ಕ್ವಾರ್ಟರ್ ಫೈನಲ್ಗೆ ಅನೂಪ್

ಬೆಂಗಳೂರು: ಕರ್ನಾಟಕದ ಅನೂಪ್ ಶ್ರೀಧರ್ ಹಾಗೂ ಅರವಿಂದ್ ಭಟ್ ಅವರು ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಇಲ್ಲಿ ನಡೆಯುತ್ತಿರುವ ಕೆನರಾ ಬ್ಯಾಂಕ್ ಅಖಿಲ ಭಾರತ ಸೀನಿಯರ್ ರ್್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್ನಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅನೂಪ್ 21–11, 21–11ರಲ್ಲಿ ಏರ್ ಇಂಡಿಯಾದ ತಲಾರ್ ಲಾ ಅವರನ್ನು ಮಣಿಸಿದರು. ಎರಡನೇ ಶ್ರೇಯಾಂಕದ ಈ ಆಟಗಾರ ಎರಡೂ ಗೇಮ್ಗಳಲ್ಲಿ ಪಾರಮ್ಯ ಮೆರೆದರು. ಅದಕ್ಕೂ ಮೊದಲು ಅನೂಪ್ 21–9, 21–16ರಲ್ಲಿ ಸಿದ್ದಾರ್ಥ್ ಠಾಕೂರ್ ಎದುರು ಜಯ ಗಳಿಸಿದ್ದರು.
ಏಳನೇ ಶ್ರೇಯಾಂಕ ಪಡೆದಿರುವ ಅರವಿಂದ್ 15–21, 21–12, 21–13ರಲ್ಲಿ ಶ್ರೇಯನ್ಸ್ ಜೈಸ್ವಾಲ್ ಎದುರು ಗೆದ್ದರು. ಮೊದಲ ಗೇಮ್ನಲ್ಲಿ ಸೋಲು ಕಂಡ ಅವರು ನಂತರ ತಿರುಗೇಟು ನೀಡಿದರು.
ಇನ್ನಿತರ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೌರಭ್ ವರ್ಮ 21–8, 21–17ರಲ್ಲಿ ಆಶೀಶ್ ಶರ್ಮ ಎದುರೂ, ಶುಭಾಂಕರ್ ಡೇ 19–21, 21–13, 21–11ರಲ್ಲಿ ಚಿರಾಸ್ ಸೇನ್ ವಿರುದ್ಧವೂ, ಮೋಹಿತ್ ಕಾಮತ್ 21–16, 21–11ರಲ್ಲಿ ಸೃಜನ್ ಮೇಲೂ, ಸಮೀರ್ ವರ್ಮ 21–19, 23–21ರಲ್ಲಿ ಆದಿತ್ಯ ಪ್ರಕಾಶ್ ಎದುರೂ, ಚೇತನ್ ಆನಂದ್ 21–14, 21–9ರಲ್ಲಿ ಆಸ್ಕರ್ ಬನ್ಸಲ್ ವಿರುದ್ಧವೂ ಜಯ ಗಳಿಸಿದರು.
ಅಶ್ವಿನಿಗೆ ನಿರಾಸೆ: ಮಹಿಳೆಯರ ಸಿಂಗಲ್ಸ್ನ ಪ್ರಧಾನ ಹಂತದ ಮೊದಲ ಪಂದ್ಯದಲ್ಲಿಯೇ ಅಶ್ವಿನಿ ಪೊನ್ನಪ್ಪ ಎಡವಿದರು. ನಾಲ್ಕು ವರ್ಷಗಳ ಬಳಿಕ ಸಿಂಗಲ್ಸ್ ಪಂದ್ಯವಾಡಿದ ಅವರು 19–21, 18–21ರಲ್ಲಿ ಅರುಂಧತಿ ಪಂತವಾನೆ ಎದುರು ಸೋಲು ಕಂಡರು. ಆದರೆ ಅಗ್ರಶ್ರೇಯಾಂಕದ ಅರುಂಧತಿ ಈ ಗೆಲುವಿಗಾಗಿ ಸಾಕಷ್ಟು ಪ್ರಯಾಸ ಪಡಬೇಕಾಯಿತು.
ಪ್ರೀ ಕ್ವಾರ್ಟರ್ ಫೈನಲ್ನ ಇನ್ನುಳಿದ ಪಂದ್ಯಗಳಲ್ಲಿ ತನ್ವಿ ಲಾಡ್ 21–13, 21–9ರಲ್ಲಿ ಅನಿತಾ ಎದುರೂ, ನೇಹಾ ಪಂಡಿತ್ 21–12, 16–21, 21–11ರಲ್ಲಿ ಜಿ.ರುಷಾಲಿ ವಿರುದ್ಧವೂ, ಅದಿತಿ ಮುಟತ್ಕರ್ 21–6, 21–14ರಲ್ಲಿ ಶ್ರೀಯಾನ್ಸಿ ಮೇಲೂ, ಸಯ್ಯಾಲಿ ಗೋಖಲೆ 21–19, 21–7ರಲ್ಲಿ ರೇಷ್ಮಾ ಕಾರ್ತಿಕ್ ವಿರುದ್ಧವೂ ಜಯ ಗಳಿಸಿದರು.
ಡಬಲ್ಸ್ನಲ್ಲಿ ವರ್ಷಾ ಬೆಳವಾಡಿ–ಜಿ.ಎಂ.ನಿಶ್ಚಿತಾ 21–14, 13–21, 21–10ರಲ್ಲಿ ಕೆ.ವೈಷ್ಣವಿ–ಎಂ.ಪೂಜಾ ಎದುರೂ, ಮಹಿಮಾ ಅಗರವಾಲ್–ಶಿಖಾ ಗೌತಮ್ 21–14, 25–27, 21–9ರಲ್ಲಿ ನಿಮ್ಮಿ ಪಟೇಲ್–ಅಂಜಲಿ ರಾವತ್ ಎದುರೂ ಗೆದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.