ವಿಟಿಯು ಅವ್ಯವಹಾರ ಹೈಕೋರ್ಟ್ನಿಂದ ಅರ್ಜಿ ವಜಾ
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳಲ್ಲಿ 2010ರ ಜೂನ್/ಜುಲೈ ತಿಂಗಳಿನಲ್ಲಿ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ಸರ್ಕಾರವು ಸಮಿತಿ ರಚಿಸಿರುವುದನ್ನು ಪ್ರಶ್ನಿಸಿ ವಿವಿಯ ವಿಶೇಷ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರ ನೇತೃತ್ವದಲ್ಲಿ ಕಳೆದ ಜ.28ರಂದು ರಚನೆಗೊಂಡಿರುವ ಈ ಸಮಿತಿಯನ್ನು ರದ್ದು ಮಾಡುವಂತೆ ವಿಶೇಷ ಅಧಿಕಾರಿ ಎ.ಯೋಗಾನಂದ ಅರ್ಜಿ ಸಲ್ಲಿಸಿದ್ದರು.
ವಿಶ್ವವಿದ್ಯಾಲಯ ಕಾಯ್ದೆಯ 9ನೇ ಕಲಮಿನ ಪ್ರಕಾರ, ಈ ರೀತಿ ಸಮಿತಿ ರಚನೆ ಮಾಡುವ ಪೂರ್ವದಲ್ಲಿ ವಿವಿಗೆ ಷೋಕಾಸ್ ನೋಟಿಸ್ ಜಾರಿ ಮಾಡಬೇಕು. ಆದರೆ ಈ ನಿಯಮ ಗಾಳಿಗೆ ತೂರಲಾಗಿದೆ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಆದರೆ ಈ ಅರ್ಜಿಗೆ ಸರ್ಕಾರದ ಪರ ವಕೀಲರಾದ ಎಂ.ಸಿ.ನಾಗಶ್ರಿ ಅವರು ಆಕ್ಷೇಪಿಸಿದ್ದರು. ನಿಯಮ ಪ್ರಕಾರ, ಸರ್ಕಾರದ ಆದೇಶವನ್ನು ಪ್ರಶ್ನಿಸುವ ಅಧಿಕಾರ ವಿಶೇಷ ಅಧಿಕಾರಿಗೆ ಇಲ್ಲ. ವಿವಿಯ ರಿಜಿಸ್ಟ್ರಾರ್ ಅವರಿಗೆ ಮಾತ್ರ ಅಧಿಕಾರವಿದೆ. ರಿಜಿಸ್ಟ್ರಾರ್ ಅವರು ತಮ್ಮ ಅಧಿಕಾರವನ್ನು ಹಸ್ತಾಂತರಿಸುವುದು ನಿಯಮ ಉಲ್ಲಂಘನೆ ಎಂದು ಅವರು ವಾದಿಸಿದ್ದರು. ಇದನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾನ್ಯ ಮಾಡಿದ್ದಾರೆ.
‘ಲಿಂಗಾಯತ ಸಮುದಾಯ ಪ್ರತ್ಯೇಕಿಸಿ’
ಲಿಂಗಾಯತ ಸಮುದಾಯವನ್ನು ಹಿಂದುಯೇತರ, ಸ್ವತಂತ್ರ ಹಾಗೂ ಪ್ರಗತಿಪರ ಜನಾಂಗವೆಂದು ಪರಿಗಣಿ ಸಲು ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ನಗರದ ವೀರೇಶ ಗಂಗಾಧರ ಹಾಲಕ್ಕಿ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಗಣತಿಯ ನಿರ್ದೇಶಕರು, ಆಯುಕ್ತರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದೆ. ವಿಚಾರಣೆ ಮುಂದೂಡಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.