ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2024 | ಬೆಂಗಳೂರು: ರಾತ್ರಿ 1ರವರೆಗೆ ವ್ಯಾಪಾರ!

Published 17 ಫೆಬ್ರುವರಿ 2024, 0:25 IST
Last Updated 17 ಫೆಬ್ರುವರಿ 2024, 0:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ರಾತ್ರಿ 11 ಗಂಟೆಯವರೆಗಿದ್ದ ವಹಿವಾಟಿನ ಅವಕಾಶವನ್ನು ವಾಣಿಜ್ಯ ಮತ್ತು ವ್ಯಾಪಾರವನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ರಾತ್ರಿ 1ರವರೆಗೆ ವಿಸ್ತರಿಸುವುದಾಗಿ ಪ್ರಕಟಿಸಲಾಗಿದೆ.

ತಿಂಡಿ–ತಿನಿಸು ಮಾರುವ ಅಂಗಡಿಗಳು ಹಾಗೂ ಹೋಟೆಲ್‌ಗಳ ವಹಿವಾಟು ಅವಧಿಯನ್ನು ರಾತ್ರಿ 1 ಗಂಟೆಯವರೆಗೂ ವಿಸ್ತರಿಸಿ, ಅಂದಿನ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು 2022 ಅ.14ರಂದು ಆದೇಶ ಹೊರಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಯಾವುದೇ ಆದೇಶವಿಲ್ಲದೇ 11ರ ನಂತರದ ವಹಿವಾಟಿಗೆ ತೆರೆ ಬಿದ್ದಿತ್ತು.

ಇದೀಗ ನಗರದಲ್ಲಿ ರಾತ್ರಿ 1ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಇದು ಎಂದಿನಿಂದ ಜಾರಿಯಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಿದೆ.

*ನಗರದ ಪ್ರಮುಖ ರಸ್ತೆಗಳಲ್ಲಿ ₹1,700 ಕೋಟಿ ವೆಚ್ಚದಲ್ಲಿ 147 ಕಿ.ಮೀ ಉದ್ದದ ವೈಟ್‌ ಟಾಪಿಂಗ್‌ ರಸ್ತೆ ಕಾಮಗಾರಿ 2025 ಡಿಸೆಂಬರ್‌ಗೆ ಪೂರ್ಣ.

*ಸಂಚಾರ ದಟ್ಟಣೆ ಅತ್ಯಂತ ತೀವ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕವಾಗಿ ಸುರಂಗ ರಸ್ತೆ ಈ ವರ್ಷ ನಿರ್ಮಾಣ.

*ರಾಜಕಾಲುವೆ ಬಫರ್‌ ಝೋನ್‌ನಲ್ಲಿ ಸರ್ವಋತು ರಸ್ತೆ ನಿರ್ಮಾಣ ₹200 ಕೋಟಿಯಲ್ಲಿ ಆರಂಭವಾಗಿದ್ದು, 100 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿ.

*ಆರ್ಥಿಕ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಹಕಾರಿಯಾಗಲು ಪೆರಿಫೆರಲ್  ವರ್ತುಲ ರಸ್ತೆ (ಪಿಆರ್‌ಆರ್) ಅನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಪರಿಕಲ್ಪನೆಯಲ್ಲಿ ಪರಿಚಯ. ಪಿಪಿಪಿ ಮಾದರಿಯಲ್ಲಿ ₹27 ಸಾವಿರ ಕೋಟಿಯಲ್ಲಿ 73 ಕಿ.ಮೀ ಅಭಿವೃದ್ಧಿ.

*ಬೆಂಗಳೂರು ನಗರದಲ್ಲಿ 250 ಮೀಟರ್‌ ಎತ್ತರದ ಸ್ಕೈ-ಡೆಕ್‌ ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಮಟ್ಟದ ವಾಸ್ತುವಿನ್ಯಾಸಗಾರರ ಆಹ್ವಾನ.

*ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್  ಸ್ಥಾಪನೆ.

*ತ್ಯಾಜ್ಯ ವಿಲೇವಾರಿಗೆ ನಗರ ಜಿಲ್ಲೆಯನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ವಲಯಕ್ಕೂ ನುರಿತ ಸಂಸ್ಥೆಯನ್ನು ಪಾರದರ್ಶಕವಾಗಿ ನೇಮಿಸಲಾಗುವುದು.

*ಬಿಬಿಎಂಪಿಯ ಅರಣ್ಯ, ಕೆರೆ ಮತ್ತು ತೋಟಗಾರಿಕಾ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣಾ ವಿಭಾಗ ಎಂದು ಮರುನಾಮಕರಣ. ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಪ್ರತ್ಯೇಕ ನೀತಿ.

*ಬಿಬಿಎಂಪಿ ಸಹಯೋಗದೊಂದಿಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ‘ಸರ್ವಜ್ಞ ಉದ್ಯಾನ’ ಅಭಿವೃದ್ಧಿ.

*ನಮ್ಮ ಮೆಟ್ರೊಗೆ 2025ರ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ ಮಾರ್ಗ

*ನಮ್ಮ ಮೆಟ್ರೋ ಹಂತ-3ಎ ರಡಿಯಲ್ಲಿ ಸರ್ಜಾಪುರದಿಂದ ಹೆಬ್ಬಾಳ ಸಂಪರ್ಕಿಸುವ ಮಾರ್ಗಕ್ಕೆ ಡಿ.ಪಿ.ಆರ್. ಕರಡು ಸಿದ್ಧ. ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲು ನಿರ್ಧಾರ.

*ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 1,334 ಹೊಸ ಎಲೆಕ್ಟ್ರಿಕ್ ಬಸ್‌ ಹಾಗೂ 820 ಬಿಎಸ್-6 ಡೀಸೆಲ್ ಬಸ್‌ಗಳ ಸೇರ್ಪಡೆ.

*ಬಿಎಂಟಿಸಿಯಲ್ಲಿ ಮಹಿಳಾ ಸುರಕ್ಷತೆಯನ್ನು ಒಳಗೊಂಡ ‘ವೆಹಿಕಲ್‌ ಟ್ರ್ಯಾಕಿಂಗ್’ ಮೊಬೈಲ್‌ ಆ್ಯಪ್‌ ಅನುಷ್ಠಾನ.

*ಜಲಮಂಡಳಿಯಿಂದ ಕಾವೇರಿ ಹಂತ-5 ಯೋಜನೆಯಡಿ ಮೇ 2024ರ ವೇಳೆಗೆ 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.

*ಕಾವೇರಿ ಹಂತ-5 ರಡಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ಡಿಸೆಂಬರ್ 2024ರಲ್ಲಿ ಪೂರ್ಣಗೊಳಿಸಲಾಗುವುದು. 

*ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ₹441 ಕೋಟಿ ವೆಚ್ಚದಲ್ಲಿ ಉನ್ನತೀಕರಣ. 268 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ.

*₹200 ಕೋಟಿ ವೆಚ್ಚದಲ್ಲಿ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT