<p><strong>ನಾಪೋಕ್ಲು:</strong> ಇಲ್ಲಿಂದ ಬೇತು ಮಾರ್ಗವಾಗಿ ಎರಡು ಕಿ.ಮೀ. ಕ್ರಮಿಸಿದರೆ ಸಿಗುವುದು ಮಕ್ಕಿಶಾಸ್ತಾವು ದೇವಸ್ಥಾನ. ಈ ನಿಶ್ಯಬ್ದ ತಾಣದಲ್ಲಿ ಸಾವಿರಾರು ನಾಯಿಗಳು!<br /> <br /> ಇದೊಂದು ಸುಂದರ ಪರಿಸರ. ಭಕ್ತಿಯ ಅಲೆಗಳನ್ನು ಹೊಮ್ಮಿಸುವ ಸುಂದರ ದೇಗುಲವಿರುವುದು ಪ್ರಶಾಂತ ತಾಣದಲ್ಲಿ.<br /> ದೇಗುಲ ಎಂದೊಡನೆ ಗುಡಿಗೋಪುರಗಳ ಕಲ್ಪನೆ ಮಾಡಿಕೊಳ್ಳಬೇಡಿ. ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ.<br /> <br /> ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿಯೇ ಶಾಸ್ತಾವು ದೇವರು. ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರವಿದೆ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು ನಿಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ.<br /> ಮಕ್ಕಿಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ಭಿನ್ನ ಆಚರಣೆಗಳ ಹಬ್ಬವು ಒಮ್ಮೆ ಮೇ ತಿಂಗಳಿನಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್ನಲ್ಲಿ ನಡೆಯುತ್ತದೆ.<br /> <br /> ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ.<br /> <br /> ಡಿಸೆಂಬರ್ ತಿಂಗಳ ಹಬ್ಬದಲ್ಲಿ ನಾಯಿ ಹರಕೆ ವಿಶೇಷ. ಧನು ಸಂಕ್ರಮಣದ ದಿನ ನಾಯಿ ಹಾಕುವ ಕಾರ್ಯಕ್ರಮ ಜರುಗುತ್ತದೆ.<br /> <br /> ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.<br /> <br /> ಬೇತು ಗ್ರಾಮಕ್ಕೆ ಸಂಬಂಧಿಸಿದ 12 ಕುಳದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಪ್ರತಿ ವರ್ಷ ಸಲ್ಲಿಸಲೇ ಬೇಕು ಎನ್ನುವುದು ಇಲ್ಲಿ ಬೆಳೆದು ಬಂದಿರುವ ನಂಬಿಕೆ.<br /> <br /> ಉಳಿದಂತೆ ಗ್ರಾಮದ ಮಂದಿಯೂ ಹರಕೆ ಹೇಳಿಕೊಂಡು ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ರೂ300 ನೀಡಬೇಕು. ಪ್ರತಿವರ್ಷ ಡಿಸೆಂಬರ್ ಹಬ್ಬದಲ್ಲಿ ಈ ಆಚರಣೆಯನ್ನು ವಿಶೇಷವಾಗಿ ನಡೆಸುತ್ತ ಬಂದಿರುವುದನ್ನು ಕಾಣಬಹುದು.<br /> <br /> ಹಾಗಾಗಿ ದೇವಾಲಯದ ಸುತ್ತಲೂ ಹರಕೆ ರೂಪದಲ್ಲಿ ಸಲ್ಲಿಸಿದ ನಾಯಿಗಳ ಪ್ರತಿಕೃತಿ ಈ ತಾಣಕ್ಕೆ ವಿಶಿಷ್ಟ ಮೆರುಗು ನೀಡಿದೆ. ಈ ವರ್ಷ ಡಿ. 15 ರಂದು ಹಬ್ಬ ನಡೆಯಲಿದೆ.<br /> <br /> <strong>ಇದು ನನ್ನ ವೃತ್ತಿ</strong><br /> ‘30 ವರ್ಷಗಳಿಂದ ನಾಯಿ ತಯಾರಿಸುವುದು ನನ್ನ ವೃತ್ತಿ. ಸಮೀಪದ ಬಲಮುರಿ ಗ್ರಾಮದಿಂದ ಮಣ್ಣು ತರುತ್ತೇನೆ. ತಯಾರಿಸಿದ ಮೂರ್ತಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಶಾಸ್ತ್ರ ಪ್ರಕಾರ ಊರಿನ ಮಂದಿ 24 ನಾಯಿಗಳನ್ನು ಒಪ್ಪಿಸುತ್ತಾರೆ.<br /> <strong>– ಡಿ.ಆರ್. ಶಂಕರ, ನಾಯಿ ತಯಾರಕ, ಕೊಳಕೇರಿ</strong></p>.<p><strong>ದೇಗುಲ ವತಿಯಿಂದ ಜಾಗ</strong><br /> ‘ಹಲವು ವರ್ಷಗಳಿಂದ ನಾಯಿ ಹರಕೆ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬಂದಿದೆ. ಹರಕೆಯ ನಾಯಿಗಳನ್ನು ತಯಾರಿಸಲು ದೇವಾಲಯದ ವತಿಯಿಂದ ವಿಶೇಷ ಸ್ಥಳ ನಿಗದಿಪಡಿಸಲಾಗಿದೆ‘<br /> <strong>– ಕೊಂಡೀರ ಪೊನ್ನಣ್ಣ, ತಕ್ಕ ಮುಖ್ಯಸ್ಥರು, ಮಕ್ಕಿಶಾಸ್ತಾವು ದೇವಾಲಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು:</strong> ಇಲ್ಲಿಂದ ಬೇತು ಮಾರ್ಗವಾಗಿ ಎರಡು ಕಿ.ಮೀ. ಕ್ರಮಿಸಿದರೆ ಸಿಗುವುದು ಮಕ್ಕಿಶಾಸ್ತಾವು ದೇವಸ್ಥಾನ. ಈ ನಿಶ್ಯಬ್ದ ತಾಣದಲ್ಲಿ ಸಾವಿರಾರು ನಾಯಿಗಳು!<br /> <br /> ಇದೊಂದು ಸುಂದರ ಪರಿಸರ. ಭಕ್ತಿಯ ಅಲೆಗಳನ್ನು ಹೊಮ್ಮಿಸುವ ಸುಂದರ ದೇಗುಲವಿರುವುದು ಪ್ರಶಾಂತ ತಾಣದಲ್ಲಿ.<br /> ದೇಗುಲ ಎಂದೊಡನೆ ಗುಡಿಗೋಪುರಗಳ ಕಲ್ಪನೆ ಮಾಡಿಕೊಳ್ಳಬೇಡಿ. ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ.<br /> <br /> ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿಯೇ ಶಾಸ್ತಾವು ದೇವರು. ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರವಿದೆ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು ನಿಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ.<br /> ಮಕ್ಕಿಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ಭಿನ್ನ ಆಚರಣೆಗಳ ಹಬ್ಬವು ಒಮ್ಮೆ ಮೇ ತಿಂಗಳಿನಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್ನಲ್ಲಿ ನಡೆಯುತ್ತದೆ.<br /> <br /> ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ.<br /> <br /> ಡಿಸೆಂಬರ್ ತಿಂಗಳ ಹಬ್ಬದಲ್ಲಿ ನಾಯಿ ಹರಕೆ ವಿಶೇಷ. ಧನು ಸಂಕ್ರಮಣದ ದಿನ ನಾಯಿ ಹಾಕುವ ಕಾರ್ಯಕ್ರಮ ಜರುಗುತ್ತದೆ.<br /> <br /> ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.<br /> <br /> ಬೇತು ಗ್ರಾಮಕ್ಕೆ ಸಂಬಂಧಿಸಿದ 12 ಕುಳದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಪ್ರತಿ ವರ್ಷ ಸಲ್ಲಿಸಲೇ ಬೇಕು ಎನ್ನುವುದು ಇಲ್ಲಿ ಬೆಳೆದು ಬಂದಿರುವ ನಂಬಿಕೆ.<br /> <br /> ಉಳಿದಂತೆ ಗ್ರಾಮದ ಮಂದಿಯೂ ಹರಕೆ ಹೇಳಿಕೊಂಡು ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ರೂ300 ನೀಡಬೇಕು. ಪ್ರತಿವರ್ಷ ಡಿಸೆಂಬರ್ ಹಬ್ಬದಲ್ಲಿ ಈ ಆಚರಣೆಯನ್ನು ವಿಶೇಷವಾಗಿ ನಡೆಸುತ್ತ ಬಂದಿರುವುದನ್ನು ಕಾಣಬಹುದು.<br /> <br /> ಹಾಗಾಗಿ ದೇವಾಲಯದ ಸುತ್ತಲೂ ಹರಕೆ ರೂಪದಲ್ಲಿ ಸಲ್ಲಿಸಿದ ನಾಯಿಗಳ ಪ್ರತಿಕೃತಿ ಈ ತಾಣಕ್ಕೆ ವಿಶಿಷ್ಟ ಮೆರುಗು ನೀಡಿದೆ. ಈ ವರ್ಷ ಡಿ. 15 ರಂದು ಹಬ್ಬ ನಡೆಯಲಿದೆ.<br /> <br /> <strong>ಇದು ನನ್ನ ವೃತ್ತಿ</strong><br /> ‘30 ವರ್ಷಗಳಿಂದ ನಾಯಿ ತಯಾರಿಸುವುದು ನನ್ನ ವೃತ್ತಿ. ಸಮೀಪದ ಬಲಮುರಿ ಗ್ರಾಮದಿಂದ ಮಣ್ಣು ತರುತ್ತೇನೆ. ತಯಾರಿಸಿದ ಮೂರ್ತಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಶಾಸ್ತ್ರ ಪ್ರಕಾರ ಊರಿನ ಮಂದಿ 24 ನಾಯಿಗಳನ್ನು ಒಪ್ಪಿಸುತ್ತಾರೆ.<br /> <strong>– ಡಿ.ಆರ್. ಶಂಕರ, ನಾಯಿ ತಯಾರಕ, ಕೊಳಕೇರಿ</strong></p>.<p><strong>ದೇಗುಲ ವತಿಯಿಂದ ಜಾಗ</strong><br /> ‘ಹಲವು ವರ್ಷಗಳಿಂದ ನಾಯಿ ಹರಕೆ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬಂದಿದೆ. ಹರಕೆಯ ನಾಯಿಗಳನ್ನು ತಯಾರಿಸಲು ದೇವಾಲಯದ ವತಿಯಿಂದ ವಿಶೇಷ ಸ್ಥಳ ನಿಗದಿಪಡಿಸಲಾಗಿದೆ‘<br /> <strong>– ಕೊಂಡೀರ ಪೊನ್ನಣ್ಣ, ತಕ್ಕ ಮುಖ್ಯಸ್ಥರು, ಮಕ್ಕಿಶಾಸ್ತಾವು ದೇವಾಲಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>