<p>ಕಳೆದ ಡಿಸೆಂಬರ್ ತಿಂಗಳಲ್ಲಿ ತರಗತಿ ಬಹಿಷ್ಕರಿಸಿದ್ದ ಪಿಯು ಕಾಲೇಜುಗಳ ಶಿಕ್ಷಕರು ಈಗ ಮೌಲ್ಯಮಾಪನ ಬಹಿಷ್ಕರಿಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಾರೆ. <br /> <br /> ತಮ್ಮ ಬೇಡಿಕೆಗೆ ಲಕ್ಷಾಂತರ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕನ್ನು ಒತ್ತೆಯಾಗಿರಿಸಿಕೊಂಡು ಸರ್ಕಾರ ಮಣಿಯುವಂತೆ ಮಾಡುವ ಈ ವರ್ತನೆ ಬ್ಲಾಕ್ಮೇಲ್ಗಿಂತ ಭಿನ್ನವಲ್ಲ. <br /> <br /> ಪರೀಕ್ಷೆ ಫಲಿತಾಂಶ ನಿರ್ದಿಷ್ಟ ಕಾಲಮಿತಿಯಲ್ಲಿ ಪ್ರಕಟವಾಗುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಕೊಂಡು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವ ಶಿಕ್ಷಕರ ದುಷ್ಟ ತಂತ್ರವನ್ನು ಸರ್ಕಾರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಕ್ರಮಕ್ಕೆ ಮುಂದಾಗಬೇಕು.<br /> <br /> ವೇತನ ಶ್ರೇಣಿಯಲ್ಲಿ ತಾರತಮ್ಯವಿದ್ದರೆ ಅದನ್ನು ಪಡೆಯುವುದಕ್ಕೆ ಚಳವಳಿಯ ಮಾರ್ಗ ಹಿಡಿಯುವುದು ತಪ್ಪೇನೂ ಅಲ್ಲ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗುರಾಣಿಯಾಗಿ ಹಿಡಿದುಕೊಂಡಂತೆ ಮೌಲ್ಯಮಾಪನ ಬಹಿಷ್ಕಾರ ಹಾಕುವುದು ಶಿಕ್ಷಕ ವೃತ್ತಿಗೆ ಅಪಚಾರ, ಕರ್ತವ್ಯಚ್ಯುತಿ. <br /> <br /> ಬೋಧನೆಯ ಜೊತೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಶಿಕ್ಷಕರ ಕರ್ತವ್ಯದ ಭಾಗ; ಅದರಲ್ಲಿ ಚ್ಯುತಿಯಾದರೆ ಕ್ರಮಕ್ಕೆ ಆಸ್ಪದವಿರುವಂತೆ ಸರ್ಕಾರ ನಿಯಮಗಳನ್ನು ರೂಪಿಸಬೇಕು. ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರದಿಂದ ಪರೀಕ್ಷಾ ಫಲಿತಾಂಶ ಪ್ರಕಟಣೆ ಅನಿಶ್ಚಿತವಾಗಿದೆ. <br /> <br /> ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅವಕಾಶ ಗಳಿಸುವ ದೃಷ್ಟಿಯಿಂದ ಪಿಯು ಫಲಿತಾಂಶ ತ್ವರಿತವಾಗಿ ಪ್ರಕಟವಾಗುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಸರ್ಕಾರ ಕೂಡಲೇ ಈ ಬಹಿಷ್ಕಾರದ ತೆರವಿಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು. <br /> <br /> ಕಳೆದ ಒಂದು ವರ್ಷದಿಂದ ಪಿಯು ಶಿಕ್ಷಕರು ಆಗಾಗ ಮುಷ್ಕರ ನಡೆಸಿದ್ದಾರೆ. ಪ್ರತಿ ಸಲವೂ ಸರ್ಕಾರ ಭರವಸೆಗಳನ್ನು ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದೆ. ಆದರೆ, ಅವೆಲ್ಲ ತಾತ್ಕಾಲಿಕ ಉಪಶಮನದಂತೆ ಆಗಿದೆಯೇ ವಿನಾ ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. <br /> <br /> ಶಿಕ್ಷಕರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿರುವುದು ಸರ್ಕಾರದ ಹೊಣೆಗೇಡಿತನ. ಆದರೆ, ಸರ್ಕಾರದ ಲೋಪಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯೇ ಎಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಲಿ.<br /> <br /> ಪಿಯು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಮೊದಲು ಈಚಿನ ಹತ್ತು ವರ್ಷಗಳಲ್ಲಿ 2005ರಿಂದ 2007ರ ವರೆಗಿನ ಮೂರು ವರ್ಷಗಳನ್ನು ಬಿಟ್ಟರೆ ಯಾವ ವರ್ಷದಲ್ಲೂ ಎರಡನೇ ಪಿಯು ಪರೀಕ್ಷೆಯ ಫಲಿತಾಂಶ ಶೇ 50ರಷ್ಟನ್ನೂ ಮೀರಿಲ್ಲವೆಂಬ ಸಂಗತಿಯನ್ನೂ ಈ ಶಿಕ್ಷಕ ಸಂಘಟನೆಗಳ ಗಮನಕ್ಕೆ ತರಬೇಕು. ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ ಕೊರತೆ ಇಲ್ಲದಿದ್ದರೂ ಕಳಪೆ ಫಲಿತಾಂಶ ಬರುತ್ತಿರುವುದಕ್ಕೆ ಶಿಕ್ಷಕರೂ ಜವಾಬ್ದಾರರು ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು. <br /> <br /> ಸದ್ಯ ಉದ್ಭವಿಸಿದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ದಿಟ್ಟ ಮಾರ್ಗ ಅನುಸರಿಸಬೇಕು. ಶಿಕ್ಷಕರ ಸಾಂಘಿಕ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೆ ಶಿಸ್ತುಕ್ರಮಕ್ಕೆ ಮುಂದಾಗಲಿ. ಪಿಯು ಶಿಕ್ಷಕ ಕರ್ತವ್ಯ ನಿರ್ವಹಿಸಬಲ್ಲ ಸಾವಿರಾರು ನಿರುದ್ಯೋಗಿ ಸ್ನಾತಕೋತ್ತರ ಪದವೀಧರರು ಅವಕಾಶಕ್ಕಾಗಿ ಕಾದಿರುವುದನ್ನೂ ಲಕ್ಷ್ಯದಲ್ಲಿಡಲಿ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ಡಿಸೆಂಬರ್ ತಿಂಗಳಲ್ಲಿ ತರಗತಿ ಬಹಿಷ್ಕರಿಸಿದ್ದ ಪಿಯು ಕಾಲೇಜುಗಳ ಶಿಕ್ಷಕರು ಈಗ ಮೌಲ್ಯಮಾಪನ ಬಹಿಷ್ಕರಿಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಾರೆ. <br /> <br /> ತಮ್ಮ ಬೇಡಿಕೆಗೆ ಲಕ್ಷಾಂತರ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕನ್ನು ಒತ್ತೆಯಾಗಿರಿಸಿಕೊಂಡು ಸರ್ಕಾರ ಮಣಿಯುವಂತೆ ಮಾಡುವ ಈ ವರ್ತನೆ ಬ್ಲಾಕ್ಮೇಲ್ಗಿಂತ ಭಿನ್ನವಲ್ಲ. <br /> <br /> ಪರೀಕ್ಷೆ ಫಲಿತಾಂಶ ನಿರ್ದಿಷ್ಟ ಕಾಲಮಿತಿಯಲ್ಲಿ ಪ್ರಕಟವಾಗುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಕೊಂಡು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವ ಶಿಕ್ಷಕರ ದುಷ್ಟ ತಂತ್ರವನ್ನು ಸರ್ಕಾರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಕ್ರಮಕ್ಕೆ ಮುಂದಾಗಬೇಕು.<br /> <br /> ವೇತನ ಶ್ರೇಣಿಯಲ್ಲಿ ತಾರತಮ್ಯವಿದ್ದರೆ ಅದನ್ನು ಪಡೆಯುವುದಕ್ಕೆ ಚಳವಳಿಯ ಮಾರ್ಗ ಹಿಡಿಯುವುದು ತಪ್ಪೇನೂ ಅಲ್ಲ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗುರಾಣಿಯಾಗಿ ಹಿಡಿದುಕೊಂಡಂತೆ ಮೌಲ್ಯಮಾಪನ ಬಹಿಷ್ಕಾರ ಹಾಕುವುದು ಶಿಕ್ಷಕ ವೃತ್ತಿಗೆ ಅಪಚಾರ, ಕರ್ತವ್ಯಚ್ಯುತಿ. <br /> <br /> ಬೋಧನೆಯ ಜೊತೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಶಿಕ್ಷಕರ ಕರ್ತವ್ಯದ ಭಾಗ; ಅದರಲ್ಲಿ ಚ್ಯುತಿಯಾದರೆ ಕ್ರಮಕ್ಕೆ ಆಸ್ಪದವಿರುವಂತೆ ಸರ್ಕಾರ ನಿಯಮಗಳನ್ನು ರೂಪಿಸಬೇಕು. ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರದಿಂದ ಪರೀಕ್ಷಾ ಫಲಿತಾಂಶ ಪ್ರಕಟಣೆ ಅನಿಶ್ಚಿತವಾಗಿದೆ. <br /> <br /> ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅವಕಾಶ ಗಳಿಸುವ ದೃಷ್ಟಿಯಿಂದ ಪಿಯು ಫಲಿತಾಂಶ ತ್ವರಿತವಾಗಿ ಪ್ರಕಟವಾಗುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಸರ್ಕಾರ ಕೂಡಲೇ ಈ ಬಹಿಷ್ಕಾರದ ತೆರವಿಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು. <br /> <br /> ಕಳೆದ ಒಂದು ವರ್ಷದಿಂದ ಪಿಯು ಶಿಕ್ಷಕರು ಆಗಾಗ ಮುಷ್ಕರ ನಡೆಸಿದ್ದಾರೆ. ಪ್ರತಿ ಸಲವೂ ಸರ್ಕಾರ ಭರವಸೆಗಳನ್ನು ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದೆ. ಆದರೆ, ಅವೆಲ್ಲ ತಾತ್ಕಾಲಿಕ ಉಪಶಮನದಂತೆ ಆಗಿದೆಯೇ ವಿನಾ ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. <br /> <br /> ಶಿಕ್ಷಕರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿರುವುದು ಸರ್ಕಾರದ ಹೊಣೆಗೇಡಿತನ. ಆದರೆ, ಸರ್ಕಾರದ ಲೋಪಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯೇ ಎಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಲಿ.<br /> <br /> ಪಿಯು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಮೊದಲು ಈಚಿನ ಹತ್ತು ವರ್ಷಗಳಲ್ಲಿ 2005ರಿಂದ 2007ರ ವರೆಗಿನ ಮೂರು ವರ್ಷಗಳನ್ನು ಬಿಟ್ಟರೆ ಯಾವ ವರ್ಷದಲ್ಲೂ ಎರಡನೇ ಪಿಯು ಪರೀಕ್ಷೆಯ ಫಲಿತಾಂಶ ಶೇ 50ರಷ್ಟನ್ನೂ ಮೀರಿಲ್ಲವೆಂಬ ಸಂಗತಿಯನ್ನೂ ಈ ಶಿಕ್ಷಕ ಸಂಘಟನೆಗಳ ಗಮನಕ್ಕೆ ತರಬೇಕು. ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ ಕೊರತೆ ಇಲ್ಲದಿದ್ದರೂ ಕಳಪೆ ಫಲಿತಾಂಶ ಬರುತ್ತಿರುವುದಕ್ಕೆ ಶಿಕ್ಷಕರೂ ಜವಾಬ್ದಾರರು ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು. <br /> <br /> ಸದ್ಯ ಉದ್ಭವಿಸಿದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ದಿಟ್ಟ ಮಾರ್ಗ ಅನುಸರಿಸಬೇಕು. ಶಿಕ್ಷಕರ ಸಾಂಘಿಕ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೆ ಶಿಸ್ತುಕ್ರಮಕ್ಕೆ ಮುಂದಾಗಲಿ. ಪಿಯು ಶಿಕ್ಷಕ ಕರ್ತವ್ಯ ನಿರ್ವಹಿಸಬಲ್ಲ ಸಾವಿರಾರು ನಿರುದ್ಯೋಗಿ ಸ್ನಾತಕೋತ್ತರ ಪದವೀಧರರು ಅವಕಾಶಕ್ಕಾಗಿ ಕಾದಿರುವುದನ್ನೂ ಲಕ್ಷ್ಯದಲ್ಲಿಡಲಿ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>