ನವದೆಹಲಿ: ವೇತನೇತರ ಆದಾಯದ ಮೇಲೆ ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣವನ್ನು ಶೇ 25ರಷ್ಟು ಕಡಿಮೆ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದ್ದಾರೆ.
ಈ ಕ್ರಮದಿಂದಾಗಿ ₹50,000 ಕೋಟಿಯಷ್ಟು ಹಣದ ದ್ರವ್ಯತೆ ಉಂಟಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಡಿಮೆ ಮಾಡಲಾಗಿರುವ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ದರವು ಬಡ್ಡಿ ಪಾವತಿ, ಒಪ್ಪಂದಗಳಲ್ಲಿನ ಪಾವತಿ, ವೃತ್ತಿಪರ ಶುಲ್ಕಗಳು, ಲಾಭಾಂಶ, ಕಮಿಷನ್ ಹಾಗೂ ದಳ್ಳಾಲಿ ಆದಾಯಗಳಲ್ಲಿ ಅನ್ವಯವಾಗುತ್ತದೆ. ನಾಳೆಯಿಂದಲೇ ಟಿಡಿಎಸ್ ದರ ಕಡಿತ ಜಾರಿಯಾಗಲಿದ್ದು, 2020–21 ಹಣಕಾಸು ವರ್ಷ ಪೂರ್ತಿ ಅನ್ವಯವಾಗಲಿದೆ.
2019–20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆಯ ದಿನವನ್ನು 2020ರ ಜುಲೈ 31 ಮತ್ತು ಅಕ್ಟೋಬರ್ 31ರಿಂದ ನವೆಂಬರ್ 30ರ ವರೆಗೂ ವಿಸ್ತರಿಸಲಾಗಿದೆ. ತೆರಿಗೆ ಲೆಕ್ಕಪರಿಶೋಧನೆಗೆ ಅಂತಿಮ ಅವಧಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.
ತೆರಿಗೆ ಇಲಾಖೆಯಿಂದ ಬಾಕಿ ಇರುವ ಮರುಪಾವತಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಇಲಾಖೆಗೆ ತಿಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದತ್ತಿ ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳು, ಸಹಭಾಗಿತ್ವದಂತಹ ಕಾರ್ಪೊರೇಟ್ ಹೊರತಾದ ಉದ್ಯಮಗಳು ಒಳಗೊಂಡಿರಲಿವೆ.
ಹೆಚ್ಚುವರಿ ಹಣ ಅಥವಾ ದಂಡ ಪಾವತಿ ಇಲ್ಲದೆಯೇ ವಿವಾದ್ ಸೇ ವಿಶ್ವಾಸ್ ಯೋಜನೆ ಮೂಲಕ ತೆರಿಗೆ ಪಾವತಿಸುವ ಅವಕಾಶವನ್ನು ಡಿಸೆಂಬರ್ 31ರ ವರೆಗೂ ವಿಸ್ತರಿಸಲಾಗಿದೆ.