ಸ್ವಚ್ಛತೆ ಪಾಠ; ತಪ್ಪದ ದುರ್ವಾಸನೆ ಕಾಟ
ಬಾಗೇಪಲ್ಲಿ: ತಾಲ್ಲೂಕಿನ ದೇವರಗುಡಿಪಲ್ಲಿ (ಗಡಿದಂ) ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಎದುರಿನ ಚರಂಡಿಯಿಂದ ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಚರಂಡಿಯ ಅಸಹನೀಯ ದುರ್ನಾತ ಒಂದೆಡೆಯಾದರೆ, ಅದನ್ನು ದಾಟಲು ಹರಸಾಹಸ ಪಡಬೇಕಾಗಿರುವುದು ಇನ್ನೊಂದೆಡೆ ಕಂಡುಬರುತ್ತದೆ.
ಆದರೆ ವಿದ್ಯಾರ್ಥಿಗಳು ಮಲೀನ ವಾತಾವರಣದಲ್ಲೆ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಮಾತಿನಂತೆ ಮಕ್ಕಳನ್ನು ಆಹ್ವಾನಿಸುವ ಶಾಲೆಯ ಮುಂಭಾಗದಲ್ಲೇ ಚರಂಡಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸೇರಿದಂತೆ ಪ್ರತಿಯೊಬ್ಬರು ‘ಸರ್ಕಸ್’ ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ.
ಶಾಲೆಯ ನಾಲ್ಕು ದಿಕ್ಕುಗಳಲ್ಲಿ ಚರಂಡಿ ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ವಾತಾವರಣವೂ ಸಹ ಮಲೀನಗೊಳ್ಳುತ್ತಿದೆ. ಬೇಕಾಬಿಟ್ಟಿ ಘನ ತ್ಯಾಜ್ಯವಸ್ತು ಎಸೆಯುತ್ತಿರುವುದರಿಂದ ಚರಂಡಿಯಲ್ಲಿ ಹೂಳು ತುಂಬಿಕೊಳ್ಳುತ್ತಿದೆ. ಇದರಿಂದ ಮಲೀನ ನೀರು ಸುಗಮವಾಗಿ ಹರಿಯಲು ಅವಕಾಶವೇ ಇಲ್ಲದಾಗಿದೆ.
ಶಾಲೆ ಪಕ್ಕದಲ್ಲೇ ಬಿಸಿಯೂಟದ ಕೊಠಡಿ, ಮುಂದುವರಿಕೆ ಶಿಕ್ಷಣ ಕೇಂದ್ರ, ಅಂಗನವಾಡಿ ಕೇಂದ್ರ ಮತ್ತು ಸಾಕ್ಷರತಾ ಕೇಂದ್ರ ನಿರ್ಮಿಸಲಾಗಿದೆ. ಚಿಕ್ಕಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ಅವರು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವುದು ಗ್ರಾಮಸ್ಥರ ಆತಂಕ.
ಗ್ರಾಮದಲ್ಲಿ ಸ್ವಚ್ಛ ಪರಿಸರ ಕಾಯ್ದಕೊಳ್ಳಲು ಮತ್ತು ಚರಂಡಿ ನೀರು ಸರಾಗವಾಗಿ ಹರಿಯಲು ಸಂಬಂಧಪಟ್ಟವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಬೃಹದಾಕಾರದ ಚಪ್ಪಡಿ ಕಲ್ಲುಗಳನ್ನು ಚರಂಡಿ ಮೇಲೆ ಹಾಕುವ ಮೂಲಕ ಶಾಲೆಯ ಸುತ್ತಮುತ್ತಲಿನ ವಾತಾವರಣ ಶುಚಿಯಾಗಿಡಲು ಗಮನಹರಿಸಬೇಕು ಎಂದು ಗ್ರಾಮಸ್ಥರ ಒತ್ತಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.