ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 2023, ಜನವರಿ 22ರಿಂದ 28ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ವೃತ್ತಿಯಲ್ಲಿ ನಿರೀಕ್ಷಿತ ಬೆಳವಣಿಗೆಯಿಂದ ತೃಪ್ತಿಹೊಂದುವಿರಿ. ವಾಹನಗಳ ಮಾರಾಟದ ವ್ಯವಹಾರವನ್ನು ಮಾಡುವವರಿಗೆ ನಿರೀಕ್ಷಿತ ಲಾಭವಿರುತ್ತದೆ. ವಿಪರೀತ ಕೆಲಸಗಳಿಂದ ದೇಹಾಲಸ್ಯ ಉಂಟಾಗಿ ಸ್ವಲ್ಪ ವಿಶ್ರಾಂತಿ ಬಯಸುವಿರಿ. ನ್ಯಾಯಾಲಯದಲ್ಲಿದ್ದ ವಿಚಾರ ಇತ್ಯರ್ಥಗೊಂಡು ಸಮಾಧಾನವೆನಿಸುತ್ತದೆ. ದಂತವೈದ್ಯರಿಗೆ ಹೆಚ್ಚು ಸಂಪಾದನೆ ಆಗುವ ಸಂದರ್ಭವಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಹೆಚ್ಚು ಕಮಿಷನ್ ಬರುವ ಸಂದರ್ಭ. ಕೆಲವರಿಗೆ ಉದ್ಯೋಗದಲ್ಲಿದ್ದ ಅನಿಶ್ಚಿತತೆಯು ದೂರವಾಗುತ್ತದೆ. ಕೈಗಾರಿಕಾ ಸಂಸ್ಥೆಗಳಿಗೆ ಕಚ್ಚಾಮಾಲನ್ನು ಪೂರೈಸುವ ಸಣ್ಣ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ತಂದೆಯ ಮಾರ್ಗದಲ್ಲಿ ನಡೆಯಲು ಪ್ರಯತ್ನಪಡುವಿರಿ. ಕೃಷಿಯಿಂದ ಹೆಚ್ಚು ಆದಾಯ ಬರುತ್ತದೆ. ದೈವ ಕಾರ್ಯಗಳಿಗಾಗಿ ಹಣ ಮೀಸಲಿಡುವಿರಿ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಸಮಾಜದಲ್ಲಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಸ್ಥಾನಮಾನಗಳನ್ನು ಪಡೆಯಲು ಪ್ರಯತ್ನಪಡುವಿರಿ. ಜವಳಿ ವ್ಯಾಪಾರಿಗಳಿಗೆ ಪರಿಚಯದವರ ಮೂಲಕ ವ್ಯಾಪಾರ ವೃದ್ಧಿಸುತ್ತದೆ. ಕಟ್ಟಡ ಗುತ್ತಿಗೆದಾರರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಕೆಲಸಗಳ ಬಗ್ಗೆ ಅಧಿಕಾರಿ ವರ್ಗದಲ್ಲಿ ಚರ್ಚೆಯಾಗುವ ಸಂದರ್ಭವಿದೆ. ರಾಜಕೀಯದವರು ನೀಡುವ ಆಶ್ವಾಸನೆಯುಕ್ತ ಮಾತುಗಳು ಅವರ ಹಿಂಬಾಲಕರಿಗೆ ಸಾಕಷ್ಟು ಸಂತಸ ತರಬಹುದು. ಧನ ಆದಾಯವು ಕಡಿಮೆ ಇರುತ್ತದೆ. ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಇರುವುದಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ನಿಮ್ಮ ಕನಸು ನನಸಾಗಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ನಡೆದು ಲಾಭವಿರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಔಷಧಿ ತಯಾರಿಕಾ ಕಂಪನಿಗಳಿಗೆ ಮುನ್ನಡೆ ಇರುತ್ತದೆ ಹಾಗೂ ಅವರಿಗೆ ಬೇಕಾದ ಕಚ್ಚಾ ವಸ್ತುಗಳು ದೊರೆಯುತ್ತವೆ. ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡುವಿರಿ. ನೀರಾವರಿ ನಿರ್ವಹಣೆಯಲ್ಲಿ ಸಾಧನೆ ಮಾಡಿತೋರುವಿರಿ. ಆದಾಯ ಕಡಿಮೆ ಇದ್ದರೂ ಹಣದ ನಿರ್ವಹಣೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡುವಿರಿ. ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುವವರಿಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಗೌರವ ದೊರೆಯುತ್ತದೆ. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಅಂತಹ ಪ್ರಗತಿ ಇರುವುದಿಲ್ಲ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಹೆಚ್ಚಿನ ಬೇಡಿಕೆಯ ಜೊತೆಗೆ ಹೆಚ್ಚು ಸಂಪಾದನೆಯೂ ಇರುತ್ತದೆ. ಶಾಲಾ ಕಾಲೇಜುಗಳನ್ನು ನಡೆಸುವವರಿಗೆ ಇದ್ದ ಕಾನೂನು ತೊಡಕುಗಳು ದೂರವಾಗುತ್ತವೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಕಾರ್ಮಿಕರು ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡುವುದರಿಂದ ಇದ್ದ ತೊಂದರೆಗಳು ನಿವಾರಣೆಯಾಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಅವರ ಪಕ್ಷದ ವ್ಯಕ್ತಿಗಳ ಕುತಂತ್ರದಿಂದಾಗಿ ತೊಂದರೆ ಆಗಬಹುದು. ವಿದೇಶದಲ್ಲಿ ಶಿಕ್ಷಣದ ಪ್ರಯತ್ನವನ್ನು ಈಗ ಮಾಡಿದಲ್ಲಿ ಅವಕಾಶಗಳು ಪ್ರಾಪ್ತಿಯಾಗುವ ಸಂಭವವಿದೆ. ಹೆಸರಾಂತ ವಕೀಲರಿಗೆ ಕೆಲವೊಮ್ಮೆ ಪಾಪಪ್ರಜ್ಞೆ ಕಾಡಬಹುದು. ಹೈನುಗಾರಿಕೆಯನ್ನು ಉಪವೃತ್ತಿಯಾಗಿ ಕೈಗೊಂಡ ಕೆಲವರಿಗೆ ಅದೇ ಪ್ರಮುಖ ಆದಾಯವಾಗುತ್ತದೆ. ರೈತರು ತಮ್ಮ ಬೆಳೆಯನ್ನು ಸಂರಕ್ಷಿಸಿಕೊಂಡಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು. ಹಣದ ಒಳಹರಿವು ನಿಮ್ಮ ವೆಚ್ಚವನ್ನು ಸರಿದೂಗಿಸುತ್ತದೆ. ಒಡಹುಟ್ಟಿದವರು ನಿಮ್ಮ ಏಳಿಗೆಯನ್ನು ಸಹಿಸುವುದಿಲ್ಲ. ಆಸ್ತಿ ಖರೀದಿಗಾಗಿ ಹೊರಟಾಗ ದಾಖಲೆ ಪರಿಶೀಲನೆ ಅಗತ್ಯ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕೃಷಿಕರಿಗೆ ಬಹಳ ಉತ್ತಮವಾದ ವಾರ. ಕೃಷಿಯಿಂದ ಹೆಚ್ಚು ಆದಾಯ ಬರುತ್ತದೆ. ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ಮತ್ತು ಹೆಚ್ಚು ನಿಗಾವಹಿಸುವುದು ಉತ್ತಮ. ಧನ ಆದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟಗಳಿರುತ್ತವೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ಹೆಚ್ಚು ಮುನ್ನಡೆ ಇರುತ್ತದೆ. ಕಣ್ಣಿನ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಿ. ಕೆಲವೊಂದು ವಿಚಾರಗಳಲ್ಲಿ ಪಾಲುದಾರರಲ್ಲಿ ವಿರಸ ಮೂಡುವ ಸಾಧ್ಯತೆಗಳಿವೆ. ಸಾಲ ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆ ಕಡಿಮೆ. ಸಹಚರರಿಂದ ನಿಮ್ಮ ಕೆಲಸಗಳಿಗೆ ಅಸಹಕಾರವನ್ನು ಕಾಣುವಿರಿ. ಹಿರಿಯರು ಮಕ್ಕಳ ಆರೈಕೆಗಾಗಿ ವಿದೇಶಕ್ಕೆ ಹೋಗಿ ಬರುವ ಸಾಧ್ಯತೆ ಇದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಗಣ್ಯ ವ್ಯಕ್ತಿಗಳಿಗೆ ಸನ್ಮಾನ ದೊರೆಯುವ ಸಂದರ್ಭವಿದೆ. ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳ ಸಂದರ್ಶನ ಮಾಡುವ ಅವಕಾಶ ದೊರೆಯುತ್ತದೆ. ಮಿತ್ರರೊಡನೆ ವಾಗ್ವಾದ ಏರ್ಪಡದಂತೆ ಎಚ್ಚರಿಕೆವಹಿಸುವುದು ಬಹಳ ಒಳ್ಳೆಯದು. ಆದಾಯ ಕಡಿಮೆ ಇದ್ದು ಹಣ ನಿರ್ವಹಣೆ ಮಾಡಬೇಕಾದ ಅನಿವಾರ್ಯವಿರುತ್ತದೆ, ಇಲ್ಲವಾದಲ್ಲಿ ಸಾಲದ ಹೊರೆ ಹೆಚ್ಚಾಗುವ ಸಂದರ್ಭವಿದೆ. ಸಂಗಾತಿಯ ಖರ್ಚುಗಳಿಗಾಗಿ ಹೆಚ್ಚು ಹಣ ಹೊಂದಿಸಬೇಕಾದ ಸಂದರ್ಭವಿದೆ. ಪ್ರವಾಸಿ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ವಿದೇಶಿ ಪ್ರವಾಸಿಗರಿಂದ ಹೆಚ್ಚು ಹಣ ದೊರೆಯುತ್ತದೆ. ಕೃಷಿಕರಿಗೆ ಹೆಚ್ಚು ಆದಾಯ ದೊರೆಯುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಮಿಶ್ರಫಲಗಳಿರುತ್ತವೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ದೇವರ ಬಗ್ಗೆ ಹೆಚ್ಚು ಒಲವು ಮೂಡುತ್ತದೆ. ನೀವು ಆರಿಸಿಕೊಂಡ ಮಾರ್ಗದಲ್ಲಿನ ತಪ್ಪುಒಪ್ಪುಗಳು ಈಗ ಗೊತ್ತಾಗುತ್ತದೆ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ನಿಮ್ಮ ಸಂಸ್ಥೆಯ ಮೇಲಧಿಕಾರಿಗಳ ವಿಶ್ವಾಸ ಸಂಪಾದಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗುವಿರಿ. ಮಗನ ವಿದ್ಯಾಭ್ಯಾಸಕ್ಕೆ ಸಾಮಾಜಿಕ ಸಂಸ್ಥೆಗಳಿಂದ ನೆರವು ದೊರೆಯುತ್ತದೆ. ರಫ್ತು ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆದಾಯದಷ್ಟೇ ಖರ್ಚು ಇರುತ್ತದೆ. ದಿನಸಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಉಂಟಾಗುವ ಸಂದರ್ಭವಿದೆ. ಕೆಲವು ವ್ಯಾಪಾರಿ ಮಿತ್ರರಿಂದ ನಿಮ್ಮ ವ್ಯಾಪಾರ ಅಭಿವೃದ್ಧಿಗೆ ಸೂತ್ರಗಳು ದೊರೆಯುತ್ತವೆ. ವೃತ್ತಿಯಲ್ಲಿ ಒತ್ತಡ ಹೆಚ್ಚಾದಂತೆ ಕಾಣಬಹುದು. ಸಣ್ಣ ಪ್ರಮಾಣದ ಆಹಾರ ತಯಾರಕರಿಗೆ ಸಾಕಷ್ಟು ಲಾಭವಿದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಗುರಿ ಸಾಧಿಸಬೇಕೆಂಬ ಛಲ ನಿಮ್ಮಲ್ಲಿ ಸಾಕಷ್ಟು ಇರುತ್ತದೆ. ಕಾರ್ಮಿಕರಿಗೆ ಬಹಳ ದಿನದಿಂದ ಆಶಿಸುತ್ತಿದ್ದ ಕೆಲವು ಸವಲತ್ತುಗಳು ಈಗ ಸಿಗುತ್ತವೆ. ವ್ಯವಹಾರಗಳಲ್ಲಿ ಸಾಕಷ್ಟು ಹಿಡಿತ ಪಡೆಯಲು ಪ್ರಯತ್ನಪಡುವಿರಿ. ನಿಮ್ಮ ಮನೋಭಾವಕ್ಕೆ ನಿಮ್ಮ ಕುಟುಂಬದವರು ಹೊಂದಿಕೊಂಡು ಸಹಕಾರ ನೀಡುವರು. ದ್ರವರೂಪದ ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಇರುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದ ಹಣ ದ್ವಿಗುಣಗೊಳ್ಳುತ್ತವೆ. ವೃತ್ತಿಯಲ್ಲಿದ್ದ ಕೆಲವೊಂದು ಸಿಕ್ಕುಗಳು ಪರಿಹಾರವಾಗುತ್ತದೆ. ಅದಿರು ಸಂಸ್ಕರಣೆ ಮಾಡುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ದೈವ ಸಂದರ್ಶನಕ್ಕಾಗಿ ಹೋಗಿ ಬರುವಿರಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಬಾಕಿ ಉಳಿದಿದ್ದ ಕೆಲವು ಕೆಲಸ ಕಾರ್ಯಗಳು ಸದ್ಯದಲ್ಲೇ ಪೂರ್ಣಗೊಳ್ಳುತ್ತವೆ. ಬಂದಿದ್ದ ಸಮಸ್ಯೆಯನ್ನು ಸರಾಗವಾಗಿ ಪರಿಹಾರ ಮಾಡಿಕೊಳ್ಳುವಿರಿ. ನೀವು ಮಾಡುವ ಕೆಲಸದಲ್ಲಿ ತಪ್ಪು ಹುಡುಕುವವರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ನಿಮ್ಮ ವೈರಿಗಳನ್ನು ಹಲವಾರು ತಂತ್ರಗಳನ್ನು ಬಳಸಿ ಪರಾಕ್ರಮದಿಂದ ಎದುರಿಸಿ ಮಣಿಸುವಿರಿ. ಸ್ನೇಹಿತರ ಹಾಗೂ ಕುಟುಂಬದವರ ಅಪೇಕ್ಷೆಯ ಮೇರೆಗೆ ಮನೆಯಲ್ಲಿ ಒಳಾಂಗಣ ಬದಲಾವಣೆಯನ್ನು ಮಾಡುವಿರಿ. ವಿದೇಶದಲ್ಲಿ ಓದುತ್ತಿರುವವರಿಗೆ ಸಿಗಬೇಕಾದ ಸೂಕ್ತ ಸೌಲಭ್ಯಗಳು ದೊರೆಯುತ್ತವೆ. ಕುಲುಮೆ ಕೆಲಸ ಮಾಡುವವರಿಗೆ ಹೆಚ್ಚು ಬೇಡಿಕೆ ಇರುತ್ತದೆ. ಸಂಗಾತಿಯ ಸಹಕಾರವು ನಿಮ್ಮ ವ್ಯವಹಾರಗಳಿಗೆ ಇದ್ದೇ ಇರುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧಗಳಿಗೆ ಹೆಚ್ಚು ಬೆಲೆಕೊಡುವಿರಿ. ಹೆಚ್ಚಿನ ಪರಿಣಿತಿ ಪಡೆದ ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗುತ್ತದೆ. ಯಾವುದೇ ಹೊಸ ಉದ್ಯೋಗವನ್ನು ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ಅದರ ವಿವರವನ್ನು ಸಂಪೂರ್ಣವಾಗಿ ತಿಳಿಯಿರಿ. ಈ ರಾಶಿಯ ಕೆಲವರಿಗೆ ಸಾಮಾಜಿಕ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಕೆಲವರಿಗೆ ಮಂಗಳಕಾರ್ಯಗಳ ಸೂಚನೆ ಕಂಡು ಬರುತ್ತಿದೆ. ಹೂಡಿಕೆಯ ಬಗ್ಗೆ ಸರಿಯಾಗಿ ತಿಳಿದು ನಿರ್ಧಾರಗಳನ್ನು ಕೈಗೊಳ್ಳಿರಿ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿರುತ್ತದೆ. ಸ್ವತಂತ್ರವಾಗಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಮಧ್ಯಮ ವರ್ಗದ ಫಲಿತಾಂಶವಿರುತ್ತದೆ. ಹೊರದೇಶದಲ್ಲಿರುವ ಮಕ್ಕಳು ಈಗ ಬರುವ ಸಾಧ್ಯತೆ ಇದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಕೆಲವೊಂದು ಹಣಕಾಸಿನ ವ್ಯವಹಾರಗಳಲ್ಲಿ ಪಾಲುದಾರಿಕೆ ದೊರೆಯುವ ಸಾಧ್ಯತೆ ಇದೆ. ಯುವಕರು ಪ್ರಯಾಣದ ಸಮಯದಲ್ಲಿ ತಮ್ಮ ಆಲಸೀತನದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರವಹಿಸಿರಿ. ಕೆಲವರಿಗೆ ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ವಸ್ತ್ರ ಖರೀದಿ ಮಾಡುವ ಯೋಗವಿದೆ. ಈಗ ಕೌಟುಂಬಿಕವಾಗಿ ಕೆಲವು ಜವಾಬ್ದಾರಿಗಳನ್ನು ಮಕ್ಕಳಿಗೆ ಕೊಡುವಿರಿ. ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ಖಂಡಿತ ತಲುಪುತ್ತದೆ. ಕೆಲವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ವ್ಯತ್ಯಾಸವಾಗಿ ವೃತ್ತಿಯಲ್ಲಿ ಛೀಮಾರಿಯ ಪ್ರಸಂಗ ಬರಬಹುದು. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಎಂಜಿನಿಯರಿಂಗ್ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತದೆ. ವೈದ್ಯ ವೃತ್ತಿಯನ್ನು ನಡೆಸುತ್ತಿರುವವರಿಗೆ ಸೂಕ್ತ ವರಮಾನದ ಯೋಗವಿದೆ. ಹಣಕಾಸಿನ ಹರಿವು ಮಂದಗತಿಯಲ್ಲಿರುತ್ತದೆ. ವಿದೇಶದಿಂದ ಕುಟುಂಬಸ್ಥರು ಹಣಕಾಸಿನ ಸಹಕಾರ ನೀಡಬಹುದು. ಪಾದಗಳಲ್ಲಿ ನೋವು ಕಾಣಿಸಬಹುದು. ಮಕ್ಕಳ ಕಣ್ಣಿನ ಬಗ್ಗೆ ಎಚ್ಚರವಿರಲಿ. ಕಲುಷಿತ ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸದ ಸಾಧ್ಯತೆ ಇದೆ. ಬರಹಗಾರರಿಗೆ ತಮ್ಮ ಬರಹವನ್ನು ವಿರೋಧಿಸುವವರ ಮಧ್ಯದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಸಂದರ್ಭವಿದೆ. ಕೋರ್ಟ್ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರವಿರುತ್ತದೆ. ತಿಂಡಿ ತಿನಿಸುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯ ಪೂರಕ ಸಹಾಯ ನಿಮಗೆ ಒದಗಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT