ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಯ: ಎಲ್ಲ ಪಿತೃಗಳ ಅಮಾವಾಸ್ಯೆ

Last Updated 28 ಸೆಪ್ಟೆಂಬರ್ 2019, 1:13 IST
ಅಕ್ಷರ ಗಾತ್ರ

ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ‘ಪಕ್ಷ’ವೆಂದೇ ಕರೆಯುವ ರೂಢಿಯಿದೆ. ಇದನ್ನು ‘ಮಹಾಲಯ ಪಕ್ಷ’ವೆಂದೂ ಹೇಳುತ್ತಾರೆ. ಈ ವರ್ಷ ಸಪ್ಟಂಬರ ಹದಿನೈದರಿಂದ ಇಪ್ಪತ್ತೆಂಟರವರೆಗೆ ಇದು ವ್ಯಾಪಿಸಿದೆ.

ಸಂಸ್ಕೃತದಲ್ಲಿ ‘ಪಿತೃ’ ಎಂಬ ಶಬ್ದ ಸಾಮಾನ್ಯವಾಗಿ ‘ತಂದೆ’ ಎಂಬ ಅರ್ಥದಲ್ಲಿ ಇದ್ದರೂ, ಅದಕ್ಕೆ ‘ಪೂರ್ವಜ’ ಎಂಬ ಅರ್ಥವೂ ಇದೆ. ತಂದೆ ಹಾಗೂ ತಂದೆಯ ಸ್ಥಾನದಲ್ಲಿ ಇರುವವನು ಪಿತೃ ಎಂಬುದೊಂದಾದರೆ, ತಂದೆ–ತಾಯಿ ಹಾಗೂ ಹಿಂದಿನ ತಲೆಮಾರಿನ ಎಲ್ಲರನ್ನೂ ಪಿತೃ ಶಬ್ದದಿಂದಲೇ ಹೇಳಲಾಗುತ್ತದೆ. ಪಿತೃಪಕ್ಷ ಎಂಬಲ್ಲಿ ಈ ವಿಶಾಲವಾದ ಅರ್ಥವೇ ಇದೆ. ಅದು ಪೂರ್ವಜರ ಪಕ್ಷವಾದುದರಿಂದ ಹಾಗೆಯೇ ಪ್ರಸಿದ್ಧವಾಗಿದೆ. ಈ ಸಂದರ್ಭದಲ್ಲಿ ಯಮನ ಅಪ್ಪಣೆಯಂತೆ ಪೂರ್ವಜರು ಭೂಲೋಕಕ್ಕೆ ಬರುತ್ತಾರೆ. ಅವರ ದೃಷ್ಟಿ ತಮ್ಮ ಮನೆತನದ ಮೇಲಿರುತ್ತದೆ. ಆಗ ಅವರನ್ನು ಸಂತೋಷಗೊಳಿಸಿದರೆ, ಅನುಗ್ರಹ ಸಂಪಾದಿಸಬಹುದು. ಅದಲ್ಲದಿದ್ದರೆ ಅವರ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಪ್ರತಿಯೊಬ್ಬನೂ ಪ್ರತಿದಿನವೂ ತನಗೆ ತನ್ನ ಗುರು–ಹಿರಿಯರನ್ನು ನೆನೆಯಬೇಕೆಂಬ ರೂಢಿಯೊಂದಿದೆ. ಗತಿಸಿದವರನ್ನು ನಿತ್ಯತರ್ಪಣದಿಂದ ಸಂತೋಷಗೊಳಿಸುವುದು ಒಂದಾದರೆ, ವಾರ್ಷಿಕವಾಗಿ ಶ್ರಾದ್ಧ-ತರ್ಪಣವನ್ನು ಮಾಡುವುದು ಇನ್ನೊಂದು. ಹಿರಿಯ ಮಗನು ಅದನ್ನು ಮಾಡಿದರೆ, ಉಳಿದ ಮಕ್ಕಳು ಅದರಲ್ಲಿ ಭಾಗವಹಿಸುತ್ತಾರೆ. ತಂದೆ–ತಾಯಿಗಳಿರುವವರು ತರ್ಪಣ–ಶ್ರಾದ್ಧಾದಿಗಳನ್ನು ಮಾಡುವುದಿಲ್ಲ. ಅಷ್ಟೇ ಅಲ್ಲ, ಅದನ್ನು ಮಾಡಿಸುವ ರೂಢಿಯೂ ಇಲ್ಲ.

ವಂಶವೃಕ್ಷದ ಪರಿಚಯ ಇದ್ದರೆ ಮಾತ್ರ ಶ್ರಾದ್ಧಾದಿಗಳನ್ನು ನೆರವೇರಿಸಬಹುದು. ಕೆಲವರಿಗೆ ತಮ್ಮ ತಂದೆ ತಾಯಿ ಗುರು ಹಿರಿಯರ ಪರಿಚಯವೇ ಇರುವುದಿಲ್ಲ. ಮಹಾಭಾರತದಲ್ಲಿ ಒಂದು ಪ್ರಸಂಗವಿದೆ. ಕರ್ಣನು ಕುಂತಿಯ ಮಗನಾದರೂ ರಾಧೇಯನಾಗಿ ಬೆಳೆದಿದ್ದಾನೆ. ಅವನ ತಂದೆ ಯಾರು, ತಾಯಿ ಯಾರು ಎಂಬುದೇ ಅವನಿಗೆ ತಿಳಿದಿರುವುದಿಲ್ಲ. ಇದರ ಪರಿಣಾಮವಾಗಿ ಅವನು ರಾಜನೇ ಆದರೂ ಪಿತೃಕರ್ಮಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಜೀವನದ ಸಂಧ್ಯೆಯಲ್ಲಿ ಸ್ವತಃ ಶ್ರೀಕೃಷ್ಣನೇ ಹೇಳಲಿ, ಕುಂತಿಯು ಬಂದು ಮಗನೆಂದು ಗೋಳಾಡಲಿ, ಅದೆಲ್ಲಾ ಯುದ್ಧತಂತ್ರವೆಂದೇ ಊಹಿಸಬೇಕಾದ ಅನಿವಾರ್ಯತೆ ಕರ್ಣನಿಗಿತ್ತು. ಯುದ್ಧದಲ್ಲಿ ವೀರೋಚಿತವಾದ ಮರಣವನ್ನಪ್ಪಿದ ಕರ್ಣನು ಸಹಯೋಧರೊಂದಿಗೆ ಸ್ವರ್ಗಲೋಕಕ್ಕೆ ಹೋದರೆ ಅವನಿಗೆ ಅಚ್ಚರಿ ಕಾದಿತ್ತು. ಎಲ್ಲರಿಗೂ ಷಡ್ರಸೋಪೇತವಾದ ಆಹಾರವನ್ನು ನೀಡಿದರೆ, ಕರ್ಣನಿಗೆ ಕೇವಲ ಚಿನ್ನದ ಆಭರಣಗಳನ್ನು ನೀಡಲಾಗುತ್ತಿತ್ತು. ಉಳಿದವರೆಲ್ಲರೂ ಅನ್ನದಾನ ಮಾಡಿ ಪಿತೃಗಳನ್ನು ಪ್ರಸನ್ನಗೊಳಿಸಿದ್ದರು. ಆದರೆ ಕರ್ಣನಿಗೆ ಆ ಭಾಗ್ಯವಿರಲಿಲ್ಲ. ಅವನಿಗೆ ತನ್ನ ಪಿತೃಪಿತಾಮಹಾದಿಗಳ ಹೆಸರೇ ಗೊತ್ತಿರಲಿಲ್ಲ. ಅವನು ದಾನಶೂರನೇ ಆಗಿದ್ದರೂ, ಧಾರಾಳವಾಗಿ ಬೆಳ್ಳಿ–ಬಂಗಾರ ದಾನ ಮಾಡಿದ್ದರೂ ಅನ್ನದಾನ ಮಾಡಿರಲಿಲ್ಲ. ಅದನ್ನು ಅವನು ಸ್ವರ್ಗಲೋಕದ ಅಧಿಪತಿಯಾದ ಇಂದ್ರನಲ್ಲಿ ವಿಜ್ಞಾಪಿಸಿದಾಗ ಇಂದ್ರನು ಕರ್ಣನಿಗೆ ಹದಿನೈದು ದಿನಗಳ ಅವಕಾಶ ನೀಡಿ, ಪಿತೃಶ್ರಾದ್ಧಾದಿಗಳನ್ನು ಪೂರೈಸಿ ಬರುವಂತೆ ಆದೇಶಿಸಿದ. ಕರ್ಣನಿಗೆ ದೊರೆತ ಹದಿನೈದು ದಿನಗಳೇ ಪಕ್ಷ, ಪಿತೃಪಕ್ಷ, ಮಹಾಲಯ ಎಂದೆಲ್ಲಾ ಪ್ರಸಿದ್ಧವಾಗಿವೆ. ಅಲ್ಲಿಂದ ಈ ಆಚರಣೆ ಸಾರ್ವತ್ರಿಕವಾಯಿತು.

ಈ ದಂತಕತೆಯನ್ನು ಅರ್ಥೈಸಿದರೆ, ಗಮನಾರ್ಹವಾದ ಹಲವು ಅಂಶಗಳು ಹೊಳೆಯುತ್ತವೆ. ಒಂದು, ಈ ದಿನಗಳಲ್ಲಿ ಅಪರಿಚಿತರಾದ ಪಿತೃಗಳಿಗೂ ಶ್ರಾದ್ಧವನ್ನು ಮಾಡಬಹುದಾದ ಸದವಕಾಶವಾದರೆ, ಜಾತಿ–ನೀತಿಗಳೆಲ್ಲವನ್ನೂ ಮೀರಿ ಗತಿಸಿದ ಬಾಂಧವರಿಗೆ ಸಂತೋಷವನ್ನು ಉಂಟುಮಾಡುವುದು ಇನ್ನೊಂದು. ಮಕ್ಕಳು ಗತಿಸಿದ ಹಿರಿಯರಿಗೆ ಕೃತಜ್ಞರಾಗಿರುವುದು ನಿಜವೇ ಆದರೂ ಅವರು ಜೀವನದ ಬಿರುಗಾಳಿಗೆ ಸಿಲುಕಿ ಏನನ್ನೂ ಮಾಡಲು ಸಾಧ್ಯವಾಗದಿರಬಹುದು. ಇಂತಹ ಸನ್ನಿವೇಶಗಳಲ್ಲಿ ಮಹಾಲಯ ಶ್ರಾದ್ಧ ಎಲ್ಲರನ್ನೂ ಪ್ರಸನ್ನಗೊಳಿಸುವ ಸುಲಭೋಪಾಯವಾಗುತ್ತದೆ. ಅದರ ಅನುಷ್ಠಾನದಿಂದ ಗೊತ್ತಿರಲಿ ಗೊತ್ತಿಲ್ಲದಿರಲಿ, ಗತಿಸಿದವರೆಲ್ಲರಿಗೂ ಅನ್ನ-ನೀರು ದೊರೆಯುತ್ತದೆ. ಇಲ್ಲಿ ಅನ್ನ-ನೀರುಗಳನ್ನು ಕೊಟ್ಟರೆ ಮಾತ್ರ ಪರಲೋಕದಲ್ಲಿ ನಮಗೆ ಲಭಿಸುತ್ತದೆ. ಇದು ಯಾವುದೋ ಒಂದು ಜಾತಿಗೆ ಸೀಮಿತವಾದುದಲ್ಲ. ಇದಕ್ಕೆ ಬೇಕಾದುದು ಜಾತಿಯಲ್ಲ, ಶ್ರದ್ಧೆ. ಶ್ರದ್ಧೆಯಿಲ್ಲದೆ ಇದನ್ನು ಮಾಡಿದರೂ ಫಲವಿಲ್ಲ. ಈ ಕಾರಣದಿಂದಲೇ ಇದನ್ನು ‘ಶ್ರಾದ್ಧ’ ಎನ್ನುತ್ತಾರೆ. ಅದನ್ನು ಮಂತ್ರಸಹಿತವಾಗಿ ಮಾಡುವಂತೆ, ಮಂತ್ರವಿಲ್ಲದೆಯೂ ಮಾಡುತ್ತಾರೆ. ಅಶಕ್ತರಾದವರು ಬೇರೆಯವರಿಂದಲೂ ಮಾಡಿಸುವುದುಂಟು.

ಈ ಪಕ್ಷದ ಒಂದೊಂದು ದಿನದಲ್ಲಿಯೂ ಶ್ರಾದ್ಧವನ್ನು ಮಾಡಬಹುದಾದರೂ ಅಮಾವಾಸ್ಯೆಯು ಅತ್ಯಂತ ಶ್ರೇಷ್ಠವೆನ್ನಲಾಗಿದೆ. ಅದು ‘ಸರ್ವ ಪಿತೃ ಅಮಾವಾಸ್ಯೆ’. ಅಂದರೆ, ಎಲ್ಲ ಪಿತೃಗಳ ತಿಥಿ. ಹಿಂದೆ ಹೇಳಿದಂತೆ ಅದು ಎಲ್ಲ ಮಾತೃಗಳ ತಿಥಿಯೂ ಹೌದು. ತಮ್ಮ ವಂಶದಲ್ಲಿ ಗತಿಸಿದವರೆಲ್ಲರಿಗೂ ಒಂದೇ ಪ್ರಯತ್ನದಿಂದ ಶ್ರಾದ್ಧ ಮಾಡಬಹುದು. ಇದಕ್ಕಾಗಿ ಬೇಕಾಗಿರುವುದು ಹಣವಲ್ಲ, ಕೃತಜ್ಞತೆ. ಅದಕ್ಕೆ ಪ್ರತಿಯಾಗಿ ಪಿತೃಗಳು ಆರೋಗ್ಯವನ್ನೂ ಆಯುಷ್ಯವನ್ನೂ ಸಂಪತ್ತನ್ನೂ ಸಂತಾನವನ್ನೂ ದಯಪಾಲಿಸುತ್ತಾರೆ ಎಂದು ಪುರಾಣಗಳಲ್ಲಿದೆ.

ಈ ಪಕ್ಷದ ಕೆಲವು ದಿನಗಳಿಗೆ ವಿಶೇಷ ಮಹತ್ತ್ವವಿದೆ. ಭರಣಿ ಅಥವಾ ಮಹಾಭರಣಿಯ ದಿನ ಕಳೆದ ವರ್ಷ ತೀರಿಕೊಂಡವರಿಗೆ ಶ್ರಾದ್ಧ ಮಾಡುತ್ತಾರೆ. ವ್ಯತೀಪಾತ ಯೋಗವಿರುವಾಗ ವ್ಯತೀಪಾತ ಶ್ರಾದ್ಧವನ್ನು ಮಾಡಿದರೆ, ಅವಿಧವಾ ನವಮಿಯಂದು ಮುತ್ತೈದೆಯಾಗಿ ತೀರಿಕೊಂಡವರಿಗೆ ಶ್ರಾದ್ಧ ಮಾಡಲಾಗುತ್ತದೆ. ದ್ವಾದಶಿಯಂದು ತೀರಿಹೋದ ಮಕ್ಕಳಿಗೆ ಮತ್ತು ಸಂನ್ಯಾಸಿಗಳಾಗಿದ್ದವರಿಗೆ ಶ್ರಾದ್ಧ ಮಾಡಿದರೆ, ಚತುರ್ದಶಿಯಂದು ವಿಷದಿಂದಲೋ ಆಯುಧದಿಂದಲೋ ತೀರಿಕೊಂಡವರಿಗೆ ಶ್ರಾದ್ಧ ಮಾಡುತ್ತಾರೆ. ಮಹಾಲಯ ಅಮಾವಾಸ್ಯೆಯ ವಿಷಯದಲ್ಲಿ ಹೇಳುವುದೇ ಬೇಡ, ಅಂದು ಶ್ರಾದ್ಧ ಮಾಡಿದರೆ ಗಯೆಯಲ್ಲಿ ಶ್ರಾದ್ಧ ಮಾಡಿದ ಫಲ ಬರುತ್ತದೆ ಎನ್ನಲಾಗಿದೆ. ವಾರ್ಷಿಕ ಶ್ರಾದ್ಧ ಮಾಡಲು ಮರೆತು ಹೋದರೆ, ಅಥವಾ ಸಾಧ್ಯವಾಗದಿದ್ದರೆ, ಆ ದಿನ ಶ್ರಾದ್ಧ ಮಾಡಿ ಪಿತೃಗಳನ್ನು ಸಂತುಷ್ಟಿಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT