ಶಾಲೆಗೆ ಬೀಗ ಹಾಕಿ ಪ್ರತಿಭಟನೆ
ಗೌರಿಬಿದನೂರು: ತಾಲ್ಲೂಕಿನ ಎಚ್.ನಾಗಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ತರಗತಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಲೆಯ ಶಿಕ್ಷಕರು ಉತ್ತಮವಾಗಿ ಪಾಠ ಮಾಡುತ್ತಿಲ್ಲ. ಕೇವಲ ತಮ್ಮ ಒಳ ಜಗಳದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಶಾಲೆಯ ಅವಧಿಯಲ್ಲಿ ಗಂಟೆಗಟ್ಟಲೇ ಮೊಬೈಲ್ನಲ್ಲಿ ಮಾತನಾಡುತ್ತಾರೆ ಎಂದು ದೂರಿದರು. ತರಗತಿಗೆ ಒಬ್ಬ ವಿದ್ಯಾರ್ಥಿಯನ್ನು ಮೇಲ್ವಿಚಾರಣೆಗೆ ಬಿಟ್ಟು ಹರಟೆ ಹೊಡೆಯುತ್ತಾರೆ. ಶಾಲಾ ಸಮಯದಲ್ಲಿ ಮಕ್ಕಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ಅಂಗಡಿಗಳಿಗೆ ಕಳುಹಿಸುತ್ತಾರೆ. ಶಿಸ್ತು ಎನ್ನುವುದೇ ಇಲ್ಲ.
ಶ್ರೀಮಂತರ, ಶಿಕ್ಷಕರ ಮಕ್ಕಳು ಹತ್ತಿರದ ಪಟ್ಟಣದ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಹೆಚ್ಚಾಗಿ ಬಡ ಹಾಗೂ ಮಧ್ಯಮ ವರ್ಗದವರ ಮಕ್ಕಳು ಉತ್ತಮ ಪಾಠದಿಂದ ವಂಚಿತರಾಗಬೇಕೆ ? ಎಂದು ಆಕ್ರೋಶದಿಂದ ನುಡಿದರು ಗ್ರಾಮದ ಸಂಜೀವರಾಯಪ್ಪ. ಈ ಶಾಲೆಯಲ್ಲಿ ಐದು ಜನ ಶಿಕ್ಷಕಿಯರು, ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ.
ಇಲ್ಲಿ ಹೆಸರಿಗೆ ಮಾತ್ರ ಶಿಕ್ಷಕರಿದ್ದಾರೆ. ಈಚೆಗೆ ಈ ಶಾಲೆಯಿಂದ ಕಲಿತು ಬರುವ ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಅನುತ್ತೀರ್ಣವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಶಾಲೆಯ ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಬೇಕು. ವರ್ಗಾವಣೆ ಮಾಡುವವರೆಗೂ ಶಾಲೆಯ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಪ್ಪ, ಬಿಆರ್ಸಿ ರಾಮಕೃಷ್ಣಪ್ಪ ಚುನಾವಣೆ ನಂತರ ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.