ಕಲುಷಿತ ನೀರು ಪೂರೈಕೆ: ಆಕ್ರೋಶ
ಹಿರಿಯೂರು: ನಗರದ 26-27ನೇ ವಾರ್ಡ್ಗೆ ಸೇರಿರುವ ಹರಿಶ್ಚಂದ್ರಘಾಟ್ ಬಡಾವಣೆಯ ನಿವಾಸಿಗಳಿಗೆ ಸರಬರಾಜು ಮಾಡುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸದೆ ತಿಂಗಳುಗಳಾಗಿದೆ. ಆರೋಗ್ಯ ಇಲಾಖೆಯವರು ತಿಂಗಳಿಗೆ ಒಮ್ಮೆಯಾದರೂ ತೊಟ್ಟಿಗಳನ್ನು ಶುಚಿಗೊಳಿಸಿ ಎಂದು ನೀಡಿರುವ ಸಲಹೆಗಳು ಪುರಸಭೆ ಆಡಳಿತ ನಡೆಸುವವರಿಗೆ ಮುಟ್ಟಿಲ್ಲ. ಹೀಗಾಗಿ, ನಲ್ಲಿಗಳಲ್ಲಿ ಪಾಚಿಗಟ್ಟಿದ ಮತ್ತು ದುರ್ವಾಸನೆಯಿಂದ ಕೂಡಿದ ನೀರು ಬರುತ್ತದೆ ಎಂದು ಅಲ್ಲಿನ ನಿವಾಸಿಗಳು ಪುರಸಭೆ ವಿರುದ್ಧ ದೂರಿನ ಸುರಿಮಳೆಗರೆದರು.
ನಗರದಲ್ಲಿ ಬೇರೆ ಯಾವುದೇ ಬಡಾವಣೆಗಳಲ್ಲಿ ವಾಸಿಸದಷ್ಟು ಹೆಚ್ಚು ಜನ ಇಲ್ಲಿ ವಾಸವಾಗಿದ್ದಾರೆ. 20-25 ವರ್ಷದಿಂದ ವಾಸ ಮಾಡುತ್ತಿದ್ದರೂ ನಿವೇಶನ ಹಕ್ಕುಪತ್ರ ಕೊಟ್ಟಿಲ್ಲ. ರಸ್ತೆ, ಚರಂಡಿ ಮಾಡಿಸಿಲ್ಲ. ಬೀದಿದೀಪ ಕೆಟ್ಟಿರುವುದೇ ಹೆಚ್ಚು. ಚರಂಡಿ ಸ್ವಚ್ಛಗೊಳಿಸುವುದು ತಿಂಗಳಿಗೊಮ್ಮೆ. ಕಸ ತೆಗೆಯುವುದು ಹಬ್ಬ ಬಂದಾಗ ಮಾತ್ರ. ನಮ್ಮಿಂದ ಮತ ಪಡೆದವರೂ ಸಹ ನಮ್ಮನ್ನು ಮರೆತಿದ್ದಾರೆ. ಒಟ್ಟಾರೆ ಇಡೀ ಬಡಾವಣೆ ಕೊಳಚೆ ಪ್ರದೇಶವಾಗಿದೆ ಎಂದು ಜಿ.ಎಂ. ರಂಗಸ್ವಾಮಿ, ಮೂರ್ತಪ್ಪ, ಪಾಪಣ್ಣ, ಗಿರಿರಾಜು, ಭೀಮಾನಾಯ್ಕ, ರಾಜಪ್ಪ, ಹರೀಶ್, ದಾದು, ಗೋವಿಂದರಾಜು, ಮಾರಿಮುತ್ತು, ಷಫೀವುಲ್ಲಾ, ಸಾವಿತ್ರಮ್ಮ, ಸರೋಜಮ್ಮ, ಅಂಬಿಕಾ, ರತ್ನಮ್ಮ, ಲೋಕಮ್ಮ, ಶಶಿರೇಖಾ ಮತ್ತಿತರರು ಆರೋಪಿಸಿದರು.
ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಹತ್ತಾರು ಬಾರಿ ಮನವಿ, ಪ್ರತಿಭಟನೆ ನಡೆಸಿದ್ದೇವೆ. ಪ್ರಯೋಜನವಾಗಿಲ್ಲ. ಈ ಬಡಾವಣೆಗೆ ನೀರು ಬಿಡುವ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿದ್ದು, ಅವರನ್ನು ಬದಲಾಯಿಸಿ ಪುರುಷರನ್ನು ನೇಮಕ ಮಾಡಿದರೆ ಮಾತ್ರ ತೊಟ್ಟಿಯಲ್ಲಿ ಇಳಿದು ಸ್ವಚ್ಛಗೊಳಿಸಲು ಸಾಧ್ಯ. ಶುದ್ಧವಾದ ನೀರನ್ನು ಇಲ್ಲಿನ ನಿವಾಸಿಗಳಿಗೆ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ನಲ್ಲಿಗಳಲ್ಲಿ ಬರುವ ನೀರನ್ನು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕುಡಿಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.