ಸಿಇಟಿ: ದಾಖಲೆಗಳ ಪರಿಶೀಲನೆ ಆರಂಭ;ನಿಗದಿತ ಕೇಂದ್ರಗಳಿಗೆ ಹಾಜರಾಗಲು ಮನವಿ
ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಸೋಮವಾರ ಚಾಲನೆ ದೊರೆಯಿತು.
ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ರಾಜ್ಯದ ವಿವಿಧೆಡೆ 13 ಕೇಂದ್ರಗಳಲ್ಲಿ ದಾಖಲಾತಿಗಳ ಪರಿಶೀಲನೆ ನಡೆಯಿತು. ಮೊದಲ ದಿನ ಒಂದರಿಂದ 2,000 ರ್ಯಾಂಕ್ವರೆಗಿನ ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದರು. ಮಂಗಳವಾರ 2001ರಿಂದ 5,000 ರ್ಯಾಂಕ್ವರೆಗಿನ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಒಬ್ಬರಿಗೆ ಮಾತ್ರ ಅವಕಾಶ: ವಿದ್ಯಾರ್ಥಿ/ವಿದ್ಯಾರ್ಥಿನಿಯೊಂದಿಗೆ ದಾಖಲಾತಿ ಪರಿಶೀಲನೆ ಕೇಂದ್ರಕ್ಕೆ ಬರಲು ಒಬ್ಬರಿಗೆ ಮಾತ್ರ ಅವಕಾಶವಿದೆ. ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಬರಬಾರದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ ಮನವಿ ಮಾಡಿದ್ದಾರೆ.
ದಾಖಲೆಗಳ ಪರಿಶೀಲನೆಗೆ ಯಾವ ಜಿಲ್ಲೆಯ ವಿದ್ಯಾರ್ಥಿಗಳು ಯಾವ ಕೇಂದ್ರಕ್ಕೆ ಹಾಜರಾಗಬೇಕು ಎಂದು ಪ್ರಾಧಿಕಾರ ಮೊದಲೇ ತಿಳಿಸಿದೆ. ಆ ಪ್ರಕಾರವೇ ಹಾಜರಾಗಬೇಕು ಎಂದು ಅವರು ಕೋರಿದ್ದಾರೆ. ಬೆಂಗಳೂರು ಕೇಂದ್ರಕ್ಕೆ ಸಂಬಂಧಪಡದ ವಿದ್ಯಾರ್ಥಿಗಳು ಸಹ ಬರುತ್ತಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗುವುದಲ್ಲದೆ, ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ನಿಗದಿತ ಕೇಂದ್ರಗಳಲ್ಲಿ ಮಾತ್ರ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಪ್ರಾಧಿಕಾರ ಸೂಚಿಸಿರುವ ಮೂಲ ದಾಖಲೆಗಳನ್ನು ತಪ್ಪದೇ ತೆಗೆದುಕೊಂಡು ಬರಬೇಕು ಎಂದು ಮನವಿ ಮಾಡಿದ್ದಾರೆ.
ಪೂರ್ವಾಭ್ಯಾಸ: ಈ ಬಾರಿ ಆನ್ಲೈನ್ ಕೌನ್ಸೆಲಿಂಗ್ ಮೂಲಕ ಸೀಟು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪೂರ್ವಾಭ್ಯಾಸ (ಅಣಕು) ಸೀಟು ಆಯ್ಕೆಗೆ ಚಾಲನೆ ನೀಡಿದೆ.
ಇದು ಕೇವಲ ಅಭ್ಯಾಸದ ಹಂತವಾಗಿದೆ. ಆನ್ಲೈನ್ ಕೌನ್ಸೆಲಿಂಗ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಸಾಕಷ್ಟು ಮೊದಲೇ ಆ ಬಗ್ಗೆ ಅಭ್ಯಾಸ ಮಾಡಿಕೊಂಡು ಸಿದ್ಧರಾಗಲಿ ಎಂಬ ದೃಷ್ಟಿಯಿಂದ ಪೂರ್ವಾಭ್ಯಾಸಕ್ಕೆ ವ್ಯವಸ್ಥೆ ಮಾಡಿದೆ.
ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಸಂಪರ್ಕಿಸಿ ಆನ್ಲೈನ್ ಕೌನ್ಸೆಲಿಂಗ್ನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂದು ಅಭ್ಯಾಸ ಮಾಡಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.