ಪಾಳುಬಾವಿಗೆ ಬಿದ್ದ ಕಾಡಾನೆ ರಕ್ಷಣೆ
ಚಾಮರಾಜನಗರ: ಮೇವು ಹುಡುಕಿಕೊಂಡು ರೈತರ ಜಮೀನಿನತ್ತ ಬಂದ ಹೆಣ್ಣಾನೆಯೊಂದು ಪಾಳು ಬಾವಿಗೆ ಬಿದ್ದ ಘಟನೆ ತಾಲ್ಲೂಕಿನ ಮೂಕನಪಾಳ್ಯ ಸಮೀಪದ ಕುಂಬಾರನಗುಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಪುಣಜನೂರು ವಲಯದಿಂದ ಕಾಡಾನೆ ಹಿಂಡು ರಾತ್ರಿವೇಳೆ ಆಹಾರ ಹುಡುಕಿಕೊಂಡು ಕುಂಬಾನ ಗುಂಡಿಯ ಹೊಲದತ್ತ ಬಂದಿವೆ. ಈ ಭಾಗದಲ್ಲಿ ರೈತರು ಜೋಳ, ಅರಿಸಿನ, ಬಾಳೆ ಬೆಳೆಸಿದ್ದಾರೆ. ಆನೆಗಳು ಜಮೀನಿಗೆ ಬಂದಿರುವ ಸುದ್ದಿ ತಿಳಿದ ರೈತರು ಅವುಗಳನ್ನು ಓಡಿಸಲು ಮುಂದಾಗಿದ್ದಾರೆ. ಆ ವೇಳೆ ನಾಗನಾಯ್ಕ ಎಂಬುವರ ಜಮೀನಿನಲ್ಲಿದ್ದ ನೀರಿಲ್ಲದ ಪಾಳು ಬಾವಿಗೆ ಹೆಣ್ಣಾನೆ ಬಿದ್ದಿದೆ.
ಬಾವಿಯು ಸುಮಾರು 30 ಅಡಿಯಷ್ಟು ಆಳವಿದ್ದು, ಆನೆ ಹೊರಹೋಗಲು ಸಾಧ್ಯವಾಗಿಲ್ಲ. ದಿಕ್ಕೆಟ್ಟ ಆನೆಯು ರಾತ್ರಿಯಲ್ಲಾ ಘೀಳಿಡುತ್ತಿತ್ತು. ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು ನೇತೃತ್ವದ ತಂಡ ಆನೆ ಬಿದ್ದಿದ್ದ ಬಾವಿ ಬಳಿಗೆ ಧಾವಿಸಿತು. ಆದರೆ, ಆನೆ ಹೊರಹೋಗಲು ಅವ ಕಾಶವಿಲ್ಲದಿದ್ದ ಪರಿಣಾಮ ಬಾವಿಗೆ ಹೊಂದಿಕೊಂಡಂತೆ 100 ಮೀಟರ್ವರೆಗೆ ಜೆಸಿಬಿ ಯಂತ್ರ ಬಳಸಿ ಕಾಲುವೆ ತೋಡಲಾಯಿತು. ಬಳಿಕ ಆನೆಯು ತೆವಳಿಕೊಂಡು ಕಾಲುವೆ ಮೂಲಕ ಅರಣ್ಯದತ್ತ ಪಯಣ ಬೆಳೆಸಿತು.
ಪುಣಜನೂರು, ಕೋಳಿಪಾಳ್ಯ, ಮೂಕನಪಾಳ್ಯ ದ ಸುತ್ತಮುತ್ತಲಿನ ಜಮೀನುಗಳಿಗೆ ಕಾಡಾನೆಗಳು ದಾಳಿ ಇಡುವುದು ಸಾಮಾನ್ಯ. ಕೆಲವೆಡೆ ಅರಣ್ಯದ ಅಂಚಿನಲ್ಲಿ ಸೌರ ವಿದ್ಯುತ್ ಬೇಲಿ ಅಳವಡಿಸ ದಿರುವ ಪರಿಣಾಮ ಗ್ರಾಮಗಳತ್ತ ಆನೆಗಳು ಬರುತ್ತಿವೆ. ಹೀಗಾಗಿ, ಬೆಳೆ ನಷ್ಟ ಅನುಭವಿಸು ವಂತಾಗಿದೆ. ಬಾಕಿ ಇರುವ ಪ್ರದೇಶದಲ್ಲಿ ಸೌರ ವಿದ್ಯುತ್ ಬೇಲಿ ಅಳ ವಡಿಸಿ ಬೆಳೆ ನಷ್ಟ ತಪ್ಪಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂಬುದು ಕಾಡಂಚಿನ ಗ್ರಾಮಗಳ ರೈತರ ಒತ್ತಾಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.