ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 18-12-2022ರಿಂದ 24-12-2022ರವರೆಗೆ

Last Updated 17 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಿಮ್ಮದೇ ನಡೆಯಬೇಕೆನ್ನುವ ಹಠ ನಿಮ್ಮಲ್ಲಿ ಇರುತ್ತದೆ. ದೂರ ಪ್ರಯಾಣದ ವಿಹಾರವನ್ನು ಏರ್ಪಾಡು ಮಾಡಿ ಖರ್ಚು ಮತ್ತು ವ್ಯಸನವನ್ನು ತಂದುಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ನಡೆಯಿರಿ. ಹಣದ ಒಳಹರಿವು ಕಡಿಮೆ ಇರುವುದರಿಂದ ಆರ್ಥಿಕ ಸಂಗ್ರಹಣೆಗಾಗಿ ಮಾರ್ಗಗಳನ್ನು ಹುಡುಕುವಿರಿ. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವವರು ಜಾಗ್ರತೆ ವಹಿಸಿರಿ. ಸಾಹಸ ಕಲಾವಿದರು ತಮ್ಮ ಕಾರ್ಯನಿರ್ವಹಿಸುವಾಗ ಎಚ್ಚರಿಕೆಯಿಂದಿರಿ. ಹಿರಿಯ ರಾಜಕೀಯ ವರ್ಗದವರಿಗೆ ಶತ್ರುಪೀಡೆ ಹೆಚ್ಚಾಗುವ ಸಂದರ್ಭವಿದೆ. ಕೋರ್ಟ್‌ ಕಚೇರಿ ಕೆಲಸಗಳಲ್ಲಿ ನಿಮಗೆ ಶುಭ ಸಮಾಚಾರವಿರುತ್ತದೆ. ಕೃಷಿಕರಿಗೆ ಹೆಚ್ಚಿನ ಆದಾಯ ಸಿಗುವ ಸಂದರ್ಭವಿದೆ. ಭೂ ಅಭಿವೃದ್ಧಿ ಮಾಡುವವರಿಗೆ ಆದಾಯ ಹೆಚ್ಚುವ ಸಮಯ.

**
ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಸಿನಿಮಾ ನಟರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ಕೆಲವೊಂದು ವಿಚಾರಗಳ ಬಗ್ಗೆ ಮನಸ್ಸಿನಲ್ಲಿ ಆತಂಕವಿರುತ್ತದೆ. ಅದನ್ನು ದೂರ ಮಾಡಿ ಮುಂದುವರಿಯಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಕಾಲವಿದು. ಕೆಲವರಿಗೆ ವಾಸಸ್ಥಾನ ಬದಲಾಗಬಹುದು. ಕುಟುಂಬದವರ ಮಾತಿಗೆ ಬೆಲೆ ಕೊಡುವುದು ಬಹಳ ಉತ್ತಮ. ನಿಮ್ಮ ಅಭಿರುಚಿಗೆ ಹೊಂದಾಣಿಕೆಯಾಗುವ ಸ್ನೇಹಿತರು ಈಗ ದೊರೆತು ಸಂತೋಷಪಡುವಿರಿ. ದಾಖಲೆ ಪರಿಶೀಲನೆ ಮಾಡುವಂತಹ ಕೆಲಸ ಮಾಡುವವರು ಹೆಚ್ಚು ಎಚ್ಚರವನ್ನು ವಹಿಸಬೇಕು. ಧನದಾಯವು ನಿಮಗೆ ಅನುಕೂಲವಾಗುವಷ್ಟು ಇರುತ್ತದೆ. ನಿಮ್ಮ ಹಿತಶತ್ರುಗಳು ಯಾರೆಂದು ನಿಮ್ಮ ಅರಿವಿಗೆ ಬರುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಹಿಡಿತ ಸಾಧಿಸುವಿರಿ. ಮೋಸಗಾರರನ್ನು ಹುಡುಕಿ ವ್ಯವಹಾರಗಳಿಂದ ಹೊರಗಿಡುವಿರಿ. ನಿಮ್ಮ ನಿರ್ಧಾರಗಳು ಸರಿಯೆಂದು ಪಾಲುದಾರರಿಗೆ ಅರಿವು ಮೂಡುತ್ತದೆ. ರಕ್ತ ಸಂಬಂಧಿ ತೊಂದರೆ ಇರುವವರು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಅಡವಿಟ್ಟ ವಸ್ತುಗಳನ್ನು ಈಗ ಬಿಡಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚಿನ ಶ್ರಮ ಹಾಕಲೇಬೇಕು. ಹಿರಿಯರೊಡನೆ ಮಾತನಾಡುವಾಗ ಅವರ ಮನದ ಭಾವನೆಯನ್ನು ಅರಿತು ಮಾತನಾಡಿರಿ. ಆಭರಣ ತಯಾರಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಉಪಾಧ್ಯಾಯರುಗಳಿಗೆ ಗೌರವ ಹೆಚ್ಚಾಗುತ್ತದೆ.

**
ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಸಂಸಾರದಲ್ಲಿನ ಜವಾಬ್ದಾರಿ ಹೆಚ್ಚಾಗಲಿದೆ. ಧನದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಗೃಹ ಸಾಮಗ್ರಿಗಳ ಖರ್ಚು ಹೆಚ್ಚಾಗುತ್ತದೆ. ಹೊಸ ಜನರ ಸಂಪರ್ಕದಿಂದ ನಿಮ್ಮ ವ್ಯವಹಾರ ವಿಸ್ತರಿಸುತ್ತದೆ. ಚರ್ಮದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ತಂದೆಯಿಂದ ಮತ್ತು ಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಹಾಯ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ವಾದ ವಿವಾದಗಳಿಂದ ದೂರ ಉಳಿದು ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿರಿ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ಲಾಭ ಬರುವ ಸಾಧ್ಯತೆ ಇದೆ. ಸೋದರಿಯರ ಸಹಾಯ ನಿಮಗೆ ದೊರೆಯುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತವೆ.

**
ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಕೆಲವರಿಗೆ ರಾಜಕೀಯ ಪ್ರವೇಶ ದೊರೆಯುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರಗಳಲ್ಲಿ ಆತ್ಮೀಯರ ಸಲಹೆಗಳನ್ನು ಪರಿಗಣಿಸುವುದು ಬಹಳ ಉತ್ತಮ. ಜಮೀನು ಅಭಿವೃದ್ಧಿಪಡಿಸುವವರಿಗೆ ಈಗ ಉತ್ತಮ ಸಹಕಾರ ದೊರೆಯುತ್ತದೆ. ದೈವದ ಹರಕೆ ತೀರಿಸಲು ಕುಟುಂಬ ಸಮೇತ ಹೊರಡುವಿರಿ. ಹಣದ ಒಳಹರಿವು ಸದ್ಯದ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸಮಸ್ಯೆ ಸೃಷ್ಟಿಯಾಗಬಹುದು. ತಾಳ್ಮೆಯಿಂದ ವ್ಯವಹರಿಸುವುದು ಬಹಳ ಉತ್ತಮ. ವಿದೇಶಿ ಕಂಪನಿಗಳಿಗೆ ಕಚ್ಚಾ ಮಾಲು ಪೂರೈಸುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಸ್ವತಃ ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭ ಬರುತ್ತದೆ.

**
ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆಭರಣ ಕೊಳ್ಳುವಾಗ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಮಾಡುವವರು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ದುಂದುವೆಚ್ಚಗಳಿಂದ ಸಂಸಾರ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತದೆ. ಧನದಾಯವು ಅಗತ್ಯಕ್ಕಿಂತ ಕಡಿಮೆ ಇರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಗಾತಿ ಒದಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಧಾನಗತಿಯಲ್ಲಿ ಕೆಲಸ ಮಾಡುವಾಗ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡುವರು. ಮಕ್ಕಳ ಬಗ್ಗೆ ಹೆಚ್ಚಿನ ಗಮನ ಇರಲಿ. ಕೀಲು ನೋವು ಹೆಚ್ಚು ಕಾಡಬಹುದು. ಕೃಷಿಕರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಚಿನ್ನದ ಕುಸುರಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ಆದಾಯವೂ ಹೆಚ್ಚುತ್ತದೆ.

**
ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಬರಹಗಾರರಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ. ಸಂಶೋಧಕರಿಗೆ ಅತಿ ಅಗತ್ಯವಿದ್ದ ಮಾಹಿತಿಯ ಪುಸ್ತಕ ದೊರೆಯುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ನಿಮ್ಮ ಗುಣ ಕೆಲವರಿಗೆ ಬೇಸರ ತರಿಸಬಹುದು. ತೆರಿಗೆ ಅಧಿಕಾರಿಗಳಿಗೆ ಹೆಚ್ಚು ಒತ್ತಡದ ಕೆಲಸಗಳಿರುತ್ತವೆ. ಕುಟುಂಬದಲ್ಲಿ ಮನಃಸ್ತಾಪ ಬರುವ ಸಂಭವವಿದೆ. ಬಯಸಿದ್ದ ವರ್ಗಾವಣೆಯ ಬದಲು ದೂರದೂರಿಗೆ ವರ್ಗಾವಣೆ ಆಗಬಹುದು. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಮಕ್ಕಳಿಂದ ಅಗೌರವ ಎದುರಿಸುವ ಸಂದರ್ಭವಿದೆ. ಶೀತ ಬಾಧೆ ಇರುವವರು ಎಚ್ಚರವಹಿಸಬೇಕು ಹಾಗೂ ಚಿಕಿತ್ಸೆ ಪಡೆಯಬೇಕು.

**
ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)
ಆತ್ಮಗೌರವ ಹೆಚ್ಚಾಗುತ್ತದೆ. ಯಾವುದೇ ಅಪೇಕ್ಷೆ ಇಲ್ಲದೆ ಮಾಡುವ ಕೆಲಸಗಳಿಗೆ ಉತ್ತಮ ಫಲ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಶತ್ರುಗಳನ್ನು ಪತ್ತೆ ಮಾಡಲು ಹಲವಾರು ತಂತ್ರಗಳನ್ನು ಬಳಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ದೊರೆಯುವ ಕಾಲ. ವಿದೇಶದಲ್ಲಿ ಇರುವವರಿಗೆ ದೊರೆಯುತ್ತಿದ್ದ ಸೌಲಭ್ಯಗಳಲ್ಲಿ ಕಡಿತವನ್ನು ಕಾಣಬಹುದು. ಸರ್ಕಾರಿ ಸಂಸ್ಥೆಗಳಿಗೆ ಆಹಾರ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದವರಿಗೆ ಹಣ ಬರುವುದು ನಿಧಾನವಾಗಬಹುದು. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ಅವಕಾಶ ಸಿಗುತ್ತದೆ ಹಾಗೂ ಅದರಲ್ಲಿ ನಿಮಗೆ ಲಾಭ ಬರುತ್ತದೆ. ಹೊಸ ರೀತಿಯ ವ್ಯವಹಾರಗಳಲ್ಲಿ ನಿಮಗೆ ಅವಕಾಶ ಸಿಗುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರ ವಿಸ್ತರಣೆ ಆಗಲಿದೆ.

**
ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ನಿಮ್ಮ ಕಾರ್ಯದೊತ್ತಡದ ನಡುವೆ ಕುಟುಂಬದ ಕಡೆಗೂ ಗಮನಹರಿಸಿರಿ. ಗೃಹ ತಾಪತ್ರಯಗಳೆಲ್ಲ ನಿಧಾನವಾಗಿ ಕರಗುತ್ತವೆ. ಸೋದರಿಯರು ಸಂಬಂಧ ವೃದ್ಧಿಸಿಕೊಳ್ಳಲು ಬರುವರು. ರಾಜಕೀಯದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಗಂಭೀರವಾಗಿ ಚಿಂತಿಸಿದಾಗ ಪರಿಹಾರ ದೊರೆಯುತ್ತದೆ. ನಿಮ್ಮೆಲ್ಲಾ ಅಭಿವೃದ್ಧಿಗೆ ಸ್ನೇಹಿತರು ಸಹಕಾರ ನೀಡುವರು. ಆಹಾರ ಪದಾರ್ಥಗಳನ್ನು ಸ್ವತಃ ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಮನಸ್ಸಿಗೆ ಮುದನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಿರಿ. ಕಬ್ಬಿಣ ಮತ್ತು ಗಾಜಿನ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗುತ್ತದೆ. ನಿಮ್ಮ ಆತ್ಮಗೌರವಕ್ಕೆ ಕುಂದು ಬರದಂತೆ ಎಚ್ಚರಿಕೆ ವಹಿಸುವಿರಿ. ಧನಾದಾಯವು ಸಾಮಾನ್ಯವಾಗಿರುತ್ತದೆ.

**
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)

ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಆಶೀರ್ವಾದ ಇರುತ್ತದೆ. ದೂರ ಪ್ರಯಾಣದಿಂದ ನಿಮಗೆ ಲಾಭವಿರುತ್ತದೆ. ಸೂಕ್ಷ್ಮ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರವಹಿಸಿರಿ. ಸಹೋದ್ಯೋಗಿಗಳು ನಿಮ್ಮ ಬಗ್ಗೆ ಕಾಳಜಿ ತೋರುವರು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರುತ್ತದೆ. ಉದ್ಯಮಿಗಳು ಕ್ರಮೇಣ ಇಡೀ ಉದ್ಯಮವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಅವಕಾಶ ಇರುತ್ತದೆ. ನಿಮ್ಮ ಸ್ವಂತ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ವಿದೇಶದಲ್ಲಿರುವವರಿಗೆ ಆಸ್ತಿಯನ್ನು ಗಳಿಸುವ ವಿಚಾರದಲ್ಲಿ ಶುಭ ಸಮಾಚಾರ ಕೇಳಿ ಬರುತ್ತದೆ. ಔಷಧ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಸಾಲದ ವ್ಯವಹಾರ ಖಂಡಿತ ಬೇಡ.

**
ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹೊಸ ಸ್ಥಳದಲ್ಲಿ ಶಿಕ್ಷಕ ವೃತ್ತಿ ಆರಂಭಿಸುವವರಿಗೆ ಸೂಕ್ತ ಅನೂಕೂಲ ದೊರೆಯುತ್ತದೆ. ಬಾಕಿ ಇರುವ ಕೆಲಸಗಳನ್ನು ಈಗ ಮುಗಿಸಿಕೊಳ್ಳಬಹುದು. ಬಟ್ಟೆ ಉದ್ದಿಮೆದಾರರಿಗೆ ಹೆಚ್ಚು ತಯಾರಿಕಾ ಆದೇಶಗಳು ಬರುವ ಸಾಧ್ಯತೆಗಳಿವೆ. ಧನಾದಾಯವು ನಿಮ್ಮ ನಿರೀಕ್ಷೆಗೆ ಮೀರಿ ಇರುತ್ತದೆ. ಕೆಲವರು ನಿಮ್ಮ ಹೆಸರನ್ನು ಬಳಸಿಕೊಂಡು ಅವರ ಕಾರ್ಯಸಾಧನೆ ಮಾಡಿಕೊಳ್ಳುವರು. ರಾಜಕೀಯ ವ್ಯಕ್ತಿಗಳಿಗೆ ಕೆಲವು ಸನ್ನಿವೇಶಗಳು ಅನುಕೂಲಕರವಾಗಿ ಒದಗಿ ಬರುತ್ತವೆ. ಯುವಕರು ಕೆಲವು ಮೂರ್ಖ ನಿರ್ಧಾರಗಳಿಂದ ಕೈಸುಟ್ಟುಕೊಳ್ಳುವರು. ನಿಮ್ಮ ಸಮಯವನ್ನು ನೋಡಿಕೊಂಡು ಹೊಸ ಕೆಲಸ ಒಪ್ಪಿಕೊಳ್ಳಿರಿ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ಗುತ್ತಿಗೆಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.

**
ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅದಿರು ಮಾರಾಟಗಾರರಿಗೆ ವ್ಯವಹಾರ ವಿಸ್ತರಣೆಯಾಗುವ ಸಂದರ್ಭವಿದೆ. ಆಮದು ಮತ್ತು ರಫ್ತು ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ವಿದೇಶಗಳಿಗೆ ಹಣ ವರ್ಗಾವಣೆ ಮಾಡುವವರಿಗೆ ಹೆಚ್ಚು ಕೆಲಸವಿರುತ್ತದೆ. ಕಿರಿಕಿರಿ ಎನ್ನುವ ವಾತಾವರಣ ಸಹೋದ್ಯೋಗಿಗಳ ನಡುವೆ ಇರುತ್ತದೆ. ನಿಮ್ಮ ಸ್ವಂತ ವ್ಯವಹಾರಗಳಿಗಾಗಿ ಒಡಹುಟ್ಟಿದವರನ್ನು ಹೆಚ್ಚು ಓಲೈಕೆ ಮಾಡುವಿರಿ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದರಿಂದ ನಿಮಗೆ ಲಾಭ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ವೈಜ್ಞಾನಿಕ ಸಂಶೋಧಕರಿಗೆ ಹೆಚ್ಚಿನ ಸವಲತ್ತುಗಳು ದೊರೆಯುತ್ತವೆ. ಎಲ್ಲಾ ಕಡೆಯಲ್ಲೂ ನಿಮ್ಮ ಮಾತೇ ನಡೆಯಬೇಕೆಂಬುದು ನಿಮಗೆ ಮುಳುವಾಗಬಹುದು. ಕೆಲವರು ಪ್ರೀತಿ ಪ್ರೇಮದಲ್ಲಿ ಸಿಲುಕುವ ಸಂದರ್ಭವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT