ನವದೆಹಲಿ: ಆಹಾರ ಉತ್ಪನ್ನಗಳ ಬೆಲೆ ಹೆಚ್ಚುತ್ತಿರುವುದರಿಂದ ಚಿಲ್ಲರೆ ಹಣದುಬ್ಬರವು ಮುಂಬರುವ ಮೂರು ತಿಂಗಳಿನಲ್ಲಿ ಏರುಮುಖವಾಗಿಯೇ ಇರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರವು ಅಕ್ಟೋಬರ್ನಲ್ಲಿ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆ ಆಗಿರುವುದರಿಂದ ಬೆಳೆಹಾನಿ ಆಗಿದೆ. ಖಾದ್ಯತೈಲ ಆಮದು ಸಹ ದುಬಾರಿ ಆಗಿದೆ. ಈ ಎಲ್ಲಾ ಕಾರಣಗಳಿಂದ ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎನ್ನುವುದು ವರ್ತಕರ ಅಭಿಪ್ರಾಯವಾಗಿದೆ.
ಈರುಳ್ಳಿ, ಆಲೂಗೆಡ್ಡೆ, ಮೊಟ್ಟೆ, ಮಾಂಸ ಮತ್ತು ಟೊಮೆಟೊ ದರವು ಶೇ 46ರ ಸಮೀಪದಲ್ಲಿವೆ. ಅಕ್ಟೋಬರ್ನಲ್ಲಿ ಆಹಾರ ಹಣದುಬ್ಬರ ಶೇ 11.07ಕ್ಕೆ ಏರಿಕೆಯಾಗಿದೆ. ಇದು 9 ತಿಂಗಳ ಗರಿಷ್ಠ ಮಟ್ಟವಾಗಿದೆ. ಇದರಿಂದಾಗಿ ಒಟ್ಟಾರೆ ಹಣದುಬ್ಬರ ಅಕ್ಟೋಬರ್ನಲ್ಲಿ ಶೇ 7.61ಕ್ಕೆ ತಲುಪಿದೆ.
‘ಅತಿಯಾದ ಮಳೆಯಿಂದಾಗಿ ಬೆಳೆಗೆ ಹಾನಿಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಬಹಳಷ್ಟು ರೈತರು ಮತ್ತೆ ಹೊಸದಾಗಿ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರಿಂದಾಗಿ ಹೊಸ ಬೆಳೆ ಬರುವುದು ತಡವಾಗಲಿದೆ’ ಎಂದು ಮಹಾರಾಷ್ಟ್ರದ ವರ್ತಕ ಅಮೊಲ್ ಗುಲೆ ಹೇಳಿದ್ದಾರೆ.
ಆರ್ಥಿಕತೆಯ ಚೇತರಿಕೆಗಾಗಿ ಸರ್ಕಾರ ಹೆಚ್ಚುವರಿ ವೆಚ್ಚ ಮಾಡುತ್ತಿರುವುದು ಸಹ ಹಣದುಬ್ಬರ ಏರಿಕೆಗೆ ಕಾರಣವಾಗುತ್ತಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಸರ್ಕಾರದ ವೆಚ್ಚವು ಬಜೆಟ್ ಅಂದಾಜನ್ನೂ ಮೀರಲಿದೆ ಎಂದೂ ತಿಳಿಸಿದ್ದಾರೆ.
ಮಾರ್ಚ್ವರೆಗೆ ರೆಪೊ ದರದಲ್ಲಿ ಶೇ 1.15ರಷ್ಟು ಕಡಿತ ಮಾಡಿದ್ದ ಆರ್ಬಿಐ, ಹಣದುಬ್ಬರ ಏರಿಕೆ ಆಗುತ್ತಿರುವುದನ್ನು ಗಮನಿಸಿ, ಬಡ್ಡಿದರ ಕಡಿತದ ನಿರ್ಧಾರವನ್ನು ಸದ್ಯದ ಮಟ್ಟಿಗೆ ತಡೆಹಿಡಿಯುವಂತಾಗಿದೆ ಎಂದೂ ಹೇಳಿದ್ದಾರೆ.