ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ಶೇ 8.16 ವಾರ್ಷಿಕ ವೃದ್ಧಿದರ ಹಾಗೂ ₹ 146.42 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹ 135.37 ಕೋಟಿ ಆಗಿತ್ತು.
ಮಂಗಳೂರಿನ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ವೆಬೆಕ್ಸ್ ಮುಖಾಂತರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2021-22ರ ತೃತೀಯ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಬ್ಯಾಂಕ್ನ ಅನುತ್ಪಾದಕ ಸ್ವತ್ತುಗಳ ಪ್ರಮಾಣ ಗಮನಾರ್ಹ ಇಳಿಕೆ ಆಗಿವೆ.
ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತು ಶೇ 4.11ಕ್ಕೆ ಇಳಿಕೆಯಾಗಿವೆ. ಇದು ₹ 170.60 ಕೋಟಿಯಷ್ಟು ಇಳಿಕೆ ಆಗಿದ್ದು,ಒಟ್ಟು ₹ 2,330.52 ಕೋಟಿಗೆ ತಲುಪಿದೆ. ಬ್ಯಾಂಕ್ನ ಒಟ್ಟು ವ್ಯವಹಾರವು 2021ರ ಡಿ. 31ಕ್ಕೆ ಶೇ 5.44 ದರದಲ್ಲಿ ವೃದ್ಧಿ ಕಂಡಿದ್ದು, ₹1.33 ಲಕ್ಷ ಕೋಟಿಗೆ ಏರಿದೆ. ಠೇವಣಿಗಳು ಶೇ 6.24 ದರದಲ್ಲಿ ವೃದ್ಧಿ ಕಂಡು ₹78,428.71 ಕೋಟಿ ಆಗಿವೆ.
‘ಫಲಿತಾಂಶ ತೃಪ್ತಿಕರ’
‘ಈ ತ್ರೈಮಾಸಿಕದ ಫಲಿತಾಂಶ ಕೂಡಾ ಮತ್ತೊಂದು ಹರ್ಷದಾಯಕ ಫಲಿತಾಂಶವಾಗಿದ್ದು, ನಿರಂತರವಾಗಿರುವ ತೃಪ್ತಿದಾಯಕ ಅಂಶಗಳನ್ನು ಒಳಗೊಂಡಿದೆ. ಕೋವಿಡ್ ಬಾಧಿಸಿದಾಗ್ಯೂ ಸ್ಥೂಲ ಅನುತ್ಪಾದಕ ಸ್ವತ್ತುಗಳು ಶೇ 4.11 ಕ್ಕೆ ಇಳಿಕೆ ಕಂಡಿವೆ. ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ 2.45 ಕ್ಕೆ ಇಳಿದಿವೆ ಹಾಗೂ ಸ್ಪೆಷಲ್ ಮೆನ್ಷನ್ಡ್ ಅಕೌಂಟ್ ಶೇ 2.30 ಇಂದ ಶೇ 1.64 ಕ್ಕೆ ಇಳಿದಿವೆ. ಪ್ರೊವಿಶನ್ ಕವರೇಜ್ ಅನುಪಾತ ಶೇ 73.74 ಕ್ಕೆ ಏರಿದೆ. ಈ ಎಲ್ಲಾ ಅಂಶಗಳು ಬ್ಯಾಂಕಿನ ಪರಿವರ್ತನಾ ಪ್ರಕ್ರಿಯೆಯ ಫಲಶ್ರುತಿಯಾಗಿವೆ. ಗ್ರಾಹಕರ ಸಹಕಾರ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮವನ್ನು ಶ್ಲಾಘಿಸುತ್ತೇನೆ’ ಎಂದು ಬ್ಯಾಂಕ್ನ ಎಂಡಿ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಹರ್ಷವ್ಯಕ್ತ ಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.