವುದು ಉತ್ತಮ ಫಸಲೋ ಅದನ್ನು ಬಳಸಿಕೊಳ್ಳುವುದು ಎಂದಾಗಿತ್ತು. ಅದೇ ಯಶಸ್ಸಿಗೂ ನಾಂದಿ ಹಾಡಿತು.<br /> <br /> ಸರಳ ರಂಗಪರಿಕರಗಳನ್ನೇ ಉಪಯೋಗಿಸಿಕೊಂಡು ನಾಟಕ ಮಾಡುವುದು. ಲಕ್ಷ್ಮಣ ಪೀರಗಾರ, ಸಿತಾರ, ಕಲ್ಲಪ್ಪ ಪೂಜಾರ್, ಮಹದೇವ್ ಲಾಲಿಪಾಳ್ಯ, ಚಂದ್ರಮ್ಮ, ಎಂ.ಸೂರ್ಯ, ಕೆ.ಎನ್.ಜಯರಾಂ, ಚೈತ್ರ, ಅರುಣ್ ಮಾನ್ವಿ ಹಾಗೂ ಎಸ್.ಪಿ. ಮಂಜುನಾಥ ಮುಂತಾದವರು `ಜನಮನದಾಟ~ದ ಬೆನ್ನೆಲಬುಗಳು. <br /> <br /> ಸಿದ್ಧ ನಾಟಕಗಳಿಗಿಂತಲೂ ಕಥೆಗಳನ್ನೇ ಆಯ್ದುಕೊಂಡು ನಾಟಕ ಆಡಿಸುವುದು ಗಣೇಶರ ವೈಶಿಷ್ಟ್ಯ. ಹೀಗೇಕೆ ಎಂಬ ಪ್ರಶ್ನೆ ಎತ್ತಿದಾಗ ಅವರು, `ಹಲವು ವರ್ಷಗಳಿಂದ ಮಹತ್ವದ ನಾಟಕ ಕೃತಿಗಳು ಕನ್ನಡದಲ್ಲಿ ಬಂದಿಲ್ಲ. ಆದರೂ ಕನ್ನಡ ರಂಗಭೂಮಿ ಬೆಳಗುತ್ತಿದೆ. ಇದಕ್ಕೆ ಕಾರಣ ಅದು ಕಾವ್ಯ, ಕತೆ, ಹರಟೆ ಕಡೆ ಕಡೆಗೆ ಪತ್ರಿಕಾ ವರದಿಗಳನ್ನೂ ಆಧಾರವಾಗಿಟ್ಟುಕೊಂಡು ನಾಟಕ ಆಡಿಸುತ್ತಿರುವುದು~ ಎಂದರು. <br /> <br /> ಚಿಕ್ಕಂದಿನಲ್ಲಿ ಅವರು ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ನೋಡುತ್ತಿದ್ದರು. ಆಗೆಲ್ಲಾ ನಮ್ಮಂಥವರಿಗೂ ವಿಮಾನದಲ್ಲಿ ಹಾರಲು ಸಾಧ್ಯವಾ ಎಂದು ಕೇಳಿಕೊಳ್ಳುತ್ತಿದ್ದರು. <br /> <br /> 2007ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ನೀಡಿತು. ಆಗ ವಿಮಾನವೇರುವ ಅವಕಾಶ. ದಲಿತ ಹುಡುಗನೊಬ್ಬ ವಿಮಾನವೇರಿದ್ದು ಅವರೊಳಗೆ ಮಾತ್ರವಲ್ಲ, ಅನೇಕ ಗೆಳೆಯರಲ್ಲಿ, ಹುಟ್ಟಿದೂರಿನಲ್ಲಿ ಪುಳಕ ಮೂಡಿಸಿತ್ತು!<br /> <br /> ಗಣೇಶ್ ಹೆಗ್ಗೋಡಿನ `ಚರಕ~, ಅಂಕೋಲಾದ `ಸಂಗಾತಿ ರಂಗಭೂಮಿ~, ಸಾಗರದ `ಸ್ಪಂದನ~, `ಕಾಗೋಡು ರಂಗಮಂಚ~ ಮತ್ತಿತರ ಸಂಘಟನೆಗಳೊಂದಿಗೆ ದುಡಿದಿದ್ದಾರೆ. <br /> <br /> ಈಗ ಕುವೆಂಪು ವಿಶ್ವವಿದ್ಯಲಯದಲ್ಲಿ `ಆಧುನಿಕ ಕನ್ನಡ ರಂಗಭೂಮಿಯ ಹೊಸ ಸಾಧ್ಯತೆಗಳು~ ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ. `ಊರುಕೇರಿ~ ನಾಟಕ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9900257750. <br /> <br /> <strong>ವಿಳಾಸ: ಎಂ. ಗಣೇಶ್, ಅಧ್ಯಾಪಕರು, ನೀನಾಸಂ ರಂಗ ಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>