ನವದೆಹಲಿ:ಬಜೆಟ್ ದಿನವೂ ರೈತರ ಪ್ರತಿಭಟನೆ ತೀವ್ರಗೊಳ್ಳುವ ಆತಂಕ ಎದುರಾಗಿರುವ ಕಾರಣ ದೆಹಲಿ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈತರು ಬ್ಯಾರಿಕೇಡ್ಗಳನ್ನು ದಾಟಿ ಮುನ್ನುಗ್ಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿಭಟನಾನಿರತ ರೈತರು ಇಂದು (ಸೋಮವಾರ) ‘ಸಂಸತ್ ಕಡೆಗೆ ನಡಿಗೆ’ಗೆ ಕರೆ ನೀಡಿದ್ದಾರೆ. ಗಣರಾಜ್ಯೋತ್ಸವದ ದಿನ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಬಜೆಟ್ ದಿನ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
ರೈತರು ಮುನ್ನುಗ್ಗದಂತೆ ತಡೆಯುವ ಸಲುವಾಗಿ ದೆಹಲಿ ಗಡಿ ಪ್ರದೇಶಗಳಲ್ಲಿ ಕಾಂಕ್ರೀಟ್ ಚಪ್ಪಡಿಗಳು ಮತ್ತು ಬ್ಯಾರಿಕೇಡ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇರಿಸಲಾಗಿದೆ. ಟ್ರ್ಯಾಕ್ಟರ್ಗಳನ್ನು ತಡೆಯಲೂ ಕ್ರಮ ಕೈಗೊಳ್ಳಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿರುವ ವೇಳೆಯೇ ಸಂಸತ್ಗೆ ಘೆರಾವ್ ಹಾಕಲು ಪ್ರತಿಭಟನಾ ನಿರತ ರೈತರು ಕರೆ ನೀಡಿದ್ದಾರೆ.
‘ಪ್ರತಿಭಟನೆನಿರತ ರೈತರು ಪ್ರಧಾನಿಯ ಘನತೆಯನ್ನು ಗೌರವಿಸುತ್ತಾರೆ. ಅದರೆ ತಮ್ಮ ಆತ್ಮಗೌರವವನ್ನು ರಕ್ಷಿಸಿಕೊಳ್ಳಲೂ ಬದ್ಧರಾಗಿದ್ದಾರೆ’ ಎಂದು ಭಾರತೀಯ ಕಿಸಾನ್ ಯೂನಿಯನ್ನ ನಾಯಕರಾದ ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಭಾನುವಾರ ಹೇಳಿದ್ದರು.