ಶಿಕ್ಷಣ ಮಾಧ್ಯಮ: ‘ಸುಪ್ರೀಂ’ ತರಾಟೆ

ನವದೆಹಲಿ: ಮಗುವಿನ ಮಾತೃಭಾಷೆ ನಿರ್ಧರಿಸುವವರು ಯಾರು? ಮಾತೃಭಾಷೆಗೂ ಮತ್ತು ಶಿಕ್ಷಣ ಗುಣಮಟ್ಟಕ್ಕೂ ಇರುವ ಸಂಬಂಧವೇನು? ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳಿವು. ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಇಲ್ಲವೆ ಮಾತೃಭಾಷೆ ಶಿಕ್ಷಣ ಮಾಧ್ಯಮ ಕಡ್ಡಾಯಗೊಳಿಸಿ 1994ರಲ್ಲಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಸಮಯದಲ್ಲಿ ನ್ಯಾ.ಆರ್.ಎಂ. ಲೋಧಾ ನೇತೃತ್ವದ ಸಂವಿಧಾನ ಪೀಠವು ಹಲವು ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿತು.
ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆ ಮಾಧ್ಯಮ ಕಡ್ಡಾಯವಾದರೆ ಅಲ್ಪಸಂಖ್ಯಾತ ಸಮುದಾಯದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗುವುದಿಲ್ಲವೇ? ಇದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಕೇಳಿತು.
ಮಾತೃಭಾಷೆಯಲ್ಲಿ ಮಗು ಬಹು ಬೇಗನೆ ಕಲಿ ಯುತ್ತದೆ ನಿಜ. ಆದರೆ, ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಏನು ಮಾಡಿದೆ? ಮನೆಯಲ್ಲಿ ತೆಲುಗು ಮಾತನಾಡುವ ಮಗುವಿಗೆ ಕನ್ನಡದಲ್ಲಿ ಕಲಿಯಬೇಕು ಎಂದರೆ ಖಂಡಿತಾ ಅದು ಹಿಂದೆ ಬೀಳುತ್ತದೆ ಎಂದು ನ್ಯಾಯಪೀಠ ಹೇಳಿತು.
ಉತ್ತರಕ್ಕೆ ತೃಪ್ತಿಯಾಗದ ಪೀಠ: ರಾಜ್ಯದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ರವಿ-ವರ್ಮ ಕುಮಾರ್, ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದರು. ಅವರ ಉತ್ತರದಿಂದ ನ್ಯಾಯಾಲಯಕ್ಕೆ ತೃಪ್ತಿಯಾದಂತೆ ಕಾಣಲಿಲ್ಲ.
ಸಂವಿಧಾನದ ಕಲಂ 350 (ಎ) ಅನ್ವಯ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಮಾಧ್ಯಮ ತೀರ್ಮಾನಿಸುವ ಅಧಿಕಾರವಿದೆ ಎಂದು ರವಿವರ್ಮಕುಮಾರ್ ಪ್ರತಿಪಾದಿಸಿದರು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಕಲಮಿನ ವ್ಯಾಪ್ತಿ ಮತ್ತು ಮಹತ್ವವನ್ನು ಸರಿಯಾಗಿ ಅರ್ಥೈಸುವಂತೆ ಸೂಚಿಸಿತು.
ಸರ್ಕಾರ ಭಾಷಾ ಅಲ್ಪಸಂಖ್ಯಾತರ ಪರ ಕೆಲಸ ಮಾಡುವ ಕುರಿತು ಸಂವಿಧಾನದ 350 (ಎ)ಕಲಂ ಹೇಳುತ್ತದೆ. ಅದನ್ನು ಬಳಸಿಕೊಂಡು ಸಂವಿಧಾನ ಕಲಂ 29 ಮತ್ತು 30ರಲ್ಲಿ ಅವರಿಗೆ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸಲು ಅಥವಾ ಹತ್ತಿಕ್ಕಲು ಸಾಧ್ಯವೇ ಎಂದು ನ್ಯಾಯಪೀಠ ಕೇಳಿತು.
ಎಲ್ಲಿದೆ ಅಧಿಕಾರ: ‘ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃಭಾಷೆ ಮಾಧ್ಯಮ ಕಡ್ಡಾಯಗೊಳಿಸುವ ಆದೇಶ ಹೊರಡಿಸಲು ನಿಮಗೆ ಅಧಿಕಾರ ಎಲ್ಲಿಂದ ಬಂತು?’ ಎಂದು ಸಂವಿಧಾನ ಪೀಠ ಕೇಳಿತು. ಇಡೀ ದಿನ ನಡೆದ ವಿಚಾರಣೆಯ ವೇಳೆ ನ್ಯಾಯಾಲಯ ಜಾಗತಿಕವಾಗಿ ಆಗುತ್ತಿರುವ ಬೆಳವಣಿಗೆಗಳು, ಪೋಷಕರು ತಮ್ಮ ಮಕ್ಕಳು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಬೇಕೆಂದು ಹಾತೊರೆಯುತ್ತಿ ರುವ ಬಗ್ಗೆ ನೆನಪು ಮಾಡಿಕೊಟ್ಟಿತು.
ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಿರುವ ಜನ ವಿವಿಧ ಕ್ಷೇತ್ರಗಳಲ್ಲಿ ಉಳಿದವರಿಗಿಂತ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಮನವರಿಕೆ ಮಾಡಿಕೊಡಲು ಮುಂದಾದರು.
ಬಲವಂತದ ಹೇರಿಕೆ ಬೇಡ: ಸದ್ಯದ ಪರಿಸ್ಥಿತಿಯಲ್ಲಿ ಮಗುವಿನ ಶಿಕ್ಷಣ ಮಾಧ್ಯಮ ತೀರ್ಮಾನಿಸುವ ಅಧಿಕಾರವನ್ನು ಪೋಷಕರಿಗೆ ಬಿಡುವುದು ಸೂಕ್ತ. ಸರ್ಕಾರ ಬಲವಂತವಾಗಿ ಹೇರುವ ಕೆಲಸ ಮಾಡ ಬಾರದು ಎಂದು ಪೀಠ ತಿಳಿಸಿತು.
ನ್ಯಾ. ಎ.ಕೆ. ಪಟ್ನಾಯಕ್, ನ್ಯಾ. ದೀಪಕ್ ಮಿಶ್ರ, ನ್ಯಾ. ಎಸ್. ಮುಖ್ಯೋಪಾಧ್ಯಾಯ ಮತ್ತು ನ್ಯಾ. ಎಫ್.ಎಂ.ಐ ಖಲೀಫುಲ್ಲಾ ಅವರನ್ನು ಒಳಗೊಂಡಿರುವ ಸಂವಿಧಾನ ಪೀಠವು ಬುಧವಾರವೂ ಈ ಪ್ರಕರಣದ ವಿಚಾರಣೆಯನ್ನು ಮುಂದು ವರಿಸಲಿದೆ.
ಮಾತೃಭಾಷಾ ಶಿಕ್ಷಣ ಮಾಧ್ಯಮ ವಿವಾದವನ್ನು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಕಳೆದ ಜುಲೈನಲ್ಲಿ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಮಾಡಿತು. ಶಿಕ್ಷಣ ಮಾಧ್ಯಮ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಸಂವಿಧಾನ ಪೀಠವೇ ತೀರ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು.
ರಾಜ್ಯ ಸರ್ಕಾರ 1989 ಜೂನ್ 19ರಂದು ಮೊದಲ ಬಾರಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡ ಇಲ್ಲವೆ ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತು.ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 93 ರಲ್ಲಿ ಸುಪ್ರೀಂ ಕೋರ್ಟ್ ಭಾಷಾ ನೀತಿಯನ್ನು ಹೇಗೆ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ತಿಳಿದಿದೆ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮರು ವರ್ಷ ಸರ್ಕಾರ ಪ್ರಾಥಮಿಕ ಹಂತದಲ್ಲಿ ಕನ್ನಡ ಇಲ್ಲವೆ ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸಿ ಪುನಃ ಸುತ್ತೋಲೆ ಹೊರಡಿಸಿತು.
ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಸರ್ಕಾರದ ಶಾಲೆಗಳು, ಅನುದಾನಿತ ಶಾಲೆಗಳಿಗೆ ಆದೇಶ ಜಾರಿ ಮಾಡಬಹುದು. ಆದರೆ, ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ 2008ರಲ್ಲಿ ಸಾರಿತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಈಗ ನಡೆದಿರು ವುದು ಇದೇ ವಿವಾದದ ವಿಚಾರಣೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.