ದಾವೋಸ್ (ಪಿಟಿಐ): ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ತಡೆಯಲು ರಾಜಕೀಯ ಸುಧಾರಣೆ ಮತ್ತು ಸಂಘಟಿತ ಪ್ರಯತ್ನದ ಅಗತ್ಯ ಇದೆ ಎಂದು ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವಾರ್ಷಿಕ ವಿಶ್ವ ವಾಣಿಜ್ಯ ಶೃಂಗ ಸಭೆ (ಡಬ್ಲ್ಯುಇಎಫ್) ಉದ್ಘಾಟಿಸಿ ಮಾತನಾಡಿದ ಅವರು, ಯೂರೊ ಕರೆನ್ಸಿಗೆ ಜರ್ಮನಿ ಯಾವುದೇ ಖಾತರಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯೂರೊ ಸಾಲದ ಬಿಕ್ಕಟ್ಟು ಶಮನಕ್ಕೆ ಮೊದಲು ಅಲ್ಲಿನ ರಾಜಕೀಯ ಪರಿಸ್ಥಿತಿಯ ಸುಧಾರಣೆಯ ಅಗತ್ಯವಿದೆ. ನಂತರ ಯೂರೋಪ್ ವಲಯದ ಒಗ್ಗಟ್ಟು ಮತ್ತು ಬಿಕ್ಕಟ್ಟು ಎದುರಿಸುವ ಶಕ್ತಿ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಯೂರೋಪ್ ಬಿಕ್ಕಟ್ಟು, ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಆರ್ಥಿಕ ಶಕ್ತಿಗಳ ತೀವ್ರ ಪರಿಣಾಮ ಬೀರುತ್ತಿದೆ ಎಂದ ಅವರು, ಇಡೀ ಯೂರೋಪ್ ವಲಯ ಒಂದೇ ಕರೆನ್ಸಿ (ಯೂರೋ) ಹೊಂದುವುದಕ್ಕೆ ಜರ್ಮನಿ ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ, `ಯೂರೊ~ ಕರೆನ್ಸಿಗೆ ಜರ್ಮನಿ ಯಾವುದೇ ಖಾತರಿ ನೀಡುವುದಿಲ್ಲ.
ಇದರ ಅರ್ಥ ನಾವು ಯಾವುದೇ ಒಗ್ಗಟ್ಟು ಮತ್ತು ಬದ್ಧತೆ ತೋರಿಸುವುದಿಲ್ಲ ಎಂದಲ್ಲ. ಬದಲಿಗೆ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಜರ್ಮನಿಯು ಸದ್ಯ ಯಾವುದೇ ಭರವಸೆ ನೀಡುವುದಿಲ್ಲ ಎಂದರು. ಯೂರೊ ಬಿಕ್ಕಟ್ಟು ತಡೆಯುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಇಡೀ ರಾಜಕೀಯ ವ್ಯವಸ್ಥೆ ಸುಧಾರಣೆಯಾಗಬೇಕಿದೆ. ಈ ಪರಿಸ್ಥಿತಿಯಿಂದ ಎದೆಗುಂದಬೇಕಾಗಿಲ್ಲ. ಆದರೆ, ಮಂತ್ರದಂಡ ಬೀಸುವ ಮೂಲಕ ಎಲ್ಲ ಸಮಸ್ಯೆಗಳನ್ನು ತಕ್ಷಣಕ್ಕೆ ಬಗೆ ಹರಿಸುವ ಜಾದೂ ವಿದ್ಯೆ ಇಲ್ಲ. ಬಿಕ್ಕಟ್ಟು ತಡೆಯಲು ಎಲ್ಲರೂ ಸೇರಿ ಏನಾದರೂ ಸ್ವಲ್ಪಮಟ್ಟಿಗಾದರೂ ರಚನಾತ್ಮಕ ಕೆಲಸ ಮಾಡಬೇಕಾಗಿದೆ ಎಂದರು.
ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮೂಲಕ ಆರ್ಥಿಕ ಸ್ಥಿರತೆ ಮರಳಲು ಪ್ರಯತ್ನ ನಡೆಸಬೇಕು ಎಂದರು.