ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 28–06–2020 ರಿಂದ 04–07–2020 ರವರೆಗೆ

ಅಕ್ಷರ ಗಾತ್ರ

ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680
***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಹಣದ ಒಳಹರಿವು ತಕ್ಕಮಟ್ಟಿಗೆ ಇರುತ್ತದೆ. ಲಲಿತಕಲೆಯ ಆಸಕ್ತರಿಗೆ ಉತ್ತಮ ಗುರುಗಳು ದೊರೆಯುತ್ತಾರೆ. ಬಂಧು-ಬಾಂಧವರು ನಿಮ್ಮ ಸಂತೋಷಕೂಟಕ್ಕೆ ಆಗಮಿಸುತ್ತಾರೆ. ಹೆಣ್ಣುಮಕ್ಕಳ ಅಭಿವೃದ್ಧಿಯು ತೃಪ್ತಿಕರ. ಸಂಗಾತಿಯು ಕ್ಲಿಷ್ಟ ಸಮಯಗಳಲ್ಲಿ ಅಲ್ಪಮಟ್ಟಿಗೆ ಧನಸಹಾಯ ಮಾಡುವರು. ಮಂಡಿ ಮೂಳೆಗಳಲ್ಲಿ ನೋವು ಕಾಣಿಸಬಹುದು. ತಂದೆಯಿಂದ ನಿರೀಕ್ಷಿಸಿದ್ದ ಸಹಾಯ ಸಿಗುವುದು ಸ್ವಲ್ಪ ಕಷ್ಟ. ವೃತ್ತಿಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವೈಯಕ್ತಿಕ ಅಲಂಕಾರಕ್ಕೆ ಪ್ರಾಶಸ್ತ್ಯ ಕೊಡುವಿರಿ. ಆಲಂಕಾರಿಕ ಸಾಮಗ್ರಿಗಳಿಗೆ ಹಣ ವ್ಯಯ ಮಾಡುವಿರಿ. ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಬಾಕಿ ಈಗ ಬರುತ್ತದೆ. ನಿಮ್ಮ ವ್ಯವಹಾರಕ್ಕೆ ನಿಮ್ಮ ಸಂಬಂಧಿಗಳನ್ನು ಸೇರಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ, ಅದರಲ್ಲೂ ಲಿಖಿತ ಹಾಗೂ ಮೌಖಿಕ ಪರೀಕ್ಷೆ ತೆಗೆದುಕೊಂಡವರಿಗೆ ಉತ್ತಮ ಫಲಿತಾಂಶವಿರುತ್ತದೆ. ಹೊಸ ಸಂಸಾರ ಹೂಡಿರುವವರಿಗೆ ಸಂತೋಷದ ಬೆಳದಿಂಗಳು ಇರುತ್ತದೆ. ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಸ್ವಂತ ಗೌರವಕ್ಕೆ ಅತಿ ಪ್ರಾಶಸ್ತ್ಯ ನೀಡುವಿರಿ. ತಾಯಿಯಿಂದ ತಕ್ಕಮಟ್ಟಿಗೆ ಸಹಾಯ ದೊರೆಯುತ್ತದೆ. ಆದರೆ ಅಣ್ಣ–ತಮ್ಮಂದಿರು ನಿಮ್ಮ ಬಳಿ ಸಹಾಯ ಕೇಳಲು ಬರುವರು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿದರೆ ಮಾತ್ರ ನಿರೀಕ್ಷಿಸಿದ ಫಲಿತಾಂಶ ಬರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳ ಸಂಖ್ಯೆ ಏರಬಹುದು. ಸಂಬಂಧಿಗಳ ವ್ಯವಹಾರಗಳಿಗೆ ಜಾಮೀನು ಕೊಡುವುದು ದುಬಾರಿಯಾಗಬಹುದು. ಗಂಡ ಹೆಂಡಿರ ಮಧ್ಯೆ ಕಾವೇರಿದ ವಾತಾವರಣ ಇದ್ದರೂ ನಂತರ ತಂಗಾಳಿ ಬೀಸುವುದು. ಸಾಂಪ್ರದಾಯಿಕ ಕೃಷಿಯ ಬಗ್ಗೆ ಆಸಕ್ತಿ ಮೂಡುವುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಸಹೋದರಿಯರು ನಿಮ್ಮ ಕೆಲಸಗಳಿಗೆ ಸ್ಫೂರ್ತಿ ನೀಡಿ ಮಾರ್ಗದರ್ಶನ ಮಾಡುವರು. ಕುಟುಂಬ ಸಂತೋಷಕ್ಕಾಗಿ ಸಂಗಾತಿಯು ಸಾಕಷ್ಟು ಶ್ರಮಪಡುವರು. ಆಹಾರದ ವ್ಯತ್ಯಾಸದಿಂದ ವಾಯು ಪ್ರಕೋಪ ಕಾಡಬಹುದು. ನಿಂತಿದ್ದ ಮದುವೆ ಮಾತುಕತೆ ಮುಂದುವರೆದು ವಿವಾಹವಾಗುವುದು. ಬಹಳ ದಿನಗಳಿಂದ ಹೊಂದಬೇಕೆಂದಿದ್ದ ನಿವೇಶನದ ಬಗ್ಗೆ ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಕೃಷಿ ಕಾರ್ಮಿಕರಿಗೆ ಸ್ವಲ್ಪ ಸಹಾಯ ದೊರೆಯುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಸರ್ಕಾರದಲ್ಲಿ ಹಿರಿಯ ಸ್ಥಾನಗಳಲ್ಲಿರುವ ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚುತ್ತದೆ. ಆದಾಯದಲ್ಲಿ ತೀವ್ರ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಸಿಗುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಕೊಂಚ ಹಿನ್ನಡೆ. ಜೀರ್ಣಕ್ರಿಯೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುವುದು. ಸಂಸಾರದಲ್ಲಿ ಅನಿರೀಕ್ಷಿತ ವೆಚ್ಚ ಬರುವ ಸಾಧ್ಯತೆ ಇದೆ. ಸಂಗಾತಿಯ ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಕಬ್ಬಿಣ ಮತ್ತು ಉಕ್ಕನ್ನು ತಯಾರಿಸುವವರಿಗೆ ವ್ಯವಹಾರ ವಿಸ್ತರಿಸುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಇರುವುದಿಲ್ಲ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಮನೆಯಲ್ಲಿ ಒಂದಿಷ್ಟು ಸಂತೋಷದ ಘಟನೆಗಳು ನಡೆದು ಮನಸ್ಸಿಗೆ ಮುದವೆನಿಸುತ್ತದೆ. ನಿಂತಿದ್ದ ಸಂಪಾದನೆಯ ಮಾರ್ಗಗಳು ಮತ್ತೆ ತೆರೆಯುತ್ತವೆ. ಸ್ವಲ್ಪ ಆಲಸ್ಯದ ನಡವಳಿಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ಕಷ್ಟವಾಗಿದ್ದ ವಿಷಯಗಳು ಅರ್ಥವಾಗತೊಡಗುತ್ತವೆ. ಕೀಲು ನೋವು ಸ್ವಲ್ಪ ಬಾಧಿಸಬಹುದು. ಸಂಗಾತಿಯ ಮನೆಕಡೆಯವರು ನಿಮ್ಮನ್ನು ಅವಮಾನಿಸಲು ಯತ್ನಿಸುವವರು. ಹಿರಿಯರಿಂದ ಸ್ವಲ್ಪ ಸಮಾಧಾನದ ಮಾತು ಕೇಳಿಬರುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ಮರೆಯಾಗುತ್ತವೆ. ಹೈನುಗಾರಿಕೆ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಮನಸ್ಸಿನಲ್ಲಿ ಸ್ವಲ್ಪ ಗೊಂದಲವಿರುತ್ತದೆ. ಇನ್ನೇನು ಬಂದೇಬಿಟ್ಟಿತು ಎಂಬಂತಿದ್ದ ಹಣ ಬರುವುದು ನಿಧಾನವಾಗಬಹುದು. ಮಾಡುವ ಕೆಲಸದಲ್ಲಿ ಚುರುಕುತನ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ತೀರಾ ನಂಬಿದವರಿಂದ ಸ್ವಲ್ಪಮಟ್ಟಿಗೆ ಮೋಸವಾಗಬಹುದು. ಸಂಗಾತಿಯ ನಡವಳಿಕೆ ಇರಿಸುಮುರಿಸು ತರಬಹುದು. ಹೆಣ್ಣುಮಕ್ಕಳಿಗೆ ಸಾಲ ಕೊಟ್ಟಲ್ಲಿ ವಾಪಸ್ ಬರುವುದು ಕಡಿಮೆ. ಸರ್ಕಾರಿ ಕಾಮಗಾರಿ ಮಾಡುವವರಿಗೆ ಹೊಸ ಕಾಮಗಾರಿ ಆದೇಶ ದೊರೆಯುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಕೆಲಸ ಮಾಡಲು ಉತ್ಸಾಹವಿದ್ದರೂ ಸ್ವಲ್ಪ ಹಿಂಜರಿಕೆ ಇರುತ್ತದೆ. ಹಣದ ಒಳಹರಿವು ಕಡಿಮೆ. ಒಡಹುಟ್ಟಿದವರೊಡನೆ ತಿಕ್ಕಾಟ. ಮಕ್ಕಳು ನಿಮ್ಮ ಮಾತು ಪಾಲಿಸುವರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದವರ ಆರೋಗ್ಯ ವೇಗವಾಗಿ ಚೇತರಿಕೆ ಕಾಣುತ್ತದೆ. ಸಂಗಾತಿಗೆ ನಿಮ್ಮ ಮೇಲೆ ಕೋಪವಿದ್ದರೂ ನಿಮ್ಮ ಪರವಾಗಿ ನಿಲ್ಲುವರು. ಸರ್ಕಾರದ ಮಟ್ಟದ ಕೆಲಸಗಳು ನಿಧಾನ ಆಗುತ್ತವೆ. ಹಿರಿಯರಿಂದ ಕೆಲವು ವ್ಯವಹಾರಗಳು ನಿಮಗೆ ವರ್ಗಾವಣೆಯಾಗುತ್ತದೆ. ವೃತ್ತಿಯಲ್ಲಿ ಒತ್ತಡ ಹೆಚ್ಚುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಧಾರ್ಮಿಕ ಕೆಲಸಗಳತ್ತ ಮನಸ್ಸು ಹರಿಯುತ್ತದೆ. ಆದಾಯದಷ್ಟೇ ಖರ್ಚೂ ಇರುತ್ತದೆ. ಒಡಹುಟ್ಟಿದವರೊಡನೆ ಇದ್ದ ವೈಮನಸ್ಯ ಈಗ ಪರಿಹಾರವಾಗುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶ ಸಿಗುತ್ತದೆ. ಕೃಷಿ ವಿಜ್ಞಾನಿಗಳ ಸಂಶೋಧನೆಗೆ ಬೆಂಬಲ ಸಿಗುತ್ತದೆ. ಮೂತ್ರ ಸಂಬಂಧಿ ಕಾಯಿಲೆಗಳಿದ್ದಲ್ಲಿ ನಿರ್ಲಕ್ಷ್ಯ ಬೇಡ. ಗುರುತು ಪರಿಚಯದವರಿಂದ ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಅನುಕೂಲವಾಗುತ್ತದೆ. ವೃತ್ತಿಯಲ್ಲಿದ್ದ ಏರುಪೇರುಗಳು ಈಗ ತಹಬಂದಿಗೆ ಬರುತ್ತದೆ. ಸ್ತ್ರೀಯರ ಸಿದ್ಧ ಉಡುಪುಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಬಹಳ ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಧನದ ಒಳಹರಿವು ಸುಮಾರಾಗಿರುತ್ತದೆ. ಕ್ರೀಡಾಪಟುಗಳು ತಮ್ಮ ಜೀವನದ ಉತ್ತಮ ಸಾಧನೆಯನ್ನು ತೋರಿಸುವ ಅವಕಾಶ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕಣ್ಣುಗಳ ಬಗ್ಗೆ ಎಚ್ಚರ ವಹಿಸಿರಿ. ಪ್ರೇಮಿಗಳ ಪ್ರೇಮವು ಹುಸಿಯಾಗಬಹುದು. ಧಾರ್ಮಿಕ ವಿದ್ಯೆಗಳನ್ನು ಕಲಿಯುವವರಿಗೆ ಉತ್ತಮ ಅವಕಾಶ ದೊರೆಯುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗಿ ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಬಟ್ಟೆಗಳ ಮೇಲೆ ಕುಸುರಿ ಕಲೆ ಮಾಡುವವರಿಗೆ ಬೇಡಿಕೆ ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ವಿದ್ಯಾರ್ಥಿಗಳಿಗೆ ಸಂತೋಷ ತರುವ ವಾರ. ಸಾಮಾನ್ಯವಾಗಿ ಆದಾಯ ಕಡಿಮೆ ಇದ್ದರೂ ಕೃಷಿ ಉತ್ಪನ್ನಗಳನ್ನು ಮಾರುವವರ ಆದಾಯ ಎಂದಿನಂತೆ ಇರುತ್ತದೆ. ಚುರುಕಾಗಿ ಕೆಲಸ ಮಾಡಿ ಕೆಲಸದ ಮೇಲೆ ಹಿಡಿತ ಸಾಧಿಸುವಿರಿ. ಶೀತಬಾಧೆ ಇರುವವರು ಸ್ವಲ್ಪ ಎಚ್ಚರಿಕೆ ವಹಿಸಿರಿ. ಸಂಗಾತಿಯ ನೆರವಿನಿಂದ ಮಕ್ಕಳ ಅಭಿವೃದ್ಧಿಗೆ ಅನುಕೂಲ. ಸಾಂಪ್ರದಾಯಿಕ ಕೃಷಿಯ ಬೆಳೆಗೆ ಬೇಡಿಕೆ ಹೆಚ್ಚಾಗುತ್ತದೆ. ದಾನ ಧರ್ಮಗಳಿಂದ ಸಮಾಜದ ಋಣ ತೀರಿಸುವಿರಿ. ವಾರಾಂತ್ಯಕ್ಕೆ ಹಣದ ಒಳಹರಿವು ಸ್ವಲ್ಪ ಏರಬಹುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಮಿತಿಮೀರಿದ ಉತ್ಸಾಹದಿಂದ ಕೆಲಸ ಮಾಡಿದರೂ ಒರಟು ಮಾತಿನಿಂದ ಕೆಲಸಗಾರರ ವಿರೋಧ ಕಟ್ಟಿಕೊಳ್ಳುವಿರಿ. ಒಡಹುಟ್ಟಿದವರೊಡನೆ ಸಂಬಂಧ ವೃದ್ಧಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ವಿಷಯಗಳು ಈಗ ಅರ್ಥವಾಗತೊಡಗುತ್ತದೆ. ಹಿರಿಯರ ವಿರುದ್ಧದ ನಡವಳಿಕೆ ಖಂಡಿತಾ ಬೇಡ. ಸಂಸಾರದಲ್ಲಿ ಸಾಕಷ್ಟು ಹೊಂದಾಣಿಕೆ ಬರುತ್ತದೆ. ಪಿತ್ರಾರ್ಜಿತ ಆಸ್ತಿ ವಿಂಗಡನೆಯ ಬಗ್ಗೆ ಮಾತುಕತೆ ನಡೆಯುತ್ತದೆ. ಪುಸ್ತಕ ಪ್ರಕಾಶಕರಿಗೆ ಉತ್ತಮ ಪುಸ್ತಕವನ್ನು ಪ್ರಕಾಶನ ಮಾಡುವ ಯೋಗವಿದೆ. ಹಣದ ಒಳಹರಿವು ಎಂದಿನಂತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT