<p>ಧಾರ್ಮಿಕ ಕ್ಷೇತ್ರದಲ್ಲಿ ಸಾವಿರಾರು ಮಠಗಳು. ಮಠಗಳ ಹೊಣೆಗಾರಿಕೆಯೆಂದರೆ, ಧರ್ಮ ಪ್ರಸಾರ. ಸಮಾಜದಲ್ಲಿ ಧಾರ್ಮಿಕವಾದ ನಂಬುಗೆಯನ್ನು ಬೆಳೆಸುವ ದೃಷ್ಟಿಯಿಂದ ಇವುಗಳ ಸ್ಥಾಪನೆ. ಹಿಂದಿನಿಂದಲೂ ಈ ಕಾರ್ಯವನ್ನು ನೆರವೇರಿಸುತ್ತ ಬಂದಿದ್ದು, ಈಗಲೂ ಅದನ್ನೇ ಮುಂದುವರೆಸುತ್ತಿವೆ.<br /> <br /> ಹಲವಾರು ಜಾತಿಗೆ ಸೇರಿದ ಮಠಗಳಿವೆ. ತಮ್ಮದೇ ಆದ ತತ್ವ-ಸಿದ್ಧಾಂತಗಳು. ಕುಲಕ್ಕೊಂದು ಕಸುಬು. ಜಾತಿಗೊಬ್ಬ ಜಗದ್ಗುರು. ಗುರುವಿಗೊಂದು ಗುರುದಾನಿ. ಮಠಗಳ ಕಲ್ಪನೆಯು ಸಮಂಜಸವಾದುದು. ಅದರಂತೆ ಅವುಗಳು ನಿರ್ವಹಿಸುವ ಕಾರ್ಯವು ಅನನ್ಯವಾದುದು. ಕ್ರಮೇಣ ಅವುಗಳ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ. <br /> <br /> ಆರಂಭದಲ್ಲಿ ಧರ್ಮಪ್ರಸಾರ. ನಂತರದ ದಿನಗಳಲ್ಲಿ ಧರ್ಮವು ಜಾತಿ-ಮತದ ಸ್ವರೂಪವನ್ನು ತಾಳಿದೆ. ತಮ್ಮತಮ್ಮ ಮತ ಪ್ರಸಾರದಲ್ಲಿ ತೊಡಗಿವೆ. ಮತಗಳು ಮಠಗಳಾದವು. <br /> <br /> ಮಠಗಳು ಮತಗಳಾದವು. ಅವು ಈಗ ಮತ(ವೋಟ್)ಗಳ ಕೇಂದ್ರಗಳಾಗುತ್ತಿವೆಯೆಂಬ ಆಪಾದನೆ ಕೇಳಿಬರುತ್ತಿದೆ. ಅವರವರ ನಿರ್ಧಾರದಂತೆ ಅವರವರ ಭವಿಷ್ಯ. ಅದೇನೇಯಿರಲಿ, ಈ ನಡುವೆ ಪ್ರಗತಿದಾಯಕವಾದ ಕಾರ್ಯವನ್ನು ಮಠಗಳು ಕೈಗೊಂಡಿದ್ದಂತೂ ನಿಜ.<br /> <br /> ಕ್ರಿಶ್ಚಿಯನ್ ಮಿಷನರಿಗಳು ಆರೋಗ್ಯ(ಹೆಲ್ತ್) ಮತ್ತು ಶಿಕ್ಷಣ (ಎಜ್ಯುಕೇಷನ್) ಎರಡು ಅಂಶಗಳನ್ನು ಕೈಗೆತ್ತಿಕೊಂಡು ಜನರ ಬಳಿಗೆ ಬಂದವು. ಮತಾಂತರವನ್ನು ವಿರೋಧಿಸುವವರ ಮಕ್ಕಳು ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲಾ-ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿತು ಉನ್ನತ ಸ್ಥಾನ-ಮಾನಗಳನ್ನು ಗಿಟ್ಟಿಸಿಕೊಂಡಿರುವುದು ಆಶ್ಚರ್ಯಕರವಾದರೂ ಸತ್ಯವಾಗಿದೆ.<br /> <br /> ಕನ್ನಡಕ್ಕಾಗಿ ಹೋರಾಡುವವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಂತೆ. ಮೊದಮೊದಲು ಧರ್ಮಪ್ರಸಾರಕ್ಕೆ ಸೀಮಿತಗೊಳಿಸಿಕೊಂಡಿದ್ದ ಮಠಗಳು ಶಿಕ್ಷಣದೆಡೆಗೆ ದೃಷ್ಟಿ ಹಾಯಿಸಿದವು. ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಅಕ್ಷರ ದಾಸೋಹ(ಸಂಸ್ಕತಿ) ಬೆಳೆಸಿದವು. <br /> <br /> ಈ ಭಾವನೆಯಿಟ್ಟುಕೊಂಡೇ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಸಾದ ನಿಲಯಗಳನ್ನು ತೆರೆದದ್ದು, ಮಠಗಳ ಇತಿಹಾಸದಲ್ಲೇ ಅದ್ಭುತವಾದ ಹೆಜ್ಜೆ.<br /> <br /> ಮಠಗಳನ್ನು ವಿರೋಧಿಸುವ ಯಾವೊಬ್ಬ ಬಂಡಾಯಗಾರನೂ ಇದನ್ನು ಒಪ್ಪಿಕೊಳ್ಳಬಲ್ಲ. ಆರಂಭಿಕ ದಿನಗಳಲ್ಲಿ ಧರ್ಮ ಪ್ರಸಾರಕ್ಕೆ ಆದ್ಯತೆ ನೀಡಿದ ಮಠಗಳೇ ಮುಂದೆ ದಾಸೋಹದೆಡೆಗೆ ತಿರುಗಿದ್ದು, ಮತ್ತೊಂದು ಮೈಲಿಗಲ್ಲು.<br /> <br /> ಅದರಲ್ಲೂ ಲಿಂಗಾಯತ ಮಠಗಳ ಪ್ರಸಾದ ನಿಲಯಗಳಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡು, ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ಹೇಳಲು ಹೆಮ್ಮೆ ಅನಿಸುತ್ತದೆ. <br /> <br /> ಜಾತಿಯ ಮೀಸಲಾತಿಯು ಆರಂಭವಾದ ನಂತರ ಅದರ ಪ್ರಭಾವ ಹೆಚ್ಚಾಗಿ, ಅನುಕೂಲತೆ ದೊರೆಯದ ಜಾತಿಗಳ ವಿದ್ಯಾರ್ಥಿಗಳಿಗೆ ಶಿಕ್ಷಣವು ಅನಿವಾರ್ಯವಾಯಿತು. ಕಷ್ಟಪಟ್ಟು ಓದಿದಾಗ, ಉದ್ಯೋಗದ ಅವಕಾಶ. <br /> <br /> ಇತ್ತೀಚೆಗೆ ಒಂದು ಮುಂಜಾನೆ ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗ, ವಿನಯಭಾವದಿಂದ ನಮಸ್ಕರಿಸಿ, ಮಾತಿಗೆ ತೊಡಗಿದ ಒಬ್ಬ ವ್ಯಕ್ತಿ. ಮಾತಿನ ಸಂದರ್ಭದಲ್ಲಿ ತಾನು ದಾವಣಗೆರೆ ಜಯದೇವ ಪ್ರಸಾದ ನಿಲಯದಲ್ಲಿ ವ್ಯಾಸಂಗ ಮುಗಿಸಿದೆ.<br /> <br /> ಅಲ್ಲಿ ನೀವು ಸಂಘಟಿಸುವ ಶರಣಸಂಗಮ, ಶರಣಸಂಸ್ಕತಿ ಉತ್ಸವದಲ್ಲಿ ಭಾಗವಹಿಸುತ್ತಿದ್ದೆನೆಂದು ಹೇಳುತ್ತಿದ್ದಾಗ, ಆತನ ಮುಖದಲ್ಲಿ ಧನ್ಯತಾಭಾವ. ಈಗ ಮಸ್ಕತ್ನಲ್ಲಿ ಕೆಲಸ ಮಾಡುತ್ತಿದ್ದೇನೆಂದು ಪರಿಚಯಿಸಿಕೊಂಡರು. ಇದು ಒಂದು ಉದಾಹರಣೆಯಷ್ಟೇ. ನಾನು ಅಂದು ಐವತ್ತೆರಡು ಜನರೊಡಗೂಡಿ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸುತ್ತಿದ್ದೆ.<br /> <br /> ಒಂದು ಸಂಸ್ಥೆ ಕಟ್ಟಿ, ಎಷ್ಟು ವರ್ಷವಾಯಿತೆಂಬುದು ಅಮುಖ್ಯ. ಆ ಸಂಸ್ಥೆಯು ಜನಸೇವೆಯಲ್ಲಿ ಹೇಗೆ ತೊಡಗಿಸಿಕೊಂಡಿದೆಯೆಂಬುದು ಮುಖ್ಯವಾಗಬೇಕು. ಜನಪರ ಕಾಳಜಿಯಿಲ್ಲದ ಮಠಗಳು ಮತ್ತು ಸಂಸ್ಥೆಗಳು ಕಾಲಾನಂತರದಲ್ಲಿ ಜೀವಂತಿಕೆಯನ್ನು ಕಳಕೊಳ್ಳುತ್ತವೆ. ಒಂದು ಧಾರ್ಮಿಕ ಸಂಸ್ಥೆಯನ್ನು ಜೀವಂತಗೊಳಿಸುವ ವಿಧಾನವೇ ಜೀವಪರ ಕಾಳಜಿಯಾಗಿದೆ.<br /> <br /> ಅನ್ನ ದಾಸೋಹ ಮತ್ತು ಅಕ್ಷರ ದಾಸೋಹವನ್ನು ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸಿದ ಮಠಗಳು ಕಾಲಧರ್ಮಕ್ಕೆ ಸ್ಪಂದಿಸುತ್ತಿವೆ. ಕಾಲಧರ್ಮವೆಂದರೆ, ಸಮಕಾಲೀನಧರ್ಮ. ಕಾಲವು ಯಾವ ಕಾರ್ಯವನ್ನು ಬಯಸುತ್ತದೋ ಅದನ್ನು ನೆರವೇರಿಸುತ್ತ ಹೋಗುವುದೇ ತಮ್ಮ ಪಾಲಿನ ಧರ್ಮವೆಂದು ಅರಿತವರೆಲ್ಲ ಕಾಲಚಕ್ರಕ್ಕೆ ಸಿಲುಕಿ, ಕಣ್ಮರೆ ಆಗುವುದಿಲ್ಲ.<br /> <br /> ಇದರ ಹೊರತಾಗಿ ಅವರು ಎಲ್ಲ ಕಾಲಕ್ಕೂ ಅನುಗುಣವಾಗುತ್ತಾರೆ; ನೆನಪಿನಂಗಳದಲ್ಲಿ ಉಳಿಯುತ್ತಾರೆ. ಒಳ್ಳೆಯ ಕಾರ್ಯಕ್ಕೆ ಎಲ್ಲ ಕಾಲದಲ್ಲೂ ಟೀಕೆ-ಟಿಪ್ಪಣಿಗಳಿದ್ದೇ ಇರುತ್ತವೆ. ವಿನಾಕಾರಣ ಟೀಕಿಸುವವರು ಸಮಾಜಕ್ಕೆ ತಮ್ಮ ಕೊಡುಗೆಗಳೇನೆಂಬುದನ್ನು ಪರಾಮರ್ಶಿಸಬೇಕಾಗುತ್ತದೆ. <br /> <br /> ನಡೆಯುವವರೆಡುವುದು ಸಾಮಾನ್ಯ. ಸುಮ್ಮನೆ ಕುಳಿತವನು ಎಡವಲಾರ. ನಡೆದರೆ, ಎಡವಬೇಕಾಗುತ್ತದೆಂದು ಸುಮ್ಮನೆ ಕುಳಿತವರೇ ಬಹಳವೆನ್ನಿ. ಎಡವಿದರೂ ಅಡ್ಡಿಯಿಲ್ಲವೆಂದು ಒಂದಿಲ್ಲೊಂದು ಜನಸೇವೆಗೆ ತೊಡಗಿರುವವರು ಇದ್ದಾರೆ. <br /> <br /> ಅಂಥವರಿಂದಲೇ ಒಂದಷ್ಟು ನಿರೀಕ್ಷೆಗಳು. ಅವರೇ ಭವಿಷತ್ತಿನ ಭರವಸೆಗಳು. ಧರ್ಮಪ್ರಸಾರ, ಅನ್ನ ದಾಸೋಹ, ಅಕ್ಷರ ದಾಸೋಹ ಹಳೆಯದಾಯಿತು. ಪ್ರಸ್ತುತ ದಿನಮಾನಗಳಲ್ಲಿ ಸಮಾಜಸೇವಾ ಕ್ಷೇತ್ರಕ್ಕೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿರುವುದು ಒಂದು ಉತ್ತಮವಾದ ವಿದ್ಯಮಾನ.<br /> <br /> ಆಶ್ರಮವೆಂದರೆ, ಆಶ್ರಯ. ರೋಗಪೀಡಿತರು, ದೀನರು, ದುಃಖಿತರು, ಅನಾಥರು - ಅಬಲರು, ಅಲಕ್ಷಿತರು, ವೃದ್ಧರು, ಮತ್ತಿತರರತ್ತ ಅವುಗಳ ಕಾಳಜಿ. ಮೌಲ್ಯಗಳನ್ನು ಕುರಿತು ಮಾತನಾಡುವುದಕ್ಕಿಂತ ಮಾನವೀಯ ನೆಲೆಯಲ್ಲಿ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಮೌಲಿಕ ಜೀವನ.<br /> <br /> ಇದುವೇ ನೈತಿಕ ಹೊಣೆಗಾರಿಕೆ. ಶಿಕ್ಷಣವು ವ್ಯಾಪಾರೀಕರಣಕ್ಕೆ ಒಳಗಾಗುತ್ತಿದೆಯೆಂಬ ಕೂಗು ಕೇಳಿಬರುತ್ತಿರುವಾಗ, ಅದರ ಮುಖಾಂತರ ಶೇಖರಣೆ ಆಗುತ್ತಿರುವ ಹಣವನ್ನು ಸಾಮಾಜಿಕ ತುಡಿತಗಳಿಗೆ ಹರಿಯಬಿಟ್ಟು, ಒಂದಷ್ಟು ಧನ್ಯತೆಯನ್ನು ಸಂಪಾದಿಸಬೇಕಾಗಿದೆ.<br /> <br /> ಧನವು ಕೇಂದ್ರಿತವಾದ ಧಾರ್ಮಿಕ ಕೇಂದ್ರಗಳಲ್ಲಿ ಧನದಾಹ ಅಧಿಕಗೊಳ್ಳುತ್ತ ಹೋಗುತ್ತದೆ. ಅದು ಮುಂದಿನ ಎಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ. ಅತಿಆಸೆಯಿಂದ ಅವಮಾನ. ಹೀಗಾಗಬಾರದೆಂಬ ಭಾವನೆಯುಳ್ಳವರು ಸತ್ಕಾರ್ಯಗಳಿಗೆ ತಮ್ಮ ಸಂಪಾದನೆಯನ್ನು ಸಲ್ಲಿಸಿ ಸತ್ಕೀರ್ತಿಯನ್ನು ಸಂಪಾದಿಸುತ್ತಾರೆ.<br /> <br /> ಜನ್ಮ ಜನ್ಮಕ್ಕೆ ಹೋಗಲೀಯದೆ,<br /> `ಸೋಹಂ ಎಂದೆನಿಸದೆ ದಾಸೋಹಂ~ ಎಂದೆನಿಸಯ್ಯೊ.<br /> ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯೊ,<br /> ಕೂಡಲಸಂಗಮದೇವಾ, ನಿಮ್ಮ ಧರ್ಮ.<br /> <br /> ಮಾನವ ಜನಾಂಗದ ಸದಸ್ಯರು ನಾವೆಲ್ಲ ಒಂದೇ ಎಂಬ ಅರಿವು ಮೂಡಿದರೆ, ಜಾತಿ-ಮತದ ಜಾಗದಲ್ಲಿ ವಿಶ್ವಪಥ ರಾರಾಜಿಸಿತು. ಮತಾ(ಠಾ)ಧೀಶರಾಗುವುದಕ್ಕಿಂತ ಪಥಾಧೀಶರಾಗುವುದು ಮೇಲು. ಜಾತಿ-ಮತವು ಜನಾಂಗಗಳಲ್ಲಿ ಹಗೆಯನ್ನು ಹುಟ್ಟುಹಾಕುತ್ತದೆ.<br /> <br /> ಅದರ ತೀವ್ರತೆಯನ್ನು ತಗ್ಗಿಸುವ ಶಕ್ತಿಯು ಪಥಕ್ಕೆ. ಪಥಕ್ರಮಣವು ಯಾವ ಆಕ್ರಮಗಳಿಗೂ ಅವಕಾಶ ನೀಡುವುದಿಲ್ಲ. ಅಕ್ರಮಗಳು ನಡೆಯುವುದಿಲ್ಲ. ಪಥವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಅಂತಿಮವಾಗಿ ನಿಲ್ಲುವುದು ಅದೊಂದೇ.<br /> <br /> ಜಾತಿ ಜಾತಿಗಳ ನಡುವೆ ಸಂಘರ್ಷದ ತೀವ್ರತೆ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪಥದ ಮೇಲೆ ಸಾಗುವುದು ಇಂದಿನ ಅನಿವಾರ್ಯ. ಪಥವು ಸಾರ್ವಕಾಲಿಕವಾದುದು. ಮತವು ಸೀಮಿತವಾದುದು. ಮತದ ಮಡುವಿನಲ್ಲಿ ಕೊಚ್ಚಿ ಹೋಗುವುದಕ್ಕಿಂತ, ಪಥದ ಪರಿಕ್ರಮಣದಲ್ಲಿದ್ದರೆ ಪರಮಾನುಭಾವ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರ್ಮಿಕ ಕ್ಷೇತ್ರದಲ್ಲಿ ಸಾವಿರಾರು ಮಠಗಳು. ಮಠಗಳ ಹೊಣೆಗಾರಿಕೆಯೆಂದರೆ, ಧರ್ಮ ಪ್ರಸಾರ. ಸಮಾಜದಲ್ಲಿ ಧಾರ್ಮಿಕವಾದ ನಂಬುಗೆಯನ್ನು ಬೆಳೆಸುವ ದೃಷ್ಟಿಯಿಂದ ಇವುಗಳ ಸ್ಥಾಪನೆ. ಹಿಂದಿನಿಂದಲೂ ಈ ಕಾರ್ಯವನ್ನು ನೆರವೇರಿಸುತ್ತ ಬಂದಿದ್ದು, ಈಗಲೂ ಅದನ್ನೇ ಮುಂದುವರೆಸುತ್ತಿವೆ.<br /> <br /> ಹಲವಾರು ಜಾತಿಗೆ ಸೇರಿದ ಮಠಗಳಿವೆ. ತಮ್ಮದೇ ಆದ ತತ್ವ-ಸಿದ್ಧಾಂತಗಳು. ಕುಲಕ್ಕೊಂದು ಕಸುಬು. ಜಾತಿಗೊಬ್ಬ ಜಗದ್ಗುರು. ಗುರುವಿಗೊಂದು ಗುರುದಾನಿ. ಮಠಗಳ ಕಲ್ಪನೆಯು ಸಮಂಜಸವಾದುದು. ಅದರಂತೆ ಅವುಗಳು ನಿರ್ವಹಿಸುವ ಕಾರ್ಯವು ಅನನ್ಯವಾದುದು. ಕ್ರಮೇಣ ಅವುಗಳ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ. <br /> <br /> ಆರಂಭದಲ್ಲಿ ಧರ್ಮಪ್ರಸಾರ. ನಂತರದ ದಿನಗಳಲ್ಲಿ ಧರ್ಮವು ಜಾತಿ-ಮತದ ಸ್ವರೂಪವನ್ನು ತಾಳಿದೆ. ತಮ್ಮತಮ್ಮ ಮತ ಪ್ರಸಾರದಲ್ಲಿ ತೊಡಗಿವೆ. ಮತಗಳು ಮಠಗಳಾದವು. <br /> <br /> ಮಠಗಳು ಮತಗಳಾದವು. ಅವು ಈಗ ಮತ(ವೋಟ್)ಗಳ ಕೇಂದ್ರಗಳಾಗುತ್ತಿವೆಯೆಂಬ ಆಪಾದನೆ ಕೇಳಿಬರುತ್ತಿದೆ. ಅವರವರ ನಿರ್ಧಾರದಂತೆ ಅವರವರ ಭವಿಷ್ಯ. ಅದೇನೇಯಿರಲಿ, ಈ ನಡುವೆ ಪ್ರಗತಿದಾಯಕವಾದ ಕಾರ್ಯವನ್ನು ಮಠಗಳು ಕೈಗೊಂಡಿದ್ದಂತೂ ನಿಜ.<br /> <br /> ಕ್ರಿಶ್ಚಿಯನ್ ಮಿಷನರಿಗಳು ಆರೋಗ್ಯ(ಹೆಲ್ತ್) ಮತ್ತು ಶಿಕ್ಷಣ (ಎಜ್ಯುಕೇಷನ್) ಎರಡು ಅಂಶಗಳನ್ನು ಕೈಗೆತ್ತಿಕೊಂಡು ಜನರ ಬಳಿಗೆ ಬಂದವು. ಮತಾಂತರವನ್ನು ವಿರೋಧಿಸುವವರ ಮಕ್ಕಳು ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲಾ-ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿತು ಉನ್ನತ ಸ್ಥಾನ-ಮಾನಗಳನ್ನು ಗಿಟ್ಟಿಸಿಕೊಂಡಿರುವುದು ಆಶ್ಚರ್ಯಕರವಾದರೂ ಸತ್ಯವಾಗಿದೆ.<br /> <br /> ಕನ್ನಡಕ್ಕಾಗಿ ಹೋರಾಡುವವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಂತೆ. ಮೊದಮೊದಲು ಧರ್ಮಪ್ರಸಾರಕ್ಕೆ ಸೀಮಿತಗೊಳಿಸಿಕೊಂಡಿದ್ದ ಮಠಗಳು ಶಿಕ್ಷಣದೆಡೆಗೆ ದೃಷ್ಟಿ ಹಾಯಿಸಿದವು. ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಅಕ್ಷರ ದಾಸೋಹ(ಸಂಸ್ಕತಿ) ಬೆಳೆಸಿದವು. <br /> <br /> ಈ ಭಾವನೆಯಿಟ್ಟುಕೊಂಡೇ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಸಾದ ನಿಲಯಗಳನ್ನು ತೆರೆದದ್ದು, ಮಠಗಳ ಇತಿಹಾಸದಲ್ಲೇ ಅದ್ಭುತವಾದ ಹೆಜ್ಜೆ.<br /> <br /> ಮಠಗಳನ್ನು ವಿರೋಧಿಸುವ ಯಾವೊಬ್ಬ ಬಂಡಾಯಗಾರನೂ ಇದನ್ನು ಒಪ್ಪಿಕೊಳ್ಳಬಲ್ಲ. ಆರಂಭಿಕ ದಿನಗಳಲ್ಲಿ ಧರ್ಮ ಪ್ರಸಾರಕ್ಕೆ ಆದ್ಯತೆ ನೀಡಿದ ಮಠಗಳೇ ಮುಂದೆ ದಾಸೋಹದೆಡೆಗೆ ತಿರುಗಿದ್ದು, ಮತ್ತೊಂದು ಮೈಲಿಗಲ್ಲು.<br /> <br /> ಅದರಲ್ಲೂ ಲಿಂಗಾಯತ ಮಠಗಳ ಪ್ರಸಾದ ನಿಲಯಗಳಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡು, ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ಹೇಳಲು ಹೆಮ್ಮೆ ಅನಿಸುತ್ತದೆ. <br /> <br /> ಜಾತಿಯ ಮೀಸಲಾತಿಯು ಆರಂಭವಾದ ನಂತರ ಅದರ ಪ್ರಭಾವ ಹೆಚ್ಚಾಗಿ, ಅನುಕೂಲತೆ ದೊರೆಯದ ಜಾತಿಗಳ ವಿದ್ಯಾರ್ಥಿಗಳಿಗೆ ಶಿಕ್ಷಣವು ಅನಿವಾರ್ಯವಾಯಿತು. ಕಷ್ಟಪಟ್ಟು ಓದಿದಾಗ, ಉದ್ಯೋಗದ ಅವಕಾಶ. <br /> <br /> ಇತ್ತೀಚೆಗೆ ಒಂದು ಮುಂಜಾನೆ ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗ, ವಿನಯಭಾವದಿಂದ ನಮಸ್ಕರಿಸಿ, ಮಾತಿಗೆ ತೊಡಗಿದ ಒಬ್ಬ ವ್ಯಕ್ತಿ. ಮಾತಿನ ಸಂದರ್ಭದಲ್ಲಿ ತಾನು ದಾವಣಗೆರೆ ಜಯದೇವ ಪ್ರಸಾದ ನಿಲಯದಲ್ಲಿ ವ್ಯಾಸಂಗ ಮುಗಿಸಿದೆ.<br /> <br /> ಅಲ್ಲಿ ನೀವು ಸಂಘಟಿಸುವ ಶರಣಸಂಗಮ, ಶರಣಸಂಸ್ಕತಿ ಉತ್ಸವದಲ್ಲಿ ಭಾಗವಹಿಸುತ್ತಿದ್ದೆನೆಂದು ಹೇಳುತ್ತಿದ್ದಾಗ, ಆತನ ಮುಖದಲ್ಲಿ ಧನ್ಯತಾಭಾವ. ಈಗ ಮಸ್ಕತ್ನಲ್ಲಿ ಕೆಲಸ ಮಾಡುತ್ತಿದ್ದೇನೆಂದು ಪರಿಚಯಿಸಿಕೊಂಡರು. ಇದು ಒಂದು ಉದಾಹರಣೆಯಷ್ಟೇ. ನಾನು ಅಂದು ಐವತ್ತೆರಡು ಜನರೊಡಗೂಡಿ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸುತ್ತಿದ್ದೆ.<br /> <br /> ಒಂದು ಸಂಸ್ಥೆ ಕಟ್ಟಿ, ಎಷ್ಟು ವರ್ಷವಾಯಿತೆಂಬುದು ಅಮುಖ್ಯ. ಆ ಸಂಸ್ಥೆಯು ಜನಸೇವೆಯಲ್ಲಿ ಹೇಗೆ ತೊಡಗಿಸಿಕೊಂಡಿದೆಯೆಂಬುದು ಮುಖ್ಯವಾಗಬೇಕು. ಜನಪರ ಕಾಳಜಿಯಿಲ್ಲದ ಮಠಗಳು ಮತ್ತು ಸಂಸ್ಥೆಗಳು ಕಾಲಾನಂತರದಲ್ಲಿ ಜೀವಂತಿಕೆಯನ್ನು ಕಳಕೊಳ್ಳುತ್ತವೆ. ಒಂದು ಧಾರ್ಮಿಕ ಸಂಸ್ಥೆಯನ್ನು ಜೀವಂತಗೊಳಿಸುವ ವಿಧಾನವೇ ಜೀವಪರ ಕಾಳಜಿಯಾಗಿದೆ.<br /> <br /> ಅನ್ನ ದಾಸೋಹ ಮತ್ತು ಅಕ್ಷರ ದಾಸೋಹವನ್ನು ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸಿದ ಮಠಗಳು ಕಾಲಧರ್ಮಕ್ಕೆ ಸ್ಪಂದಿಸುತ್ತಿವೆ. ಕಾಲಧರ್ಮವೆಂದರೆ, ಸಮಕಾಲೀನಧರ್ಮ. ಕಾಲವು ಯಾವ ಕಾರ್ಯವನ್ನು ಬಯಸುತ್ತದೋ ಅದನ್ನು ನೆರವೇರಿಸುತ್ತ ಹೋಗುವುದೇ ತಮ್ಮ ಪಾಲಿನ ಧರ್ಮವೆಂದು ಅರಿತವರೆಲ್ಲ ಕಾಲಚಕ್ರಕ್ಕೆ ಸಿಲುಕಿ, ಕಣ್ಮರೆ ಆಗುವುದಿಲ್ಲ.<br /> <br /> ಇದರ ಹೊರತಾಗಿ ಅವರು ಎಲ್ಲ ಕಾಲಕ್ಕೂ ಅನುಗುಣವಾಗುತ್ತಾರೆ; ನೆನಪಿನಂಗಳದಲ್ಲಿ ಉಳಿಯುತ್ತಾರೆ. ಒಳ್ಳೆಯ ಕಾರ್ಯಕ್ಕೆ ಎಲ್ಲ ಕಾಲದಲ್ಲೂ ಟೀಕೆ-ಟಿಪ್ಪಣಿಗಳಿದ್ದೇ ಇರುತ್ತವೆ. ವಿನಾಕಾರಣ ಟೀಕಿಸುವವರು ಸಮಾಜಕ್ಕೆ ತಮ್ಮ ಕೊಡುಗೆಗಳೇನೆಂಬುದನ್ನು ಪರಾಮರ್ಶಿಸಬೇಕಾಗುತ್ತದೆ. <br /> <br /> ನಡೆಯುವವರೆಡುವುದು ಸಾಮಾನ್ಯ. ಸುಮ್ಮನೆ ಕುಳಿತವನು ಎಡವಲಾರ. ನಡೆದರೆ, ಎಡವಬೇಕಾಗುತ್ತದೆಂದು ಸುಮ್ಮನೆ ಕುಳಿತವರೇ ಬಹಳವೆನ್ನಿ. ಎಡವಿದರೂ ಅಡ್ಡಿಯಿಲ್ಲವೆಂದು ಒಂದಿಲ್ಲೊಂದು ಜನಸೇವೆಗೆ ತೊಡಗಿರುವವರು ಇದ್ದಾರೆ. <br /> <br /> ಅಂಥವರಿಂದಲೇ ಒಂದಷ್ಟು ನಿರೀಕ್ಷೆಗಳು. ಅವರೇ ಭವಿಷತ್ತಿನ ಭರವಸೆಗಳು. ಧರ್ಮಪ್ರಸಾರ, ಅನ್ನ ದಾಸೋಹ, ಅಕ್ಷರ ದಾಸೋಹ ಹಳೆಯದಾಯಿತು. ಪ್ರಸ್ತುತ ದಿನಮಾನಗಳಲ್ಲಿ ಸಮಾಜಸೇವಾ ಕ್ಷೇತ್ರಕ್ಕೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿರುವುದು ಒಂದು ಉತ್ತಮವಾದ ವಿದ್ಯಮಾನ.<br /> <br /> ಆಶ್ರಮವೆಂದರೆ, ಆಶ್ರಯ. ರೋಗಪೀಡಿತರು, ದೀನರು, ದುಃಖಿತರು, ಅನಾಥರು - ಅಬಲರು, ಅಲಕ್ಷಿತರು, ವೃದ್ಧರು, ಮತ್ತಿತರರತ್ತ ಅವುಗಳ ಕಾಳಜಿ. ಮೌಲ್ಯಗಳನ್ನು ಕುರಿತು ಮಾತನಾಡುವುದಕ್ಕಿಂತ ಮಾನವೀಯ ನೆಲೆಯಲ್ಲಿ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಮೌಲಿಕ ಜೀವನ.<br /> <br /> ಇದುವೇ ನೈತಿಕ ಹೊಣೆಗಾರಿಕೆ. ಶಿಕ್ಷಣವು ವ್ಯಾಪಾರೀಕರಣಕ್ಕೆ ಒಳಗಾಗುತ್ತಿದೆಯೆಂಬ ಕೂಗು ಕೇಳಿಬರುತ್ತಿರುವಾಗ, ಅದರ ಮುಖಾಂತರ ಶೇಖರಣೆ ಆಗುತ್ತಿರುವ ಹಣವನ್ನು ಸಾಮಾಜಿಕ ತುಡಿತಗಳಿಗೆ ಹರಿಯಬಿಟ್ಟು, ಒಂದಷ್ಟು ಧನ್ಯತೆಯನ್ನು ಸಂಪಾದಿಸಬೇಕಾಗಿದೆ.<br /> <br /> ಧನವು ಕೇಂದ್ರಿತವಾದ ಧಾರ್ಮಿಕ ಕೇಂದ್ರಗಳಲ್ಲಿ ಧನದಾಹ ಅಧಿಕಗೊಳ್ಳುತ್ತ ಹೋಗುತ್ತದೆ. ಅದು ಮುಂದಿನ ಎಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ. ಅತಿಆಸೆಯಿಂದ ಅವಮಾನ. ಹೀಗಾಗಬಾರದೆಂಬ ಭಾವನೆಯುಳ್ಳವರು ಸತ್ಕಾರ್ಯಗಳಿಗೆ ತಮ್ಮ ಸಂಪಾದನೆಯನ್ನು ಸಲ್ಲಿಸಿ ಸತ್ಕೀರ್ತಿಯನ್ನು ಸಂಪಾದಿಸುತ್ತಾರೆ.<br /> <br /> ಜನ್ಮ ಜನ್ಮಕ್ಕೆ ಹೋಗಲೀಯದೆ,<br /> `ಸೋಹಂ ಎಂದೆನಿಸದೆ ದಾಸೋಹಂ~ ಎಂದೆನಿಸಯ್ಯೊ.<br /> ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯೊ,<br /> ಕೂಡಲಸಂಗಮದೇವಾ, ನಿಮ್ಮ ಧರ್ಮ.<br /> <br /> ಮಾನವ ಜನಾಂಗದ ಸದಸ್ಯರು ನಾವೆಲ್ಲ ಒಂದೇ ಎಂಬ ಅರಿವು ಮೂಡಿದರೆ, ಜಾತಿ-ಮತದ ಜಾಗದಲ್ಲಿ ವಿಶ್ವಪಥ ರಾರಾಜಿಸಿತು. ಮತಾ(ಠಾ)ಧೀಶರಾಗುವುದಕ್ಕಿಂತ ಪಥಾಧೀಶರಾಗುವುದು ಮೇಲು. ಜಾತಿ-ಮತವು ಜನಾಂಗಗಳಲ್ಲಿ ಹಗೆಯನ್ನು ಹುಟ್ಟುಹಾಕುತ್ತದೆ.<br /> <br /> ಅದರ ತೀವ್ರತೆಯನ್ನು ತಗ್ಗಿಸುವ ಶಕ್ತಿಯು ಪಥಕ್ಕೆ. ಪಥಕ್ರಮಣವು ಯಾವ ಆಕ್ರಮಗಳಿಗೂ ಅವಕಾಶ ನೀಡುವುದಿಲ್ಲ. ಅಕ್ರಮಗಳು ನಡೆಯುವುದಿಲ್ಲ. ಪಥವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಅಂತಿಮವಾಗಿ ನಿಲ್ಲುವುದು ಅದೊಂದೇ.<br /> <br /> ಜಾತಿ ಜಾತಿಗಳ ನಡುವೆ ಸಂಘರ್ಷದ ತೀವ್ರತೆ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪಥದ ಮೇಲೆ ಸಾಗುವುದು ಇಂದಿನ ಅನಿವಾರ್ಯ. ಪಥವು ಸಾರ್ವಕಾಲಿಕವಾದುದು. ಮತವು ಸೀಮಿತವಾದುದು. ಮತದ ಮಡುವಿನಲ್ಲಿ ಕೊಚ್ಚಿ ಹೋಗುವುದಕ್ಕಿಂತ, ಪಥದ ಪರಿಕ್ರಮಣದಲ್ಲಿದ್ದರೆ ಪರಮಾನುಭಾವ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>