ಬೆಂಗಳೂರು: ಕನ್ನಡಿಗ ರವೀಂದ್ರ ಶೆಟ್ಟಿ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿರುವ ಥಾಯ್ಲೆಂಡ್ ಕಬಡ್ಡಿ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ರವೀಂದ್ರ ಅವರು ಸುಮಾರು ನಾಲ್ಕು ದಶಕಗಳಿಂದ ಕಬಡ್ಡಿ ಆಟಗಾರನಾಗಿ, ಅಂತರರಾಷ್ಟ್ರೀಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿರುವ ಸಿಐಎಲ್ ರಕ್ಷಣಾ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಕಬಡ್ಡಿ ತಂಡದ ಪ್ರಮುಖ ಆಟಗಾರರಾಗಿದ್ದ ಅವರು, ವೃತ್ತಿಯಿಂದ ಎಂಜಿನಿಯರ್ ಆಗಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡವು ಸುಮಾರು 20 ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿತ್ತು. 2012ರಲ್ಲಿ ಮಲೇಷ್ಯಾ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿದ್ದರು. ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಆಡಿದ ಮಲೇಷ್ಯಾ ತಂಡಕ್ಕೆ ರವೀಂದ್ರ ಮಾರ್ಗದರ್ಶನ ನೀಡಿದ್ದರು.
ರವೀಂದ್ರ ಅವರನ್ನು ಭಾರತ ಜೂನಿಯರ್ ತಂಡದ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಈಚೆಗೆ ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್ ನೇಮಕ ಮಾಡಿತ್ತು. ತೆಹರಾನ್ನಲ್ಲಿ ನಡೆದ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕೋಚ್ ಆಗಿದ್ದರು. ತಂಡವು ಚಿನ್ನ ಗೆದ್ದಿತ್ತು.
ಪ್ರೊಕಬಡ್ಡಿ ಟೂರ್ನಿಯಲ್ಲಿ ಅವರು ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್ ಹಾಗೂ ಪಟ್ನಾ ಪೈರೆಟ್ಸ್ ತಂಡಗಳಿಗೆ ಕೋಚ್ ಆಗಿದ್ದರು.
‘ಥಾಯ್ಲೆಂಡ್ನಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರೆಲ್ಲರೂ ಅಪಾರ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಬಲಿಷ್ಠ ತಂಡಗಳ ಎದುರು ಉತ್ತಮವಾಗಿ ಆಡುವ ವಿಶ್ವಾಸವಿದೆ‘ ಎಂದು ರವೀಂದ್ರ ಶೆಟ್ಟಿ ‘ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.