ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿದ್ದರೂ ಕೃಷಿ ಚಟುವಟಿಕೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿಲ್ಲ. ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುವ ನಿರೀಕ್ಷೆ ಮಾಡಲಾಗಿದೆ.
ಮುಂಗಾರು ಉತ್ತಮವಾಗಿ ಸುರಿಯುತ್ತಿದ್ದು, ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆಯಾಗಿದೆ. ಇದರಿಂದ ಆಹಾರ ಧಾನ್ಯಗಳ ಉತ್ಪಾದನೆಯು ಕಳೆದ ವರ್ಷದ ದಾಖಲೆ ಮಟ್ಟವನ್ನೂ ಮೀರಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
ಜೂನ್ 1ರಿಂದ ಬಿತ್ತನೆ ಆರಂಭವಾಗಿದ್ದು, ಇಲ್ಲಿಯವರೆಗೆ 10.82 ಕೋಟಿ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
‘2020–21ನೇ ಬೆಳೆ ವರ್ಷದಲ್ಲಿ ಉತ್ಪಾದನೆಯು 29.83 ಕೋಟಿ ಟನ್ಗಳ ಗುರಿಯನ್ನೂ ದಾಟುವ ವಿಶ್ವಾಸವಿದೆ’ ಎಂದು ಕೃಷಿ ಸಚಿವ ನರೇಂದ್ರ ಸಿಮಗ್ ತೊಮರ್ ಹೇಳಿದ್ದಾರೆ.
2019–20ನೇ ಬೆಳೆ ವರ್ಷದಲ್ಲಿ 29.56 ಕೋಟಿ ಟನ್ಗಳಷ್ಟು ಉತ್ಪಾದನೆ ಆಗಿತ್ತು.
ದೇಶದಲ್ಲಿ ಸರಾಸರಿಗಿಂತಲೂ ಶೇ 24ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.
52 ಲಕ್ಷ ಹೆಕ್ಟೇರ್ಗಳಲ್ಲಿ ಕಬ್ಬು ಬಿತ್ತನೆಯಾಗಿದೆ. ಜೋಳ ಬಿತ್ತನೆಯು 70 ಲಕ್ಷ ಹೆಕ್ಟೇರ್ಗಳಿಂದ 80 ಲಕ್ಷ ಹೆಕ್ಟೇರ್ಗಳಿಗೆ ಅಲ್ಪ ಏರಿಕೆ ಕಂಡಿದೆ.