ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಅಡ್ಡೆಯೂ ಸರಸ್ವತಿ ಪಡ್ಡೂ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅರಮನೆಯಲ್ಲಿ ಹುಟ್ಟಿದವನು ಮಂತ್ರಿಯಾಗಬಲ್ಲ, ಗುರುಮನೆಯಲ್ಲಿ ಹುಟ್ಟಿದವನು ಶಾಸ್ತ್ರಿಯಾಗಬಲ್ಲ, ಆದರೆ ನೆರೆಮನೆಯಲ್ಲಿ ಹುಟ್ಟಿದವನು ಮಾತ್ರ ಸಾಹಿತಿಯಾಗಬಲ್ಲ ಎನ್ನುವ ಮಾತಿದೆ. ಹೌದು, ಸಾಹಿತಿಯಾಗುವವನಿಗೆ ಜನಸಾಮಾನ್ಯನ ಬದುಕಿನ ಅನುಭವ ಮತ್ತು ಅರಿವು ಇರಬೇಕಾಗುತ್ತದೆ. ನಿತ್ಯ ಬದುಕಿನ ಹಾಡುಪಾಡುಗಳೇ ಸಾಹಿತ್ಯ ಗಂಗೆಯ ಸಾವಿರ ತೊರೆಗಳಾಗಿ ಹರಿಯುತ್ತವೆ. ಸಾಹಿತಿಯಾದವನಿಗೆ ಅರಮನೆಯ, ಗುರುಮನೆಯ ಹಂಗು ಇರುವುದಿಲ್ಲ. ಆತ ನಮ್ಮ ನಿಮ್ಮ ಹಾಗೆ ಸಹಜ, ಸರಳವಾಗಿ ಬದುಕುತ್ತಿರುತ್ತಾನೆ. ಇಲ್ಲೇ ನಾವು ನಡೆದಾಡುವ ಬೀದಿಯಲ್ಲಿ, ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾನೆ. ಅದೇ ಹೊಟೇಲು ಖಾನಾವಳಿಯ ಜನಸಂದಣಿಯೊಳಗೆ ಬೆರೆತುಕೊಂಡಿರುತ್ತಾನೆ. ನಿಮಗೆ ಪರಿಚಯವಾಗದ ಹೊರತು ಅವರೊಬ್ಬ ಸಾಹಿತಿ, ವಿದ್ವಾಂಸ ಎಂದು ನಿಮಗೆ ಗೊತ್ತೇ ಆಗುವುದಿಲ್ಲ.

ಮೊನ್ನೆ ಹೀಗೆ ಆಯಿತು. ಬೆಳಿಗ್ಗೆ ಬೆಂಗಳೂರು ಬಸ್ಸನ್ನು ಇಳಿದು 70ರ ಹರೆಯದ ಪುಟ್ಟ ಜೀವ ತನ್ನ ಬ್ಯಾಗನ್ನು ಎಳೆದುಕೊಂಡು ಗೂಗಲ್ ನಕ್ಷೆಯಲ್ಲಿ ನನ್ನ ಮನೆಯ ದಾರಿ ಹುಡುಕುತ್ತ ಬರುತ್ತಿತ್ತು. ಅಂತಹ ದೊಡ್ಡ ಮನುಷ್ಯ (ಗಾತ್ರದಲ್ಲಿ ಅಲ್ಲ, ಗುಣದಲ್ಲಿ) ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ಲಗುಬಗೆಯಿಂದ ಕಾರನ್ನು ಚಲಾಯಿಸಿಕೊಂಡು ಎದುರಿಗೆ ಹೋದೆ. ‘ಅರೇ ನೀವೇಕೆ ಬಂದ್ರೀ, ನಾನೇ ಬರುತ್ತಿದ್ದೆ’ ಎಂದರು. ನಮ್ಮ ಆತಿಥ್ಯಕ್ಕಿಂತ ಅವರಿಗೆ ನನ್ನ ಮಕ್ಕಳೊಂದಿಗೆ ಆಟಪಾಠದ ಕುರಿತು ಹರಟುವುದರಲ್ಲಿ ಹೆಚ್ಚು ಖುಷಿ ಇರುವುದು ಎದ್ದು ಕಾಣುತ್ತಿತ್ತು. ನನ್ನ ಮಗಳಿಗೆ ಅವರ ಕುರಿತು ಪಠ್ಯದಲ್ಲಿ ಓದಿ ಗೊತ್ತಿತ್ತು. ಆದರೆ ಅದೇ ವ್ಯಕ್ತಿ ಎದುರಿಗೆ ಬಂದು ನಿಂತರೆ ಹೇಗೆ ಆಗಬೇಡ?! ಅದನ್ನು ವರ್ಣಿಸಲಾಗದು. ‘ಐ..! ನಾಗೇಶ ಹೆಗಡೆ ಸರ್..!!!’ ಉದ್ಗಾರ, ಕಣ್ಣಲ್ಲಿ ಅಚ್ಚರಿಯ ಸೆಳೆಮಿಂಚು. ದೊಡ್ಡವರು ಎಷ್ಟೊಂದು ಸರಳ, ಸಾದಾಸೀದಾ ಆಗಿರುತ್ತಾರೆ ಎಂಬುದಕ್ಕಾಗಿ ಈ ಸನ್ನಿವೇಶವ ಹೇಳಿದೆ ಅಷ್ಟೆ.


ಮನೋಹರ ಮುದ್ರಣಾಲಯದ ಎದುರು

ಸಾಹಿತಿಗಳು ಸಾಮಾನ್ಯವಾಗಿ ಹೀಗೆಯೇ ಇರುತ್ತಾರೆ. ಇಂತಹ ಸರಳ, ಸಜ್ಜನ ಸಾಹಿತಿಗಳ ಅಡ್ಡೆಗಳು ಧಾರವಾಡದಲ್ಲಿ ಬಹಳ ಇವೆ. (ವಿಚಾರಗೋಷ್ಠಿಗಳ ಹಾಗೆ ಕೆಲವು ಕಡೆ ಪಾನಗೋಷ್ಠಿಗಳೂ ನಡಯುತ್ತವೆ. ಬೆನ್ನು ಕೆರೆಯುವ, ಮುಖ ಪರಚುವ, ಸಾಹಿತ್ಯದಲ್ಲೂ ರಾಜಕೀಯ ಪಕ್ಷಗಳಿವೆ ಎಂಬಂತಹ ವಿಷಯಗಳು ಹೊರಬೀಳುವ ವಿಸ್ಮಯಲೋಕ ಅದು. ಇರಲಿ, ಆ ವಿಷಯ ಈಗ ಬೇಡ.) ನಾನು ಹೇಳಹೊರಟಿರುವುದು ಧಾರವಾಡದ ತರಕಾರಿ ಮಾರುಕಟ್ಟೆಯ ಮಧ್ಯದಲ್ಲಿ ಇರುವ ಒಂದು ಮುದ್ರಣ ಮಳಿ ಬಗ್ಗೆ. ಹಲವಾರು ದಶಕಗಳಿಂದ ಅದು ಹಾಗೆಯೇ ಇದೆ. ಧಾರವಾಡದ, ಅಷ್ಟೇ ಏಕೆ, ಕರ್ನಾಟಕದ ನಾನಾ ಭಾಗಗಳ ಉದ್ದಾಮ ಮತ್ತು ಮುದ್ದಾಮ ಸಾಹಿತಿಗಳು ಒಮ್ಮಿಲ್ಲೊಮ್ಮೆ ಅಲ್ಲಿಗೆ ಬಂದು ಹೋಗಿದ್ದಾರೆ. ಕೆಲವರಂತೂ ನಿತ್ಯವಲ್ಲದಿದ್ದರೂ ವಾರದಲ್ಲಿ ಒಂದು ಸರ್ತಿಯಾದರೂ ಅಲ್ಲಿಗೆ ಬಂದು ಹರಟೆ, ಸಂವಾದ, ಸಮಾಲೋಚನ, ಸಂಪರ್ಕದಲ್ಲಿ ತೊಡಗಿ, ಅಡ್ಡೆಯ ಎದುರಿಗೆ ಇರುವ ಹೊಟೇಲ್‌ನಲ್ಲಿ ಪಡ್ಡು, ಮಿರ್ಚಿ, ಗಿರ್ಮಿಟ್ಟು, ಚಹಾ ಸೇವಿಸದೆ ಹೋಗುವುದೇ ಇಲ್ಲ.

ನೀವು ಧಾರವಾಡದವರಾಗಿದ್ದರೆ ಅಥವಾ ಧಾರವಾಡದ ಕುರಿತು ತಿಳಿವಳಿಕೆ ಇದ್ದವರು ಆಗಿದ್ದರೆ ನಾನು ಯಾವ ಅಡ್ಡೆ ಬಗ್ಗೆ ಹೇಳುತ್ತಿದ್ದೇನೆ ಎಂಬುದು ಇಷ್ಟೊತ್ತಿಗೆ ಅರ್ಥವಾಗಿರುತ್ತದೆ. ಈ ಅಡ್ಡೆಯೊಳಗೆ ಸಕಲ ವಿದ್ಯೆಗಳಲ್ಲೂ ಪಳಗಿದ ಹಿರಿಯ ವ್ಯಕ್ತಿಯೊಬ್ಬರು ರಜೆಸಜೆ ಇಲ್ಲದೆ ಏನನ್ನೋ ಟೈಪ್ ಮಾಡುತ್ತ, ಪ್ರೂಫ್ ತಿದ್ದುತ್ತ, ನೂರಾರು ಪುಸ್ತಕಗಳ ರಾಶಿಯನ್ನು (ದೂಳುಸಮೇತ) ಸುತ್ತಲೂ ಹಾಕಿಕೊಂಡು ಪುಟಗಳ ಸಂದಿಯಲ್ಲಿ ಏನನ್ನೋ ಹುಡುಕುತ್ತ, ನಡುನಡುವೆ ಬರುವ ಫೋನ್ ಕರೆಗಳಿಗೆ ‘ಆಯ್ತು... ಮಾಡ್ತೀನಿ... ನೋಡ್ತೀನಿ... ನಾಳೆ ಕೊಡ್ತೀನಿ...’ ಎಂದು ಚುಟುಕಾಗಿ ಮಾತನಾಡಿ, ಚಟಕ್ಕನೆ ಕರೆ ಕಟ್ ಮಾಡಿ, ಮತ್ತೆ ಕಂಪ್ಯೂಟರ್ ಪರದೆಯಲ್ಲಿ ಕಣ್ಣು ಕೀಲಿಸುತ್ತಾರೆ. ನಡುನಡುವೆ ವ್ಯಾಪಾರದ ಕಾರಣ ಯಾರ‍್ಯಾರೋ ಬರುತ್ತಾರೆ, ಹೋಗುತ್ತಾರೆ. ಬಾ ಎಂದು ಕರೆಯದಿದ್ದರೂ ಕೆಲವರು ಬಂದು ಕುಳಿತುಕೊಳ್ಳುತ್ತಾರೆ. ಹಾಗೆ ಕರೆಯದೆಯೂ ಬಂದು ಕುಳಿತರೆಂದರೆ ಅವರು ಆ ಅಡ್ಡೆಯ ಭಕ್ತರು! ಅರ್ಥಾತ್ ಕಾಯಂ ಸದಸ್ಯರು ಎಂದೇ ಅರ್ಥ. ಒಂದಿಷ್ಟು ಚರ್ಚೆ, ಚಹಾ ಆಗದೆ ಅವರೆಂದೂ ಎದ್ದು ಹೋಗುವುದಿಲ್ಲ. ಅವರು ಹೋಗುತ್ತೇನೆಂದರೂ ಇವರು ಬಿಡುವುದಿಲ್ಲ. ಅವರ ಹೆಸರು ರವೀಂದ್ರ ಆಕಳವಾಡಿ, ಮನೋಹರ ಮುದ್ರಣಾಲಯದ ಕಾಯಂ ಕಾರ್ಮಿಕ. ರ‍್ಯಾಂಕ್‌ನೊಂದಿಗೆ ಎಂಜಿನಿಯರಿಂಗ್ ಪದವಿ ಪಡೆದ ಅವರು ವಿದೇಶದಲ್ಲೋ ಸ್ವದೇಶದಲ್ಲೋ ಲಕ್ಷ– ಕೋಟಿ ಸಂಬಳದ ಉದ್ಯೋಗಿಯೋ, ಉದ್ಯಮಿಯೋ ಆಗಬಹುದಿತ್ತು. ಆದರೆ ಅಪ್ಪ ನೆಟ್ಟ ಆಲದ ಮರಕ್ಕೆ ಅವರು ಜೋತುಬಿದ್ದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸಾಹಿತ್ಯದ ಸಾಂಗತ್ಯದಲ್ಲಿ ಇರುವ ಸುಖವೇ ಪರಮವಾದದ್ದು ಎಂದು ಕಂಡುಕೊಂಡದ್ದು (ಇದು ಸಾಹಿತ್ಯದ ಪುಣ್ಯ). ನಾಡಿನ ಖ್ಯಾತನಾಮ ಹಿರಿಕಿರಿಯ ಲೇಖಕರ ಕರಡು ಪ್ರತಿಗಳನ್ನು ತಿದ್ದಿ, ತೀಡಿ, ಅತ್ಯಂತ ಕಡಿಮೆ ಖರ್ಚಿನಲ್ಲಿ, ಉದ್ರಿ ಲೆಕ್ಕದಲ್ಲಿ ಕೆಲವೊಮ್ಮೆ ಉದಾರಿ ಲೆಕ್ಕದಲ್ಲಿ ಮುದ್ರಿಸಿಕೊಟ್ಟಿದ್ದಾರೆ. ಭಯಂಕರವಾದ ಆಕಾಂಕ್ಷೆ ನಿರೀಕ್ಷೆಗಳಿಲ್ಲ, ಅವರಿಗೆ ವಯಸ್ಸು 68. ಯಾವುದೇ ಕಾಯಿಲೆ ಇಲ್ಲ. ದಿನಕ್ಕೆ ಹಲವಾರು ಸಾರಿ ಚಹಾ ಗುಟುಕರಿಸುತ್ತಾರೆ! ಅಷ್ಟಮದಗಳ ಹಂಗಿಲ್ಲದೆ ಸಣ್ಣವರೊಂದಿಗೆ ಸಣ್ಣವರ ಹಾಗೆ, ದೊಡ್ಡವರೊಂದಿಗೆ ದೊಡ್ಡವರ ಹಾಗೆ ಸದಾ ನಗುತ್ತ, ನಗಿಸುತ್ತ, ಪಾದರಸದಂತೆ ಓಡಾಡುತ್ತಾರೆ. ಅಪಾರವಾದ ಅನುಭವಿ ಮತ್ತು ಜ್ಞಾನಿ. ಧಾರವಾಡ ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ, ಬ್ಯಾಂಕ್ ಚೇರ್ಮನ್, ದೇವಸ್ಥಾನ ಕಮಿಟಿ ಧರ್ಮದರ್ಶಿ, ಹಲವಾರು ಸಂಸ್ಥೆಗಳ ಸಲಹೆಗಾರ, ನಿರ್ದೇಶಕ ಹೀಗೆ ವಿವಿಧ ಸಾಮಾಜಿಕ ಹುದ್ದೆಗಳಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಾರೆ.


‘ಸರಸ್ವತಿ’ಯಲ್ಲಿ ಸಿಗುವ ಪಡ್ಡು

ಈ ಅಡ್ಡೆ ಮತ್ತು ಅದರ ಅಧಿಪತಿಯ ಕುರಿತು ನಮ್ಮ ಧಾರವಾಡದ ಹಿರಿಯ ಸಾಹಿತಿಗಳಾದ ಗಿರಡ್ಡಿ ಗೋವಿಂದರಾಜ ಅವರು: ‘ಮುಂಬೈ ಸಮ್ಮೇಳನದ, ನನ್ನ ಅಧ್ಯಕ್ಷೀಯ ಭಾಷಣವನ್ನು ಮುದ್ರಿಸಿಕೊಂಡು ಬರಲು ತಿಳಿಸಿದ್ದರು. ಅದನ್ನು ಅಲ್ಪ ಅವಧಿಯಲ್ಲಿ ಮಾಡಿಕೊಡುವ ಒತ್ತಡವಿತ್ತು. ಮನೋಹರ ಮುದ್ರಣಾಲಯದವರಿಗೆ ಪುಸ್ತಕ ಮುದ್ರಣ ಮಾಡಲು ಹೇಳಿದ್ದೆ. ಮುದ್ರಿತ ಪುಸ್ತಕ ಸಿಗುವುದಿಲ್ಲವೆಂದು ನಾನು ಕಾಯ್ದಿರಿಸಿದ ಬಸ್ ಹತ್ತಲು ನಿಲ್ದಾಣಕ್ಕೆ ಬಂದಿದ್ದೆ. ಆದರೆ ರವಿ ಅತ್ಯಂತ ಅಚ್ಚುಕಟ್ಟಾಗಿ ಹಗಲುರಾತ್ರಿ ಕುಳಿತು ತಮ್ಮ ಕೆಲಸವನ್ನು ಮಾಡಿ ಪುಸ್ತಕದ ಬಂಡಲ್ ಅನ್ನು ಬಸ್‌ವರೆಗೂ ತಂದು ಕೊಟ್ಟಿದ್ದರು. ಧಾರವಾಡದ ಅತ್ಯಂತ ಹಳೆಯ, ಹೆಮ್ಮೆಯ ಮತ್ತು ವಿಶ್ವಾಸಾರ್ಹ ಸಂಸ್ಥೆ ಇದು. ಕೆಲಸದಲ್ಲಿ ಶಿಸ್ತು ಮತ್ತು ಭಾಷಾ ಶುದ್ಧಿ ಅವರ ಹಿರಿಮೆ. ಈ ಸಂಸ್ಥೆಯೊಂದಿಗೆ ನನ್ನದು ಬಹಳ ಹಳೆಯ ಸಂಬಂಧ’ ಎಂದು ನೆನಪನ್ನು ಮೆಲುಕು ಹಾಕುತ್ತಾರೆ.

ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ‘ಧಾರವಾಡದ ಅತ್ಯಂತ ಹಳೆಯ ಮತ್ತು ಉತ್ಕೃಷ್ಟ ಮುದ್ರಣಾಲಯ ಇದು. ಇದರ ಮಾಲೀಕರಾದ ಸೋಮಶೇಖರ್ ಅವರಿಂದ ನಾನು ಪ್ರೂಫ್ ತಿದ್ದುವುದನ್ನು ಕಲಿತಿದ್ದೇನೆ. ನನ್ನ ಕವನ ಸಂಕಲನ ಪ್ರತೀಕ್ಷೆಗೆ ಸಿಲ್ವರ್ ಮೆಟಾಲಿಕ್ ಇಂಕ್‌ ಬಳಸಿ ಒಂದು ವಿಶಿಷ್ಟವಾದ ಕವರ್ ಪೇಜ್ ಮುದ್ರಿಸಿದ್ದರು. ಧಾರವಾಡದಲ್ಲಿ ಅದು ಮೊದಲ ಪ್ರಯೋಗ ಮತ್ತು ಪ್ರಸಿದ್ಧಿ. ಅಂದಿನ ‘ಸುಧಾ’ ವಾರಪತ್ರಿಕೆಯ ಕಲಾವಿದರಾದ ಚಂದ್ರನಾಥ ಆಚಾರ್ಯ ಅವರಿಂದ ಮಾಹಿತಿ ಪಡೆದು, ಇಂಕ್ ತಂದು ನಾವು ಈ ಪುಸ್ತಕ ಮುದ್ರಿಸಿದ್ದು ಹೆಮ್ಮೆಯ ಮತ್ತು ಸಾಹಸದ ಸಂಗತಿ. ಈ ಪುಸ್ತಕದ ಡಿಜೈನ್ ನೋಡಿದ ಕ.ವಿ.ವಿ ಕುಲಪತಿ ಸದಾಶಿವ ಒಡೆಯರ್ ತಮ್ಮ ಪುಸ್ತಕಗಳನ್ನೂ ಇಲ್ಲಿಯೇ ಮುದ್ರಿಸಿದ್ದರು. ನಮ್ಮ ‘ಸಂಕ್ರಮಣ’ ಇಲ್ಲಿಯೇ ಮುದ್ರಣಗೊಳ್ಳುತ್ತಿತ್ತು. ಒಳ್ಳೆಯ ವಾಗ್ಮಿ, ಜ್ಞಾನಿಯಾದ ರವೀಂದ್ರ ಆಕಳವಾಡಿ ಅವರ ಪ್ರೆಸ್‌ನಲ್ಲಿ ಸದಾಕಾಲ ಸಾಹಿತಿಗಳ ದಂಡೇ ಇರುತ್ತದೆ. ಉನ್ನತ ಹುದ್ದೆಗೆ ಹೋಗಬೇಕಾದ ಎಂಜಿನಿಯರ್ ಮುದ್ರಣ ಲೋಕಕ್ಕೆ ಸಿಕ್ಕಿದ್ದು ಹೆಮ್ಮೆಯ ಸಂಗತಿ’ ಎಂದು ಈ ಸಂಸ್ಥೆಯೊಂದಿಗಿನ ತಮ್ಮ ಒಡನಾಟವನ್ನು ಬಿಚ್ಚಿಡುತ್ತಾರೆ.

ಮತ್ತೊಬ್ಬ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಅವರು, ‘ಹಣ ಗಳಿಕೆಯ ಈ ಜಗತ್ತಿನಲ್ಲಿ ರವಿಯಂತಹ ಪ್ರಾಮಾಣಿಕ, ವಿನಯಶೀಲ ವ್ಯಕ್ತಿಗಳು ಸಿಗುವುದು ಅಪರೂಪ. ಈ ಸಂಸ್ಥೆಯೊಂದಿಗೆ ನನ್ನ ಸಂಬಂಧ 50 ವರ್ಷ ಹಳೆಯದು. ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಅವರು ಪ್ರಭುತ್ವ ಹೊಂದಿದ್ದಾರೆ. ಅಕ್ಷರ ಮತ್ತು ಭಾಷಾ ದೋಷಗಳನ್ನು ಅವರೇ ಸರಿಪಡಿಸಿ ಲೇಖಕರ ಕೆಲಸ ಹಗುರ ಮಾಡುತ್ತಾರೆ. ಒಂದು ಮುದ್ರಣ ಸಂಸ್ಥೆ ಹೇಗಿರಬೇಕು ಎಂಬುದಕ್ಕೆ ಮನೋಹರ ಮುದ್ರಣಾಲಯ ಮಾದರಿ’ ಎಂದು ಅಭಿಮಾನದಿಂದ ನುಡಿಯುತ್ತಾರೆ.

ಹಿರಿಯ ಸಾಹಿತಿ ಜಿ.ಎಂ. ಹೆಗಡೆಯವರಂತೂ ಮನೋಹರ ಮುದ್ರಣಾಲಯ ಮತ್ತು ಅದರ ರೂವಾರಿ ರವಿ ಆಕಳವಾಡಿ ಅವರ ಹೆಸರು ಹೇಳುತ್ತಿದ್ದಂತೆ ಭಾವಾವೇಶಕ್ಕೆ ಒಳಗಾಗಿ, ‘ಈ ಸಂಸ್ಥೆಯ ಸಂಸ್ಥಾಪಕರಾದ ಸೋಮಶೇಖರ ಆಕಳವಾಡಿ ಅವರ ಕಾಲದಿಂದ ಅದರೊಂದಿಗೆ ನನಗೆ ಸಂಬಂಧವಿದೆ. ನನ್ನ 65 ಹಾಗೂ ಸ್ವರ್ಣವಲ್ಲಿ ಮಠದ 110 ಪುಸ್ತಕಗಳನ್ನು ಅವರು ಒಂದಿಷ್ಟೂ ದಣಿವಿಲ್ಲದೆ ಸೊಗಸಾಗಿ, ಬಂಧುರವಾಗಿ ಮುದ್ರಿಸಿಕೊಟ್ಟಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ, ಹಲವಾರು ಮಠಗಳ, ಸಂಘ ಸಂಸ್ಥೆಗಳ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಮುಂಜಾನೆ 8ರಿಂದ ರಾತ್ರಿ 10ರವರೆಗೆ ಕೆಲಸ ಮಾಡುತ್ತಾರೆ. ರಾತ್ರಿ ಮನೆಯಲ್ಲೂ ಪ್ರೂಫ್ ತಿದ್ದುತ್ತಾರೆ. ಅವರೇ ಕವರ್ ಡಿಜೈನ್, ಎಡಿಟಿಂಗ್ ಎಲ್ಲ ಕೆಲಸ ಮಾಡುತ್ತಾರೆ. ಅಚ್ಚು ಮೊಳೆ ಮುದ್ರಣದಿಂದ ಈಗ ಡಿಟಿಪಿ ಮುದ್ರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಾಕ್ಸ್ ಪ್ರಿಂಟಿಂಗ್‌ನಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ. ತ್ರಾಸದ ಗಟ್ಟಿಮುಟ್ಟಾದ ಸಾಂಪ್ರದಾಯಿಕ ಶೈಲಿಯ ಹೊಲಿಗೆ ಪುಸ್ತಗಳನ್ನು ಮಾಡುತ್ತಾರೆ. ಸೌಂದರ್ಯಕ್ಕಿಂತ ಗುಣಮಟ್ಟ ಮತ್ತು ಕಡಿಮೆ ಖರ್ಚಿನ ಲೆಕ್ಕವನ್ನು ಹಾಕುತ್ತಾರೆ. ಹೀಗಾಗಿ ಲೇಖಕರಿಗೆ, ಪ್ರಕಾಶಕರಿಗೆ ಬಹಳ ಅನುಕೂಲವಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ ಹೀಗೆ ಬೇರೆ ಬೇರೆ ಭಾಷೆಗಳ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಅವರೊಬ್ಬ ನಿಘಂಟು, ಜ್ಞಾನಕೋಶ ಇದ್ದಂತೆ. ಹಣ ಕೇಳದೆ ಪುಸ್ತಕ ಮುದ್ರಿಸಿ ಕೊಡುವ ಏಕೈಕ ಮುದ್ರಕ! ನೀವಾಗೇ ತಿಳಿದು ಹಣ ಕೊಡಬೇಕು ಅಷ್ಟೆ. ಇದರಿಂದ ಅವರು ಸಾಕಷ್ಟು ಹಾನಿ, ಮೋಸ ಅನುಭವಿಸಿದ್ದಾರೆ. ಆದರೆ ಎಂದೂ ಚಿಂತೆ ಮಾಡಿಲ್ಲ. ವೈರಿಗಳೇ ಇಲ್ಲದ ಸಂಭಾವಿತ. ಉನ್ನತ ಹುದ್ದೆ, ಸಂಬಳದ ಅವಕಾಶ ಬಂದರೂ ತಂದೆಯ ಮಾತಿಗೆ ಕಟ್ಟುಬಿದ್ದು ಅಲ್ಪತೃಪ್ತಿಯಿಂದ ವ್ರತದಂತೆ ಪುಸ್ತಕ ಸೇವೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.


ಮನೋಹರ ಮುದ್ರಣಾಲಯದಲ್ಲಿ ಅಜಿತ್ ಮಿರ್ಜಿ ಅಣ್ಣಾರಾಯರು, ರವೀಂದ್ರ ಆಕಳವಾಡಿ, ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಮತ್ತು ವಿ.ಸಿ. ಐರಸಂಗ.

ಪುಸ್ತಕ ಅಡ್ಡೆ ಕುರಿತು ಹೇಳಿದ ಮೇಲೆ ಪಡ್ಡಿನ ಕುರಿತು ಹೇಳದಿದ್ದರೆ ಹೇಗೆ? ಈ ಅಡ್ಡೆಯ ಎದುರುಗಡೆ ಒಂದು ಹೋಟೆಲಿದೆ. ಅದು ಹೋಟೆಲ್ ಅನ್ನುವುದಕ್ಕಿಂತ ಲೋಕಸಂದಣಿ ಎಂದರೆ ಸರಿಯಾದೀತು. ಅದರ ತಿಂಡಿಯ ಗಮ್ಮತ್ತೇ ಅಂತಹುದು. ಅಲ್ಲಿ ಎಲ್ಲಾ ವೃತ್ತಿಯ, ವಯೋಮಾನದ, ಜಾತಿ–ಧರ್ಮದ, ಅಂತಸ್ತು ಅಧಿಕಾರದ ಹಮ್ಮಬಿಮ್ಮಗಳಿಲ್ಲದೆ ಗೌಂಡಿ, ತರಕಾರಿಯವ, ರೈತ, ವ್ಯಾಪಾರಿ, ನೌಕರ, ಸಾಹಿತಿ, ಸನ್ಯಾಸಿ, ಪ್ರಾಧ್ಯಾಪಕ ಹೀಗೆ ಭಿನ್ನ ವಿಭಿನ್ನ ಲೋಕದ ಕಿನ್ನರರು ತಮ್ಮ ಕತೆಗಳನ್ನು ವ್ಯಥೆಗಳನ್ನು ಹರಟುತ್ತ ಭುಜಕ್ಕೆ ಭುಜ ತಾಗಿಸಿಕೊಂಡು ಲೋಕಾಭಿರಾಮವಾಗಿ ಪಡ್ಡು– ಚಟ್ನಿ, ಗಿರ್ಮಿಟ್ಟು, ಮಿರ್ಚಿ– ಭಜಿ, ಪೂರಿ, ದೋಸೆ ಚಚ್ಚುತ್ತಿರುತ್ತಾರೆ. ಒಬ್ಬ ಸಾಹಿತಿಗೆ ಇದಕ್ಕಿಂತ ದೊಡ್ಡ ಲೋಕಾನುಭವ ಸರಕಿನ ಜಾಗ ಇನ್ನೆಲ್ಲಿ ಸಿಕ್ಕೀತು?! ಅಂದಹಾಗೆ, ಪಡ್ಡು ಚಟ್ನಿ ಪ್ರಸಿದ್ಧಿಯ ಸರಸ್ವತಿ ಹೋಟೆಲ್‌ನ ಕಾಮತ ಕುಟುಂಬದವರು 70- 80 ವರ್ಷಗಳಿಂದ ಇಲ್ಲಿ ನೆಲೆಸಿ ಸಾಂಸ್ಕೃತಿಕ ನಗರಿಯ ಜನರ ಅಭಿರುಚಿಗೆ ತಕ್ಕಂತೆ ಈ ಸರಸ್ವತಿಯನ್ನು ರುಚಿಕಟ್ಟಾಗಿ ಬೆಳೆಸಿದ್ದಾರೆ. ಸೋವಿಯಾದ ಸವಿಯಾದ ತಿಂಡಿಯಿಂದಾಗಿ ಅಡ್ಡೆಗೆ ಬರುವ ಸಾಹಿತಿಗಳು ಪಡ್ಡು ತಿಂದು, ರುಚಿ ಆಸ್ವಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT