ಹೇಳದೆ ಹೋದ ಮಗ ಮರಳಿ ಬರಲೇ ಇಲ್ಲ!

ಉಡುಪಿ: ‘ಅಂಗಡಿಯಲ್ಲೇ ಇರುತ್ತಿದ್ದ ಮಗ ಪ್ರವೀಣ ಹೊರಗೆ ಹೋಗುವಾಗ ನನಗೆ ಹೇಳಿಯೇ ಹೋಗುತ್ತಿದ್ದ. ಬಾಡಿಗೆ ಇದೆ ಎಂದು ಬುಧವಾರ ರಾತ್ರಿ ವಾಹನದಲ್ಲಿ ಹೋಗಿದ್ದ ಆತ ನನಗೆ ಹೇಳಿರಲಿಲ್ಲ. ಆತ ಎಲ್ಲಿ ಹೋದ ಎಂದು ನನಗೂ ಗೊತ್ತಿರಲ್ಲಿಲ್ಲ. ಕೊನೆಗೆ ನಮ್ಮೆಲ್ಲರಿಂದ ದೂರ ಹೋಗಿ ಬಿಟ್ಟಿದ್ದಾನೆ’
ಗೋ ರಕ್ಷಕರ ಹಲ್ಲೆಗೆ ಒಳಗಾಗಿ ಮೃತಪಟ್ಟ ಕೆಂಜೂರಿನ ಪ್ರವೀಣ್ ಪೂಜಾರಿ ಅವರ ತಾಯಿ ಬೇಬಿ ಪೂಜಾರಿ ಹೀಗೆ ದುಃಖಿಸುತ್ತಾರೆ.
‘ಕೈ ಕಾಲು ಮುರಿದು ತಂದು ಮನೆಗೆ ಹಾಕಿ ಹೋಗಿದ್ದರೆ ಮಗನನ್ನು ಸಾಯುವವರೆಗೆ ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ಕೊಂದೇ ಬಿಟ್ಟಿದ್ದಾರಲ್ಲ’ ಎಂಬ ಅವರ ಪ್ರಶ್ನೆಗೆ ಉತ್ತರಿಸುವವರು ಅಲ್ಲಿ ಯಾರು ಇರಲಿಲ್ಲ.
ಬೇಬಿ ಪೂಜಾರಿ ಅವರ ಹಾಗೂ ವಾಸು ಪೂಜಾರಿ ಅವರು ಪುಟ್ಟ ಅಂಗಡಿ (ಬೇಬಿ ಪೂಜಾರಿ ತಂದೆ ಆರಂಭಿಸಿದ್ದು) ನಡೆಸುತ್ತಿದ್ದರು. ಮೂವರು ಮಕ್ಕಳು ಹುಟ್ಟಿದ ನಂತರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾದ್ದರಿಂದ ಹೆಚ್ಚಿನ ಸಂಪಾದನೆಗಾಗಿ ಅವರು ಬೀಡಿ ಕಟ್ಟುತ್ತಿದ್ದರು. ದನವನ್ನೂ ಸಾಕಿದ್ದ ಅವರು ಹಾಲು ಮಾರಾಟ ಸಹ ಮಾಡುತ್ತಿದ್ದರು. ಅವಿರತ ದುಡಿಮೆ ಮಾಡಿದ ಅವರು ಮೂವರು ಮಕ್ಕಳಿಗೆ ಕೈಲಾದಷ್ಟು ವಿದ್ಯಾಭ್ಯಾಸ ಕೊಡಿಸಿದ್ದರು.
ಮೊದಲ ಮಗ ಪ್ರವೀಣ್ ಪೂಜಾರಿ ಪಿಯುಸಿ ಮುಗಿದ ನಂತರ ಅಂಗಡಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದರು. ಬಡತನದಲ್ಲಿ ಹುಟ್ಟಿದರೂ ಸ್ಥಿತಿವಂತನಾಗಿ ಬಾಳಬೇಕು ಎಂಬ ಗುರಿಯಿದ್ದ ಅವರು ಅಂಗಡಿ ವ್ಯವಹಾರವನ್ನು ಉತ್ತಮಪಡಿಸಿದ್ದರು. ಆ ನಂತರ ಒಂದು ಕೋಳಿ ಅಂಗಡಿ ತೆರೆದಿದ್ದರು. ಅದರ ಪಕ್ಕದಲ್ಲಿಯೇ ಶೇಂದಿ ಅಂಗಡಿಯನ್ನೂ ಇಟ್ಟು ಮೂರೂ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಸ್ವತಃ ಮುಂದೆ ನಿಂತು ತಂಗಿ ಪ್ರಮೀಳಾ ಅವರ ವಿವಾಹ ಮಾಡಿದ್ದರು. ಅದರ ಸಾಲ ಹೆಗಲೇರಿದ್ದರಿಂದ ಸರಕು ಸಾಗಣೆ ಆಟೊ ಖರೀದಿಸಿದ್ದರು. ಕಷ್ಟಜೀವಿಯಾಗಿದ್ದ ಅವರು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು.
ತಮ್ಮ ನವೀನ್ ಪೂಜಾರಿ ಮಂಗಳೂರಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಹೋದರ ಹೋಟೆಲ್ ಕಾರ್ಮಿಕ ಆಗುವುದು ಬೇಡ ಎಂದು ಸ್ವಂತ ಹೋಟೆಲ್ ಮಾಡಿಕೊಟ್ಟಿದ್ದರು. ನಾಲ್ಕು ಜನರಂತೆ ಬಾಳಬೇಕೆಂದು ಸಾಲ ಮಾಡಿ ಇತ್ತೀಚೆಗೆ ಕಾರು ಖರೀದಿಸಿದ್ದರು. ಹಳೆಯ ಮನೆಯಲ್ಲಿದ್ದ ಅವರು ಹೊಸ ಮನೆ ಕಟ್ಟಿಸುವ ಬಗ್ಗೆ ಸಹ ಯೋಚಿಸುತ್ತಿದ್ದರು. ಆದರೆ ವಿಧಿ ಮಾತ್ರ ಅದಕ್ಕೆ ಅವಕಾಶ ನೀಡದೆ ಕ್ರೂರ ಆಟವಾಡಿದೆ.
ಮದುವೆಯಾಗುತ್ತೇನೆ ಎಂದಿದ್ದ: ‘ಮಗ ಯಾರಿಗೂ ತೊಂದರೆ ಕೊಟ್ಟವನಲ್ಲ. ತಾನಾಯಿತು ತನ್ನ ಕೆಲಸ ಆಯಿತು ಎಂದು ಜೀವನ ನಡೆಸುತ್ತಿದ್ದ. ಮದುವೆಯಾಗು ಎಂದು ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೆ, ಈಗ ಬೇಡ ತಂಗಿ ಮದುವೆ ಸಾಲ ತೀರಲಿ ಎನ್ನುತ್ತಿದ್ದ. ಕೆಲ ದಿನಗಳ ಹಿಂದೆ ಅವನೇ ಬಂದು ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದ. ಕುಟುಂಬಕ್ಕಾಗಿ ಜೀವ ತೇಯುತ್ತಿದ್ದ ಮಗನ ಸುಖದ ದಿನಗಳನ್ನು ನೋಡುವ ಕಾತರ ನನ್ನಲ್ಲಿ ತುಂಬಿತ್ತು. ಆದರೆ ಆತ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ’ ಎಂದು ತಾಯಿ ಕಣ್ಣೀರು ಹಾಕಿದರು.
‘ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಆತನ ದೊಡ್ಡ ಗುಣವಾಗಿತ್ತು. ಯಾರೇ ತೊಂದರೆ ಎಂದು ಬಂದರೂ ಅವರಿಗೆ ಕೈಲಾದ ಸಹಾಯ ಮಾಡುತ್ತಿದ್ದ. ಯಾರಿಗೂ ನೋವುಂಟು ಮಾಡಿದ ಉದಾಹರಣೆ ಇಲ್ಲ. ಅಂತಹ ವ್ಯಕ್ತಿಯನ್ನು ಕೊಂದಿದ್ದೇಕೆ, ಇದರ ಹಿಂದೆ ಯಾರ ಸಂಚಿದೆ ಎಂದು ತಿಳಿಯುತ್ತಿಲ್ಲ. ನಮ್ಮ ನೋವು ಯಾರಿಗೂ ಬರಬಾರದು. ಮಗನನ್ನು ಕೊಂದವರಿಗೆ ಉಗ್ರ ಶಿಕ್ಷೆಯಾಗಬೇಕು. ಅವರೆಲ್ಲ ನರಳಿ ನರಳಿ ಸಾಯಬೇಕು’ ಎನ್ನುತ್ತಾ ಕಣ್ಣೀರಾದರು.
ಪ್ರವೀಣ್ ತಂದೆ ವಾಸು ಪೂಜಾರಿ ಅವರು ಯಾರೊಂದಿಗೂ ಮಾತನಾಡದೆ ಕುಳಿತಿದ್ದರು. ಏನೂ ಆಗಿಯೇ ಇಲ್ಲ ಎಂಬಂತೆ ನಿರ್ಭಾವುಕರಾಗಿ ಕುಳಿತಿದ್ದ ಅವರ ಭಂಗಿಯೂ ಸಹ ಮಗನ ಬಾಂಧವ್ಯದ ಕಥೆಯನ್ನೇ ಹೇಳುತ್ತಿರುವಂತೆ ಭಾಸವಾಗುತ್ತಿತ್ತು.
ಹೊಡೆಯುತ್ತಿದ್ದಾರೆ ಎಂದಿದ್ದ : ವಾಹನ ಬಾಡಿಗೆಗೆ ಬೇಕು ಎಂದು ದೂರವಾಣಿ ಕರೆ ಮಾಡಿ ಮಗನನ್ನು ಕರೆಸಿದ್ದ ರಮೇಶ್ ಎಂಬಾತ ರಾತ್ರಿ ಮನೆಯ ಹತ್ತಿರ ಬಂದು ‘ಪ್ರವೀಣನಿಗೆ ಮನಬಂದಂತೆ ಹೊಡೆಯುತ್ತಿದ್ದಾರೆ’ ಎಂದು ತಮ್ಮ ನವೀನ್ ಬಳಿ ಹೇಳಿ ಹೋದ. ಆದರೆ ಯಾರು ಹೊಡೆಯುತ್ತಿದ್ದಾರೆ, ಯಾಕೆ ಹೊಡೆಯುತ್ತಿದ್ದಾರೆ ಎಂದು ಅವನಿಗೆ ಗೊತ್ತಾಗದೆ ಪರದಾಡಿದ್ದ. ಮೊಬೈಲ್ ಫೋನ್ಗೆ ಕರೆ ಮಾಡಿದರೆ ‘ಸ್ವಿಚ್ ಆಫ್’ ಎಂದು ಬರುತ್ತಿತ್ತು ಎಂದು ತಾಯಿ ತಿಳಿಸಿದರು.
ಯಾವ ಬಾಡಿಗೆ ಎಂದು ಗೊತ್ತಿರಲಿಲ್ಲ: ಪ್ರವೀಣ್ ಅವರಿಗೆ ಕರೆ ಮಾಡಿದ್ದ ರಮೇಶ್ ಎಂಬುವರು ವಾಹನ ಬೇಕು ಎಂದು ತಿಳಿಸಿದ್ದರು. ಆದರೆ ಯಾವ ಉದ್ದೇಶಕ್ಕೆ ಎಂದು ಅವರು ಹೇಳಿರಲಿಲ್ಲ. ಸ್ಥಳಕ್ಕೆ ಹೋದಾಗಲೇ ಅದು ಜಾನುವಾರು ಸಾಗಣೆಗೆ ಎಂದು ಗೊತ್ತಾಗಿದೆ. ಮೊದಲೇ ಗೊತ್ತಿದ್ದರೆ ಆತ ಹೋಗುತ್ತಿರಲ್ಲಿಲ್ಲ ಎಂದು ಸ್ಥಳೀಯರು ಹೇಳಿದರು.
ಹೊಡೆಯಬೇಡಿ ಎಂದು ಗೋಗರೆದಿದ್ದ: ಮಾಹಿತಿಯ ಪ್ರಕಾರ ಕೊಲೆ ಮಾಡಿದವರೆಲ್ಲ ಪ್ರವೀಣ್ ಅವರ ಪರಿಚಯಸ್ಥರೇ ಆಗಿದ್ದರು. ಅತಿಯಾಗಿ ಮದ್ಯ ಸೇವಿಸಿ ಅಮಲಿನಲ್ಲಿದ್ದ ಅವರು ಸಲಾಕೆ ಹಾಗೂ ಮರದ ರಿಪೀಸ್ಗಳಿಂದ ಪ್ರವೀಣ್ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕುಸಿದು ಬಿದ್ದ ಪ್ರವೀಣ್ ‘ನಾನು ತಪ್ಪು ಮಾಡಿದ್ದರೆ ಪೊಲೀಸರಿಗೆ ಒಪ್ಪಿಸಿ ಈ ರೀತಿ ಮಾತ್ರ ಹೊಡೆಯಬೇಡಿ’ ಎಂದು ಗೋಗರೆದಿದ್ದಾರೆ.
ಇಷ್ಟಕ್ಕೂ ಕರಗದ ದುಷ್ಕರ್ಮಿಗಳು ಇನ್ನಷ್ಟು ಹೊಡೆದಾಗ ನಿತ್ರಾಣರಾಗಿ ಹೋಗಿದ್ದಾರೆ. ಕೆಲ ಹೊತ್ತಿನ ನಂತರ ‘ನೀರು ಕೊಡಿ’ ಎಂದು ಸಹ ಕೇಳಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಕರುಗಳಿದ್ದ ವಾಹನದೊಳಗೆ ಹಾಕಿ ಸ್ವಲ್ಪ ದೂರ ಬಂದು ಬಿಟ್ಟು ಹೋಗಿದ್ದಾರೆ.
ಪ್ರವೀಣ್ ಕೊಲೆ ಪ್ರಕರಣ: 18 ಮಂದಿ ಬಂಧನ
ಬ್ರಹ್ಮಾವರ: ಕೆಂಜೂರಿನಲ್ಲಿ ಬುಧವಾರ ರಾತ್ರಿ ದನ ಸಾಗಾಟ ಮಾಡುತ್ತಿದ್ದ ಪ್ರವೀಣ್ ಪೂಜಾರಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 18 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಶ್ರೀಕಾಂತ್ ಸಂತೆಕಟ್ಟೆ (19), ಪ್ರದೀಪ್ ಕಳ್ತೂರು (22), ಸುದೀಪ್ ಶಿವಪುರ (21), ಪ್ರದೀಪ್ ಕಳ್ತೂರು (19), ರಾಜೇಶ್ ನಾಯ್ಕ ಕಳ್ತೂರು (21), ಉಮೇಶ್ ನಾಯ್ಕ ಕರ್ಜೆ, ರವೀಂದ್ರ ಕೋಟೇಶ್ವರ (37), ರಾಘವೇಂದ್ರ ಕುಚ್ಚೂರು (22), ಪ್ರಕಾಶ್ ನಾಯ್ಕ ಮಂಡಾಡಿ, ಸುಕುಮಾರ್ ಹೆಬ್ರಿ (22), ಸುಕೇಶ್ ಕೊಕ್ಕರ್ಣೆ (32), ಪ್ರಕಾಶ್ ಆಚಾರ್ ಬೆನಗಲ್ (30), ಶಾಂತಾರಾಮ್ ಚೇರ್ಕಾಡಿ (21), ಮಂಜುನಾಥ ಚೇರ್ಕಾಡಿ (20), ಗಣೇಶ್ ಮೊಗವೀರ ಕೊಕ್ಕರ್ಣೆ (25), ಪ್ರದೀಪ್ ಆಚಾರ್ ಬೆನಗಲ್, ದಿನೇಶ್ ಮೊಗವೀರ ಬೆನಗಲ್, ಸುದೀಪ್ ಶೆಟ್ಟಿ ಶಿವಪುರ ಅವರು ಬಂಧಿತರು ಎಂದು ಬಲ್ಲ ಮೂಲಗಳು ತಿಳಿಸಿವೆ. ಇವರಲ್ಲಿ ಅನೇಕರು 18ರಿಂದ 30 ವರ್ಷದೊಳಗಿನ ಯುವಕರಾಗಿದ್ದು, ಅನೇಕರು ಮೃತ ಪ್ರವೀಣ್ ಅವರ ಮಿತ್ರರಾಗಿದ್ದರು ಎಂದು ಹೇಳಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.