<p>ಯೌವನ ಎನ್ನುವುದು ಶಾಶ್ವತವಾದ ಅವಸ್ಥೆಯಾದರೆ ಹೇಗೆ? ಇದು ಯಯಾತಿ ಮತ್ತು ಪುರುವಿನ ಕಥೆಯಲ್ಲ. ಮುಪ್ಪನ್ನು ಗೆಲ್ಲಲು ಹಂಬಲಿಸಿದ ವಿಜ್ಞಾನಿಯ ಪ್ರಯೋಗ ಉಂಟುಮಾಡುವ ಯಡವಟ್ಟಿನ ಕಥೆ.<br /> <br /> ಪ್ರಯೋಗದಲ್ಲಿ ಏರುಪೇರಾಗಿ, ಪ್ರಯೋಗಕ್ಕೆ ತುತ್ತಾದ ತರುಣನೊಬ್ಬ ವಿಚಿತ್ರ ಮನೋ-ದೈಹಿಕ ಸಮಸ್ಯೆಗೆ ಗುರಿಯಾಗುತ್ತಾನೆ. ಮೃಗ ಸದೃಶ ಶಕ್ತಿ ಹಾಗೂ ದೈಹಿಕ ವಾಂಛೆ ಹೊಂದುವ ಈ ತರುಣ ಅಂದವಾದ ಯುವತಿಯರನ್ನು ಕಾಡಿ ಭೋಗಿಸುತ್ತಾನೆ, ನಂತರ ಕೊಲ್ಲುತ್ತಾನೆ. <br /> <br /> ಅನೇಕ ಯುವತಿಯರು ಅವನ ದಾಹಕ್ಕೆ ಬಲಿಯಾಗುತ್ತಾರೆ. ಅಂದಹಾಗೆ, ವಾಂಛೆ ಕೆರಳಿದಾಗಲೆಲ್ಲ `ರಸಗುಲ್ಲ~ ಸವಿಯುವುದು ಆ ಯುವಕನಿಗಿಷ್ಟ. <br /> <br /> ಮೇಲಿನದು, ಒಂದಾನೊಂದು ಕಾಲದ ಮಲಯಾಳಂ ಚಿತ್ರವೊಂದರ ಕಥೆಯಲ್ಲ. `ನಿರ್ದೋಷಿ~ (2009) ಎನ್ನುವ ಕನ್ನಡ ಚಿತ್ರದ ಕಥೆಯಿದು. <br /> `ಸಬ್ಸಿಡಿ ಸಮಿತಿ ಯಾವ ತಪ್ಪನ್ನೂ ಮಾಡಿಲ್ಲ. ಅದು ಮಾಡಿರುವ ಕೆಲಸ ಸರಿಯಾಗಿಯೇ ಇದೆ~ ಎಂದು 2009- 10ನೇ ಸಾಲಿನ ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿಯ ಅಧ್ಯಕ್ಷರಾದ ಹಿರಿಯ ನಟ ಶಿವರಾಂ ಸುದ್ದಿಗೋಷ್ಠಿಯಲ್ಲಿ ನಿರ್ಭಿಡೆಯಿಂದ ಹೇಳಿದರಲ್ಲ; ಆಗ ನೆನಪಾದುದು ಇದೇ `ನಿರ್ದೋಷಿ~. ಚಿತ್ರದ ನಾಯಕ ತನಗರಿವಿಲ್ಲದಂತೆ ಅಪರಾಧಗಳನ್ನು ಎಸಗುವುದರಿಂದ ಆತ `ನಿರ್ದೋಷಿ~. ಈ ಅರ್ಥದಲ್ಲಿ ಶಿವರಾಂ ಮತ್ತವರ ತಂಡವನ್ನು ಕೂಡ `ನಿರ್ದೋಷಿ~ ಎನ್ನಬಹುದೇನೊ?<br /> <br /> `ನಿರ್ದೋಷಿ~ ಬಗ್ಗೆ ಪ್ರಸ್ತಾಪಿಸಲಿಕ್ಕೆ ಕಾರಣವಿದೆ. 2009ರ ಸಾಲಿನಲ್ಲಿ ಸರ್ಕಾರದ ಸಹಾಯಧನಕ್ಕೆ ಆಯ್ಕೆಯಾಗಿರುವ ಚಿತ್ರಗಳಲ್ಲಿ ಇದೂ ಒಂದು. ಅರೆಬೆತ್ತಲೆ ಬೆಡಗಿಯರು ಮೈದೋರುವ, ಗಂಡು-ಹೆಣ್ಣು ಎಗ್ಗಿಲ್ಲದೆ ಲಲ್ಲೆಗರೆಯುವ, ನೆಪ ಮಾತ್ರಕ್ಕೆ ವಿಜ್ಞಾನದ ಕಥನವೊಂದಕ್ಕೆ ತಳುಕು ಹಾಕಿಕೊಂಡಿರುವ ಈ ಸಿನಿಮಾ `ಯಾವ ಬಗೆಯದು~ ಎನ್ನುವುದನ್ನು ಜನಸಾಮಾನ್ಯರೂ ಹೇಳಬಲ್ಲರು. ಆದರೆ, ಸಿನಿಮಾ ವ್ಯಾಕರಣ ಗೊತ್ತಿರುವವರೂ, ಹಿರಿಯರೂ, ವಿವಿಧ ಕ್ಷೇತ್ರಗಳ ಸಾಧಕರೂ ಇರುವ ಸಬ್ಸಿಡಿ ಸಮಿತಿ `ನಿರ್ದೋಷಿ~ಯನ್ನು ಸಹಾಯಧನಕ್ಕೆ ಆಯ್ಕೆ ಮಾಡಿದೆ! <br /> <br /> ಸಮಿತಿಯ ಸದಸ್ಯರೊಬ್ಬರು ಲಂಚ ಪಡೆದಿರುವುದನ್ನು ಒಪ್ಪಿಕೊಂಡಿರುವ ದೃಶ್ಯಗಳು ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದ್ದರೂ, ಅದನ್ನು ನಿರಾಕರಿಸುವ ಕೆಲಸವನ್ನು ಸಮಿತಿಯ ಅಧ್ಯಕ್ಷರು ಮಾಡಿದ್ದಾರೆ. ಟೀವಿ ದೃಶ್ಯಾವಳಿಗಳ ಸಾಕ್ಷಿಯಿದ್ದರೂ ಲಂಚದ ಆರೋಪವನ್ನು ನಿರಾಕರಿಸುವವರು, ಲೈಂಗಿಕ ದೃಶ್ಯಗಳನ್ನೇ ಬಂಡವಾಳವಾಗುಳ್ಳ ಚಿತ್ರವನ್ನು ಮೆಚ್ಚಿಕೊಳ್ಳುವುದರಲ್ಲಿ ಆಶ್ಚರ್ಯವೇನು? <br /> <br /> `ನಿರ್ದೋಷಿ~ಯಂಥ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ ಎಂದಮಾತ್ರಕ್ಕೆ ಶಿವರಾಂ ಅಥವಾ ಅವರ ತಂಡದ ಸದಸ್ಯರ ಅಭಿರುಚಿ ಮತ್ತು ಸಿನಿಮಾ ಜ್ಞಾನವನ್ನು ಅನುಮಾನಿಸಬೇಕಾಗಿಲ್ಲ. ಅವರೆಲ್ಲರೂ ದೊಡ್ಡವರೇ, ತಜ್ಞರೇ. ಪ್ರತಿ ವರ್ಷದ ಸಮಿತಿಗಳಲ್ಲಿ ಇಂಥ ದೊಡ್ಡವರೇ ಇರುತ್ತಾರೆ. ಆದರೆ, ಅಂಥವರ್ಯಾರೂ `ಗುಣಾತ್ಮಕ ಕನ್ನಡ ಸಿನಿಮಾ~ದ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ. `ಕನಸೆಂಬೊ ಕುದುರೆಯನೇರಿ~ ಚಿತ್ರ ಚೆನ್ನಾಗಿದೆ ಎಂದವರೇ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಬೇರೆ ರಾಗ ಹಾಡುತ್ತಾರೆ. <br /> <br /> ಮತ್ತೆ ಮತ್ತೆ ಕಾಸರವಳ್ಳಿ ಅವರಿಗೆ ಯಾಕೆ ಪ್ರಶಸ್ತಿ ಕೊಡಬೇಕು ಎನ್ನುವುದು ಅವರ ಪ್ರಶ್ನೆ! ಅಂದರೆ, ಅವರ ಕಾಳಜಿ ಇರುವುದು ಪ್ರಶಸ್ತಿ ಹಂಚಿಕೆಯಲ್ಲೇ ಹೊರತು ಗುಣಮಟ್ಟದ ಕುರಿತಾಗಿಯಲ್ಲ. <br /> <br /> <br /> ಆಯ್ಕೆಯ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆಯೂ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಹಿರಿಯ ತಂತ್ರಜ್ಞರು, ಕಲಾವಿದರು ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ವಯಸ್ಸಿನ ಕಾರಣದಿಂದಾಗಿ ಸಿನಿಮಾ ಆಸಕ್ತಿ ಇವರಲ್ಲಿ ಸಹಜವಾಗಿಯೇ ಕುಗ್ಗಿರುತ್ತದೆ. <br /> <br /> ತಮ್ಮ ಕಾಲದ `ಸುವರ್ಣ ಯುಗ~ವನ್ನು ಚಪ್ಪರಿಸುವ, ಇವತ್ತಿನ ಸಿನಿಮಾದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲಾಗದ ಅಂಥವರಿಂದ ಸರಿಯಾದ ತೀರ್ಪನ್ನು ಹೇಗೆ ನಿರೀಕ್ಷಿಸುವುದು? `ಗುಣಾತ್ಮಕ ಚಿತ್ರ~ಗಳಿಗೆ ಕೊಡಲಿ ಕಾವಾಗಿ ಪರಿಣಮಿಸುವವರು ಇಂಥವರೇ. ವಿವಿಧ ಕ್ಷೇತ್ರಗಳ ಕೆಲವು ತಜ್ಞರು ಸಮಿತಿಯಲ್ಲಿ ಇರುತ್ತಾರಾದರೂ, ಅವರು ಗುಂಪಿನಲ್ಲಿ ಯಾವಾಗಲೂ ಅಲ್ಪಸಂಖ್ಯಾತರು.<br /> <br /> ಹಾಗೆ ನೋಡಿದರೆ ಪ್ರಶಸ್ತಿ ಮತ್ತು ಸಹಾಯಧನದ ವಿಷಯದಲ್ಲಿ ಸರ್ಕಾರದ ನಡವಳಿಕೆ ಶಿಸ್ತಿನಿಂದ ಕೂಡಿಲ್ಲ. ಆಯಾ ವರ್ಷದ ರಾಷ್ಟ್ರ ಪ್ರಶಸ್ತಿಗಳು ಆಯಾ ವರ್ಷವೇ ಪ್ರಕಟಗೊಳ್ಳುತ್ತವೆ. ಆದರೆ, ಈ ಶಿಸ್ತು ರಾಜ್ಯ ಪ್ರಶಸ್ತಿಗಳ ನಿಟ್ಟಿನಲ್ಲಿ ಅಸಾಧ್ಯವಾಗಿದೆ. <br /> <br /> 2010ರ ಸಾಲಿನ ರಾಜ್ಯ ಪ್ರಶಸ್ತಿಗಳಿಗಾಗಿ ಸಿನಿಮಾ ನೋಡುವ ಪ್ರಕ್ರಿಯೆ ನಡೆಯುತ್ತಿದ್ದರೆ, 2011ರ ಸಾಲಿನ ರಾಷ್ಟ್ರ ಪ್ರಶಸ್ತಿಗಳು ಆಗಲೇ ಪ್ರಕಟಗೊಂಡಿವೆ. ಈ ಆಮೆಗತಿ ಪ್ರಶಸ್ತಿಗಳ ಬಗೆಗಿನ ಉತ್ಸಾಹವನ್ನು ಕ್ಷೀಣಿಸುವುದರ ಜೊತೆಗೆ, ಇಡೀ ಪ್ರಕ್ರಿಯೆಯನ್ನೇ ಯಾಂತ್ರಿಕವಾಗಿಸಿಬಿಡುತ್ತದೆ.<br /> <br /> ರಾಜ್ಯ ಸರ್ಕಾರದ ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಸಹಾಯಧನ ಆಯ್ಕೆ ಸಮಿತಿಗಳು ಪ್ರತಿ ವರ್ಷವೂ ಟೀಕೆಗಳಿಗೆ ಗುರಿಯಾಗುತ್ತಿರುತ್ತವೆ. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ವಿವಿಧ ರೀತಿಯ ಪ್ರಭಾವಗಳು ಕೆಲಸ ಮಾಡಿದರೆ, ಸಹಾಯಧನದ ಸಂದರ್ಭದಲ್ಲಿ `ಹಣ~ವೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಲಂಚ ಕೊಟ್ಟವರು ಯಾರೂ ಬಹಿರಂಗವಾಗಿ ಈವರೆಗೆ ಹೇಳಿಕೊಂಡಿರಲಿಲ್ಲ; ಲಂಚ ಪಡೆದವರು ಸಿಕ್ಕಿಬಿದ್ದಿರಲಿಲ್ಲ! <br /> <br /> ಈಗ ಸಮಿತಿ ಬಯಲಿಗೆ ಬಿದ್ದಿದೆ. ಆದರೂ ಮೀಸೆ ಮಣ್ಣಾಗಿಲ್ಲ ಎನ್ನುತ್ತಿದೆ. ಒಳ್ಳೆಯ ಸಿನಿಮಾ ಯಾರಿಗೂ ಬೇಕಾಗಿಲ್ಲ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.<br /> <br /> ಪ್ರಶಸ್ತಿ, ಸಹಾಯಧನ, ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ - ಮುಂತಾದೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ `ಸಿಕ್ಕಷ್ಟು ಲಾಭ~ ಮಾಡಿಕೊಳ್ಳುವ ಲಾಭಕೋರರೇ ಎಲ್ಲೆಡೆ ಇರುವಂತಿದೆ. ಕನ್ನಡ ಚಿತ್ರರಂಗದಲ್ಲೆಗ ಬೆಲ್ಲಕ್ಕೆ ಎಲ್ಲೆಡೆ ನಂಟರು. ಆರೋಗ್ಯಕ್ಕೆ ಹಿತವಾದ ಬೇವನ್ನು ಯಾರೂ ಒಲ್ಲರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯೌವನ ಎನ್ನುವುದು ಶಾಶ್ವತವಾದ ಅವಸ್ಥೆಯಾದರೆ ಹೇಗೆ? ಇದು ಯಯಾತಿ ಮತ್ತು ಪುರುವಿನ ಕಥೆಯಲ್ಲ. ಮುಪ್ಪನ್ನು ಗೆಲ್ಲಲು ಹಂಬಲಿಸಿದ ವಿಜ್ಞಾನಿಯ ಪ್ರಯೋಗ ಉಂಟುಮಾಡುವ ಯಡವಟ್ಟಿನ ಕಥೆ.<br /> <br /> ಪ್ರಯೋಗದಲ್ಲಿ ಏರುಪೇರಾಗಿ, ಪ್ರಯೋಗಕ್ಕೆ ತುತ್ತಾದ ತರುಣನೊಬ್ಬ ವಿಚಿತ್ರ ಮನೋ-ದೈಹಿಕ ಸಮಸ್ಯೆಗೆ ಗುರಿಯಾಗುತ್ತಾನೆ. ಮೃಗ ಸದೃಶ ಶಕ್ತಿ ಹಾಗೂ ದೈಹಿಕ ವಾಂಛೆ ಹೊಂದುವ ಈ ತರುಣ ಅಂದವಾದ ಯುವತಿಯರನ್ನು ಕಾಡಿ ಭೋಗಿಸುತ್ತಾನೆ, ನಂತರ ಕೊಲ್ಲುತ್ತಾನೆ. <br /> <br /> ಅನೇಕ ಯುವತಿಯರು ಅವನ ದಾಹಕ್ಕೆ ಬಲಿಯಾಗುತ್ತಾರೆ. ಅಂದಹಾಗೆ, ವಾಂಛೆ ಕೆರಳಿದಾಗಲೆಲ್ಲ `ರಸಗುಲ್ಲ~ ಸವಿಯುವುದು ಆ ಯುವಕನಿಗಿಷ್ಟ. <br /> <br /> ಮೇಲಿನದು, ಒಂದಾನೊಂದು ಕಾಲದ ಮಲಯಾಳಂ ಚಿತ್ರವೊಂದರ ಕಥೆಯಲ್ಲ. `ನಿರ್ದೋಷಿ~ (2009) ಎನ್ನುವ ಕನ್ನಡ ಚಿತ್ರದ ಕಥೆಯಿದು. <br /> `ಸಬ್ಸಿಡಿ ಸಮಿತಿ ಯಾವ ತಪ್ಪನ್ನೂ ಮಾಡಿಲ್ಲ. ಅದು ಮಾಡಿರುವ ಕೆಲಸ ಸರಿಯಾಗಿಯೇ ಇದೆ~ ಎಂದು 2009- 10ನೇ ಸಾಲಿನ ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿಯ ಅಧ್ಯಕ್ಷರಾದ ಹಿರಿಯ ನಟ ಶಿವರಾಂ ಸುದ್ದಿಗೋಷ್ಠಿಯಲ್ಲಿ ನಿರ್ಭಿಡೆಯಿಂದ ಹೇಳಿದರಲ್ಲ; ಆಗ ನೆನಪಾದುದು ಇದೇ `ನಿರ್ದೋಷಿ~. ಚಿತ್ರದ ನಾಯಕ ತನಗರಿವಿಲ್ಲದಂತೆ ಅಪರಾಧಗಳನ್ನು ಎಸಗುವುದರಿಂದ ಆತ `ನಿರ್ದೋಷಿ~. ಈ ಅರ್ಥದಲ್ಲಿ ಶಿವರಾಂ ಮತ್ತವರ ತಂಡವನ್ನು ಕೂಡ `ನಿರ್ದೋಷಿ~ ಎನ್ನಬಹುದೇನೊ?<br /> <br /> `ನಿರ್ದೋಷಿ~ ಬಗ್ಗೆ ಪ್ರಸ್ತಾಪಿಸಲಿಕ್ಕೆ ಕಾರಣವಿದೆ. 2009ರ ಸಾಲಿನಲ್ಲಿ ಸರ್ಕಾರದ ಸಹಾಯಧನಕ್ಕೆ ಆಯ್ಕೆಯಾಗಿರುವ ಚಿತ್ರಗಳಲ್ಲಿ ಇದೂ ಒಂದು. ಅರೆಬೆತ್ತಲೆ ಬೆಡಗಿಯರು ಮೈದೋರುವ, ಗಂಡು-ಹೆಣ್ಣು ಎಗ್ಗಿಲ್ಲದೆ ಲಲ್ಲೆಗರೆಯುವ, ನೆಪ ಮಾತ್ರಕ್ಕೆ ವಿಜ್ಞಾನದ ಕಥನವೊಂದಕ್ಕೆ ತಳುಕು ಹಾಕಿಕೊಂಡಿರುವ ಈ ಸಿನಿಮಾ `ಯಾವ ಬಗೆಯದು~ ಎನ್ನುವುದನ್ನು ಜನಸಾಮಾನ್ಯರೂ ಹೇಳಬಲ್ಲರು. ಆದರೆ, ಸಿನಿಮಾ ವ್ಯಾಕರಣ ಗೊತ್ತಿರುವವರೂ, ಹಿರಿಯರೂ, ವಿವಿಧ ಕ್ಷೇತ್ರಗಳ ಸಾಧಕರೂ ಇರುವ ಸಬ್ಸಿಡಿ ಸಮಿತಿ `ನಿರ್ದೋಷಿ~ಯನ್ನು ಸಹಾಯಧನಕ್ಕೆ ಆಯ್ಕೆ ಮಾಡಿದೆ! <br /> <br /> ಸಮಿತಿಯ ಸದಸ್ಯರೊಬ್ಬರು ಲಂಚ ಪಡೆದಿರುವುದನ್ನು ಒಪ್ಪಿಕೊಂಡಿರುವ ದೃಶ್ಯಗಳು ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದ್ದರೂ, ಅದನ್ನು ನಿರಾಕರಿಸುವ ಕೆಲಸವನ್ನು ಸಮಿತಿಯ ಅಧ್ಯಕ್ಷರು ಮಾಡಿದ್ದಾರೆ. ಟೀವಿ ದೃಶ್ಯಾವಳಿಗಳ ಸಾಕ್ಷಿಯಿದ್ದರೂ ಲಂಚದ ಆರೋಪವನ್ನು ನಿರಾಕರಿಸುವವರು, ಲೈಂಗಿಕ ದೃಶ್ಯಗಳನ್ನೇ ಬಂಡವಾಳವಾಗುಳ್ಳ ಚಿತ್ರವನ್ನು ಮೆಚ್ಚಿಕೊಳ್ಳುವುದರಲ್ಲಿ ಆಶ್ಚರ್ಯವೇನು? <br /> <br /> `ನಿರ್ದೋಷಿ~ಯಂಥ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ ಎಂದಮಾತ್ರಕ್ಕೆ ಶಿವರಾಂ ಅಥವಾ ಅವರ ತಂಡದ ಸದಸ್ಯರ ಅಭಿರುಚಿ ಮತ್ತು ಸಿನಿಮಾ ಜ್ಞಾನವನ್ನು ಅನುಮಾನಿಸಬೇಕಾಗಿಲ್ಲ. ಅವರೆಲ್ಲರೂ ದೊಡ್ಡವರೇ, ತಜ್ಞರೇ. ಪ್ರತಿ ವರ್ಷದ ಸಮಿತಿಗಳಲ್ಲಿ ಇಂಥ ದೊಡ್ಡವರೇ ಇರುತ್ತಾರೆ. ಆದರೆ, ಅಂಥವರ್ಯಾರೂ `ಗುಣಾತ್ಮಕ ಕನ್ನಡ ಸಿನಿಮಾ~ದ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ. `ಕನಸೆಂಬೊ ಕುದುರೆಯನೇರಿ~ ಚಿತ್ರ ಚೆನ್ನಾಗಿದೆ ಎಂದವರೇ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಬೇರೆ ರಾಗ ಹಾಡುತ್ತಾರೆ. <br /> <br /> ಮತ್ತೆ ಮತ್ತೆ ಕಾಸರವಳ್ಳಿ ಅವರಿಗೆ ಯಾಕೆ ಪ್ರಶಸ್ತಿ ಕೊಡಬೇಕು ಎನ್ನುವುದು ಅವರ ಪ್ರಶ್ನೆ! ಅಂದರೆ, ಅವರ ಕಾಳಜಿ ಇರುವುದು ಪ್ರಶಸ್ತಿ ಹಂಚಿಕೆಯಲ್ಲೇ ಹೊರತು ಗುಣಮಟ್ಟದ ಕುರಿತಾಗಿಯಲ್ಲ. <br /> <br /> <br /> ಆಯ್ಕೆಯ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆಯೂ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಹಿರಿಯ ತಂತ್ರಜ್ಞರು, ಕಲಾವಿದರು ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ವಯಸ್ಸಿನ ಕಾರಣದಿಂದಾಗಿ ಸಿನಿಮಾ ಆಸಕ್ತಿ ಇವರಲ್ಲಿ ಸಹಜವಾಗಿಯೇ ಕುಗ್ಗಿರುತ್ತದೆ. <br /> <br /> ತಮ್ಮ ಕಾಲದ `ಸುವರ್ಣ ಯುಗ~ವನ್ನು ಚಪ್ಪರಿಸುವ, ಇವತ್ತಿನ ಸಿನಿಮಾದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲಾಗದ ಅಂಥವರಿಂದ ಸರಿಯಾದ ತೀರ್ಪನ್ನು ಹೇಗೆ ನಿರೀಕ್ಷಿಸುವುದು? `ಗುಣಾತ್ಮಕ ಚಿತ್ರ~ಗಳಿಗೆ ಕೊಡಲಿ ಕಾವಾಗಿ ಪರಿಣಮಿಸುವವರು ಇಂಥವರೇ. ವಿವಿಧ ಕ್ಷೇತ್ರಗಳ ಕೆಲವು ತಜ್ಞರು ಸಮಿತಿಯಲ್ಲಿ ಇರುತ್ತಾರಾದರೂ, ಅವರು ಗುಂಪಿನಲ್ಲಿ ಯಾವಾಗಲೂ ಅಲ್ಪಸಂಖ್ಯಾತರು.<br /> <br /> ಹಾಗೆ ನೋಡಿದರೆ ಪ್ರಶಸ್ತಿ ಮತ್ತು ಸಹಾಯಧನದ ವಿಷಯದಲ್ಲಿ ಸರ್ಕಾರದ ನಡವಳಿಕೆ ಶಿಸ್ತಿನಿಂದ ಕೂಡಿಲ್ಲ. ಆಯಾ ವರ್ಷದ ರಾಷ್ಟ್ರ ಪ್ರಶಸ್ತಿಗಳು ಆಯಾ ವರ್ಷವೇ ಪ್ರಕಟಗೊಳ್ಳುತ್ತವೆ. ಆದರೆ, ಈ ಶಿಸ್ತು ರಾಜ್ಯ ಪ್ರಶಸ್ತಿಗಳ ನಿಟ್ಟಿನಲ್ಲಿ ಅಸಾಧ್ಯವಾಗಿದೆ. <br /> <br /> 2010ರ ಸಾಲಿನ ರಾಜ್ಯ ಪ್ರಶಸ್ತಿಗಳಿಗಾಗಿ ಸಿನಿಮಾ ನೋಡುವ ಪ್ರಕ್ರಿಯೆ ನಡೆಯುತ್ತಿದ್ದರೆ, 2011ರ ಸಾಲಿನ ರಾಷ್ಟ್ರ ಪ್ರಶಸ್ತಿಗಳು ಆಗಲೇ ಪ್ರಕಟಗೊಂಡಿವೆ. ಈ ಆಮೆಗತಿ ಪ್ರಶಸ್ತಿಗಳ ಬಗೆಗಿನ ಉತ್ಸಾಹವನ್ನು ಕ್ಷೀಣಿಸುವುದರ ಜೊತೆಗೆ, ಇಡೀ ಪ್ರಕ್ರಿಯೆಯನ್ನೇ ಯಾಂತ್ರಿಕವಾಗಿಸಿಬಿಡುತ್ತದೆ.<br /> <br /> ರಾಜ್ಯ ಸರ್ಕಾರದ ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಸಹಾಯಧನ ಆಯ್ಕೆ ಸಮಿತಿಗಳು ಪ್ರತಿ ವರ್ಷವೂ ಟೀಕೆಗಳಿಗೆ ಗುರಿಯಾಗುತ್ತಿರುತ್ತವೆ. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ವಿವಿಧ ರೀತಿಯ ಪ್ರಭಾವಗಳು ಕೆಲಸ ಮಾಡಿದರೆ, ಸಹಾಯಧನದ ಸಂದರ್ಭದಲ್ಲಿ `ಹಣ~ವೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಲಂಚ ಕೊಟ್ಟವರು ಯಾರೂ ಬಹಿರಂಗವಾಗಿ ಈವರೆಗೆ ಹೇಳಿಕೊಂಡಿರಲಿಲ್ಲ; ಲಂಚ ಪಡೆದವರು ಸಿಕ್ಕಿಬಿದ್ದಿರಲಿಲ್ಲ! <br /> <br /> ಈಗ ಸಮಿತಿ ಬಯಲಿಗೆ ಬಿದ್ದಿದೆ. ಆದರೂ ಮೀಸೆ ಮಣ್ಣಾಗಿಲ್ಲ ಎನ್ನುತ್ತಿದೆ. ಒಳ್ಳೆಯ ಸಿನಿಮಾ ಯಾರಿಗೂ ಬೇಕಾಗಿಲ್ಲ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.<br /> <br /> ಪ್ರಶಸ್ತಿ, ಸಹಾಯಧನ, ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ - ಮುಂತಾದೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ `ಸಿಕ್ಕಷ್ಟು ಲಾಭ~ ಮಾಡಿಕೊಳ್ಳುವ ಲಾಭಕೋರರೇ ಎಲ್ಲೆಡೆ ಇರುವಂತಿದೆ. ಕನ್ನಡ ಚಿತ್ರರಂಗದಲ್ಲೆಗ ಬೆಲ್ಲಕ್ಕೆ ಎಲ್ಲೆಡೆ ನಂಟರು. ಆರೋಗ್ಯಕ್ಕೆ ಹಿತವಾದ ಬೇವನ್ನು ಯಾರೂ ಒಲ್ಲರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>