ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆಸೆ-ಪಿಶಾಚಿ

ಗುರುರಾಜ ಕರಜಗಿ ಅಂಕಣ
Last Updated 12 ಮೇ 2022, 22:30 IST
ಅಕ್ಷರ ಗಾತ್ರ

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |
ವಿಷದೂಟಕಿಂತುಪೋಷಿತವೆ ಲೇಸಲ್ತೆ? ||
ತೃಷೆ ಕನಲೆ, ಜೀವ ಬಿಸಿಬಾಣಲೆಗೆ ಬಿದ್ದ ಹುಳು |
ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ || 627 ||

ಪದ-ಅರ್ಥ: ವಿಷಯಸನ್ನಿಧಿಗಿಂತ=ವಿಷಯ(ಇಂದ್ರಿಯಗಳ ಸೆಳೆತ)+ಸನ್ನಿಧಿಗಿಂತ, ಮಸಣಸನ್ನಿಧಿ=ಮಸಣ(ಸಾವಿನ)+ಸನ್ನಿಧಿ, ವಿಷದೂಟಕಿಂತುಪೋಷಿತವೆ=ವಿಷದ=ಊಟಕಿಂತ+ಉಪೋಷಿತವೆ(ಉಪವಾಸವೆ), ತೃಷೆ=ಆಸೆ, ಕನಲೆ=ಕೆರಳಿದರೆ,

ವಾಚ್ಯಾರ್ಥ: ಇಂದ್ರಿಯಗಳ ಸೆಳೆತದ ಸಂಗಕ್ಕಿಂತ ಮರಣವೇ ಮೇಲು. ವಿಷದ ಅಡುಗೆಯನ್ನು ಊಟ ಮಾಡುವುದಕ್ಕಿಂತ ಉಪವಾಸವಿರುವುದೇ ಕ್ಷೇಮ. ಒಂದು ಸಲ ಆಸೆ ಕೆರಳಿದರೆ, ಆ ಜೀವ ಬಿಸಿಯಾದ ಬಾಣಲೆಗೆ ಬಿದ್ದ ಹುಳುವಿದ್ದಂತೆ, ಪುಟ್ಟ ಮಗುವನ್ನು ಪಿಶಾಚಿಯ ಕೈಗೆ ಕೊಟ್ಟಂತೆ.

ವಿವರಣೆ: ಅವರೊಬ್ಬ ಮಹಾನ್ ರಾಷ್ಟ್ರದ ರಾಷ್ಟ್ರಪತಿ. ಕೆಲವು ಕ್ಷಣಗಳ ಇಂದ್ರಯದ ಸೆಳೆತಕ್ಕೆ ಬಲಿಯಾದರು. ಇಡೀ ರಾಷ್ಟ್ರದ ಮುಂದೆ ಮೊಣಕಾಲೂರಿ ಕ್ಷಮೆ ಯಾಚಿಸುವ ಪ್ರಸಂಗ ಬಂದಿತು, ಹಿಂದಿನ ಸಾಧನೆಗಳು ಕ್ಷಣದಲ್ಲಿ ಕರಗಿ ಹೋಗಿ, ಈ ವಿಷಯಲಂಪಟತನವೇ ಪ್ರಧಾನವಾಯಿತು. ಆ ಮರ್ಯಾದೆಯನ್ನು ಕಳೆದುಕೊಳ್ಳುವ ಕ್ಷಣ ಸಾವಿಗಿಂತ ಘೋರ. ಅವರೊಬ್ಬ ದೊಡ್ಡ ಅಧಿಕಾರಿ. ಅಧಿಕಾರದ ಬೆಂಬತ್ತಿ ಬಂದಿತು ಹಣದ ಆಸೆ. ಅದೂ ಬಂದು ಬಂದು ತುಂಬಿದಾತ ಕೆಲವು ಕಾಲದ ಸಂತೃಪ್ತಿ. ಮುಂದೆ ಅನ್ಯಾಯ ಬಯಲಾದಾಗ, ಎಲ್ಲರ ಮುಂದೆ ಬತ್ತಲಾದ ಶೋಚನೀಯ ಅನುಭವ. ಒಂದು ಪುಟ್ಟ ನೆಲ. ಅದಕ್ಕಾಗಿ ಸಹೋದರನ ಆಸೆ. ಅದಕ್ಕೆ ಕೋರ್ಟು, ಕಚೇರಿ ಸುತ್ತಾಟ. ಯಾವ ತೀರ್ಮಾನ ಬಂದರೂ ಇನ್ನೊಬ್ಬರಿಗೆ ತೃಪ್ತಿ ಇಲ್ಲ. ಒಬ್ಬ ಇನ್ನೊಬ್ಬನನ್ನು ಕೊಂದ. ತಾನು ಜೈಲು ಸೇರಿ ನೇಣಿಗೇರಿದ.

ಇಂದು ಮಾತ್ರ ನಡೆಯುವ ಸಂಗತಿಗಳಲ್ಲ ಇವು. ಹಿಂದೆಯೂ ಅನೇಕ ಬಾರಿ ಇವು ನಡೆದಿವೆ. ಹಲವಾರು ಅಪ್ಸರೆಯರ ನಾಯಕನಾಗಿದ್ದು ಅಹಲ್ಯೆಗೆ ಅಪೇಕ್ಷೆ ಪಟ್ಟ ಇಂದ್ರ ಸಹಸ್ರಾಕ್ಷನಾದ. ಸೀತೆಗೆ ಮನತೆತ್ತು ರಾವಣ ಪ್ರಾಣತೆತ್ತ. ಪುತ್ರಮೋಹಕ್ಕೆ ಬಲಿಯಾದ ಧೃತರಾಷ್ಟ್ರ ವಂಶವನ್ನೇ ಬಲಿಕೊಟ್ಟ. ಭಗವದ್ಗೀತೆಯಲ್ಲಿ ಈ ವಿಷಯವನ್ನು ಸುಂದರವಾಗಿ ಪ್ರಸ್ತಾಪಿಸಲಾಗಿದೆ. ಇಂದ್ರಿಯ ವಿಷಯಗಳ ಸೆಳೆತಕ್ಕೆ ಬಂದಾಗ ಕಾಮ ಹುಟ್ಟುತ್ತದೆ, ಕಾಮಕ್ಕೆ ಅಡ್ಡಿಯಾದಾಗ ಕ್ರೋಧ ಬರುತ್ತದೆ. ಕ್ರೋಧದಿಂದ ವಿವೇಕ ತಪ್ಪಿಸುವ ಸಂಮೋಹ ಬೆಳೆಯುತ್ತದೆ. ಸಂಮೋಹದಿಂದ ತಿಳಿವಳಿಕೆ ತಲೆಕೆಳಗಾಗುತ್ತದೆ. ಅದರಿಂದಾಗಿ ಬುದ್ಧಿ ನಶಿಸಿಹೋಗುತ್ತದೆ. ಬುದ್ಧಿನಾಶದಿಂದ ಮನುಷ್ಯ ನಾಶಹೊಂದುತ್ತಾನೆ. ವಿಷಯದ ಸೆಳೆತ ಸಾವಿನೆಡೆಗೇ. ಅದನ್ನೇ ಕಗ್ಗ ಹೇಳುತ್ತದೆ. ವಿಷಯದ ಸಂಗಕ್ಕಿಂತ ಸಾವಿನ ಸಂಗ ಲೇಸು. ಸಾವನ್ನು ಖಚಿತಪಡಿಸುವ ವಿಷದ ಊಟಕ್ಕಿಂತ ಉಪವಾಸ ಇರುವುದು ಮೇಲಲ್ಲವೆ?

ಒಂದು ಬಾರಿ ಆಸೆ ಕೆರಳಿಬಿಟ್ಟರೆ, ಮನುಷ್ಯನನ್ನು ಒದ್ದಾಡಿಸಿಬಿಡುತ್ತದೆ. ಅವನು ಬಾಣಲೆಗೆ ಬಿದ್ದ ಹುಳುವಿನಂತೆ ಚಡಪಡಿಸಿಬಿಡುತ್ತಾನೆ. ಅತಿಯಾದ ಆಸೆ ಒಂದು ಪಿಶಾಚಿ ಇದ್ದ ಹಾಗೆ. ಆ ಅನಾಹುತಶಕ್ತಿಯ ಪಿಶಾಚಿಯ ಕೈಗೆ ಒಂದು ಎಳೆಯ ಕೂಸು ಸಿಕ್ಕಿದರೆ ಏನಾದೀತು? ಅದು ಕ್ಷಣಮಾತ್ರದಲ್ಲಿ ಹೊಸಕಿ ಹಾಕೀತು. ಅಂತೆಯೇ ನಮ್ಮ ಆಸೆಗಳು ಮಿತಿಮೀರಿದರೆ, ಅವೇ ಪಿಶಾಚಿಗಳಾಗಿ ನಮ್ಮ ಪ್ರಾಣವನ್ನು ಹೀರಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT