<p>ಕರ್ನಾಟಕ ಗಾನಕಲಾ ಪರಿಷತ್ತಿನ 42ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ ನಾಡಿನ ಹೆಮ್ಮೆಯ ಬಹುಮುಖ ಪ್ರತಿಭೆ ಮತ್ತು ಪರಿಣತಿಗಳ ಗಾಯಕಿ ಆರ್.ಎ.ರಮಾಮಣಿ ಅವರಿಗೆ ಗಾನಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಪದ್ಧತಿಯಂತೆ ಮೊದಲನೆಯ ದಿನದಂದು ಅವರ ಕಛೇರಿಯ ಮೂಲಕವೇ ಐದು ದಿನಗಳ ಸಮ್ಮೇಳನಕ್ಕೆ ಚಾಲನೆ ದೊರಕಿತು. ಎಂದಿನಂತೆ ಅವರ ಕಛೇರಿಯು ಕುತೂಹಲದಾಯಕವಾಗಿಯೂ ಪ್ರೇರಕವಾಗಿಯೂ ಮೂಡಿ ಬಂದಿತು. ರಾಗಗಳ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ, ವೈಶಾಲ್ಯಗಳನ್ನು ಮನಗಾಣಿಸುವಲ್ಲಿ ಅವರ ಗಾಯನದ ಗುಣಗರಿಮೆಗಳು ಗರಿಗೆದರಿದವು. <br /> <br /> ಕಛೇರಿಯ ಪ್ರಧಾನಘಟ್ಟವಾಗಿದ್ದ ನಾಟ್ಟಿಕುರಂಜಿ ರಾಗ, ತಾನ ಮತ್ತು ಪಲ್ಲವಿ ರಸಿಕರನ್ನು ಆಳವಾಗಿ ಪ್ರಭಾವಿಸಿತು. ಆರಂಭದಲ್ಲಿ ಹಾಡಲಾಗಿದ್ದ ನಾಟ್ಟಿಕುರಂಜಿ (ವರ್ಣ) ರಾಗವನ್ನೇ ಪಲ್ಲವಿಗೂ ಆಯ್ಕೆಮಾಡಿಕೊಂಡಿದ್ದು ವಿಶೇಷವೇ ಸರಿ. ತ್ರಿಶ್ರರೂಪಕತಾಳದ ಎರಡಕ್ಷರ ಎಡುಪಿನಲ್ಲಿ ನಡೆಪಲ್ಲವಿ (ಮಾ ಮಧುರೇ ಮೀನಾಕ್ಷಿ ಅಂಬಾದೇವಿ)ಯನ್ನು ವಿಶ್ಲೇಷಿಸಿದ ಪರಿ ರೋಮಾಂಚನಗೊಳಿಸಿತು. 9-7-5-4-3ರ ನಡೆಗಳು ಮತ್ತು ತ್ರಿಕಾಲದಲ್ಲಿ ಪಲ್ಲವಿಯ ನಿರೂಪಣೆ ಅವರ ಲಯ ಪ್ರಭುತ್ವವನ್ನು ಪ್ರತಿಬಿಂಬಿಸಿತು. ಮೂರಕ್ಷರ ಕಾಲದ ನಿರ್ವಹಣೆಯಂತೂ ಬೆರಗುಗೊಳಿಸಿತು. <br /> <br /> ಗಾಯನದಲ್ಲಷ್ಟೇ ಅಲ್ಲದೆ ಮೃದಂಗವಾದನದಲ್ಲೂ ನೈಪುಣ್ಯ ಸಾಧಿಸಿರುವ ರಮಾಮಣಿ ಪ್ರಸ್ತುತಪಡಿಸಿದ ರಾಗಮಾಲಿಕಾ ಸ್ವರಗಳು (ಹಿಂದೋಳ, ಆಭೋಗಿ, ವರಾಳಿ ಮತ್ತು ನಾಸಿಕಾಭೂಷಿಣಿ) ಅವರ ಅಗಾಧ ಮನೋಧರ್ಮಕ್ಕೆ ಕಿರೀಟಪ್ರಾಯವಾಗಿದ್ದವು. <br /> <br /> ಇದಕ್ಕೂ ಮುನ್ನ ಅವರು ಮಂಡಿಸಿದ ಶಾಮಾಶಾಸ್ತ್ರಿಗಳ `ನನ್ನುಬ್ರೋವ ಲಲಿತ~ (ಲಲಿತ ರಾಗ) ಮುದ ನೀಡಿತು. `ಅತಿ ವೇಗಮೆ~ ಸಾಲಿಗೆ ಐದಕ್ಷರ ಎಡುಪಿನಲ್ಲಿ ಅವರ ಸ್ವರವಿನ್ಯಾಸ ರೋಚಕವೆನಿಸಿತು. `ಮಾಕೇಲರಾ ವಿಚಾರಮು~ (ರವಿಚಂದ್ರಿಕೆ) ಕೃತಿಯ ನಂತರ ಅವರ ತೋಡಿರಾಗ ಮತ್ತು ತ್ಯಾಗರಾಜರ ಲಾಲ್ಗುಡಿ ಪಂಚರತ್ನ ಕೃತಿಗಳಲ್ಲಿ ಒಂದಾದ `ಗತಿನೀವನಿ~ ರಚನೆಯ ಭಾವಕತ್ವ, ನಿಷ್ಪತ್ತಿ ಮತ್ತು ವ್ಯಂಜಕತ್ವಗಳು ಘನಗಾಂಭೀರ್ಯದಿಂದ ಅಪೂರ್ವವೆನಿಸಿಕೊಂಡವು. <br /> <br /> ಆಲಾಪನೆ, ಸಾಹಿತ್ಯ ಮತ್ತು ಸ್ವರವಿಸ್ತಾರವು ರಮಾಮಣಿ ಅವರ ಸೃಜನಕ್ರಿಯೆಯ ಪ್ರತಿರೂಪವಾಯಿತು. ಮಹಿಪತಿದಾಸರ `ರಾವೇಂದ್ರ ದಯತೋರಿ~ ಭಾವಮಯವಾಗಿತ್ತು. ಬಿ.ರಘುರಾಂ(ಪಿಟೀಲು), ಕುಮಾರ್(ಮೃದಂಗ), ಬಿ.ಎನ್.ಚಂದ್ರಮೌಳಿ (ಖಂಜರಿ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಉತ್ಕೃಷ್ಟ ಶ್ರೇಣಿಯ ನುಡಿಸಾಣಿಕೆಯಿಂದ ಕಛೇರಿಯನ್ನು ಅಲಂಕರಿಸಿದರು. <br /> <br /> <strong>ಮನ ಮೆಚ್ಚಿಸಿದ ನಿರೂಪಣೆ <br /> </strong>ಅಲ್ಲಿ ಹಾಡಿದ ಯುವ ಮತ್ತು ಪ್ರತಿಭಾನ್ವಿತ ಗಾಯಕಿ ಮಾನಸಿ ಪ್ರಸಾದ್ ತಮ್ಮ ಕಾರ್ಯಕ್ರಮವನ್ನು ಬಹು ಆಸ್ಥೆಯಿಂದ ನೀಡಿದರು. <br /> <br /> ತೋಡಿರಾಗದ ವರ್ಣ(ಏರಾನಾಪೈ)ದ ತ್ರಿಶ್ರ ಮತ್ತು ಚತುರಶ್ರ ನಡೆಗಳಲ್ಲಿ ಕಛೇರಿಗೆ ಕಲಾತ್ಮಕ ಆರಂಭ ಒದಗಿಸಿತು. `ಸರಸೀರುಹಾಸನ~ (ನಾಟ) ಚುರುಕಾಗಿದ್ದು, ಖರಹರಪ್ರಿಯರಾಗದ ಆಲಾಪನೆಯ ಸವಿಯನ್ನು ಅನುಭವಿಸಲು ಅನುವಾಯಿತು. <br /> <br /> ಅಪರೂಪವಾಗಿ ಕೇಳಿಬರುವ `ನಡಚಿ ನಡಚಿ~ ಹಾರ್ದಿಕವಾಗಿತ್ತು. ದೀಕ್ಷಿತರ `ತ್ಯಾಗರಾಜಾಯ ನಮಸ್ತೆ~(ಬೇಗಡೆ) ಕೃತಿಯನ್ನು ಹಾಡಬೇಕಾದರೆ ಆವಶ್ಯಕವಾದ ಲಯ ಗಂಭೀರತೆ ಮನಮುಟ್ಟಿತು. <br /> <br /> ರಾಗ, ತಾನ ಮತ್ತು ಪಲ್ಲವಿಗಾಗಿ ಹಂಸನಾದ ರಾಗವನ್ನು ವಿಶಾಲಹರುಹಿನೊಂದಿಗೆ ನಿರೂಪಿಸಿದ್ದು ವಿಶಿಷ್ಟವಾಗಿತ್ತು. ರಾಗಪ್ರಸರಣ ವಿಪುಲ ಸಂವೇದನೆಗಳಿಂದ ಕೂಡಿತ್ತು. ಹೀಗಾಗಿ ಮೇಲ್ಸ್ಥಾಯಿಗಳಲ್ಲಿ ಅವರ ಕಂಠದಲ್ಲಿ ಕಾಣಬಂದ ಕೆಲವು ತೊಂದರೆಗಳು ಗೌಣವೆನಿಸಿಕೊಂಡವು. <br /> <br /> ಸಂಕೀರ್ಣವಾದ ತ್ರಿಶ್ರ ಧ್ರುವತಾಳದ ಐದಕ್ಷರ ಎಡುಪಿನಲ್ಲಿ `ರಾಮದೂತ ಪವನಾತ್ಮಜ ಭಜರೇ~ ಪಲ್ಲವಿಯನ್ನು ಸಂಪ್ರದಾಯದಂತೆ ತ್ರಿಕಾಲಗಳಲ್ಲಿ ಹಾಡಿ ರಸಿಕರ ಮನ ಮೆಚ್ಚಿಸಿದರು. ಪ್ರತಿಲೋಮದಲ್ಲಿ ಹಾಡಿದ್ದಂತೂ ಕೇಳುಗರನ್ನು ಪುಳಕಿತಗೊಳಿಸಿತು. <br /> <br /> ಕಾಮವರ್ಧಿನಿ, ತಿಲ್ಲಂಗ್, ಖರಹರಪ್ರಿಯ ಮತ್ತು ಮಧ್ಯಮಾವತಿ ರಾಗಮಾಲಿಕಾ ಸ್ವರಗಳು ಮಾನಸಿ ಅವರ ನೈಜಪ್ರತಿಭೆಯನ್ನು ಪ್ರಕಟಿಸಿದವು. <br /> <br /> ದೇಶ್ ತಿಲ್ಲಾನದೊಂದಿಗೆ ಮುಕ್ತಾಯವಾದ ಅವರ ಗಾಯನಕ್ಕೆ ಚಾರುಲತಾ ರಾಮಾನುಜಂ (ಪಿಟೀಲು), ವಿ. ಕೃಷ್ಣ (ಮೃದಂಗ) ಮತ್ತು ಬಿ.ಎನ್.ಚಂದ್ರಮೌಳಿ (ಖಂಜರಿ) ಅವರು ಕಲಾಮಯಿ ಒಡನಾಡಿಗಳಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ ಗಾನಕಲಾ ಪರಿಷತ್ತಿನ 42ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ ನಾಡಿನ ಹೆಮ್ಮೆಯ ಬಹುಮುಖ ಪ್ರತಿಭೆ ಮತ್ತು ಪರಿಣತಿಗಳ ಗಾಯಕಿ ಆರ್.ಎ.ರಮಾಮಣಿ ಅವರಿಗೆ ಗಾನಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಪದ್ಧತಿಯಂತೆ ಮೊದಲನೆಯ ದಿನದಂದು ಅವರ ಕಛೇರಿಯ ಮೂಲಕವೇ ಐದು ದಿನಗಳ ಸಮ್ಮೇಳನಕ್ಕೆ ಚಾಲನೆ ದೊರಕಿತು. ಎಂದಿನಂತೆ ಅವರ ಕಛೇರಿಯು ಕುತೂಹಲದಾಯಕವಾಗಿಯೂ ಪ್ರೇರಕವಾಗಿಯೂ ಮೂಡಿ ಬಂದಿತು. ರಾಗಗಳ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ, ವೈಶಾಲ್ಯಗಳನ್ನು ಮನಗಾಣಿಸುವಲ್ಲಿ ಅವರ ಗಾಯನದ ಗುಣಗರಿಮೆಗಳು ಗರಿಗೆದರಿದವು. <br /> <br /> ಕಛೇರಿಯ ಪ್ರಧಾನಘಟ್ಟವಾಗಿದ್ದ ನಾಟ್ಟಿಕುರಂಜಿ ರಾಗ, ತಾನ ಮತ್ತು ಪಲ್ಲವಿ ರಸಿಕರನ್ನು ಆಳವಾಗಿ ಪ್ರಭಾವಿಸಿತು. ಆರಂಭದಲ್ಲಿ ಹಾಡಲಾಗಿದ್ದ ನಾಟ್ಟಿಕುರಂಜಿ (ವರ್ಣ) ರಾಗವನ್ನೇ ಪಲ್ಲವಿಗೂ ಆಯ್ಕೆಮಾಡಿಕೊಂಡಿದ್ದು ವಿಶೇಷವೇ ಸರಿ. ತ್ರಿಶ್ರರೂಪಕತಾಳದ ಎರಡಕ್ಷರ ಎಡುಪಿನಲ್ಲಿ ನಡೆಪಲ್ಲವಿ (ಮಾ ಮಧುರೇ ಮೀನಾಕ್ಷಿ ಅಂಬಾದೇವಿ)ಯನ್ನು ವಿಶ್ಲೇಷಿಸಿದ ಪರಿ ರೋಮಾಂಚನಗೊಳಿಸಿತು. 9-7-5-4-3ರ ನಡೆಗಳು ಮತ್ತು ತ್ರಿಕಾಲದಲ್ಲಿ ಪಲ್ಲವಿಯ ನಿರೂಪಣೆ ಅವರ ಲಯ ಪ್ರಭುತ್ವವನ್ನು ಪ್ರತಿಬಿಂಬಿಸಿತು. ಮೂರಕ್ಷರ ಕಾಲದ ನಿರ್ವಹಣೆಯಂತೂ ಬೆರಗುಗೊಳಿಸಿತು. <br /> <br /> ಗಾಯನದಲ್ಲಷ್ಟೇ ಅಲ್ಲದೆ ಮೃದಂಗವಾದನದಲ್ಲೂ ನೈಪುಣ್ಯ ಸಾಧಿಸಿರುವ ರಮಾಮಣಿ ಪ್ರಸ್ತುತಪಡಿಸಿದ ರಾಗಮಾಲಿಕಾ ಸ್ವರಗಳು (ಹಿಂದೋಳ, ಆಭೋಗಿ, ವರಾಳಿ ಮತ್ತು ನಾಸಿಕಾಭೂಷಿಣಿ) ಅವರ ಅಗಾಧ ಮನೋಧರ್ಮಕ್ಕೆ ಕಿರೀಟಪ್ರಾಯವಾಗಿದ್ದವು. <br /> <br /> ಇದಕ್ಕೂ ಮುನ್ನ ಅವರು ಮಂಡಿಸಿದ ಶಾಮಾಶಾಸ್ತ್ರಿಗಳ `ನನ್ನುಬ್ರೋವ ಲಲಿತ~ (ಲಲಿತ ರಾಗ) ಮುದ ನೀಡಿತು. `ಅತಿ ವೇಗಮೆ~ ಸಾಲಿಗೆ ಐದಕ್ಷರ ಎಡುಪಿನಲ್ಲಿ ಅವರ ಸ್ವರವಿನ್ಯಾಸ ರೋಚಕವೆನಿಸಿತು. `ಮಾಕೇಲರಾ ವಿಚಾರಮು~ (ರವಿಚಂದ್ರಿಕೆ) ಕೃತಿಯ ನಂತರ ಅವರ ತೋಡಿರಾಗ ಮತ್ತು ತ್ಯಾಗರಾಜರ ಲಾಲ್ಗುಡಿ ಪಂಚರತ್ನ ಕೃತಿಗಳಲ್ಲಿ ಒಂದಾದ `ಗತಿನೀವನಿ~ ರಚನೆಯ ಭಾವಕತ್ವ, ನಿಷ್ಪತ್ತಿ ಮತ್ತು ವ್ಯಂಜಕತ್ವಗಳು ಘನಗಾಂಭೀರ್ಯದಿಂದ ಅಪೂರ್ವವೆನಿಸಿಕೊಂಡವು. <br /> <br /> ಆಲಾಪನೆ, ಸಾಹಿತ್ಯ ಮತ್ತು ಸ್ವರವಿಸ್ತಾರವು ರಮಾಮಣಿ ಅವರ ಸೃಜನಕ್ರಿಯೆಯ ಪ್ರತಿರೂಪವಾಯಿತು. ಮಹಿಪತಿದಾಸರ `ರಾವೇಂದ್ರ ದಯತೋರಿ~ ಭಾವಮಯವಾಗಿತ್ತು. ಬಿ.ರಘುರಾಂ(ಪಿಟೀಲು), ಕುಮಾರ್(ಮೃದಂಗ), ಬಿ.ಎನ್.ಚಂದ್ರಮೌಳಿ (ಖಂಜರಿ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಉತ್ಕೃಷ್ಟ ಶ್ರೇಣಿಯ ನುಡಿಸಾಣಿಕೆಯಿಂದ ಕಛೇರಿಯನ್ನು ಅಲಂಕರಿಸಿದರು. <br /> <br /> <strong>ಮನ ಮೆಚ್ಚಿಸಿದ ನಿರೂಪಣೆ <br /> </strong>ಅಲ್ಲಿ ಹಾಡಿದ ಯುವ ಮತ್ತು ಪ್ರತಿಭಾನ್ವಿತ ಗಾಯಕಿ ಮಾನಸಿ ಪ್ರಸಾದ್ ತಮ್ಮ ಕಾರ್ಯಕ್ರಮವನ್ನು ಬಹು ಆಸ್ಥೆಯಿಂದ ನೀಡಿದರು. <br /> <br /> ತೋಡಿರಾಗದ ವರ್ಣ(ಏರಾನಾಪೈ)ದ ತ್ರಿಶ್ರ ಮತ್ತು ಚತುರಶ್ರ ನಡೆಗಳಲ್ಲಿ ಕಛೇರಿಗೆ ಕಲಾತ್ಮಕ ಆರಂಭ ಒದಗಿಸಿತು. `ಸರಸೀರುಹಾಸನ~ (ನಾಟ) ಚುರುಕಾಗಿದ್ದು, ಖರಹರಪ್ರಿಯರಾಗದ ಆಲಾಪನೆಯ ಸವಿಯನ್ನು ಅನುಭವಿಸಲು ಅನುವಾಯಿತು. <br /> <br /> ಅಪರೂಪವಾಗಿ ಕೇಳಿಬರುವ `ನಡಚಿ ನಡಚಿ~ ಹಾರ್ದಿಕವಾಗಿತ್ತು. ದೀಕ್ಷಿತರ `ತ್ಯಾಗರಾಜಾಯ ನಮಸ್ತೆ~(ಬೇಗಡೆ) ಕೃತಿಯನ್ನು ಹಾಡಬೇಕಾದರೆ ಆವಶ್ಯಕವಾದ ಲಯ ಗಂಭೀರತೆ ಮನಮುಟ್ಟಿತು. <br /> <br /> ರಾಗ, ತಾನ ಮತ್ತು ಪಲ್ಲವಿಗಾಗಿ ಹಂಸನಾದ ರಾಗವನ್ನು ವಿಶಾಲಹರುಹಿನೊಂದಿಗೆ ನಿರೂಪಿಸಿದ್ದು ವಿಶಿಷ್ಟವಾಗಿತ್ತು. ರಾಗಪ್ರಸರಣ ವಿಪುಲ ಸಂವೇದನೆಗಳಿಂದ ಕೂಡಿತ್ತು. ಹೀಗಾಗಿ ಮೇಲ್ಸ್ಥಾಯಿಗಳಲ್ಲಿ ಅವರ ಕಂಠದಲ್ಲಿ ಕಾಣಬಂದ ಕೆಲವು ತೊಂದರೆಗಳು ಗೌಣವೆನಿಸಿಕೊಂಡವು. <br /> <br /> ಸಂಕೀರ್ಣವಾದ ತ್ರಿಶ್ರ ಧ್ರುವತಾಳದ ಐದಕ್ಷರ ಎಡುಪಿನಲ್ಲಿ `ರಾಮದೂತ ಪವನಾತ್ಮಜ ಭಜರೇ~ ಪಲ್ಲವಿಯನ್ನು ಸಂಪ್ರದಾಯದಂತೆ ತ್ರಿಕಾಲಗಳಲ್ಲಿ ಹಾಡಿ ರಸಿಕರ ಮನ ಮೆಚ್ಚಿಸಿದರು. ಪ್ರತಿಲೋಮದಲ್ಲಿ ಹಾಡಿದ್ದಂತೂ ಕೇಳುಗರನ್ನು ಪುಳಕಿತಗೊಳಿಸಿತು. <br /> <br /> ಕಾಮವರ್ಧಿನಿ, ತಿಲ್ಲಂಗ್, ಖರಹರಪ್ರಿಯ ಮತ್ತು ಮಧ್ಯಮಾವತಿ ರಾಗಮಾಲಿಕಾ ಸ್ವರಗಳು ಮಾನಸಿ ಅವರ ನೈಜಪ್ರತಿಭೆಯನ್ನು ಪ್ರಕಟಿಸಿದವು. <br /> <br /> ದೇಶ್ ತಿಲ್ಲಾನದೊಂದಿಗೆ ಮುಕ್ತಾಯವಾದ ಅವರ ಗಾಯನಕ್ಕೆ ಚಾರುಲತಾ ರಾಮಾನುಜಂ (ಪಿಟೀಲು), ವಿ. ಕೃಷ್ಣ (ಮೃದಂಗ) ಮತ್ತು ಬಿ.ಎನ್.ಚಂದ್ರಮೌಳಿ (ಖಂಜರಿ) ಅವರು ಕಲಾಮಯಿ ಒಡನಾಡಿಗಳಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>