ಮುಂಬೈ: ಹಣದುಬ್ಬರವನ್ನು ನಿಯಂತ್ರಿಸಲು ಮುಂಚಿತವಾಗಿಯೇ ಕ್ರಮ ಕೈಗೊಂಡಿದ್ದಲ್ಲಿ ಅದರಿಂದ ಆರ್ಥಿಕತೆ ಮತ್ತು ನಾಗರಿಕರು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು ಎಂದು ಹೇಳುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬೆಲೆ ಏರಿಕೆ ಪರಿಸ್ಥಿತಿಯ ನಿರ್ವಹಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಣದುಬ್ಬರ ನಿಯಂತ್ರಣದಲ್ಲಿ ಆರ್ಬಿಐ ವಿಫಲವಾಗಿರುವುದನ್ನು ಒಪ್ಪಿಕೊಂಡ ಅವರು, ಹಣದುಬ್ಬರದಲ್ಲಿ ಆಗುತ್ತಿರುವ ಏರಿಕೆಗೆ ಅನುಗುಣವಾಗಿ ಬಡ್ಡಿದರ ಹೆಚ್ಚಳ ಮಾಡದೇ ಆರ್ಥಿಕತೆಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹಣದುಬ್ಬರವನ್ನು ಗರಿಷ್ಠ ಶೇಕಡ 6ರ ಒಳಗೆ ನಿಯಂತ್ರಿಸುವಂತೆ ಕೇಂದ್ರ ಸರ್ಕಾರವು ಆರ್ಬಿಐಗೆ ಸೂಚಿಸಿದೆ. ಆದರೆ, ಸತತ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರವು ಶೇ 6ರ ಮಟ್ಟವನ್ನೂ ಮೀರಿದೆ.
ಬಡ್ಡಿದರವನ್ನು ಕಡಿಮೆ ಇರಿಸುವ ಮೂಲಕ ಹಾಗೂ ಮುಂಚಿತವಾಗಿಯೇ ಬಡ್ಡಿದರ ಹೆಚ್ಚಳ ಮಾಡದೆ, ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯುದನ್ನು ತಡೆಯಲಾಗಿದೆ ಎಂದು ಅವರು ಎಫ್ಐಬಿಎಸಿ ಸಮಾವೇಶದಲ್ಲಿ ಹೇಳಿದ್ದಾರೆ.
ರೂಪಾಯಿ ಕುಸಿತದ ಬಗ್ಗೆ ಮಾತನಾಡಿದ ಅವರು, ‘ಪರಿಸ್ಥಿತಿಯನ್ನು ಭಾವನಾತ್ಮಕ ನೆಲೆಯಲ್ಲಿ ನೋಡಬಾರದು. ಅಮೆರಿಕದ ಡಾಲರ್ ಎದುರು ಇತರೆ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ಕರೆನ್ಸಿಯು ಕಡಿಮೆ ಪ್ರಮಾಣದಲ್ಲಿ ಇಳಿಕೆ ಆಗಿದೆ. ಅಲ್ಲದೆ, ಇತರೆ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.