ಕಡತ ‘ಮಾಯ’: ಜನರ ಅಲೆದಾಡಿಸುವ ಸಿಬ್ಬಂದಿ

ಹಾವೇರಿ: ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ಒಂದೂವರೆ ತಿಂಗಳಿನಿಂದ ಕೆಟ್ಟು ಕುಳಿತ ಪ್ರಿಂಟರ್, ಮಳೆ–ಬಿಸಿಲು ಎನ್ನದೇ ವಿವಿಧ ಪ್ರಮಾಣ ಪತ್ರಗಳಿಗಾಗಿ ಸಾಲುಗಟ್ಟಿ ನಿಂತ ಜನ, ತಹಶೀಲ್ದಾರ್ ಕಚೇರಿಯಲ್ಲಿ ಕೆಲವು ಕಡತಗಳೇ ಇಲ್ಲ, ಸ್ವತಃ ಸಚಿವರ ಖಾತೆಯ (ಮುಜರಾಯಿ) ಕಡತದಲ್ಲೇ ಗೋಲ್ಮಾಲ್, ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಸರ್ವೇಯರ್ ವರದಿ ಬಳಿಕವೂ ಪರಿಶೀಲನೆಗೆ ಹಾಕುವ ತಹಶೀಲ್ದಾರ್, ಕಡತ ‘ಮಾಯ’ ಮಾಡಿ ಜನತೆ ಅಲೆದಾಡಿಸುವ ಸಿಬ್ಬಂದಿ...
ಇದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಗುರುವಾರ ಸಂಜೆ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳು.
ಅಟಲ್ಜೀ: ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಚಿವ ರುದ್ರಪ್ಪ ಲಮಾಣಿ ನೇರವಾಗಿ ಅಟಲ್ಜೀ ಜನಸ್ನೇಹಿ ಕೇಂದ್ರಕ್ಕೆ ತೆರಳಿದರು. ‘ಇಲ್ಲಿರುವ ಒಂದು ಪ್ರಿಂಟರ್ ಕೆಟ್ಟು ಹೋಗಿದ್ದು, ಒಂದರಲ್ಲೇ ‘ಪ್ರಮಾಣ ಪತ್ರ’ಗಳನ್ನು ನೀಡಲಾಗುತ್ತಿದೆ. ಹೀಗಾಗಿ ವಿಳಂಬವಾಗುತ್ತಿದೆ’ ಎಂದು ಸಿಬ್ಬಂದಿ ಸಮಸ್ಯೆ ತೋಡಿಕೊಂಡರು.
‘ಪ್ರಿಂಟರ್ ದುರಸ್ತಿಯ ₹ 300 ಗಾಗಿ ನೂರಾರು ಜನರನ್ನು ಪ್ರತಿನಿತ್ಯ ಮಳೆ, ಬಿಸಿಲಿನಲ್ಲಿ ಸತಾಯಿಸುತ್ತಿದ್ದೀರಲ್ಲಾ?’ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಇಂದೇ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಆರಾಧನಾ: ಅಲ್ಲಿಂದ ನೇರವಾಗಿ ತಹಶೀಲ್ದಾರ್ ಸಿಬ್ಬಂದಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಚಿವರು, ‘ಎಷ್ಟು ಕಡತಗಳು ಬಾಕಿ ಉಳಿದಿವೆ?’ ಎಂದು ಪ್ರತಿಯೊಬ್ಬ ಸಿಬ್ಬಂದಿಯಲ್ಲಿ ಪ್ರಶ್ನಿಸಿದರು. ಎಲ್ಲರೂ, ‘ಒಂದೇ ಕಡತ ಇದೆ’ ಎಂದು ಉತ್ತರ ನೀಡಿದರು. ಆಗ ಪ್ರತಿಕ್ರಯಿಸಿದ ಜನತೆ ‘ಸರ್, ಪ್ರತಿನಿತ್ಯ ಸತಾಹಿಸುತ್ತಾರೆ. ನಮ್ಮ ಅರ್ಜಿ, ಕಡತಕ್ಕಾಗಿ ಅಲೆದಾಡಿಸುತ್ತಾರೆ’ ಎಂದು ದೂರಿದರು.
‘ಮರೋಳದ ಮಾರುತಿ ಗುಡಿಗೆ ನೀಡಿದ ₹4ಲಕ್ಷ ಅನುದಾನ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ?’ ಎಂದು ಸಚಿವರು ಪ್ರಶ್ನಿಸಿದರು. ಅಲ್ಲದೇ, ಕ್ರಮಕೈಗೊಳ್ಳದಿರುವ ಬಗ್ಗೆ ಸಿಟ್ಟಿಗೆದ್ದ ಸಚಿವರು, ‘ದೇವರ ದುಡ್ಡನ್ನು ದುರ್ಬಳಕೆ ಮಾಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು. ‘ಎರಡು ತಿಂಗಳಾದರೂ ಕ್ರಮಕೈಗೊಂಡಿಲ್ಲ. ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು’ ಎಂದರು.
‘ಅಧಿಕಾರಿಗಳು ಮೈಗಳ್ಳತನ ಮಾಡಿಕೊಂಡು ಕಡತ ವಿಲೇವಾರಿ ಮಾಡದ ಕಾರಣ ಜನತೆ ಸಚಿವರು, ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಬಂದು ದೂರು ಹೇಳುವಂತಾಗಿದೆ.
ಸರ್ಕಾರದ ಬಗ್ಗೆ ಕೆಟ್ಟ ಭಾವನೆ ಬರುತ್ತದೆ. ಈ ನಿಟ್ಟಿನಲ್ಲಿ ಆಗಾಗ್ಗೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಜಿಲ್ಲಾ ಕೇಂದ್ರ ಮಾತ್ರವಲ್ಲ, ತಾಲ್ಲೂಕು ಕೇಂದ್ರಗಳ ಕಚೇರಿಗೂ ಹೋಗುತ್ತೇನೆ. ಮೂಲ ಸರಿ ಇದ್ದರೆ ಮಾತ್ರ ಎಲ್ಲ ಕೆಲಸಗಳು ನಡೆಯಲು ಸಾಧ್ಯ’ ಎಂದು ಸಚಿವರು ತಿಳಿಸಿದರು.
‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾನು ತಹಶೀಲ್ದಾರ್ ಕಚೇರಿ, ಕಾರಕೂನನ ಕೆಲಸ ಮಾಡುವ ಸ್ಥಿತಿ ಬಂದಿದೆ. ಆದರೆ, ಇನ್ನು ಇಂತಹ ನಿರ್ಲಕ್ಷ್ಯಗಳನ್ನು ಸಹಿಸುವುದಿಲ್ಲ. ‘ಜನ ಸ್ಪಂದನ’ ಸಭೆಯಲ್ಲಿ ನೀಡಿದ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ಮತ್ತೆ ಪುನರುಚ್ಛರಿಸಿದ್ದೇನೆ’ ಎಂದರು.
‘ವೀರಶೈವ ಮಹಾಸಭಾದ ಕಡತವನ್ನು ಪರಿಶೀಲಿಸಿ ಕೂಡಲೇ ಕ್ರಮಕೈಗೊಳ್ಳಿ’ಎಂದು ಸೂಚಿಸಿದ ಅವರು, ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದರು. ಸುಮಾರು 10ಕ್ಕಿಂತಲೂ ಹೆಚ್ಚು ಸಿಬ್ಬಂದಿ ಹೆಸರಿನ ಮುಂದೆ ಸಹಿ ಮಾಡಿರಲಿಲ್ಲ. ರಜೆಯನ್ನೂ ನಮೂದಿಸಿರಲಿಲ್ಲ. ವರದಿ ನೀಡುವಂತೆ ತಹಶೀಲ್ದಾರ್ಗೆ ಸೂಚಿಸಿದರು.
‘ಕೆಲವು ಅನನುಭವಿ ಅಧಿಕಾರಿಗಳು ಇದ್ದಾರೆ. ಇನ್ನು ಕೆಲವರು ಜನರನ್ನು ಸತಾಯಿಸುತ್ತಿದ್ದಾರೆ. ಈ ಪೈಕಿ ಸರ್ವೆ ಮತ್ತಿತರ ವಿಭಾಗದ ಬಗ್ಗೆಯೂ ದೂರುಗಳು ಬಂದಿವೆ. ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇನೆ’ ಎಂದ ಅವರು, ‘ಕೆಲವು ‘ಪ್ರಮಾಣ ಪತ್ರ’ಗಳಿಗಾಗಿ ಜನ ಅಲೆದಾಡುವ ಸಮಸ್ಯೆಗಳನ್ನು ಮನಗಂಡ ಸರ್ಕಾರವು ಬಾಪೂಜಿ ಸೇವಾ ಕೇಂದ್ರವನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆರಂಭಿಸಿದೆ’ ಎಂದರು.
‘ಅರಣ್ಯ ಹಕ್ಕು ಕಾಯಿದೆ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ಎಲ್ಲ ಅರ್ಹರುಅರ್ಜಿ ಸಲ್ಲಿಸುವಂತಾಗಬೇಕು. ಈ ತನಕ 392 ಅರ್ಜಿಗಳು ಬಂದಿವೆ. ಇನ್ನು ಮುಂದೆ ಬರುವ ಅರ್ಜಿಯನ್ನೂ ಶೀಘ್ರ ವಿಲೇವಾರಿ ಮಾಡಿ’ ಎಂದು ಸೂಚಿಸಿದರು. ತಹಶೀಲ್ದಾರ್ ಸಿ.ಎಸ್. ಭಂಗಿ ಮತ್ತಿತರರು ಇದ್ದರು.
*
ಆಗಾಗ್ಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸುತ್ತೇನೆ. ಲೋಪ ಕಂಡುಬಂದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು
-ರುದ್ರಪ್ಪ ಲಮಾಣಿ,
ಮುಜರಾಯಿ ಸಚಿವ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.