ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಬಲಿಪಾಡ್ಯಮಿ

Last Updated 16 ನವೆಂಬರ್ 2020, 2:48 IST
ಅಕ್ಷರ ಗಾತ್ರ

ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ।

ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ।।

ಇದರ ತಾತ್ಪರ್ಯ ಹೀಗೆ:

‘ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರು ಏಳು ಜನರು ಚಿರಂಜೀವಿಗಳು.’

ಚಿರಂಜೀವಿಗಳು ಎಂದರೆ ಸಾವೇ ಇಲ್ಲದವರು. ಸಾವನ್ನು ಗೆಲ್ಲುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವಷ್ಟೆ! ಹುಟ್ಟು ಇದ್ದಮೇಲೆ ಸಾವು ಇರಲೇಬೇಕು. ಆದರೆ ಏಳು ಜನರು ಸಾವನ್ನು ಗೆದ್ದಿದ್ದಾರೆ; ಅವರಿಗೆ ಸಾವೇ ಇಲ್ಲ – ಎನ್ನುವುದು ಪರಂಪರೆಯ ನಂಬಿಕೆ. ಈ ಏಳು ಜನರು ಯಾರೆಂಬುದನ್ನು ಮೇಲಿನ ಶ್ಲೋಕ ಪಟ್ಟಿಮಾಡಿ ಹೇಳಿದೆ.ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರೇ ಆ ಏಳು ಚಿರಂಜೀವಿಗಳು.

ದಿನದ ಸೂಕ್ತಿ ಕೇಳಿ:ಬಲಿಪಾಡ್ಯಮಿ

ಚಿರಂಜೀವಿಗಳೆಂದು ಗುರುತಿಸಲ್ಪಟ್ಟಿರುವ ಏಳು ಜನರೂ ಪುರಾಣವ್ಯಕ್ತಿಗಳು; ಬಲಿಯನ್ನು ಹೊರತು ಪಡಿಸಿದರೆ, ಉಳಿದ ಅಷ್ಟು ಮಂದಿಯೂ ರಾಮಾಯಣ ಮತ್ತು ಮಹಾಭಾರತಗಳಲ್ಲಿರುವ ಪ್ರಮುಖ ಪಾತ್ರಗಳು ಎನ್ನಬಹುದು; ಬಲಿಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದ್ದರೂ ಬೇರೆ ಪುರಾಣಗಳಲ್ಲಿಯೇ ಹೆಚ್ಚಿನ ವಿವರಗಳು ಸಿಗುವುದು. ಈ ಏಳು ಜನರಿಗೆ ಚಿರಂಜೀವತ್ವ ಹೇಗೆ ದೊರೆಯಿತು ಎನ್ನುವುದು ಕೂಡ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಮಗೆ ಇಲ್ಲಿ ಪ್ರಸ್ತುತ ವ್ಯಕ್ತಿ ಎಂದರೆ ಬಲಿ.

ಬಲಿಯು ಪ್ರಹ್ಲಾದನ ಮೊಮ್ಮಗ; ವಿರೋಚನನ ಮಗ. ಇವನು ರಾಕ್ಷಸರಾಜ. ಇವನ ದಾನಬುದ್ಧಿ ಎಲ್ಲ ಲೋಕಗಳಲ್ಲೂ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಅವನಿಗೆ ತನ್ನ ದಾನಶೀಲತೆಯ ಬಗ್ಗೆ ತುಂಬ ಹೆಮ್ಮೆಯೂ ಇತ್ತು. ಇವನ ಅಹಂಕಾರವನ್ನು ತಗ್ಗಿಸಲೆಂದೇ ಮಹಾವಿಷ್ಣು ಇವನಲ್ಲಿಗೆ ಬಂದ; ಆದರೆ ವಾಮನರೂಪದಲ್ಲಿ ಬಂದ; ಬಂದು ದಾನವನ್ನು ಬೇಡಿದ. ಪುಟ್ಟ ಆಕೃತಿಯ ಈ ಬಾಲಕ ಏನನ್ನು ತಾನೆ ಕೇಳಿಯಾನು – ಎಂಬ ಎಣಿಕೆ ಬಲಿಚಕ್ರವರ್ತಿಯದ್ದು. ಮೇಲ್ನೋಟಕ್ಕೆ ಸಣ್ಣ ಕೋರಿಕೆಯಾಗಿಯೇ ಕಾಣುವಂಥ ದಾನವನ್ನೇ ಕೇಳಿದ ವಾಮನ; ಮೂರು ಹೆಜ್ಜೆಗಳಷ್ಟು ಭೂಮಿ ಅವನು ಕೇಳಿದ ದಾನ. ಹುಚ್ಚ, ಇಷ್ಟೇ ಸಾಕೇ, ಬೇರೆ ಏನನ್ನಾದರೂ ಕೇಳಿಕೋ – ಎಂದ ಬಲಿ. ಆದರೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನೇ ಅವನು ಕೊಡಲು ಸಾಧ್ಯವಾಗಲಿಲ್ಲ. ವಾಮನ ತ್ರಿವಿಕ್ರಮನಾಗಿ ಬೆಳೆದು, ಒಂದು ಹೆಜ್ಜೆಯಿಂದ ಭೂಮಿಯನ್ನೂ, ಮತ್ತೊಂದರಿಂದ ಆಗಸವನ್ನೂ ಅಳೆದುಬಿಟ್ಟ! ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ಸ್ಥಾನವಾಯಿತು. ವಿಷ್ಣು ಅವನನ್ನು ಮೆಟ್ಟಿ, ಪಾತಾಳಕ್ಕೆ ತಳ್ಳಿದ. ಆದರೂ ಅವನ ದಾನಬುದ್ಧಿಯಿಂದ ಪ್ರಸನ್ನನಾಗಿ ಅವನಿಗೆ ಚಿರಂಜೀವಿಯಾಗಿರು ಎಂದು ಹರಸಿದ; ಮಾತ್ರವಲ್ಲ, ವರ್ಷಕ್ಕೊಮ್ಮೆ ಅವನು ತನ್ನ ರಾಜ್ಯವಾದ ಈ ಭೂಲೋಕಕ್ಕೆ ಬಂದುಹೋಗುವ ಅವಕಾಶವನ್ನೂ ಒದಗಿಸಿದ.

ಇಂದು ಬಲಿಪಾಡ್ಯಮಿ. ನಾವೆಲ್ಲರೂ ಬಲಿಯನ್ನು ಸ್ವಾಗತಿಸುವ ದಿನ. ಜೊತೆಗೆ ಅವನಿಂದ ಪಾಠವನ್ನು ಕಲಿಯುವ ಸಮಯ ಕೂಡ. ನಮ್ಮ ಗುಣಗಳ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಅಹಂಕಾರ ನಮ್ಮನ್ನು ಸವಾರಿಮಾಡತೊಡಗಿದರೆ ನಮ್ಮ ಗುಣಗಳೇ ನಮ್ಮ ಶತ್ರುಗಳೂ ಆಗಬಹುದು. ಎಲ್ಲ ಗುಣಗಳಲ್ಲೂ ಮಹಾಗುಣ ಎಂದರೆ ವಿನಯವೇ. ಇದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT