ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲೆಡೆ ಸಡಗರ, ಸಂಭ್ರಮದಿಂದ ಹೋಳಿಯ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮತ್ತೊಬ್ಬರಿಗೆಬಣ್ಣ ಎರಚುವುದರಿಂದ ಎಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಬಗ್ಗೆ ಅರಿವಿಲ್ಲದೇ ಬಹುತೇಕ ಜನರು ಸಂಭ್ರಮದಲ್ಲಿ ತೊಡಗುತ್ತಾರೆ. ಹೋಳಿ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ನಿಮ್ಮ ಕಣ್ಣು, ಚರ್ಮ, ಕಿವಿ ಮುಂತಾದ ಅವಯವಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಅನುಸರಿಸಬೇಕಾದ ಸೂಕ್ತ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ.
ಹೋಳಿ ಹಬ್ಬದ ಆಚರಣೆ ವೇಳೆ ಕಣ್ಣಿನ ಆರೈಕೆ ವಿಚಾರಕ್ಕೆ ಬಂದರೆ ಹಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.ಈ ಮೊದಲಿನಂತೆತರಕಾರಿ ಮತ್ತು ಹೂವುಗಳಿಂದ ತಯಾರಿಸುವ ಸಸ್ಯಜನ್ಯ ಬಣ್ಣ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸಿಗುವಸಿಂಥೆಟಿಕ್ ರಾಸಾಯನಿಕ ಬಣ್ಣ ಕಣ್ಣು, ಚರ್ಮಗಳಿಗೆ ಅಪಾಯಕಾರಿ.
ಹೋಳಿ ವೇಳೆ ಕಣ್ಣುಗಳ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕಣ್ಣುಗಳಲ್ಲಿ ಕಿರಿಕಿರಿ, ಅಲರ್ಜಿ, ಸೋಂಕು ಹಾಗೂ ತಾತ್ಕಾಲಿಕವಾಗಿ ಅಂಧತ್ವ ಉಂಟಾಗುವ ಸಾಧ್ಯತೆಗಳಿವೆ. ಹೋಳಿ ಹಬ್ಬದ ಆಚರಣೆ ವೇಳೆ ನೀವು ಮಾಡಬೇಕಾದ ಮತ್ತು ಮಾಡದಿರುವ ಪ್ರಮುಖ ಐದು ಅಂಶಗಳು ಇಲ್ಲಿವೆ.
–ಡಾ.ರಾಮ್ ಮಿರ್ಲೆ, ಮುಖ್ಯಸ್ಥರು, ಕ್ಲಿನಿಕಲ್ ಸರ್ವೀಸಸ್, ಅಗರವಾಲ್ ಕಣ್ಣಿನ ಆಸ್ಪತ್ರೆ
***
ಹೀಗೆ ಸಜ್ಜಾಗಿ...
l ಲೇಯರ್ ಅಪ್: ಕಣ್ಣಿನ ಸುತ್ತಲಿನ ಚರ್ಮ ಸೂಕ್ಷ್ಮವಾಗಿರುತ್ತದೆ. ಹೋಳಿಗೂ ಮುನ್ನ ಕಣ್ಣಿನ ಸುತ್ತಲಿನ ಸೂಕ್ಷ್ಮ ಜಾಗದಲ್ಲಿ ಮೃದುವಾಗಿ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣಿ ಹಚ್ಚಿಕೊಳ್ಳಿ.
l ಕನ್ನಡಕ ಧರಿಸಿ: ಕನ್ನಡಕ ಧರಿಸುವುದರಿಂದ ನಿಮಗೆ ಕೂಲ್ ಲುಕ್ ನೀಡುವುದಲ್ಲದೇ, ಬಣ್ಣಗಳಿಂದ ಕಣ್ಣುಗಳಿಗೆ ರಕ್ಷಣೆ ದೊರೆಯುತ್ತದೆ.
l ತೊಳೆಯಿರಿ: ಆಕಸ್ಮಿಕವಾಗಿಬಣ್ಣ ಕಣ್ಣಿಣ್ಣೊಳಗೆ ಹೋದರೆ ಮೊದಲು ನಿಮ್ಮ ಕೈ ನಂತರ ನಿಧಾನವಾಗಿ ಮುಖ ತೊಳೆಯಿರಿ. ಕಣ್ಣು ತೆರೆಯಲು ಪ್ರಯತ್ನಿಸಿ. ಬೊಗಸೆಯಲ್ಲಿ ನೀರನ್ನಿಟ್ಟುಕೊಂಡು ಅದರೊಳಗೆ ಕಣ್ಣುರೆಪ್ಪೆಗಳನ್ನು ತೆರೆದು, ಮುಚ್ಚಲು ಪ್ರಯತ್ನಿಸಿ.ಕಣ್ಣಿನೊಳಗೆ ನೀರು ಚಿಮುಕಿಸಬೇಡಿ.
l ವೈದ್ಯರ ಬಳಿ ಹೋಗಿ: ಬಣ್ಣ ಒಳ ಹೋಗುವುದರಿಂದ ಕಣ್ಣು ಕೆಂಪಾಗಿದ್ದರೆ,ನೀರು ಸೋರುತ್ತಿದ್ದರೆ, ಕಿರಿಕಿರಿ, ಅಸ್ವಸ್ಥತೆ, ಆಘಾತ, ರಕ್ತಸ್ರಾವವಾಗುವುದು ಕಂಡು ಬಂದರೆ ಕೂಡಲೇ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ.
l ವದಂತಿಗಳಿಗೆ ಕಿವಿಗೊಡಬೇಡಿ: ಕಣ್ಣುಗಳ ಸುತ್ತಮುತ್ತಲಿನ ಭಾಗಗಳಿಗೆ ಬಣ್ಣ ಹೋಗುವುದನ್ನು ತಪ್ಪಿಸಲು ಹಲವು ಮುನ್ನೆಚ್ಚರಿಕೆ ಕೈಗೊಂಡರೆ ಅನುಕೂಲವಾಗುತ್ತದೆ. ಬಣ್ಣ ನಿಮ್ಮ ಮುಖದ ಮೇಲೆ ಬೀಳುತ್ತಿದ್ದಂತೆಯೇ ನಿಮ್ಮ ಕಣ್ಣು ಮತ್ತು ತುಟಿಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಈ ಮೂಲಕ ಸಾಧ್ಯವಾದಷ್ಟೂ ಬಣ್ಣ ನಿಮ್ಮ ಕಣ್ಣು ಮತ್ತು ಬಾಯಿ ಪ್ರವೇಶಿಸುವುದು ನಿಯಂತ್ರಣವಾಗುತ್ತದೆ.
***
ವಾಟರ್ ಬಲೂನ್ ಬೇಡ
ಬಣ್ಣ ಕಣ್ಣುಗಳ ಒಳ ಹೋದಾಗ ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜಬೇಡಿ. ಏಕೆಂದರೆ, ಇದರಿಂದ ಕಣ್ಣಿನಲ್ಲಿ ಉರಿ, ಕಿರಿಕಿರಿ ಉಂಟಾಗುವುದಲ್ಲದೇ, ಕಣ್ಣುಗಳಿಗೆ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
lವಾಟರ್ ಬಲೂನ್ ಬೇಡ: ವಾಟರ್ ಬಲೂನ್ ಬಳಸಬೇಡಿ. ಇವು ಅತ್ಯಂತ ಅಪಾಯಕಾರಿ ಮತ್ತು ಕಣ್ಣಿಗೆ ತೀವ್ರ ಸ್ವರೂಪದ ಗಾಯ ಉಂಟು ಮಾಡುತ್ತವೆ. ರಕ್ತಸ್ರಾವ, ಲೆನ್ಸ್ಗೆ ಹಾನಿ, ರೆಟಿನಾ ಬೇರ್ಪಡುವಿಕೆಗೆ ಕಾರಣವಾಗುತ್ತವೆ. ಇದರ ಪರಿಣಾಮ ದೃಷ್ಟಿ ಅಥವಾ ಕಣ್ಣುಗಳನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕಣ್ಣಿನ ವೈದ್ಯರನ್ನು ಕಾಣಬೇಕು.
lಸ್ವಪ್ರಯತ್ನ ಬೇಡ: ಬಣ್ಣ ಕಣ್ಣಿನ ಒಳಗೆ ಹೋದ ಸಂದರ್ಭದಲ್ಲಿ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ನಿಂದ ಬಣ್ಣದ ಅಂಶ ಹೊರ ತೆಗೆಯಲು ಪ್ರಯತ್ನಿಸಬೇಡಿ. ಹೀಗೆ ಮಾಡಿದರೆ ಪರಿಸ್ಥಿತಿ ಗಂಭೀರಗೊಳಿಸುತ್ತದೆ.
lಕನ್ನಡಕಧಾರಿಗಳು ಎಚ್ಚರ: ಹೋಳಿ ಸಂದರ್ಭದಲ್ಲಿ ಕನ್ನಡಕಧಾರಿಗಳು ಹಲವು ಸಮಸ್ಯೆಗಳಿಗೆ ಸಿಲುಕುತ್ತಾರೆ.ಕನ್ನಡಕದ ಫ್ರೇಮ್ನಲ್ಲಿ ಬಣ್ಣದ ಅಂಶ ಸೇರಿಕೊಳ್ಳುತ್ತವೆ. ರಿಮ್ ಇಲ್ಲದ ಕನ್ನಡಕ ಮುರಿಯುವ ಸಾಧ್ಯತೆಗಳಿವೆ.
lಕಾಂಟ್ಯಾಕ್ಟ್ ಲೆನ್ಸ್ ಹೊರತೆಗೆಯಿರಿ: ಹೋಳಿ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಹೊರತೆಗೆದಿಡಿ. ಇಲ್ಲವಾದರೆ, ಬಣ್ಣದ ನೀರು ಲೆನ್ಸ್ ಸೇರಿಕೊಳ್ಳುವುದರಿಂದ ಅಲರ್ಜಿ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ವಿಶೇಷ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಲು ಹಿಂಜರಿಕೆ ಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.