ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌: ಕಾರ್ಪೊರೇಟ್‌ ಕಂಪನಿಗಳು ಬೇಡವೆಂದಿದ್ದ ತಜ್ಞರು

Last Updated 24 ನವೆಂಬರ್ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ನ ಪ್ರವರ್ತಕರಾಗಲು ಅವಕಾಶ ಕೊಡಬಾರದು ಎಂಬ ಅಭಿಪ್ರಾಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿ ಬಳಿ ಬಹುತೇಕ ತಜ್ಞರು ವ್ಯಕ್ತಪಡಿಸಿದ್ದರು. ಕಾರ್ಪೊರೇಟ್ ಕಂಪನಿಗಳು ತಮಗೇ ಸಾಲ ಕೊಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದರು.

ಆಂತರಿಕ ಸಮಿತಿ ನೀಡಿರುವ ಶಿಫಾರಸುಗಳನ್ನು ಆರ್‌ಬಿಐ ಕಳೆದ ವಾರ ಬಹಿರಂಗಪಡಿಸಿದೆ. ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ– 1949ಕ್ಕೆ ಸೂಕ್ತ ತಿದ್ದುಪಡಿಗಳನ್ನು ತಂದ ನಂತರ, ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ನ ಪ್ರವರ್ತಕರಾಗಲು ಅವಕಾಶ ಕೊಡಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ.

ಖಾಸಗಿ ಬ್ಯಾಂಕ್‌ ಪ್ರವರ್ತಕರು ಈಗ ಗರಿಷ್ಠ ಶೇಕಡ 15ರಷ್ಟು ಷೇರುಗಳನ್ನು ಹೊಂದಲು ಅವಕಾಶ ಇದ್ದು, 15 ವರ್ಷಗಳ ಅವಧಿಯಲ್ಲಿ ಈ ಪ್ರಮಾಣವನ್ನು ಗರಿಷ್ಠ ಶೇಕಡ 26ರಷ್ಟಕ್ಕೆ ಹೆಚ್ಚಿಸಲು ಅವಕಾಶ ಕೊಡಬಹುದು ಎಂಬುದೂ ಆಂತರಿಕ ಸಮಿತಿಯ ಶಿಫಾರಸುಗಳಲ್ಲಿ ಒಂದು.

‘ಕಾರ್ಪೊರೇಟ್ ಕಂಪನಿಗಳಲ್ಲಿನ ಈಗಿರುವ ಆಡಳಿತ ಸಂಸ್ಕೃತಿಯು ಜಾಗತಿಕ ಮಟ್ಟಕ್ಕೆ ಸರಿಸಮನಾಗಿ ಇಲ್ಲ’ ಹಾಗೂ ಖಾಸಗಿ ಬ್ಯಾಂಕ್‌ಗಳ ಪ್ರವರ್ತಕರಾಗುವ ಕಂಪನಿಗಳ ‘ಹಣಕಾಸು ಚಟುವಟಿಕೆಗಳು ಮತ್ತು ಹಣಕಾಸಿಗೆ ಸಂಬಂಧಿಸಿರದ ಚಟುವಟಿಕೆಗಳ ಮೇಲೆ ಮಿತಿ ಹೇರುವುದು ಕಷ್ಟದ ಕೆಲಸ’ ಎಂಬುದು ಈ ಪ್ರಸ್ತಾವಕ್ಕೆ ವಿರುದ್ಧವಾಗಿದ್ದ ತಜ್ಞರ ಅಭಿಪ್ರಾಯವಾಗಿತ್ತು ಎಂದು ಆಂತರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ. ವರದಿಯನ್ನು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ವರದಿ ಸಿದ್ಧಪಡಿಸುವ ಮೊದಲು ಸಮಿತಿಯು ಲೆಕ್ಕಪತ್ರ ತಪಾಸಣೆ, ಕಾನೂನು, ಬ್ಯಾಂಕಿಂಗ್ ಕ್ಷೇತ್ರಗಳ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಒಬ್ಬರನ್ನು ಹೊರತುಪಡಿಸಿ, ಉಳಿದ ಎಲ್ಲರೂ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ಗಳ ಪ್ರವರ್ತಕರಾಗಲು ಅವಕಾಶ ಕೊಡಬಾರದು ಎಂಬ ಅಭಿಪ್ರಾಯ ನೀಡಿದ್ದರು.

‘ಕಾರ್ಪೊರೇಟ್ ಕಂಪನಿಗಳು ತಮ್ಮದೇ ವಹಿವಾಟುಗಳಿಗೆ ಅನಗತ್ಯವಾಗಿ ಸಾಲ ಕೊಟ್ಟುಕೊಳ್ಳಬಹುದು ಅಥವಾ ವ್ಯವಹಾರಗಳಲ್ಲಿ ತಮಗೆ ಹತ್ತಿರವಾದವರಿಗೆ ಸಾಲ ಕೊಡಲು ಮುಂದಾಗಬಹುದು. ಅವು ತಮ್ಮ ಹಣಕಾಸೇತರ ವ್ಯವಹಾರಗಳ ಪೂರೈಕೆ ಮತ್ತು ವಿತರಣೆ ವ್ಯವಸ್ಥೆಗೆ ಸಾಲ ಕೊಡುವಂತೆ ಪ್ರಭಾವ ಬೀರಬಹುದು ಅಥವಾ ತಮ್ಮ ಇತರ ಗ್ರಾಹಕರಿಗೆ ಸಾಲ ಕೊಡುವಂತೆ ಪ್ರಭಾವ ಬೀರಬಹುದು’ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದನ್ನು ಆಂತರಿಕ ಸಮಿತಿಯ ವರದಿಯು ದಾಖಲಿಸಿದೆ.

ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಮೇಲೆ ಕಾರ್ಪೊರೇಟ್‌ ಕಂಪನಿಗಳು ಪ್ರಭಾವ ಬೀರುವುದನ್ನು ತಡೆಯುವುದು ಕೂಡ ಕಷ್ಟದ ಕೆಲಸ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಪೊರೇಟ್ ಕಂಪನಿಗಳು ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂಡವಾಳ ತರಬಲ್ಲವು ಎಂಬ ವಾದ ಇದೆ. ಈ ವಿಚಾರವಾಗಿ ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೂಡ ಆಂತರಿಕ ಸಮಿತಿಯ ವರದಿ ಉಲ್ಲೇಖಿಸಿದೆ. ‘ಚೆನ್ನಾಗಿ ನಡೆಯುತ್ತಿರುವ ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳವನ್ನು ತರುವುದು ಈಗಿನ ವ್ಯವಸ್ಥೆಯಲ್ಲಿ ಕಷ್ಟವಲ್ಲ. ದೇಶದಲ್ಲಿ ಒಳ್ಳೆಯ ಆಡಳಿತ ಇರುವ ಈಕ್ವಿಟಿ ಮಾರುಕಟ್ಟೆ ಇದೆ. ಒಳ್ಳೆಯ ಆಡಳಿತ ವ್ಯವಸ್ಥೆ ಇರುವ ಬ್ಯಾಂಕ್‌ಗಳು ಸಾರ್ವಜನಿಕರಿಂದ ಮಾರುಕಟ್ಟೆ ಮೂಲಕ ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ಸು ಕಂಡಿವೆ. ಕಾರ್ಪೊರೇಟ್ ಕಂಪನಿಗಳು ಬ್ಯಾಂಕ್‌ಗಳ ಪ್ರವರ್ತಕರಾಗಲು ಅವಕಾಶ ಕೊಡುವ ಮೊದಲು ನಿಯಂತ್ರಣ ವ್ಯವಸ್ಥೆಯನ್ನು ಉತ್ತಮಪಡಿಸುವ ಅಗತ್ಯವಿದೆ’ ಎಂದು ತಜ್ಞರು ಹೇಳಿದ್ದಾರೆ.

*

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಪ್ರವರ್ತಕರಾಗಲು ಅವಕಾಶ ನೀಡಬೇಕಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿರುವ ಮಾತನ್ನು ನಾನು ಅನುಮೋದಿಸುತ್ತೇನೆ. ಕಾರ್ಪೊರೇಟ್‌ ಕಂಪನಿಗಳು ದೊಡ್ಡ ಮೊತ್ತದ ಸಾಲ ಪಡೆದಿರುತ್ತವೆ. ಅವರೇ ಬ್ಯಾಂಕ್‌ಗಳ ಪ್ರವರ್ತಕರಾಗುವುದು ಸರಿಯಲ್ಲ. ಠೇವಣಿದಾರರ ಹಿತದೃಷ್ಟಿಯಿಂದ ಕೂಡ ಇದು ಒಳ್ಳೆಯ ಆಲೋಚನೆ ಅಲ್ಲ.
-ಎಂ.ಎಸ್. ಶ್ರೀರಾಮ್,ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT