ಮುಂಬೈ (ಪಿಟಿಐ): ’ಕೊರೊನಾ–2‘ ವೈರಸ್ ಹಾವಳಿ ಕಾರಣಕ್ಕೆ ವಹಿವಾಟಿನ ಮೇಲೆ ಆಗಿರುವ ಪರಿಣಾಮದಿಂದ ಕಾರ್ಮಿಕರನ್ನು ರಕ್ಷಿಸಲು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿಯು (ಜಿಜೆಇಪಿಸಿ) ₹50 ಕೊಟಿ ಮೊತ್ತದ ಕ್ಷೇಮಾಭಿವೃದ್ಧಿ ನಿಧಿ ಘೋಷಿಸಿದೆ.
‘ಜಗತ್ತೇ ಕೋವಿಡ್–19ಗೆ ಸಿಲುಕಿ ನರಳುತ್ತಿದೆ. ಭಾರತದಲ್ಲಿಯೂ ಇದರ ತೀವ್ರತೆ ಹೆಚ್ಚಾಗುತ್ತಿದೆ. ಇಂತಹ ಕಷ್ಟಕಾಲದಲ್ಲಿ ನಮ್ಮ ಕಾರ್ಮಿಕರ ರಕ್ಷಣೆ ಮಾಡುವುದು ಅಗತ್ಯವಾಗಿದೆ’ ಎಂದು ಮಂಡಳಿಯ ಅಧ್ಯಕ್ಷ ಪ್ರಮೋದ್ ಅಗರ್ವಾಲ್ ತಿಳಿಸಿದ್ದಾರೆ.
ದೇಶದಾದ್ಯಂತ ಈ ವಲಯದಲ್ಲಿ 50 ಲಕ್ಷಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.‘ಇಂತಹ ಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಉದ್ಯೋಗಿಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಹಾಗೂ ಮಾನವೀಯತೆಯಿಂದ ವರ್ತಿಸುವಂತೆ’ ಅವರು ಒತ್ತಾಯಿಸಿದ್ದಾರೆ.
‘ಕೇಂದ್ರದ ನಿರ್ಧಾರದಿಂದ ಹರಳು ಮತ್ತು ಚಿನ್ನಾಭರಣ ವಲಯದಲ್ಲಿನ ಎಂಎಸ್ಎಂಇಗಳಿಗೆ ಪ್ರಯೋಜನ ಆಗಲಿದೆ’ ಎಂದು ಮಂಡಳಿಯ ಉಪಾಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.
₹ 5 ಕೋಟಿಗಿಂತಲೂ ಕಡಿಮೆ ವಾರ್ಷಿಕ ವರಮಾನ ಹೊಂದಿರುವ ಉದ್ದಿಮೆಗಳಿಗೆಜಿಎಸ್ಟಿ ರಿಟರ್ನ್ಸ್ ಪಾವತಿಗೆ ವಿಳಂಬ ಶುಲ್ಕ, ದಂಡ ಮತ್ತು ಬಡ್ಡಿದರ ಇಲ್ಲದೇ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಿರುವುದು ನಗದು ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.