ಉಡುಪಿ: ಕರಾವಳಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಮೀನುಗಾರರ ಬಹುದಿನಗಳ ಬೇಡಿಕೆಗಳಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಬಾರಿಯ ಬಜೆಟ್ನಲ್ಲಾದರೂ ಬೇಡಿಕೆಗಳು ಈಡೇರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಮೀನುಗಾರರು.
ಪ್ರಮುಖ ಬೇಡಿಕೆಗಳು ಏನು:
ಆಳ ಸಮುದ್ರ ಮೀನುಗಾರಿಕೆಗೆ ಪ್ರತಿ ದಿನ ನೀಡಲಾಗುತ್ತಿರುವ 300 ಲೀಟರ್ ಸಬ್ಸಿಡಿ ಡೀಸೆಲ್ ಪ್ರಮಾಣವನ್ನು 500 ಲೀಟರ್ಗೆ ಹೆಚ್ಚಿಸಬೇಕು. 15 ರಿಂದ 20 ವರ್ಷಗಳ ಹಿಂದೆ 140 ಎಚ್ಪಿ ಇಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಟ್ಗಳಿಗೆ 300 ಲೀಟರ್ ಡೀಸೆಲ್ ನಿಗದಿಪಡಿಸಲಾಗಿತ್ತು. ಬೋಟ್ಗಳ ಎಂಜಿನ್ ಸಾಮರ್ಥ್ಯ 360 ಎಚ್ಪಿಗೆ ಹೆಚ್ಚಾಗಿದ್ದಾರೂ ಇಂದಿಗೂ ಡಿಸೇಲ್ ಪ್ರಮಾಣ ಹೆಚ್ಚಿಸಿಲ್ಲ.
ದಕ್ಕೆಗಳಲ್ಲಿ ಬೋಟ್ಗಳ ಸಂಖ್ಯೆಯೂ ಎರಡರಿಂದ ಮೂರು ಪಟ್ಟು ಹೆಚ್ಚಾಗಿದ್ದು ಬೋಟ್ಗಳ ಸಂಖ್ಯೆಗೆ ಅನುಗುಣವಾಗಿ ಡೀಸೆಲ್ ಪ್ರಮಾಣ ಹೆಚ್ಚಿಸಬೇಕು. ವಾರ್ಷಿಕ ಡೀಸೆಲ್ ಮಿತಿಯನ್ನು 1.50 ಲಕ್ಷ ಲೀಟರ್ನಿಂದ 2 ಲಕ್ಷಕ್ಕೆ ಏರಿಕೆ ಮಾಡಬೇಕು ಎಂಬುದು ಮೀನುಗಾರರ ಪ್ರಮುಖ ಬೇಡಿಕೆಯಾಗಿದೆ.
ಆಳಸಮುದ್ರ ಮೀನುಗಾರಿಕೆಗೆ ನೀಡುವ ಸಬ್ಸಿಡಿ ಡೀಸೆಲ್ ಖೋಟಾ ಮುಗಿದಿರುವ ಪರಿಣಾಮ ಮಾರುಕಟ್ಟೆ ದರದಲ್ಲಿ ಡೀಸೆಲ್ ಖರೀದಿಸಿ ಮೀನುಗಾರಿಕೆ ಮಾಡಲಾಗದೆ ಮೀನುಗಾರಿಕೆ ಸ್ಥಗಿತವಾಗಿದೆ. ಮಾರ್ಚ್ ಅಂತ್ಯದವರೆಗೂ ಬೇಕಾಗುವ ಡೀಸೆಲ್ ಪ್ರಮಾಣವನ್ನು ಮುಂಗಡವಾಗಿ ನೀಡಲು ಬಜೆಟ್ನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಮೀನುಗಾರರು.
ನಾಡದೋಣಿ ಮೀನುಗಾರರಿಗೆ ಪ್ರತಿ ತಿಂಗಳು ನಿಯಮಿತವಾಗಿ ಸೀಮೆಎಣ್ಣೆ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲೂ ಸೀಮೆಎಣ್ಣೆ ಲಭ್ಯವಾಗದೆ ಮೀನುಗಾರಿಕೆ ನಿಂತುಹೋಗಿದೆ. ಪ್ರತಿ ತಿಂಗಳು ಸರ್ಕಾರ ಸೀಮೆಎಣ್ಣೆ ಬಿಡುಗಡೆ ಮಾಡಲು ನಿಯಮ ರೂಪಿಸಿಬೇಕು ಎಂದು ಒತ್ತಾಯಿಸುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.
ಬಂದರು ಹೂಳೆತ್ತಿ:
ಬಂದರುಗಳನ್ನು ಕಾಲಕಾಲಕ್ಕೆ ಹೂಳೆತ್ತದ ಪರಿಣಾಮ ಬೋಟ್ಗಳು ಸರಾಗವಾಗಿ ಬಂದರು ಪ್ರವೇಶಿಸಲು ಹಾಗೂ ಮೀನುಗಾರಿಕೆಗೆ ಹೋಗಲು ಅಡ್ಡಿಯಾಗಿದೆ. ಬೋಟ್ನಿಂದ ಆಯತಪ್ಪಿ ಬೀಳುವ ಕಾರ್ಮಿಕರು ಹೂಳಿನಲ್ಲಿ ಸಿಲುಕಿ ಮೃತಪಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ನೂರಾರು ಮೀನುಗಾರರು ಹಾಗೂ ಕಾರ್ಮಿಕರು ಬಲಿಯಾಗಿದ್ದಾರೆ.
ಪ್ರತಿ ಮಳೆಗಾಲದಲ್ಲಿ ನದಿಗಳಿಂದ ದೊಡ್ಡ ಪ್ರಮಾಣದಲ್ಲಿ ಹೂಳು ಸಮುದ್ರಕ್ಕೆ ಸೇರುತ್ತದೆ. ಹಾಗಾಗಿ, ಪ್ರತಿವರ್ಷ ಬಂದರು ಹೂಳೆತ್ತಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಬಜೆಟ್ನಲ್ಲಿ ಪ್ರತ್ಯೇಕ ನಿಧಿ ಮೀಸಲಿಡಬೇಕು ಎಂಬುದು ಮೀನುಗಾರರ ಒತ್ತಾಯ.
ಕೃಷಿಗೆ ಹೋಲಿಕೆ ಮಾಡಿದರೆ ಮೀನುಗಾರಿಕಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಮೀಸಲಿಡುವ ಅನುದಾನ ತೀರಾ ಕಡಿಮೆ ಇದ್ದು, ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಮೀನುಗಾರರನ್ನು ರೈತರಂತೆ ಪರಿಗಣಿಸಬೇಕು. ಬಜೆಟ್ನಲ್ಲಿ ಕನಿಷ್ಠ 1,000 ಕೋಟಿ ಮೀಸಲಿಡಬೇಕು. ಮತ್ಯಾಶ್ರಯ ಯೋಜನೆಯಡಿ ಬಡ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂಬುದು ಪ್ರಮುಖವಾದ ಬೇಡಿಕೆ.
ಸಿಎಂಗೆ ಬೇಡಿಕೆಗಳ ಮನವಿ ಸಲ್ಲಿಕೆ
ಜ.25ರಂದು ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ಮೀನುಗಾರರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಹಲವು ಬೇಡಿಕೆಗಳ ಮನವಿ ಸಲ್ಲಿಸಿದ್ದೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಬಜೆಟ್ನಲ್ಲಿ ಮೀನುಗಾರರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಸಿಗಬಹುದು ಎಂಬ ವಿಶ್ವಾಸವಿದೆ. ಸಂಕಷ್ಟದಲ್ಲಿರುವ ಮೀನುಗಾರಿಕಾ ಕ್ಷೇತ್ರಕ್ಕೆ ಸರ್ಕಾರದ ಉತ್ತೇಜನ ಅತ್ಯಗತ್ಯವಾಗಿದೆ.
–ದಯಾನಂದ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.