ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮೇ 13ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಆದಾಗ್ಯೂ, ಆ ಬಳಿಕ ಇಲ್ಲಿಯವರೆಗೆ 18 ಲಕ್ಷ ಟನ್ ಗೋಧಿ ರಫ್ತು ಮಾಡಲಾಗಿದೆ.
ಈ ಕುರಿತು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ.
‘ಜಾಗತಿಕ ಆಹಾರ ಭದ್ರತೆಗಾಗಿ ಒಗ್ಗೂಡುವಿಕೆ’ ಎಂಬ ವಿಷಯದಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ನಡೆದ ಸಚಿವರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಾನವೀಯತೆಯ ಆಧಾರದಲ್ಲಿ ಅಫ್ಗಾನಿಸ್ತಾನಕ್ಕೆ 50,000 ಟನ್ ಗೋಧಿ ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು. ಈ ಪೈಕಿ 33,000 ಟನ್ ಗೋಧಿಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘138 ಕೋಟಿ ಜನರನ್ನು ಪೋಷಿಸಬೇಕಾದ ಮಹತ್ವದ ಜವಾಬ್ದಾರಿ ನಡುವೆಯೂ ಭಾರತವು ಸದಾ ಜಾಗತಿಕ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡಿದೆ’ ಎಂದು ಅವರು ಹೇಳಿದ್ದಾರೆ.