ಉಪ್ಪಿನಂಗಡಿ: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ, ಉತ್ಸವಾದಿಗಳ ಪ್ರಕಾರ 2ನೇ ಮಹಾಶಿವರಾತ್ರಿ ಮಖೆಕೂಟ ಶುಕ್ರವಾರ ಬೆಳಿಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದು, ಶನಿವಾರ ಮಧ್ಯಾಹ್ನ ಸಂಪನ್ನಗೊಂಡಿತು.
ಶುಕ್ರವಾರ ಬೆಳಿಗ್ಗಿನಿಂದಲೇ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ, ಉದ್ಭವಲಿಂಗಕ್ಕೆ ಹಾಲು, ಸಿಯಾಳ, ಜಲಾಭಿಷೇಕವನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಇಲ್ಲಿನ ಉದ್ಭವಲಿಂಗಕ್ಕೆ ಸ್ತ್ರೀ ಪುರುಷರಾದಿಯಾಗಿ, ಅಬಾಲವೃದ್ದರಾಗಿ ಶ್ರದ್ಧಾಭಕ್ತಿಯಿಂದ ಅಭಿಷೇಕ, ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಶುಕ್ರವಾರ ರಾತ್ರಿ 7:45ರಿಂದ 9ರವರೆಗೆ ಉದ್ಭವ ಲಿಂಗದ ಬಳಿ ರುದ್ರ ಪಾರಾಯಣ ನಡೆಯಿತು. ಆ ಬಳಿಕ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಿತು.
ಶನಿವಾರ ನಸುಕಿನಲ್ಲಿ ತೀರ್ಥಸ್ನಾನ ನಡೆದು, ಬೆಳಿಗ್ಗೆಯೇ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಧ್ಯಾಹ್ನ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಸುಮಾರು 3 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.
ದೇವಳದ ಆಡಳಿತಾಧಿಕಾರಿ ಪುತ್ತೂರು ತಹಶೀಲ್ದಾರ್ ರಾಹುಲ್ ಶಿಂಧೆ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ ಇದ್ದರು.
ದೇವಾಲಯದ ವ್ಯವಸ್ಥಾಪಕ ವೆಂಕಟೇಶ್, ಕೃಷ್ಣ ಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.