ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮೂರ್ಖರ ಸಹವಾಸ

Last Updated 27 ಅಕ್ಟೋಬರ್ 2021, 4:19 IST
ಅಕ್ಷರ ಗಾತ್ರ

ವರಂ ಪರ್ವತದುರ್ಗೇಷು ಭ್ರಾಂತಂ ವನಚರೈಃ ಸಹ ।

ನ ಮೂರ್ಖಜನಸಂಪರ್ಕಃ ಸುರೇಂದ್ರಭವನೇಷ್ವಪಿ ।।

ಇದರ ತಾತ್ಪರ್ಯ ಹೀಗೆ:

‘ಕಾಡಿನಲ್ಲಿ ಸಂಚರಿಸುವ ಪ್ರಾಣಿಗಳೊಡನೆ, ಬೆಟ್ಟಗಳ ಮೇಲಿನ ದುರ್ಗಮವಾದ ಸ್ಥಳಗಳಲ್ಲಿ ಅಲೆಯುವುದು ಉತ್ತಮ. ಆದರೆ ದೇವೇಂದ್ರನ ಮನೆಗಳಲ್ಲಿಯಾದರೂ ಸರಿಯೇ, ಮೂರ್ಖರ ಸಹವಾಸ ಮಾತ್ರ ಬೇಡ.’

ಮೂರ್ಖರ ಸಹವಾಸ ಎಷ್ಟು ಅಪಾಯಕಾರಿ ಎಂದು ಈ ಸುಭಾಷಿತ ಹೇಳುತ್ತಿದೆ.

ಜೀವನದಲ್ಲಿ ಏನೇನೋ ತೊಂದರೆಗಳನ್ನು ಎದುರಿಸುತ್ತಿರುತ್ತೇವೆ. ಕೆಲವೊಂದು ಸಂದರ್ಭಗಳು, ಸ್ಥಳಗಳು ಸಹಜವಾಗಿಯೇ ಅಪಾಯವನ್ನು ಒಡ್ಡುವಂತಾಗಿರುತ್ತವೆ. ಅಂಥ ಕೆಲವೊಂದು ಅಪಾಯಸ್ಥಳಗಳನ್ನು ಸುಭಾಷಿತ ಗುರುತಿಸಿ ಹೇಳಿದೆ: ಕಾಡಿನಲ್ಲಿ ಸಂಚರಿಸುವುದು, ಅದೂ ಪ್ರಾಣಿಗಳ ಸನಿಹದಲ್ಲಿ. ಹೀಗೆಯೇ ಬೆಟ್ಟಗಳು ಎಂದಿಗೂ ಅಪಾಯವನ್ನು ಸೃಷ್ಟಿಸಬಹುದು. ಆದರೆ ಸುಭಾಷಿತ ಹೇಳುತ್ತಿದೆ, ಇವೇನೂ ಕಷ್ಟಗಳೇ ಅಲ್ಲ; ಮೂರ್ಖರ ಜೊತೆ ಇರುವುದು ಈ ಅಪಾಯಗಳಿಗಿಂತಲೂ ದೊಡ್ಡ ಅಪಾಯ.

ಕಷ್ಟಗಳು ಮಾತ್ರವೇ ಅಲ್ಲ, ಜೀವನದಲ್ಲಿ ಸುಖಾನುಭವ ದೊರೆಯುವ ಸ್ಥಳಗಳೂ ಇವೆ. ನಮ್ಮ ಕಲ್ಪನೆಗಳನ್ನೂ ಮೀರಿದ ಸುಖಗಳು ನಮಗೆ ಸಿಗಬಹುದಾದ ಸ್ಥಳ ಎಂದರೆ ಅದು ಸ್ವರ್ಗ, ದೇವೆಂದ್ರನ ಅರಮನೆ. ಇಲ್ಲಿ ಇಲ್ಲದ ಸುಖವೇ ಇಲ್ಲ. ಆದರೆ ಸುಭಾಷಿತ ಹೇಳುತ್ತಿದೆ, ಅದು ದೇವೆಂದ್ರನ ಅರಮನೆಯೇ ಆಗಿರಬಹುದು, ಮೂರ್ಖ ಇದ್ದರೆ ಮಾತ್ರ ಆ ಸ್ಥಳವೂ ಬೇಡವೇ ಬೇಡ. ಏಕೆಂದರೆ ಎಂಥ ಸುಖವನ್ನೂ ದುಃಖಮಯ ಮಾಡಬಲ್ಲಂಥ ಶಕ್ತಿ ಮೂರ್ಖರಿಗೆ ಇರುತ್ತದೆ! ಹೀಗಾಗಿ ನಮಗೆ ಎಂದಿಗೂ ಮೂರ್ಖರ ಸಹವಾಸ ಬೇಡವೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT