ಜಿಗಜಿಣಗಿ ಅಭಿಮಾನಿಯಿಂದ ದೀಡ್ ನಮಸ್ಕಾರ

ಮುದ್ದೇಬಿಹಾಳ: ವಿಜಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲ್ಲಬೇಕು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹರಕೆ ಹೊತ್ತಿದ ತಾಲ್ಲೂಕಿನ ಬಸರಕೋಡ ಗ್ರಾಮದ ಬಿಜೆಪಿ ಕಾರ್ಯಕರ್ತ ಸಂಗಪ್ಪ ಬಾಗೇವಾಡಿ ಒಂದು ಕಿ.ಮೀ ದೂರದ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಜಿಗಜಿಣಗಿ ಅವರ ಕಟ್ಟಾ ಅಭಿಮಾನಿ ಸಂಗಪ್ಪ ಬಾಗೇವಾಡಿ ವಿಜಾಪೂರದಲ್ಲಿ ಹಾಗೂ ದೇಶದೆಲ್ಲೆಡೆ ಬಿಜೆಪಿ ಗೆಲ್ಲುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದ. ಬಿಜೆಪಿ ಗೆಲ್ಲಲಿ ಎಂದೇ ಹರಕೆ ಕಟ್ಟಿದ್ದ. ಶನಿವಾರ ಬೆಳಿಗ್ಗೆ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ಪಾದಗಟ್ಟೆಯಿಂದ ಒಂದು ಕಿ. ಮೀ. ದೂರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನತನಕ ದೀರ್ಘ ದಂಡ ನಮಸ್ಕಾರ ಹಾಕಿದ.
ದೀಡ್ ನಮಸ್ಕಾರದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಸಂಗಪ್ಪ, ‘ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬೇಸರ ತರಿಸಿತ್ತು. ದೇಶವನ್ನು ಅಭಿವೃದ್ಧಿಯತ್ತ ಒಯ್ಯುವ ಸದೃಢ ಹಾಗೂ ಶಕ್ತಿಯುತ ನಾಯಕತ್ವ ನರೇಂದ್ರ ಮೋದಿಯವರಲ್ಲಿದೆ ಇದಕ್ಕಾಗಿ ಬಿಜೆಪಿ ಬೆಂಬಲಿಸಿ ಹರಕೆ ಕಟ್ಟಿದೆ, ಅಷ್ಟೇ ಅಲ್ಲ ಜಿಗಜಿಣಗಿ ಗೆಲ್ಲುವಂತಾಗಲು ಶ್ರಮಿಸಿದ್ದೇನೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಮುಖಂಡರಾದ ಶ್ರೀಶೈಲ ಮೇಟಿ, ಸಿದ್ದಪ್ಪ ರೂಡಗಿ, ಬಸವರಾಜ ಬಳವಾಟ, ಬಾಬು ಬಳವಾಟ, ಸುರೇಶ ಕಣ್ಣೂರ, ಸಂಗಣ್ಣ ಬಳವಾಟ, ಚಂದಪ್ಪ ಮಂಕಣಿ, ಮಲ್ಲಪ್ಪ ರೂಡಗಿ, ಬಸವರಾಜ ರೂಡಗಿ, ರಾಮಲಿಂಗಯ್ಯ ಹೊರಗಿನಮಠ, ನಾಗರಾಜ ಸತ್ತಿಗೇರಿ, ಶ್ರೀಶೈಲ ಕೊಣ್ಣೂರ, ಕುಬೇರ ಬೇಲಾಳ, ಶರಣು ಗುಳೇದಗುಡ್ಡ, ಲಕ್ಷ್ಮಣ ಬಿದ್ನಾಳ, ಯಮನೂರಿ ಮಾದರ ಮೊದಲಾದವರಿದ್ದರು.
ವಿಜಯೋತ್ಸವ ಆಚರಣೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡ ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಪ್ರಭುಗೌಡ ದೇಸಾಯಿ, ಗುರುನಾಥ ಬಿರಾದಾರ, ಬಸವರಾಜ ಚಿತ್ತರಗಿ, ಮುತ್ತು ಸಗರಿ, ಮಲ್ಲಪ್ಪ ಮಾದರ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.