ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆಯುವ ದಸರಾ ಬೊಂಬೆಗಳು

ರಜೆಯಲ್ಲಿರುವ ಮಕ್ಕಳಿಗೆ ತಿಂಡಿ ಸಂಭ್ರಮ*ಅಂಬಾರಿ ಹೊತ್ತ ಆನೆ, ಾಕರ್ಷಕ ಗೀತೋಪದೇಶ
Last Updated 12 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ವಿಜಯಪುರ : ಶರನ್ನವರಾತ್ರಿಯಲ್ಲಿ ಬೊಂಬೆಗಳ ಪೂಜೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಂತೆಯೇ ನಗರದ 6 ನೇ ವಾರ್ಡಿನ ನಿವೃತ್ತ ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್ ಹಾಗೂ 2 ನೇ ವಾರ್ಡಿನ ಡಾ.ಮಂಜುನಾಥ್ ಅವರ ಮನೆಗಳಲ್ಲಿ ದಸರಾ ಬೊಂಬೆಗಳನ್ನು ಜೋಡಿಸಿ ಗಮನ ಸೆಳೆದಿದ್ದಾರೆ.

ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷ್ಮಿ, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಮೈಸೂರು ಅರಮನೆ, ಜಂಬುಸವಾರಿ, ಕ್ರಿಸ್ಮಸ್ ಆಚರಣೆ, ಶೆಟ್ಟಪ್ಪ, ಶೆಟ್ಟಮ್ಮ, ಕ್ರಿಕೆಟ್ ಸ್ಟೇಡಿಯಂ, ಹಳ್ಳಿಯ ಜೀವನ, ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವ, ಆರತಕ್ಷತೆ, ಸೀಮಂತ, ವಿವಿಧ ವಾದ್ಯಗಳು, ಪ್ರಾಣಿ, ಪಕ್ಷಿಗಳು ಮತ್ತಿತರ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿದ್ದಾರೆ.

ಅಂಬಾರಿ ಹೊತ್ತ ಆನೆ, ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಷಕವಾಗಿವೆ.

ಶಿವಕುಮಾರ್ ಮಾತನಾಡಿ, ‘ನಾವು ಬಹಳ ವರ್ಷಗಳಿಂದ ಬೊಂಬೆಗಳನ್ನು ಜೋಡಿಸಿ, ಇವುಗಳ ಪರಿಚಯ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಚನ್ನಪಟ್ಟಣ, ತಮಿಳುನಾಡಿನ ಕೃಷ್ಣಗಿರಿ, ಶಿರಡಿ, ಮಂತ್ರಾಲಯ ಮುಂತಾದ ಅನೇಕ ಕಡೆಗಳಲ್ಲಿ ಪ್ರವಾಸ ಮಾಡಿದ ಸಂಧರ್ಭದಲ್ಲಿ ಬೊಂಬೆಗಳನ್ನು ಖರೀದಿ ಮಾಡಿಕೊಂಡು ಬಂದಿದ್ದೇವೆ. ಸುಮಾರು 1,500 ಕ್ಕೂ ಹೆಚ್ಚು ಬೊಂಬೆಗಳನ್ನು ಶೇಖರಣೆ ಮಾಡಿಕೊಂಡಿದ್ದೇವೆ’ ಎಂದರು.

‘ಆಧುನಿಕ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಇಂದಿನ ಸಂದರ್ಭದಲ್ಲಿ ಪ್ರತಿ ಮನೆಗಳಲ್ಲಿ ಈ ರೀತಿಯ ಆಚರಣೆಗಳನ್ನು ನಡೆಸುವುದರಿಂದ, ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು’ ಎಂದು ಹೇಳಿದರು.

ಗೃಹಿಣಿ ಶ್ರುತಿ ಮಾತನಾಡಿ, ‘ಮನೆಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗಗಳಲ್ಲೂ ರೂಢಿಸಿಕೊಳ್ಳುತ್ತಿದ್ದಾರೆ. ನಾವು ಮೊದಲು ಪಟ್ಟದ ಬೊಂಬೆಗಳನ್ನಷ್ಟೆ ಜೋಡಿಸುತ್ತಿದ್ದೆವು. ಬೇರೆ ಕಡೆಗಳಲ್ಲಿ ನೋಡಿದ ನಂತರ ನಾವೂ ಕೂಡಾ ಒಂದು ಆಚರಣೆಯನ್ನಾಗಿ ಮಾಡುತ್ತಿದ್ದೇವೆ’ ಎಂದರು.

ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಇಡಲಾಗಿದೆ. ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ಪೂಜೆ ನಡೆಸುತ್ತೇವೆ’ ಎಂದು ವಿವರಿಸಿದರು.

‘ಮನೆಯ ಶೋಕೇಶ್ ನಲ್ಲಿಟ್ಟ ಗೊಂಬೆಗಳಿಗೆ ನವರಾತ್ರಿ ಬರುತ್ತಿದ್ದಂತೆಯೇ ದೇವರಕೋಣೆಯಲ್ಲಿ ಪೂಜ್ಯ ಸ್ಥಾನ ದೊರೆಯುತ್ತದೆ. ನಮಗೆ ಬೊಂಬೆಗಳನ್ನು ಕೂರಿಸುವ ಸಂಭ್ರಮ. ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ’ ಎಂದು ತಿಳಿಸಿದರು.

ಒಟ್ಟಾರೆ ಮನೆ ಮಂದಿ ಎಲ್ಲರೂ ಸೇರಿ ಸಂಭ್ರಮದಿಂದ ಗೊಂಬೆ ಕೂರಿಸಿ ಸಂಭ್ರಮಿಸುತ್ತಿದೆ. ಇದು ಎಲ್ಲೆಡೆ ಪಸರಿಸಬೇಕು. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಜನಜೀವನದ ಪರಿಚಯ ಎಲ್ಲರಿಗೂ ಆಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT