ಚಾಮರಾಜನಗರ: ಮಹಾಶಿವರಾತ್ರಿ ಸಮೀಪಿಸುತ್ತಿರುವಂತೆಯೇ ಕಳೆದೆರಡು ವಾರದಿಂದ ಇಳಿಕೆ ಕಂಡಿದ್ದ ಹೂವುಗಳ ಬೆಲೆ ಈ ವಾರ ಕೊಂಚ ಏರಿಕೆಯಾಗಿದೆ.
ಹಬ್ಬದ ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಸಾಲು ಸಾಲು ಜಾತ್ರೆಗಳಿರುವುದರಿಂದ ಎಲ್ಲ ಹೂವುಗಳ ದರ ಹೆಚ್ಚಳವಾಗಿದೆ. ಬಿಡಿ ಹೂವುಗಳ ಮಾರುಕಟ್ಟೆಯಲ್ಲಿ ಕೆಜಿ ಚೆಂಡು ಹೂ ₹10, ಕನಕಾಂಬರ₹ 500, ಸುಗಂಧರಾಜ ಹಾರ₹150, ಕಾಕಡ₹ 120, ಸೇವಂತಿ₹60 ಹೆಚ್ಚಳವಾಗಿದೆ.
‘ಯುಗಾದಿವರೆಗೂ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ಕಡಿಮೆಯಾಗುವ ಸಾಧ್ಯತೆ ಕಡಿಮೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ಹೇಳಿದರು.
‘ಕಳೆದ ವಾರದವರೆಗೂ ಶುಭ ಸಮಾರಂಭಗಳು ನಡೆಯುತ್ತಿರಲಿಲ್ಲ. ಈ ವಾರಜಾತ್ರೆಗಳ ಸಾಲು. ಜೊತೆಗೆ ಹಬ್ಬ ಕೂಡ ಇದೆ. ಮುಂದಿನ ದಿನಗಳಲ್ಲಿ ತರಕಾರಿಗೆ ಬೇಡಿಕೆ ಸಿಗಲಿದೆ. ದರ ಕೂಡ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.
ಹಣ್ಣುಗಳ ಪೈಕಿ ಕಲ್ಲಂಗಡಿ, ಪಚ್ಚಬಾಳೆ₹5, ಸಪೋಟಾ, ಮೂಸಂಬಿ₹10 ಇಳಿಕೆಯಾಗಿದೆ. ಏಲಕ್ಕಿ ಬಾಳೆ₹5, ದಾಳಿಂಬೆ₹20 ಹೆಚ್ಚಳವಾಗಿದೆ. ಮಧ್ಯಾಹ್ನದ ವೇಳೆ ಸುಡು ಬಿಸಲು ಆರಂಭವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಹಣ್ಣುಗಳ ದರ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಹಣ್ಣುಗಳ ವ್ಯಾಪಾರಿಗಳಿದ್ದಾರೆ.
ಮೊಟ್ಟೆ ದರ ಹೆಚ್ಚಳ: ಕಳೆದ ವಾರ₹376 ಇದ್ದಂತಹ ಮೊಟ್ಟೆ ಧಾರಣೆ ಈ ವಾರ₹74 ಹೆಚ್ಚಳವಾಗಿ₹450 ಆಗಿದೆ. ಮಾರಿಹಬ್ಬಗಳಿಗೆ ಮೊಟ್ಟೆ ಧಾರಣೆ ಏರಿಳಿತ ಕಂಡು ಬರುತ್ತದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.
ಮಾಂಸ ಮಾರುಕಟ್ಟೆಯಲ್ಲಿ ಈ ವಾರ ಚಿಕನ್, ಪಾಪ್ಲೆಟ್ ₹10, ಮಟನ್₹20 ಕಡಿಮೆಯಾಗಿದೆ. ಉಳಿದಂತೆ ಎಲ್ಲ ಬಗೆಯ ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.