ಏಪ್ರಿಲ್ನಲ್ಲಿ ನಡೆದಿದ್ದ ಸಭೆಯಲ್ಲಿಯೂ ಎಂಪಿಸಿ, ರೆಪೊ ದರದಲ್ಲಿ ಬದಲಾವಣೆ ಮಾಡಿರಲಿಲ್ಲ. ರೆಪೊ ದರವನ್ನು ಶೇಕಡ 6.50ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಎಂಪಿಸಿ ಸದಸ್ಯರು ಗುರುವಾರ ಸರ್ವಾನುಮತದಿಂದ ಕೈಗೊಂಡಿದ್ದಾರೆ.
‘ಹೊಂದಾಣಿಕೆಯ ಹಣಕಾಸು ನೀತಿಯನ್ನು ಹಿಂಪಡೆಯುವ’ ನಿಲುವು ತಾಳಲು ಕೂಡ ಎಂಪಿಸಿ ತೀರ್ಮಾನಿಸಿದೆ. ಈ ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6ಕ್ಕಿಂತ ಕಡಿಮೆ ಆಗಿದೆ.
‘ಮುಂಗಾರು ಮಳೆ ಹಾಗೂ ಎಲ್ ನಿನೊ ವಿಚಾರವಾಗಿ ಅನಿಶ್ಚಿತತೆಗಳು ಇರುವ ಕಾರಣದಿಂದಾಗಿ ಹಣದುಬ್ಬರ ಪ್ರಮಾಣವು ಎಷ್ಟಾಗಲಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತ ಇರುವುದು ಅನಿವಾರ್ಯ. ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ಕ್ಕೆ ಇಳಿಯುವಂತೆ ಮಾಡುವುದು ನಮ್ಮ ಗುರಿ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇರಲಿದೆ ಎಂದು ಈ ಮೊದಲು ಮಾಡಿದ್ದ ಅಂದಾಜಿನಲ್ಲಿ ಆರ್ಬಿಐ ಯಾವುದೇ ಬದಲಾವಣೆ ಮಾಡಿಲ್ಲ.
ಈಗ ಸ್ಥಿರತೆಯನ್ನು ಕಾಯ್ದುಕೊಂಡು ಬೆಳವಣಿಗೆ ಸಾಧಿಸುವುದು ತನ್ನ ಆದ್ಯತೆ ಎಂದು ಆರ್ಬಿಐ ಹೇಳಿದೆ. ರೆಪೊ ದರದಲ್ಲಿ ಬದಲಾವಣೆ ಮಾಡದೆ ಇರುವ ತೀರ್ಮಾನವು ‘ಒಂದು ವಿರಾಮವಿದ್ದಂತೆ, ಅಷ್ಟೆ’ ಎಂದು ದಾಸ್ ಹೇಳಿದ್ದಾರೆ.
ಹಣದುಬ್ಬರ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ ಆಗದಿದ್ದರೆ, ಜಾಗತಿಕವಾಗಿ ತೀರಾ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗದೆ ಇದ್ದರೆ ರೆಪೊ ದರವು ಬಹುಕಾಲ ಯಥಾಸ್ಥಿತಿಯಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.